ಮಿತಿಮೀರಿದ ಕಾಂಗ್ರೆಸ್ ಒಳಜಗಳ ಮತ್ತು ಗುಂಪುಗಾರಿಕೆ

Most read

ಹಿರಿಯ ನಾಯಕರಾಗಿದ್ದ ಜನಾರ್ಧನ ಪೂಜಾರಿ, ವೀರಪ್ಪ  ಮೊಯಿಲಿ, ರಮಾನಾಥ ರೈ ಮೊದಲಾದವರ ಕೈಯಲ್ಲಿ ಜಿಲ್ಲೆಯ ಕಾಂಗ್ರೆಸ್  ನಾಯಕತ್ವ ಇದ್ದಾಗ, ಕಾಂಗ್ರೆಸ್ ನಲ್ಲಿ ಒಳಜಗಳ, ಭಿನ್ನಾಭಿಪ್ರಾಯ  ಇರಲಿಲ್ಲವೆಂದಲ್ಲ. ಆದರೆ ಇವರ ಯಾವುದೇ ಗುಂಪು ಅಧಿಕಾರ ಹಿಡಿತ ಸಾಧಿಸಿದ್ದರೂ ಆ ಹಿಡಿತ ಗಟ್ಟಿಯಾಗಿಯೇ ಇತ್ತು. ಈಗ ಕಾಂಗ್ರೆಸ್ ಒಳಜಗಳ ಮತ್ತು ಗುಂಪುಗಾರಿಕೆ ಮಿತಿಮೀರಿದೆ ಮಾತ್ರವಲ್ಲ, ಯಾವ ಗುಂಪಿಗೂ ಹಿಡಿತವಿಲ್ಲದಂತಾಗಿದೆ. ಕಾಂಗ್ರೆಸ್‌ ನಲ್ಲಿ ಈಗ ಎಷ್ಟೊಂದು ಬಣಗಳು!- ಎಸ್‌ ಕೆ ಸಿದ್ಧಾರ್ಥ ಮಂಗಳೂರು, ರಾಜಕೀಯಾಸಕ್ತರು.

ಕರಾವಳಿಯಲ್ಲಿ ಮತಾಂಧ ಕೋಮು ಸಂಘಟನೆಗಳ ಪ್ರತೀಕಾರದ  ಹಿಂಸೆಗಳು ಮತ್ತೆ ಭುಗಿಲೆದ್ದಿವೆ. ಈ ಕ್ರಿಮಿನಲ್ ಶಕ್ತಿಗಳಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಅಶ್ರಫ್‌ ಗುಂಪು ಹತ್ಯೆ, ರೌಡಿಶೀಟರ್ ಸುಹಾಸ್ ಶೆಟ್ಟಿಯ ಬರ್ಬರ ಹತ್ಯೆಯ ನೆನಪು ಮಾಸುವ ಮುನ್ನವೇ ಕರಾವಳಿಯಲ್ಲಿ ಮತ್ತೆ ಕೋಮುವಾದಿಗಳು ಅಟ್ಟಹಾಸ ಮೆರೆದಿದ್ದಾರೆ. ಬಂಟ್ವಾಳದಲ್ಲಿ ಅಮಾಯಕ ಕಾರ್ಮಿಕ ರೆಹಮಾನ್ ನನ್ನು ಹಾಡಹಗಲೇ ಕೊಚ್ಚಿ ಹಾಕಲಾಗಿದೆ. ಸುಹಾಸ್ ಶೆಟ್ಟಿಗೂ ರೆಹಮಾನ್‌ ಗೂ ಏನು ಸಂಬಂಧ? ಯಾವ ಸಂಬಂಧವೂ ಇರಬೇಕಾಗಿಲ್ಲ. ಒಬ್ಬ ನಮ್ಮವನಿಗೆ ಪ್ರತೀಕಾರವಾಗಿ ಇನ್ನೊಬ್ಬ ಆಚೆ ಕಡೆಯವ. ಇದು ಈ ಮಂದಿಯ ದುಷ್ಟ ಲೆಕ್ಕಾಚಾರ. ಯಾರೇ ಆದರೂ ಸರಿಯೇ. ಪರಿಣಾಮವಾಗಿ ಅಲ್ಪಸಂಖ್ಯಾತ ಸಮುದಾಯದವರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ.

ಅಶ್ರಫ್‌ ಎಂಬ ಬಡಪಾಯಿಯನ್ನು ಹತ್ತಿಪ್ಪತ್ತು ಜನ ನಿರ್ದಯವಾಗಿ ಬಡಿದು ಸಾಯಿಸಿದಾಗ ಆರಂಭದಲ್ಲಿ ಸದರಿ ಘಟನೆಯನ್ನು ಮುಚ್ಚಿಹಾಕಲು ಸ್ವತಃ ಪೊಲೀಸರೇ ಯತ್ನಿಸಿದ್ದು ಸುಳ್ಳಲ್ಲ. ಸಾರ್ವಜನಿಕರು ಮತ್ತು ಸಂಘಟನೆಗಳ ಒತ್ತಡ ಹೆಚ್ಚಿದಾಗಲಷ್ಟೇ ಪೊಲೀಸರು ಎಚ್ಚೆತ್ತುಕೊಂಡರು, ಹತ್ಯೆಯ ರಹಸ್ಯ ಬಹಿರಂಗಗೊಂಡಿತು, ಇಪ್ಪತ್ತಕ್ಕೂ ಅಧಿಕ ಆರೋಪಿಗಳ ಬಂಧನವಾಯಿತು. ಇಷ್ಟಾದರೂ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಯಾಕೆ? ಅಶ್ರಫ್‌ ಕಡೆಯಿಂದ ಒತ್ತಡ ಹೇರುವಷ್ಟು ಪ್ರಭಾವಿಗಳು ಯಾರೂ ಇಲ್ಲ ಎಂದೇ?

ಅಶ್ರಫ್‌ ಹತ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರೆ ಮುಂದಿನ ಹತ್ಯೆಗಳನ್ನು ತಡೆಯಬಹುದಾಗಿತ್ತೋ ಏನೋ. ಆದರೆ ಸರಕಾರಕ್ಕೆ ಎಂದಿನ ಔದಾಸೀನ್ಯ. ಫಲವಾಗಿಯೋ ಏನೋ ಎಂಬಂತೆ ರೌಡಿಶೀಟರ್‌ ಸುಹಾಸ್‌ ಶೆಟ್ಟಿ ಹತ್ಯೆಯಾಯಿತು. ಹಿಂದುತ್ವವಾದಿ ಸಂಘಟನೆಗಳು ಉದ್ರಿಕ್ತಗೊಳ್ಳುತ್ತಿದ್ದಂತೆ ಉಸ್ತುವಾರಿ ಮಂತ್ರಿ ದಿನೇಶ್‌ ಗುಂಡೂರಾವ್‌, ಗೃಹಮಂತ್ರಿ ಪರಮೇಶ್ವರ್‌ ತಡವಾಗಿಯಾದರೂ ಧಾವಿಸಿ ಬಂದರು. ಅವರು ಇಲ್ಲಿ ಇರುವಾಗಲೇ ಪ್ರತೀಕಾರವಾಗಿ ಅಮಾಯಕ ಮುಸ್ಲಿಮರ ಹತ್ಯೆಗೆ ಯತ್ನಗಳು ನಡೆಯುತ್ತಲೇ ಇದ್ದವು.

ಪತ್ರಿಕಾಗೋಷ್ಠಿ ನಡೆಸಿದ ಪರಮೇಶ್ವರ ಅಲ್ಲೂ ಗಂಭೀರವಾಗಿದ್ದಂತೆ ಕಾಣಲಿಲ್ಲ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ಅಪರಾಧಿಗಳ ವಿರುದ್ಧ ಕಠಿಣಕ್ರಮ ಜರುಗಿಸಲಾಗುತ್ತದೆ, ಎ ಎನ್‌ ಎಫ್‌ ಮಾದರಿಯಲ್ಲಿ ಕೋಮುವಾದಿಗಳನ್ನು ನಿಗ್ರಹಿಸುವ ಪಡೆ ರಚಿಸಲಾಗುತ್ತದೆ ಎಂದೆಲ್ಲ ಭರವಸೆಯ ರಾಜಕೀಯ ಹೇಳಿಕೆಗಳನ್ನು ನೀಡಿ ಬೆಂಗಳೂರಿಗೆ ಹೋಗಿ ಗಡದ್ದಾಗಿ ನಿದ್ದೆ ಮಾಡಿದರು.

ಸರಕಾರದ ನಿಷ್ಕ್ರಿಯತೆಯ ಕಾರಣ ಈಗ ಮತ್ತೆ ಅಮಾಯಕನೊಬ್ಬನ ಹೆಣ ಬಿದ್ದಿದೆ. ಇಂತಹ ಒಂದು ಘಟನೆ ನಡೆಯಬಹುದು ಎಂಬ ಅನುಮಾನ ಜನಸಾಮಾನ್ಯರಲ್ಲೂ ಇತ್ತು. ಆದರೆ ಸರಕಾರಕ್ಕೆ ಇಂತಹ ಅನುಮಾನ ಇರಲಿಲ್ಲವೇ?!

ಗೃಹಮಂತ್ರಿ ಪರಮೇಶ್ವರ್‌ ಅವರ ಪತ್ರಿಕಾಗೋಷ್ಠಿ

ಈ ಬಾರಿ ಜಿಲ್ಲೆಯ ಮುಸ್ಲಿಮ್‌ ಮುಖಂಡರು ರಾಜೀನಾಮೆ  ನೀಡಲು ಮುಂದಾಗಿರುವುದರಿಂದಲೋ ಏನೋ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಮಾನಗಳನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣಿಸುತ್ತಿದೆ. ಈ ಲೇಖನ ಪ್ರಕಟವಾಗುವ ಹೊತ್ತಿಗೆ ಸಿದ್ದರಾಮಯ್ಯ ಅವರು ಬಿ ಕೆ ಹರಿಪ್ರಸಾದ್‌ ಅವರನ್ನು ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯತ್ತ ಗಮನ ಕೊಡುವಂತೆ ಸೂಚಿಸಿದ್ದಾರೆ ಎಂಬ ವರದಿ ಬಂದಿದೆ. ಮುಂದೇನಾಗುತ್ತದೋ ಕಾದು ನೋಡಬೇಕು.

ಕಾಂಗ್ರೆಸ್‌ ನ ಒಳಜಗಳ

ಹಿರಿಯ ನಾಯಕರಾಗಿದ್ದ ಜನಾರ್ಧನ ಪೂಜಾರಿ, ವೀರಪ್ಪ  ಮೊಯಿಲಿ, ರಮಾನಾಥ ರೈ ಮೊದಲಾದವರ ಕೈಯಲ್ಲಿ ಜಿಲ್ಲೆಯ ಕಾಂಗ್ರೆಸ್  ನಾಯಕತ್ವ ಇದ್ದಾಗ, ಕಾಂಗ್ರೆಸ್ ನಲ್ಲಿ ಒಳಜಗಳ, ಭಿನ್ನಾಭಿಪ್ರಾಯ  ಇರಲಿಲ್ಲವೆಂದಲ್ಲ. ಆದರೆ ಇವರ ಯಾವುದೇ ಗುಂಪು ಅಧಿಕಾರ ಹಿಡಿತ ಸಾಧಿಸಿದ್ದರೂ ಆ ಹಿಡಿತ ಗಟ್ಟಿಯಾಗಿಯೇ ಇತ್ತು. ಈಗ ಕಾಂಗ್ರೆಸ್ ಒಳಜಗಳ ಮತ್ತು ಗುಂಪುಗಾರಿಕೆ ಮಿತಿಮೀರಿದೆ ಮಾತ್ರವಲ್ಲ, ಯಾವ ಗುಂಪಿಗೂ ಹಿಡಿತವಿಲ್ಲದಂತಾಗಿದೆ. ಕಾಂಗ್ರೆಸ್‌ ನಲ್ಲಿ ಈಗ ಎಷ್ಟೊಂದು ಬಣಗಳು!

1. ಮಂಜುನಾಥ್  ಭಂಡಾರಿ, ಹರೀಶ್ ಕುಮಾರ್ ಬಣ.

2. ಐವಾನ್ ಬಣ

3. ರಮಾನಾಥ ರೈ ಬಣ

4. ಮಿಥುನ್ ಬಣ

5. ಖಾದರ್ ಬಣ

ಈ ಐದು ಬಣಗಳಲ್ಲಿ ಯಾರಿಗೂ ದ. ಕ ಕಾಂಗ್ರೆಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಆಗಿಲ್ಲ. ಪರಿಣಾಮವಾಗಿ ಈ ಗುಂಪುಗಳು ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಇದರಿಂದಾಗಿ  ಬಿಜೆಪಿ ಪರಿವಾರದ  ಕೋಮುವಾದ  ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ಕರ್ನಾಟಕದ ಬಿಜೆಪಿ ಅಂದರೆ ದೆಹಲಿ  ಬಿಜೆಪಿ ಹೈ ಕಮಾಂಡಿಗೆ ಅಲರ್ಜಿ. ಅದೇ ರೀತಿ ಕರಾವಳಿ  ಕಾಂಗ್ರೆಸ್  ಅಂದರೆ  ಕೆಪಿಸಿಸಿಗೆ ಅಲರ್ಜಿ.

ಐವಾನ್ ತನ್ನ ಗುಂಪು ಬಲಪಡಿಸಿ ಕ್ರೈಸ್ತರ  ಹೆಸರಲ್ಲಿ ವಿಧಾನಪರಿಷತ್  ಸದಸ್ಯರಾದರು.ಈಗ ಜಿಲ್ಲಾ ಅಧ್ಯಕ್ಷ ಸ್ಥಾನವೂ ಬೇಕಂತೆ. ಮಿಥುನ್‌ ರೈಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮೂಡುಬಿದಿರೆ ಎಂ ಎಲ್ ಎ ಟಿಕೆಟ್‌, ಜಿಲ್ಲಾಧ್ಯಕ್ಷ ಹೀಗೆ ಎಲ್ಲವೂ ಬೇಕಂತೆ. ಹೀಗೆ ಆದರೆ, ಉಳಿದ ಕಾರ್ಯಕರ್ತರು  ಐವಾನ್ ಮನೆ ಮತ್ತು ಮಿಥುನ್ ಮನೆ ಗೇಟ್ ಕಾಯಬೇಕಾ? ಅನ್ನುವುದು ಕಾರ್ಯಕರ್ತರ ಪ್ರಶ್ನೆ.

ಇನ್ನು ಇನಾಯತ್ ಅಲಿ, ಅಶೋಕ ಕುಮಾರ್  ಇಬ್ಬರಿಗೂ ಕೋಟಿ ವ್ಯಾಪಾರ, ಬಿಲ್ ಚಿಂತೆಯಂತೆ. ಇನಾಯತ್ ಕಾರ್ಯಕರ್ತರ  ಪೋನ್ ರೀಸಿವ್ ಮಾಡಿದರೆ ಸೂರ್ಯ ಪಶ್ಚಿಮದಲ್ಲಿ ಬಂದಾನು ಎಂಬ ಜೋಕೇ ಇದೆ.

ಖಾದರ್ ಅವರನ್ನು  ಸ್ಪೀಕರ್‌  ಮಾಡುವಾಗ, ” ದ.ಕ ಜಿಲ್ಲೆಯ ಆಡಳಿತ ನನ್ನ  ಹಿಡಿತದಲ್ಲಿರಬೇಕು” ಎಂದು ಅವರು ಹೇಳಿದ್ದರಂತೆ. ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ಒಂದು ಸಣ್ಣ ಅರ್ಜಿಯನ್ನು ಕೂಡಾ ಖಾದರರ ಪಿ ಎ ಗೆ ಕಳಿಸುವ ಸತ್ಯ ಎಲ್ಲರಿಗೂ ಗೊತ್ತಿದೆ. ಉಸ್ತುವಾರಿ ನಾಮಕಾವಸ್ತೆ ಮಾತ್ರ. ಖಾದರ್ ಸಹೋದರ ಇಫ್ತಿಖಾರ್  ಸಿಬ್ಬಂದಿ  ನೇಮಕಾತಿ, ವರ್ಗಾವಣೆ ಕೆಲಸ ವಹಿಸಿಕೊಂಡಿರುವುದೂ ಜಗತ್ತಿಗೇ ತಿಳಿದ ಸಂಗತಿ. ಆದರೆ ಈ ಇಫ್ತಿಖಾರ್  ಆಡಳಿತ ಹಿಡಿತದ ಕುರಿತು ಬಿಜೆಪಿ ನಾಯಕರು  ಧಮ್ಮು ಬಿಡುವುದಿಲ್ಲ. ಯಾಕೆಂದರೆ ಅವರ ಎಲ್ಲಾ ಕೆಲಸ ಇವರಿಂದ ಆಗುತ್ತದೆ!

 ಪ್ರತಿಯೊಬ್ಬರಿಗೂ ಸ್ವಂತದ್ದೇ ಚಿಂತೆ

ಇತ್ತ ತಾನು ರಾಜ್ಯ ಕಾರ್ಯಾಧ್ಯಕ್ಷ ಎಂದು ಪಕ್ಷದ  ಮೇಲೆ ಹಿಡಿತ ಸಾಧಿಸಿ ಕುಳಿತಿರುವ ಮಂಜುನಾಥ್  ಭಂಡಾರಿಗೆ ಪಕ್ಷದ ಬಗ್ಗೆ ಯಾವ ಆಸಕ್ತಿಯೂ ಇಲ್ಲ. ಅವರಿಗೆ ಮೆಡಿಕಲ್ ಕಾಲೇಜಿಗೆ ಹೂಡಿಕೆದಾರರ ಹುಡುಕಾಟದ್ದೇ ಚಿಂತೆ. ಸಧ್ಯ ರಾಮಲಿಂಗಾ ರೆಡ್ಡಿ ಈ ಸಂಸ್ಥೆಗೆ ಹಣ ಹೂಡಿಕೆ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲವು ಬಿಜೆಪಿ ನಾಯಕರೂ ಹೂಡಿಕೆ ಮಾಡುತ್ತಾರಂತೆ. ಇನ್ನು  ಕಾಂಗ್ರೆಸ್  ಜಿಲ್ಲಾಧ್ಯಕ್ಷ ಹರೀಶ್ ಅಂತೂ ಮಂಜುನಾಥ್  ಭಂಡಾರಿಯ ರಬ್ಬರ್ ಸ್ಟಾಂಪ್.

ಹೀಗಿರುವಾಗ, ಹಿಂದುತ್ವವನ್ನೇ ಬಂಡವಾಳ ಮಾಡಿ ವ್ಯವಹಾರಕ್ಕಿಳಿದ ಬಿಜೆಪಿಯ ದಾರಿ ಸುಗಮ ಆಗದಿರುತ್ತದೆಯೇ? ಬಿಜೆಪಿ ಹಿಂದುತ್ವ  ಬೆಳೆಯಲು ಇಷ್ಟು  ಒಳ್ಳೆಯ  ವ್ಯವಸ್ಥೆ  ಮಾಡಿದ ಕಾಂಗ್ರೆಸ್  ನಾಯಕರ ಬಗ್ಗೆ  ಬಿಜೆಪಿ ಪರಿವಾರ ಬಲು ಖುಷ್ ಅಗಿದೆಯಂತೆ. ಇಂತಹ ಪರಿಸ್ಥಿತಿಯಲ್ಲಿ ಕರಾವಳಿ ಕೋಮುವಾದದ ವಿರುದ್ಧ ಸಂಘಟಿತ ಹೋರಾಟವನ್ನು ಜಿಲ್ಲಾ ಕಾಂಗ್ರೆಸ್  ಹೇಗೆ ಮಾಡಲು ಸಾಧ್ಯ? ಬಿಜೆಪಿಗೆ ಗೋಲ್ ಮೇಲೆ ಗೋಲ್ ಹೊಡೆಯಲು ಅವಕಾಶ ಸಿಕ್ಕಿದೆ.

ಇತ್ತ ಇದೇ ಸರಿಯಾದ ಸಮಯ ಎಂದು ಎಸ್ ಡಿ ಪಿ ಐ ಥಕ ಥೈ ಕುಣಿಯುತ್ತಿದೆ. ಬಿಜೆಪಿ ಮತ್ತು ಅವರ ಒಳ ಒಡನಾಟದ ಕಥೆ ಇನ್ನು ಹೊರಗೆ ಬರಬೇಕಿದೆ.

ಈ ಕಾಂಗ್ರೆಸ್  ಮತ್ತು ಬಿಜೆಪಿ ನಾಯಕರ ಒಳ ಒಪ್ಪಂದ, ಸೌದಿ ರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲ ನಾಯಕರ ಜಂಟಿ ಹೂಡಿಕೆಯಿಂದಾಗಿ ಇಲ್ಲಿ ನಡೆಯುತ್ತಿರುವುದು ಎಲ್ಲವೂ ನಾಟಕ. ಆದರೆ ಕೋಮು ಗಲಭೆಯಲ್ಲಿ ಇದ್ಯಾವುದನ್ನೂ ಅರಿಯದ ಹುಡುಗರು ಸಾಯುವುದು ಮಾತ್ರ ಸತ್ಯ.

ಇಷ್ಟಾದರೂ ಸಿದ್ಧರಾಮಯ್ಯ ಮತ್ತು ಡಿಕೆಶಿ ಯಾಕೆ ಕರಾವಳಿ ಕಾಂಗ್ರೆಸ್ ನ್ನು ಸರಿ ಮಾಡುವ ಮತ್ತು ಕೋಮುವಾದ  ಮಣಿಸುವ ಕೆಲಸ ಮಾಡುತ್ತಿಲ್ಲ?? ಉತ್ತರವನ್ನು  ಮುಂದಿನ ಭಾಗದಲ್ಲಿ ನಿರೀಕ್ಷಿಸಿ.

ಸಿದ್ಧಾರ್ಥ ಮಂಗಳೂರು

ರಾಜಕೀಯಾಸಕ್ತರು

ಇದನ್ನೂ ಓದಿ- ಬಂಟ್ವಾಳ ಕೊಲೆ ಪ್ರಕರಣ: ಆರೋಪಿಗಳಿಗೆ ಶಿಕ್ಷೆ ಶತಃಸಿದ್ಧ: ಗುಡುಗಿದ ಸಚಿವ ಪರಮೇಶ್ವರ್

More articles

Latest article