ಭಾರತದಂತಹ ಒಂದು ಬಡದೇಶ ಈ ಕ್ರಿಕೆಟ್ ಹುಚ್ಚಿಗೆ ಬಲಿಯಾಗಿ ಕಳೆದುಕೊಂಡುದು ಎಷ್ಟು ಎಂಬ ಬಗ್ಗೆ ದೊಡ್ಡ ಮಟ್ಟದ ಅಧ್ಯಯನದ ಅಗತ್ಯವಿದೆ. ಇಲ್ಲಿ ಕ್ರಿಕೆಟ್ ಗೆ ನೀಡಲಾದ ಅನಗತ್ಯ ಆದ್ಯತೆ, ಪ್ರಚಾರ, ಪ್ರೋತ್ಸಾಹದಿಂದಾಗಿ ಹಾಕಿ ಸಹಿತ ಇತರ ಅನೇಕ ದೇಸೀ ಕ್ರೀಡೆಗಳು ಸೊರಗಿದವು. ಜನಸಂಖ್ಯೆಯಲ್ಲಿ ಜಗತ್ತಿನಲ್ಲಿಯೇ ಎರಡನೇ ಸ್ಥಾನದಲ್ಲಿರುವ ಭಾರತದ ಜಾಗತಿಕ ಕ್ರೀಡಾ ಸಾಧನೆ ಏನು? ಒಲಿಂಪಿಕ್ ಪದಕ ಪಟ್ಟಿಯ ಕೊನೆಯ ಸ್ಥಾನದಲ್ಲಿ ನಾವಿರುತ್ತೇವೆ –ಶ್ರೀನಿವಾಸ ಕಾರ್ಕಳ.
11 ಮಂದಿ ಮೂರ್ಖರು ಆಡುವ ಮತ್ತು 11ಸಾವಿರ ಮೂರ್ಖರು ಕುಳಿತು ನೋಡುವ ಆಟವೇ ಕ್ರಿಕೆಟ್ʼ ಎಂದು ಕ್ರಿಕೆಟ್ ಬಗ್ಗೆ ವಿಶ್ವವಿಖ್ಯಾತ ಲೇಖಕ ಜಾರ್ಜ್ ಬರ್ನಾರ್ಡ್ ಶಾ ವ್ಯಂಗ್ಯವಾಗಿ ಒಮ್ಮೆ ಹೇಳಿದ್ದರಂತೆ.
ಜಗತ್ತಿನ ಇತರ ಅನೇಕ ಕ್ರೀಡೆಗಳಿಗೆ ಹೋಲಿಸಿದರೆ ಕ್ರಿಕೆಟ್ ಒಂದು ಕ್ರೀಡೆಯೇ ಅಲ್ಲ ಎಂದು ವಾದಿಸುವವರೂ ಇದ್ದಾರೆ. ಇದಕ್ಕೆ ಕಾರಣಗಳು ಅನೇಕ.
ಕ್ರಿಕೆಟ್ ಒಂದು ಕ್ರೀಡೆಯೇ ಅಲ್ಲ?
ಯಾವುದೇ ಒಂದು ಕ್ರೀಡೆ ರೋಚಕವಾಗಿರಬೇಕಾದರೆ ಅಲ್ಲಿ ಎರಡೂ ತಂಡಗಳ ಎಲ್ಲ ಕ್ರೀಡಾಳುಗಳೂ ಪೂರ್ಣಾವಧಿ ಸಕ್ರಿಯವಾಗಿ ಭಾಗವಹಿಸಬೇಕು, ಒಮ್ಮೆ ಆಟ ಶುರುವಾದ ಮೇಲೆ ನಡುವೆ ಬ್ರೇಕ್ ಇರಕೂಡದು ಮತ್ತು ಒಂದು ನಿರ್ದಿಷ್ಟ ಅವಧಿಯೊಳಗೆ ಫಲಿತಾಂಶ ಬರುವಂತಿರಬೇಕು.
ಉದಾಹರಣೆಗೆ ಫುಟ್ ಬಾಲ್ ಪಂದ್ಯವನ್ನೇ ತೆಗೆದುಕೊಳ್ಳಿ. ಅಲ್ಲಿ ಎರಡೂ ತಂಡಗಳ ತಲಾ ಹನ್ನೊಂದು ಮಂದಿಯೂ ಆಟದಲ್ಲಿ ಪೂರ್ಣಾವಧಿ ತೊಡಗಿಕೊಂಡಿರುತ್ತಾರೆ. ಕ್ಷಣಕ್ಷಣವೂ ರೋಚಕವಾಗಿರುವ ಅಲ್ಲಿನ ಪ್ರಕ್ರಿಯೆಯಲ್ಲಿ ನಿರಂತರತೆಯಿದ್ದು, ಒಂದೆರಡು ಗಂಟೆಗಳಲ್ಲಿ ಫಲಿತಾಂಶವೂ ನಿರ್ಧಾರವಾಗಿರುತ್ತದೆ.
ಇದನ್ನೇ ಕ್ರಿಕೆಟ್ ಗೆ ಹೋಲಿಸಿ ನೋಡಿ. ಒಂದು ತಂಡದವರು ಫೀಲ್ಡಿಂಗ್ ಮಾಡುವಾಗ ಇನ್ನೊಂದು ತಂಡದ ಇಬ್ಬರು ಮಾತ್ರ ಆಟವಾಡುತ್ತಿರುತ್ತಾರೆ. ಟೆಸ್ಟ್ ಪಂದ್ಯವಾದರೆ ಕೆಲವೊಮ್ಮೆ ಈ ಎರಡು ಬ್ಯಾಟ್ಸ್ ಮನ್ ಗಳು ದಿನಗಟ್ಟಲೆ ಆಟವಾಡುತ್ತಾರೆ ಮತ್ತು ತಂಡದ ಉಳಿದವರಿಗೆ ಬ್ಯಾಟಿಂಗ್ ಮಾಡುವ ಅವಕಾಶವೇ ಇರುವುದಿಲ್ಲ. ತಮ್ಮ ತಂಡದ ಇಬ್ಬರು ಬ್ಯಾಟಿಂಗ್ ಮಾಡುವಾಗ ಉಳಿದ ಒಂಬತ್ತು ಮಂದಿ ಸೋಮಾರಿಗಳಂತೆ ಆಕಳಿಸಿಕೊಂಡು ಪೆವಿಲಿಯನ್ ನಲ್ಲಿ ಕೂತಿರುತ್ತಾರೆ. ಪ್ರತಿಯೊಂದು ಎಸೆತದ ಬಳಿಕ ಕೆಲವು ನಿಮಿಷಗಳ ಅಂತರವಿರುತ್ತದೆ. ಪ್ರತಿಯೊಂದು ಓವರ್ ನ ಬಳಿಕವೂ ಅನೇಕ ನಿಮಿಷಗಳ ಅಂತರವಿರುತ್ತದೆ. ಹೀಗೆ ಇಲ್ಲಿ ನಿರಂತರತೆಯ ಕೊರತೆ ಇರುತ್ತದೆ.
ಸಮನ್ಯಾಯ ಇರಬೇಡವೇ?
ಕ್ರೀಡೆ ಅನಿಸಿಕೊಂಡ ಮೇಲೆ ಅಲ್ಲಿ ಭಾಗವಹಿಸುವ ಎರಡೂ ತಂಡಗಳಿಗೆ ಸಮನ್ಯಾಯ ಇರಬೇಕು. ಯಾವುದೇ ರೀತಿಯಲ್ಲಿ ಒಂದು ತಂಡಕ್ಕೆ ಪರಿಸ್ಥಿತಿ ಪೂರಕವಾಗಿರುವಂತಿರಬಾರದು. ಮೋಸ ಮಾಡುವುದಕ್ಕೆ ಅವಕಾಶ ಇರಬಾರದು. ಮತ್ತೆ ಫುಟ್ ಬಾಲ್ ನ ಉದಾಹರಣೆಗೆ ಬರುವುದಾದರೆ ಅಲ್ಲಿ ಮೈದಾನ ಎರಡೂ ತಂಡಗಳಿಗೆ ಸಮಾನವಾಗಿರುತ್ತದೆ ಮಾತ್ರವಲ್ಲ, ಮಧ್ಯಾವಧಿಯ ಬಳಿಕ ತಂಡಗಳು ಅಂಗಣವನ್ನು ಬದಲಾಯಿಸಿಕೊಳ್ಳುತ್ತವೆ. ಇಲ್ಲಿ ಭೌಗೋಳಿಕ ಕಾರಣಕ್ಕೆ ಕೆಲವು ದೇಶಗಳ ಆಟಗಾರರಿಗೆ ಒಂದಿಷ್ಟು ಸಮಸ್ಯೆ ಆಗಬಹುದು ಎನ್ನುವುದನ್ನು ಬಿಟ್ಟರೆ ಬೇರೆ ರೀತಿಯಲ್ಲಿ ಅನ್ಯಾಯವಾಗುವುದಕ್ಕೆ ಸಾಧ್ಯವಿಲ್ಲ. ಅಲ್ಲಿ ಲೆವೆಲ್ ಪ್ಲೇಯಿಂಗ್ ಫೀಲ್ಡ್ ಇರುತ್ತದೆ.
ಆದರೆ ಕ್ರಿಕೆಟ್ ನಲ್ಲಿ ಹಾಗಲ್ಲ. ಒಂದು ದೇಶ ತನ್ನ ಆಟಗಾರರಿಗೆ ಅನುಕೂಲವಾಗುವ ಹಾಗೆ ಪಿಚ್ ಗಳನ್ನು ರೂಪಿಸಿಕೊಂಡು ಅನುಕೂಲ ಮಾಡಿಕೊಂಡು ಪಂದ್ಯದ ಫಲಿತಾಂಶವನ್ನೇ ಬದಲಿಸಿಬಿಡುವುದಿದೆ. ನಮ್ಮ ಸ್ಪಿನ್ನರ್ ಗಳಿಗೋ ವೇಗದ ಬೌಲರ್ ಗಳಿಗೋ ಅನುಕೂಲವಾಗುವ ಹಾಗೆ ನಾವು ಪಿಚ್ ತಯಾರಿಸಿ ಎದುರಾಳಿ ತಂಡವನ್ನು ಸೋಲಿಸಬಹುದು. ಅಂದ ಮೇಲೆ ಇಲ್ಲಿ ಸಮನ್ಯಾಯ ಎಲ್ಲಿದೆ?
ಇನ್ನು ಬಹುತೇಕ ಎಲ್ಲ ಪಂದ್ಯಗಳೂ ಒಂದು ನಿರ್ದಿಷ್ಟ ಅವಧಿಯೊಳಗೆ ಮುಗಿದುಬಿಡುತ್ತವೆ. ಇದರಿಂದ ವೀಕ್ಷಕರಿಗೂ ಅನುಕೂಲ. ಆದರೆ ಕ್ರಿಕೆಟ್ ಟೆಸ್ಟ್ ಗಳನ್ನು ನೆನಪಿಸಿಕೊಳ್ಳಿ. ಐದು ದಿನಗಳ ಕಾಲ ಪಂದ್ಯ ನಡೆಯುತ್ತದೆ. ಓವರ್ ಗಳ ಮಿತಿಯಿಲ್ಲ. ಐದು ದಿನಗಳ ಪಂದ್ಯದ ಬಳಿಕವೂ ಫಲಿತಾಂಶ ಬಾರದೆ ಡ್ರಾ ಆಗುವುದಿದೆ. ವೀಕ್ಷಕರೂ ಸೋಮಾರಿಗಳಂತೆ ಐದು ದಿನಗಳ ಕಾಲ ಗ್ಯಾಲರಿಯಲ್ಲಿ ತಿನ್ನುತ್ತಾ ಕುಡಿಯುತ್ತಾ ಬಿದ್ದುಕೊಂಡು ಕಾಲಯಾಪನೆ ಮಾಡುತ್ತಿರುತ್ತಾರೆ.
ಏನಿದು ವಿಶ್ವದಾಖಲೆ?! ಯಾವ ವಿಶ್ವ?
ಕ್ರಿಕೆಟ್ ವಿಶ್ವದಾಖಲೆ ಎಂದೆಲ್ಲ ಬೊಬ್ಬೆ ಹೊಡೆಯುವುದಿದೆ. ಆದರೆ ಯಾವ ವಿಶ್ವ? ವಿಶ್ವದ ಎಷ್ಟು ದೇಶಗಳಲ್ಲಿ ಕ್ರಿಕೆಟ್ ಆಡುತ್ತಾರೆ? ಇದನ್ನೂ ಕೂಡ ಫುಟ್ ಬಾಲ್ ನಂತಹ ವಿಶ್ವ ಕ್ರೀಡೆಗೆ ಹೋಲಿಸಿ ನೋಡಿ. ಇಂಗ್ಲೆಂಡ್ ನಲ್ಲಿ ಹುಟ್ಟಿದ ಕ್ರಿಕೆಟ್ ಸಹಜವಾಗಿಯೇ ವ್ಯಾಪಕವಾಗಿರುವುದು ಬ್ರಿಟಿಷ್ ವಸಾಹತುಗಳಾಗಿದ್ದ ದೇಶಗಳಲ್ಲಿ ಮಾತ್ರ. ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್, ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಇವು ಕ್ರಿಕೆಟ್ ಅನ್ನು ಗಂಭೀರವಾಗಿ ಆಡುವ ದೇಶಗಳು. ಅಂದ ಮೇಲೆ ಯಾವ ವಿಶ್ವ? ಯಾವ ವಿಶ್ವದಾಖಲೆ?!
ಭಾರತದಂತಹ ಒಂದು ಬಡದೇಶ ಈ ಕ್ರಿಕೆಟ್ ಹುಚ್ಚಿಗೆ ಬಲಿಯಾಗಿ ಕಳೆದುಕೊಂಡುದು ಎಷ್ಟು ಎಂಬ ಬಗ್ಗೆ ದೊಡ್ಡ ಮಟ್ಟದ ಅಧ್ಯಯನದ ಅಗತ್ಯವಿದೆ. ಇಲ್ಲಿ ಕ್ರಿಕೆಟ್ ಗೆ ನೀಡಲಾದ ಅನಗತ್ಯ ಆದ್ಯತೆ, ಪ್ರಚಾರ, ಪ್ರೋತ್ಸಾಹದಿಂದಾಗಿ ಹಾಕಿ ಸಹಿತ ಇತರ ಅನೇಕ ದೇಸೀ ಕ್ರೀಡೆಗಳು ಸೊರಗಿದವು. ಜನಸಂಖ್ಯೆಯಲ್ಲಿ ಜಗತ್ತಿನಲ್ಲಿಯೇ ಎರಡನೇ ಸ್ಥಾನ (ಈಗ ಮೊದಲ ಸ್ಥಾನ ಎಂಬ ವರದಿಯೂ ಇದೆ)ದಲ್ಲಿರುವ ಭಾರತದ ಜಾಗತಿಕ ಕ್ರೀಡಾ ಸಾಧನೆ ಏನು? ಒಲಿಂಪಿಕ್ ಪಂದ್ಯಗಳ ಸಂದರ್ಭದಲ್ಲಿ ಇದು ಅನುಭವಕ್ಕೆ ಬರುತ್ತಲೇ ಇರುತ್ತದೆ. ಪದಕ ಪಟ್ಟಿಯ ಕೊನೆಯ ಸ್ಥಾನದಲ್ಲಿ ನಾವಿರುತ್ತೇವೆ. ಒಂದು ಕಂಚು ಪದಕ ಬಂದರೆ ಸಾಕು ಚಿನ್ನದ ಪದಕ ಬಂದ ರೀತಿಯಲ್ಲಿ ದೇಶ ಸಂಭ್ರಮಿಸುತ್ತದೆ.
ಹಾಕಿಯಲ್ಲಿ ಒಂದು ಕಾಲದಲ್ಲಿ ಭಾರತಕ್ಕೆ ದೊಡ್ಡ ಹೆಸರಿತ್ತು. ಒಲಿಂಪಿಕ್ ಚಿನ್ನದ ಪದಕವನ್ನೂ ಗಳಿಸಿತ್ತು. ಆದರೆ ಈಗ ಅದರ ಕತೆ ಏನಾಗಿದೆ? ಕ್ರಿಕೆಟ್ ತಾರೆಗಳು ಕೋಟಿ ಕೋಟಿ ಸಂಪಾದನೆ ಮಾಡಿದರೆ, ಹಾಕಿ ಆಟಗಾರರಿಗೆ ಒಂದೂರಿನಿಂದ ಒಂದು ಊರಿಗೆ ಪಯಣಕ್ಕೂ ಹಣವಿಲ್ಲದ ಸ್ಥಿತಿಯಿದೆ. ಅವರ ಪ್ರಯಾಣ ಅನೇಕ ಬಾರಿ ರೈಲಿನ ಮೂರನೇ ದರ್ಜೆಯಲ್ಲಿ!
ಇವೆಲ್ಲ ಕ್ರಿಕೆಟ್ ಎಂಬ ಮೂರ್ಖರ ಆಟದ ಹಿಂದೆ ಬಿದ್ದು ದೇಶ ಒಂದು ಆಟಕ್ಕೆ ಅನಗತ್ಯ ಆದ್ಯತೆ ನೀಡಿದ ಪರಿಣಾಮವಲ್ಲವೇ? ಈವತ್ತು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ಸಂಪತ್ತು 18,760 ಕೋಟಿ ರುಪಾಯಿ! ಇತರ ಕ್ರೀಡಾ ಸಂಸ್ಥೆಗಳ ಸಂಪತ್ತು ಎಷ್ಟು?
ಹಣದ ಆಟವಾಗತೊಡಗಿದ ಕ್ರಿಕೆಟ್
ಒಂದು ಕಾಲದಲ್ಲಿ ಭಾರತದಲ್ಲಿ ಕ್ರಿಕೆಟ್ ಒಂದು ಮಟ್ಟಿನ ಗೌರವವನ್ನು ಉಳಿಸಿಕೊಂಡಿತ್ತು. ಗವಾಸ್ಕರ್, ವೆಂಗಸರ್ಕಾರ್, ಕಪಿಲ್ ದೇವ್ ಮೊದಲಾದವರು ಆಡುತ್ತಿದ್ದ ಕಾಲವದು. ಟಿವಿ ಇಲ್ಲದ ಆ ಕಾಲದಲ್ಲಿ ರೇಡಿಯೋ ಮೂಲಕ ವೀಕ್ಷಕ ವಿವರಣೆಯನ್ನು ಕೇಳಿ ನಾವೆಲ್ಲ ಆನಂದಿಸುತ್ತಿದ್ದೆವು. ಆಗ ಕ್ರಿಕೆಟ್ ಇನ್ನೂ ಹಣದ ಆಟವಾಗಿರಲಿಲ್ಲ. ಆಟಗಾರರಿಗೆ ಸಿಗುತ್ತಿದ್ದ ಸಂಭಾವನೆಯೂ ಅಷ್ಟಕ್ಕಷ್ಟೇ.
ಕ್ರಿಕೆಟ್ ಅನ್ನು ಹಣದ ಆಟವಾಗಿಸಬಹುದು ಎಂಬ ಆಲೋಚನೆ ಕೆಲವರಿಗೆ ಬಂದುದೇ ತಡ ಕ್ರಿಕೆಟ್ ನಲ್ಲಿ ಅನೇಕ ಬದಲಾವಣೆಗಳಾದವು. ಐದು ದಿನಗಳ ಕಾಲ ಕುಳಿತು ಯಾರು ಕ್ರಿಕೆಟ್ ನೋಡುವುದು? ಫಲವಾಗಿ, ಟೆಸ್ಟ್ ಬದಲಿಗೆ ಏಕ ದಿನ ಕ್ರಿಕೆಟ್ ಬಂದಿತು. ಏಕದಿನದಲ್ಲೂ ಸೀಮಿತ ಓವರ್ ಗಳ ಆಟ ಬಂದಿತು. ಇದರ ಮುಂದಿನ ಹಂತವಾಗಿ ಟ್ವೆಂಟಿ ಟ್ವೆಂಟಿ ಮ್ಯಾಚುಗಳು ಆರಂಭವಾದವು.
ಇದೇ ಹೊತ್ತಿನಲ್ಲಿ ಟಿವಿಯ ಪ್ರವೇಶವೂ ಆಯಿತು. ಟಿವಿ ಜಾಹೀರಾತುಗಳ ಮೂಲಕ ಹಣದ ಹೊಳೆ ಹರಿಯಲಾರಂಭಿಸಿತು. ಕ್ರಿಕೆಟ್ ಸಂಸ್ಥೆಗಳನ್ನು ಉದ್ಯಮಿಗಳು ರಾಜಕಾರಣಿಗಳು ನಿಯಂತ್ರಿಸತೊಡಗಿದರು. ಕ್ರಿಕೆಟನ್ನು ಕ್ರೀಡೆಯ ಸ್ಥಾನದಿಂದ ಪಲ್ಲಟಗೊಳಿಸಿ ಸಂಪೂರ್ಣ ಮನರಂಜನೆಯ ಕಾರ್ಯಕ್ರಮವಾಗಿಸುವ ಯೋಚನೆ ಕೆಲವು ವಾಣಿಜ್ಯ ತಲೆಗಳಿಗೆ ಬಂತು. ಆಟಗಾರರನ್ನು ಮಾರಾಟಕ್ಕಿಡುವುದು, ಹಣವಂತರು ಏಲಂನಲ್ಲಿ ಆಟಗಾರರನ್ನು ಕೊಂಡುಕೊಳ್ಳುವುದು (ಐಪಿಎಲ್ ತಂಡಗಳ ಮಾಲಕರು ಯಾರು ಎಂದು ನೋಡಿ. ವಿಜಯ ಮಲ್ಯ, ಅಂಬಾನಿ, ಪ್ರೀತಿ ಜಿಂಟಾ, ಶಾರುಖ್ ಖಾನ್..), ಪಂದ್ಯಗಳಿಗೆ ಭಾರೀ ಪ್ರಚಾರ. ಪ್ರಸಾರದ ಹಕ್ಕುಗಳನ್ನು ನೂರಾರು ಕೋಟಿಗೆ ಮಾರುವುದು, ಗ್ರೌಂಡ್ ನಲ್ಲಿ ದೊಡ್ಡ ದೊಡ್ಡ ಟಿವಿ ಪರದೆಗಳು, ಆಟಗಾರರನ್ನು ತೋರಿಸುವುದರ ಜೊತೆಗೆ ವೀಕ್ಷಕರನ್ನೂ ತೋರಿಸಿ ಹುಚ್ಚೆಬ್ಬಿಸುವುದು, ಬೌಂಡರಿ, ಸಿಕ್ಸರ್ ಭಾರಿಸಿದಾಗ ಮೈದಾನದ ಮೂಲೆಯ ವೇದಿಕೆಯ ಮೇಲೆ ಅರೆಬೆತ್ತಲೆ ಹೆಣ್ಣುಗಳು ಕುಣಿಯುವುದು, ಪಂದ್ಯದ ಟಿವಿ ಪ್ರಸಾರದ ಕಾರಣವಾಗಿ ಜಗತ್ತಿನ ಮೂಲೆ ಮೂಲೆಯಲ್ಲಿ ಅದನ್ನು ನೋಡುವುದು ಹೀಗೆ ಜನ ಮರುಳೋ ಜಾತ್ರೆ ಮರುಳೋ..
ಎಲ್ಲೆಲ್ಲೂ ಬೆಟ್ಟಿಂಗ್. ದೇಶದ ಸುಪ್ರೀಂ ಕೋರ್ಟೇ ಉಲ್ಲೇಖಿಸುವ ಮಟ್ಟಿಗೆ ಐಪಿಲ್ ಜೂಜು ಸಾವಿರಾರು ಕೋಟಿ ಹಣ ಕೈ ಬದಲಾಯಿಸಲಾರಂಭಿಸಿತು. ಹೀಗೆ ತಕ್ಕ ಮಟ್ಟಿಗಾದರೂ ಒಂದು ಕ್ರೀಡೆಯಂತಿದ್ದ ಕ್ರಿಕೆಟ್ ಎಲ್ಲವನ್ನೂ ಹಣದ ಮೂಲಕವೇ ನೋಡುವ ಲಲಿತ್ ಮೋದಿಯಂಥವರಿಂದಾಗಿ ಸಂಪೂರ್ಣವಾಗಿ ಮನರಂಜನೆ, ಆಮೂಲಕ ಹಣದ ಆಟವಾಗಿ ಬದಲಾಯಿತು. ಆಟಗಾರರಿಗೆ ಕೋಟಿ ಕೋಟಿ ಹಣ. ಹಾಗಾಗಿ ಅವರಿಗೆ ದೇಶಕ್ಕಾಗಿ ಆಡುವ ಕ್ರಿಕೆಟ್ ಗಳಲ್ಲಿ ಆಸಕ್ತಿ ಇಲ್ಲ. ಕೋಟಿ ಹಣ ತಂದು ಕೊಡುವ ಐಪಿಎಲ್ಲೇ ಇಷ್ಟ. ಕ್ರಿಕೆಟ್ ಟೂರ್ ಗಳ ಸಂದರ್ಭದಲ್ಲಿ ಕೈಕಾಲು ನೋವು ಇರುವ ಆಟಗಾರರೂ ಐಪಿಲ್ ಸಮಯದಲ್ಲಿ ಸಂಪೂರ್ಣ ಆರೋಗ್ಯದಿಂದಿರುತ್ತಾರೆ.!
ಐಪಿಎಲ್ ಕಾರಣವಾಗಿಯೇ ಕ್ರಿಕೆಟ್ ನೋಡುವುದನ್ನು ಬಿಟ್ಟ ಅನೇಕರು ನಮ್ಮಲ್ಲಿದ್ದಾರೆ. ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಇರುವುದು ಬೆಂಗಳೂರಿನಲ್ಲಿಯೇ. ಬೆಂಗಳೂರಿನಲ್ಲಿ ನಡೆಯುವ ಯಾವುದೇ ಪ್ರತಿಷ್ಠಿತ ಕ್ರಿಕೆಟ್ ಪಂದ್ಯವನ್ನು ಅವರು ತಪ್ಪಿಸಿಕೊಳ್ಳುತ್ತಿರಲಿಲ್ಲ. ಐಪಿಎಲ್ ಬಂದ ಮೇಲೆ ನಾನು ಕ್ರಿಕೆಟ್ ನೋಡುವುದನ್ನೇ ಬಿಟ್ಟೆ ಎಂದು ಅವರು ಒಂದೆಡೆ ಹೇಳಿಕೊಂಡಿದ್ದರು.
ಆಳುವವರಿಗೆ ವರದಾನ ಈ ಸಮೂಹ ಸನ್ನಿ
ಜನರ ನೋವು ಮರೆಸುವ ಕ್ರಿಕೆಟ್ ನಂತಹ ಸಮೂಹ ಸನ್ನಿಯ ಕ್ರೀಡೆಗಳೆಂದರೆ ಯಾವ ದೇಶದ ಆಳುವವರಿಗೆ ತಾನೇ ಇಷ್ಟವಿಲ್ಲ? ಭಾರತ ಒಂದು ಬಡ ದೇಶ. ಇಲ್ಲಿನ ಸಮಸ್ಯೆಗಳಾದರೋ ನೂರಾರು. ಬಡತನ, ಅನಕ್ಷರತೆ, ಶಿಕ್ಷಣ ಮತ್ತು ಆರೋಗ್ಯ ಸವಲತ್ತುಗಳ ಕೊರತೆ, ನಿರುದ್ಯೋಗ, ನೈಸರ್ಗಿಕ ವಿಪತ್ತುಗಳು, ಸಾಮಾಜಿಕ ಅನಿಷ್ಟಗಳು… ಸರಕಾರಗಳು ಇವನ್ನೆಲ್ಲ ಈಡೇರಿಸದಿದ್ದಾಗ ಜನರಲ್ಲಿ ಅಸಹನೆ ಮೂಡುವುದು, ಜನರು ಪ್ರತಿಭಟಿಸುವುದು ಸಾಮಾನ್ಯ. ಜನರು ಸರಕಾರದ ವಿರುದ್ಧ ಬಂಡೇಳದಂತೆ ಮಾಡುವ ಮಾರ್ಗವಾದರೂ ಯಾವುದು? ಅದಕ್ಕೆ ಕ್ರಿಕೆಟ್ ಗಿಂತಲೂ ಉತ್ತಮ ಅಫೀಮು ಯಾವುದಾದರೂ ಇದೆಯೇ?
ಭಾರತ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಅಥವಾ ಐಪಿಲ್ ಪಂದ್ಯಗಳ ಹಿಂದು ಮುಂದಿನ ದಿನಗಳಲ್ಲಿ ನಮ್ಮ ಟಿವಿಗಳು ನೀಡುವ ಬಿಲ್ಡ್ ಅಪ್ ಗಳನ್ನು ನೋಡಿ. ಆ ದಿನಗಳಲ್ಲಿ ಜನರು ಸರಕಾರದ ಬಗ್ಗೆ ಮಾತನಾಡುವುದಿಲ್ಲ. ಮಾತನಾಡುವುದೆಲ್ಲ ಕ್ರಿಕೆಟ್ ಬಗ್ಗೆ. ಹೀಗೆ ವರ್ಷವಿಡೀ ಒಂದಲ್ಲ ಒಂದು ಇಂತಹ ಕ್ರಿಕೆಟ್ ನಡೆಯುತ್ತಿದ್ದರೆ ಆಳುವವರು ಎಷ್ಟೊಂದು ನಿರಾಳ?! ರಗಾಳೆ ಇಲ್ಲ. ಈಗ ಬಡಭಾರತದಲ್ಲಿ ಆಗುತ್ತಿರುವುದೂ ಇದೇ. ಆದ್ದರಿಂದಲೇ ಕ್ರಿಕೆಟ್ ನಂತಹ ಸಮೂಹಸನ್ನಿಯ ಕ್ರೀಡೆ ಭಾರತದಂತಹ ಬಡ ದೇಶಕ್ಕೆ ಬಹುದೊಡ್ಡದೊಂದು ಶಾಪ.
(ಮುಂದಿನ ಭಾಗ ನಾಳೆ ( 12-06-2025) ಪ್ರಕಟವಾಗಲಿದೆ)
ಇದನ್ನೂ ಓದಿ- ತೆರೆಯ ಮುಂದೆ ಕಮಲ್ ಹಾಸನ್ ಪ್ರಕರಣ, ತೆರೆಯ ಹಿಂದೆ ???