ಕರಾವಳಿಯ ಕೋಮು ರಾಜಕಾರಣ 3- ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

Most read

ಸಂಘಪರಿವಾರದ ಹಿಂಸಾ ರಾಜಕಾರಣದ ಎಲ್ಲ ಒಳಹೊರಗುಗಳನ್ನು ತಿಳಿದುಕೊಂಡಿದ್ದು ಆ ಜೀವವಿರೋಧಿ ಸಿದ್ಧಾಂತಕ್ಕೆ ಸಂಪೂರ್ಣ ವಿರುದ್ಧ ಇರುವ ಒಂದು ಅಪ್ಪಟ ಸೆಕ್ಯುಲರ್ ರಾಜಕೀಯ ನಾಯಕತ್ವ ಇಲ್ಲಿಗೆ ಬೇಕಾಗಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು‌ ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯತ್ತ ಗಮನ ಹರಿಸುವಂತೆ ಕೇಳಿಕೊಂಡಿರುವುದು ಜಿಲ್ಲೆಯಲ್ಲಿ ಶಾಂತಿ ಬಯಸುವ ಬಹುತೇಕ ಮಂದಿಯಲ್ಲಿ ಹೊಸ ಆಶಾವಾದ ಮೂಡಿಸಿದೆ ಶ್ರೀನಿವಾಸ ಕಾರ್ಕಳ.

ಸುಖಾನಂದ ಶೆಟ್ಟಿ, ಅಶ್ರಫ್‌ ಕಲಾಯಿ,  ಹರೀಶ್‌ ಪೂಜಾರಿ, ಪ್ರಶಾಂತ ಪೂಜಾರಿ, ಪ್ರವೀಣ್ ಪೂಜಾರಿ, ಶರತ್‌ ಮಡಿವಾಳ, ದೀಪಕ್‌ ರಾವ್‌, ಬಶೀರ್‌, ಮಸೂದ್‌, ಪ್ರವೀಣ್‌ ನೆಟ್ಟಾರು, ಫಾಜಿಲ್‌, ಅಶ್ರಫ್‌, ಸುಹಾಸ್‌ ಶೆಟ್ಟಿ, ಮಹಮದ್‌ ರಹ್ಮಾನ್…‌

ಈ ಎಲ್ಲ ಹೆಸರುಗಳನ್ನು ಕೇಳುವಾಗ, ಇವರೆಲ್ಲ ಯಾರು ಎಂದು ಕೆಲವರಲ್ಲಾದರೂ ಕುತೂಹಲ ಮೂಡಬಹುದು. ಇವರೆಲ್ಲ ಯಾರು ಯಾರೋ ಅಲ್ಲ. ʼಬುದ್ಧಿವಂತರ ಜಿಲ್ಲೆʼ ಎಂಬ ಹೆಗ್ಗಳಿಕೆಯ ಬಿರುದನ್ನು ಅಂಟಿಸಿಕೊಂಡ, ʼನೂರಕ್ಕೆ ನೂರು ಸಾಕ್ಷರರ ಜಿಲ್ಲೆʼ ಎಂಬ ಗೌರವಕ್ಕೆ ಪಾತ್ರವಾಗಿರುವ, ದೇಶಕ್ಕೆ ಅನೇಕ ಬ್ಯಾಂಕುಗಳನ್ನು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು, ವೈದ್ಯಕೀಯ ಸಂಸ್ಥೆಗಳನ್ನು, ಅಸಂಖ್ಯ ರಾಜಕೀಯ ಮುತ್ಸದ್ದಿಗಳನ್ನು, ಉದ್ಯಮಶೀಲರನ್ನು ಕೊಟ್ಟಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಅರ್ಧಶತಮಾನದಿಂದ ಉರಿಯುತ್ತಿರುವ ಕೋಮು ದ್ವೇಷದ ಬೆಂಕಿಯಲ್ಲಿ ಭಸ್ಮವಾಗಿ ಹೋದ ಜೀವಗಳು. ಇವರಲ್ಲಿ ಬೆರಳೆಣಿಕೆಯ ಕೆಲವರು ರೌಡಿಗಳಾದರೆ ಉಳಿದಂತೆ ಬಹುತೇಕ ಮಂದಿ ಅಮಾಯಕರು. ಕೋಮು ರಾಜಕಾರಣಕ್ಕೆ ಯಾವುದೇ ರೀತಿಯಲ್ಲಿಯೂ ಸಂಬಂಧ ಇಲ್ಲದೆ, ಕೇವಲ ತಮ್ಮ ಮತಧರ್ಮದ ಕಾರಣಕ್ಕೆ ಕೋಮುದ್ವೇಷದ ಮಚ್ಚಿನೇಟಿಗೆ ಬಲಿಯಾದವರು.

ಬಹಿರಂಗ ಕೋಮು ರಾಜಕಾರಣದ ಆರಂಭ

ಕೋಮು ಸಂಘಟನೆಗಳ ಆಟಾಟೋಪದಿಂದಾಗಿ ಈ ಜಿಲ್ಲೆ ಜಗತ್ತಿನಲ್ಲಿ ಹೆಸರು ಹಾಳು ಮಾಡಿಕೊಂಡದ್ದು ಮಾತ್ರವಲ್ಲ, ಬಂದ್‌ಗಳು, ನಿಷೇಧಾಜ್ಞೆಗಳು, ಕರ್ಫ್ಯೂ ಎಂದೆಲ್ಲ ಆರ್ಥಿಕವಾಗಿ  ಅನುಭವಿಸಿದ ನಷ್ಟಕ್ಕೆ ಲೆಕ್ಕ ಇಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಿರಂಗವಾಗಿ ಕೋಮು ರಾಜಕಾರಣ ಕಾಣಿಸಿಕೊಂಡದ್ದು1976 ರಿಂದ 1997 ರ ನಡುವೆ ಎಂದು ಹೇಳಲಾಗುತ್ತಿದೆ. ಅಂದಿನಿಂದ ಇಂದಿನ ವರೆಗೆ ಒಂದು ಒರಟು ಲೆಕ್ಕಾಚಾರದ ಪ್ರಕಾರ ಇಲ್ಲಿ ನಡೆದ ಬರ್ಬರ ಕೊಲೆಗಳು ಬರೋಬ್ಬರಿ 49 !

ರೈಲುಮಾರ್ಗ, ಜಲಮಾರ್ಗ, ವಾಯುಮಾರ್ಗದ ವಿಶೇಷ ಸವಲತ್ತು ಹೊಂದಿರುವ ಕಡಲ ತಡಿಯ ಮಂಗಳೂರಿಗೆ ನಾನಾ ಕಾರಣಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ  ಬಂದು ಹೋಗುತ್ತಿರುತ್ತಾರೆ. ಅವರು ಅಲ್ಲಿಂದ  ಬರುವಾಗ ಇಲ್ಲಿ ಕರ್ಫ್ಯೂ ಹೇರಿದ್ದರೆ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸಿ.

ಇಲ್ಲಿನ ಕೋಮು ಹಿಂಸಾಚಾರಗಳು, ಮೋರಲ್‌ ಪೊಲೀಸಿಂಗ್‌ ಇತ್ಯಾದಿ ಅನೇಕ ಕಾರಣಗಳಿಂದ ಹೊರಗಿನ ಜನ ಇಲ್ಲಿಗೆ ಬರಲು ಹೆದರುತ್ತಾರೆ. ಇಲ್ಲಿ ಉದ್ಯಮ ಸಂಸ್ಥೆ ಆರಂಭಿಸ ಬಯಸಿದ್ದ ಅನೇಕ ಸಂಸ್ಥೆಗಳು ತಮ್ಮ ಯೋಜನೆಯನ್ನೇ ಕೈಬಿಟ್ಟಿವೆ. ಕೋಮುವಾದಿಗಳ ಉಪಟಳದಿಂದಾಗಿ ಮಂಗಳೂರು ನಿತ್ಯವೂ ನಷ್ಟ ಅನುಭವಿಸುತ್ತಿದೆ.

 ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಕಳೆದ ಅರ್ಧ ಶತಮಾನದಿಂದ ಇಲ್ಲಿ ಈ ಸಮಸ್ಯೆ ಇದೆಯಾದರೆ ಅದಕ್ಕೆ  ಕಾರಣ ಏನು ಎಂಬ ಪ್ರಶ್ನೆಗೆ ಉತ್ತರ ತುಂಬಾ ಸಂಕೀರ್ಣವಾದುದು. ಹಿಂಸಾಪ್ರಿಯ ಸಂಘಟನೆಗಳನ್ನು ಮಟ್ಟ ಹಾಕಲು ಅನೇಕ ಕಾನೂನುಗಳು ನಮ್ಮಲ್ಲಿವೆ. ಆದರೆ ಅದನ್ನು ಬಳಸಬೇಕಾದವರು ಯಾರು?  ಕೋಮು ದ್ವೇಷ ಭಾಷಣ ಯಾರೇ ಮಾಡಲಿ ಅವರ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕು ಎಂದು ದೇಶದ ಸರ್ವೋಚ್ಚ ನ್ಯಾಯಾಲಯದ  ಆದೇಶವೇ ಇದೆ. ಅದನ್ನು ಜಾರಿಗೊಳಿಸಬೇಕಾದವರು ಯಾರು? ಬಿಜೆಪಿಯಂತಹ ರಾಜಕೀಯ ಪಕ್ಷಗಳೇ ಕೋಮುವಾದಿ ಅಜೆಂಡಾದ ಮೇಲೆ ಚುನಾವಣೆ ಗೆದ್ದು ಸರಕಾರ ರಚಿಸಿದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಆತ ಎಂತಹ ದೊಡ್ಡ ಕ್ರಿಮಿನಲ್ಲೇ ಇರಲಿ, ಆತನಿಗೆ ಸಂಘ ಪರಿವಾರದೊಂದಿಗೆ ಸಣ್ಣ ನಂಟಿದ್ದರೂ ಸಾಕು, ಪೊಲೀಸರು ಕ್ರಮ ಜರುಗಿಸಲು ಮುಂದಾಗುತ್ತಲೇ ಇಲ್ಲಿನ ಎಲ್ಲಾ ಬಿಜೆಪಿ ಶಾಸಕರು ಸಂಸದರು ಒಂದಾಗುತ್ತಾರೆ. ʼಹಿಂದೂ ನಾಯಕನ ಮೇಲೆ ದ್ವೇಷ ಸಾಧಿಸಲಾಗುತ್ತಿದೆ, ಅಮಾಯಕ ಹಿಂದೂ ಹುಡುಗರನ್ನು ಬಂಧಿಸಲಾಗುತ್ತಿದೆʼ ಎಂದು ಹುಯಿಲೆಬ್ಬಿಸುತ್ತಾರೆ, ಗಲಾಟೆ ಮಾಡಿ ಪೊಲೀಸರ ಕೈ ಕಟ್ಟಿ ಹಾಕುತ್ತಾರೆ.

ಇಲ್ಲಿ ಒಂದು ಹೆಣ ಉರುಳಿದರೆ ಸಾಕು ಬಿಜೆಪಿ ಮಂದಿ ಮೊದಲು ನೋಡುವುದು ಅದು ಯಾವ ಮತಧರ್ಮಕ್ಕೆ ಸೇರಿದ್ದು ಮತ್ತು ಆತನನ್ನು ಕೊಂದುದು ಯಾವ ಮತಧರ್ಮದವರು ಎಂದು. ಅಲ್ಲಿಂದ ಅವರ ಹೆಣ ರಾಜಕಾರಣ ಆರಂಭವಾಗುತ್ತದೆ. ಸತ್ತುದು ಹಿಂದೂವಾಗಿ ಕೊಂದ ಆರೋಪಿ ಮುಸ್ಲಿಮನಾಗಿದ್ದರೆ, ಪಿಎಫ್‌ ಐ, ಜಿಹಾದಿ, ಕೇರಳ ಕನೆಕ್ಷನ್‌, ಎನ್‌ ಐ ಎ ಎಲ್ಲವನ್ನೂ ಎಳೆತಂದು ಆಕಾಶ ಭೂಮಿ ಒಂದು ಮಾಡುತ್ತಾರೆ. ಸುಹಾಸ್‌ ನ ಹತ್ಯೆಯನ್ನು ಎನ್‌ ಐ ಗೆ ಒಪ್ಪಿಸಬೇಕು ಎಂದು ಹೇಳುವವರು ಅಶ್ರಫ್‌ ಮತ್ತು ರಹ್ಮಾನ್‌ ನ ಹತ್ಯೆಯನ್ನು ಎನ್‌ ಐ ಎ ಗೆ ಒಪ್ಪಿಸಬೇಕು ಎಂದು ಹೇಳುವುದಿಲ್ಲ! ನಮ್ಮವನನ್ನು ಕೊಂದುದು ನಮ್ಮವನೇ ಆದರೆ, ನಮ್ಮ ಹುಡುಗಿಯನ್ನು ಅತ್ಯಾಚಾರ ಮಾಡಿದ್ದು ನಮ್ಮವರೇ ಆದರೆ ಇವರದ್ದು ಸೌಜನ್ಯವ್ರತ.

ಈ ಮಂದಿಗೆ ಕಾನೂನಿಯ ಯಾವ ಭಯವೂ ಇಲ್ಲ. ಲಕ್ಷಾಂತರ ಮಂದಿಯನ್ನು ಸೇರಿಸಿ ಸಮಾಜೋತ್ಸವ ಮಾಡಿ ಅಲ್ಲಿಂದಲೇ ಇನ್ನೊಂದು ಮತದವರ  ವಿರುದ್ಧ ದ್ವೇಷದ ಮಾತು ಆಡುತ್ತಾರೆ, ʼಒಂದಕ್ಕೆ ಮೂರುʼ ಎಂದು ವೇದಿಕೆಯಿಂದಲೇ ಕೊಲೆಗೆ ಕರೆ ಕೊಡುತ್ತಾರೆ.!

ಕರೆ ಕೊಡುತ್ತಾರೆ ನಿಜ. ಅವರ ಮೇಲೆ ಪೊಲೀಸರು ಯಾಕೆ ಕ್ರಮ ಜರುಗಿಸುವುದಿಲ್ಲ.? ಅವರನ್ನು ಗಲ್ಲಿಗೇರಿಸಿ ಎಂದು ಯಾರೂ ಹೇಳುವುದಿಲ್ಲ. ಆದರೆ ಪೊಲೀಸ್‌ ಠಾಣೆ, ಕೋರ್ಟು ಎಂದು ಸ್ವಲ್ಪ ಅಲೆಯಲಿ ಆಗ ಬುದ್ಧಿಬಂದು ಅವರು ಸರಿ ದಾರಿಗೆ ಬರುವುದಿಲ್ಲವೇ ಎಂಬುದು ಮತ್ತೆ ಮತ್ತೆ ಅನೇಕರು ಕೇಳುವ ಪ್ರಶ್ನೆ.

 ಕೋಮು ಮನಸ್ಥಿತಿಯ ಪೊಲೀಸರು

ಜನರು ಹೀಗೆ ಕೇಳಲು, ಅಸಮಾಧಾನ ಗೊಳ್ಳಲು ಮುಖ್ಯ ಕಾರಣ ಇಲ್ಲಿನ ಕೆಲ ಪೊಲೀಸರು. ಇಲ್ಲಿ ಅನೇಕ ಬಾರಿ ಹಿಂದುತ್ವವಾದಿ ಪಕ್ಷದ್ದೇ ಸರಕಾರ ಬಂದಿದೆ. ಆಗಂತೂ ಸಂಘಪರಿವಾರದ ಮಂದಿಗೆ ಫ್ರೀ ಹ್ಯಾಂಡ್. ಇನ್ನು ಕಾಂಗ್ರೆಸ್‌ ಸರಕಾರ ಬಂದಾಗಲೂ ಅದೇ ಪರಿಸ್ಥಿತಿ ಮುಂದುವರಿದಿರುವುದು ಯಾಕೆ? ಇದಕ್ಕೆ ಉತ್ತರ ಬೇಕಾದರೆ ಬಹಳ ಹಿಂದೆ ನಡೆದ ಸ್ಟಿಂಗ್‌ ಕಾರ್ಯಾಚರಣೆಯಲ್ಲಿ ಇಲ್ಲಿನ ಪ್ರಮುಖ ಬಿಜೆಪಿ ಮುಖಂಡರೊಬ್ಬರು ಹೇಳಿಕೊಂಡ ಮಾತನ್ನು ಗಮನಿಸಬೇಕು. ಇಲ್ಲಿನ ಪೊಲೀಸರಲ್ಲಿ ಬಹುತೇಕರು ಸಂಘ ಪರಿವಾರದ ಸಿದ್ಧಾಂತದ ಪರ ಇರುವವರು ಎಂದು ಅವರು ಹೇಳಿದ್ದರು. ಇದೇ ಕಾರಣದಿಂದ ಅವರು ಸಂಘಪರಿವಾರದ ನಾಯಕರು ಎಷ್ಟೇ ಪ್ರಚೋದನಕಾರಿ ಭಾಷಣಗಳನ್ನು ಮಾಡಲಿ ಅವರ ಮೇಲೆ ಸಣ್ಣ ಕ್ರಮವನ್ನೂ ಜರುಗಿಸುವುದಿಲ್ಲ ಎನ್ನುವುದು ಅನೇಕರ ಅಭಿಪ್ರಾಯ.

ಬಹಳ ಹಿಂದಿನ ಉದಾಹರಣೆ ಯಾಕೆ? ಇತ್ತೀಚಿನ ಉದಾಹರಣೆಯನ್ನೇ ಗಮನಿಸಿ. ಕೇರಳದ ವಯನಾಡಿನಿಂದ ಬಂದ ಮುಸ್ಲಿಂ ದಿನಗೂಲಿ ಕಾರ್ಮಿಕ 40 ರ ಹರೆಯದ ಅಶ್ರಫ್‌ ನನ್ನು ಕಳೆದ ಎಪ್ರಿಲ್‌27 ರಂದು 30 ಕ್ಕೂ ಹೆಚ್ಚು ಜನರ ಗುಂಪು ನಿರ್ದಯವಾಗಿ ಬಡಿದು ಸಾಯಿಸುತ್ತದೆ. ಜಿಲ್ಲೆಯಲ್ಲಿ ಮೊದಲ ಬಾರಿ ನಡೆದ ಈ ಮಾಬ್‌ ಲಿಂಚಿಂಗ್‌ ದೇಶದಾದ್ಯಂತ ಸುದ್ದಿ ಮಾಡುತ್ತದೆ. ಈ ಘಟನೆ ನಡೆದುದು ಪೊಲೀಸರಿಗೆ  ಗೊತ್ತಿತ್ತು, ಆದರೆ ಆರಂಭದಲ್ಲಿ ಪೊಲೀಸರೇ ಅದನ್ನು ಮುಚ್ಚಿ ಹಾಕಲು ಯತ್ನಿಸಿದರು, ಕೊನೆಗೆ ಪ್ರಗತಿಪರ ಸಂಘಟನೆಗಳು ದನಿ ಎತ್ತುತ್ತಿದ್ದಂತೆ ಕೇಸು ದಾಖಲಾಗಿ ಆರೋಪಿಗಳ ಬಂಧನ ಪ್ರಕ್ರಿಯೆ ಆರಂಭವಾಯಿತು ಎಂಬ ಆರೋಪವಿದೆ.

ಪೊಲೀಸರ ಅಧಿಕೃತ ದಾಖಲೆಗಳ ಪ್ರಕಾರವೇ ರೌಡಿಶೀಟರ್‌ ಅನಿಸಿಕೊಂಡಿರುವ ಸುಹಾಸ್‌ ಶೆಟ್ಟಿಯ ಹತ್ಯೆಯ ಬೆನ್ನಿಗೇ, ಪೊಲೀಸರ ಅನುಮತಿಯಿಲ್ಲದಿದ್ದರೂ ಕೇಸರಿ ಪಡೆಗಳು ಬಜ್ಪೆಯಲ್ಲಿ ಪ್ರತಿಭಟನಾ ಸಭೆ ನಡೆಸುತ್ತವೆ. ಅಲ್ಲಿ ಬಹಿರಂಗವಾಗಿ ಹಿಂಸಾಚಾರದ ಕರೆಕೊಡಲಾಗುತ್ತದೆ. ಅಂತಹ ಕರೆಕೊಟ್ಟವರು ಯಾರು ಎಂಬುದು ಪೊಲೀಸರಿಗೂ ಗೊತ್ತು. ಆದರೆ ಅವರ ಮೇಲೆ ಪೊಲೀಸ್‌ ಕೇಸು ದಾಖಲಾಗಲೇ ಇಲ್ಲ. ಅವರ ವಿರುದ್ಧ ಪೊಲೀಸರು ಸಕ್ರಿಯರಾಗಬೇಕಾದರೆ ಅಬ್ದುಲ್‌ ರಹ್ಮಾನ್‌ ಕೊಲೆ ಸಂಭವಿಸಬೇಕಾಯಿತು. !

ಸುಹಾಸ್‌ ಶೆಟ್ಟಿ ಶ್ರದ್ಧಾಂಜಲಿ ಸಭೆಯಲ್ಲಿ ದ್ವೇಷ ಭಾಷಣದ ದೀರ್ಘ ಇತಿಹಾಸ ಹೊಂದಿರುವ ಕಲ್ಲಡ್ಕ ಭಟ್ಟರು ಮತ್ತೆ ಕೋಮುವಾದಿ ಭಾಷಣಮಾಡುತ್ತಾರೆ. ಅವರ ಮೇಲೆ ಪೊಲೀಸರು ತಕ್ಷಣ ಕೇಸು ದಾಖಲಿಸುವುದಿಲ್ಲ. ತೀರಾ ವಿಳಂಬವಾಗಿ ಕೇಸು ದಾಖಲಿಸಿದ್ದೇ ಒಂದು ಕಾರಣವಾಗಿ ಭಟ್ಟರಿಗೆ ಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಸಿಗಲು ಕಾರಣವಾಗುತ್ತದೆ.

 ಜನರಿಗೆ ಶಾಂತಿ ಬೇಕು

ಈ ಎಲ್ಲ ಹಿನ್ನೆಲೆಯಲ್ಲಿ ನೋಡುವಾಗ, ಸಹಜವಾಗಿಯೇ ಬಹುದೊಡ್ಡ ಸಂಖ್ಯೆಯಲ್ಲಿ ಉದ್ಯಮಶೀಲರಿರುವ ಜಿಲ್ಲೆಯ ಜನರಿಗೆ ಈ ಗಲಾಟೆಗಳು ಬೇಕಾಗಿಲ್ಲ. ಅವರಿಗೆ ಶಾಂತಿ ಬೇಕು. ಆದರೆ ಈ ಶಾಂತಿಗೆ ಅಡ್ಡಿಯಾಗಿರುವವರೆಂದರೆ ಬಿಜೆಪಿಯಂತಹ ರಾಜಕೀಯ ಪಕ್ಷ ಮಾತ್ರವಲ್ಲ, ಸಂಘಪರಿವಾರದ ಮನಸ್ಥಿತಿಯನ್ನೇ ಹೊಂದಿದ್ದು, ಸಂಘಪರಿವಾರದ ಮಂದಿಗೆ ಅನ್ಯೋನ್ಯ ಒಡನಾಟ ಹೊಂದಿರುವ ಇಲ್ಲಿನ ಕಾಂಗ್ರೆಸ್ಸಿಗರು ಕೂಡಾ ಎನ್ನುವುದು ಸಾರ್ವಜನಿಕ ಅಭಿಪ್ರಾಯ. ಅಲ್ಲದೆ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಜಂಡಾ ಊರಿದ್ದು ಇಲ್ಲಿನ ಸಂಘಪರಿವಾರದ ಮಂದಿಯೊಂದಿಗೆ ಒಳ್ಳೆಯ ಸಂಬಂಧ ಹೊಂದಿರುವ ಅನೇಕ ಪೊಲೀಸರಿದ್ದಾರೆ. ಅವರ ವರ್ಗಾವಣೆಯೂ ಆಗಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.

ಅಂದರೆ, ಒಂದೆಡೆಯಲ್ಲಿ ಇಲ್ಲಿನ ಪೊಲೀಸ್‌ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಯಾಗಬೇಕು. ಅಬ್ದುಲ್‌ ರಹ್ಮಾನ್‌ ಹತ್ಯೆಯ ಬೆನ್ನಿಗೆ ಮುಸ್ಲಿಂ ಸಮುದಾಯದಲ್ಲಿ ಉಂಟಾದ ವ್ಯಾಪಕ ಅಸಮಾಧಾನ ಮತ್ತು ಪ್ರತಿಭಟನೆಯ ಕಾರಣವಾಗಿ ಈಗ ಇಲ್ಲಿನ ಪೊಲೀಸ್‌ ಕಮಿಷನರ್‌ ಮತ್ತು ಎಸ್‌ ಪಿ ಯನ್ನು ಬದಲಾಯಿಸಿ ದಕ್ಷರು ಎನ್ನಲಾದ ಅಧಿಕಾರಿಗಳನ್ನು ಸರಕಾರ ನೇಮಿಸಿದೆ. ಕೋಮು ನಿಗ್ರಹ ಪಡೆಯನ್ನೂ ರಚಿಸಿದೆ. 

ಅದೇ ಹೊತ್ತಿನಲ್ಲಿ ಸಂಘಪರಿವಾರದ ಹಿಂಸಾ ರಾಜಕಾರಣದ ಎಲ್ಲ ಒಳಹೊರಗುಗಳನ್ನು ತಿಳಿದುಕೊಂಡಿದ್ದು ಆ ಜೀವವಿರೋಧಿ ಸಿದ್ಧಾಂತಕ್ಕೆ ಸಂಪೂರ್ಣ ವಿರುದ್ಧ ಇರುವ ಒಂದು ಅಪ್ಪಟ ಸೆಕ್ಯುಲರ್ ರಾಜಕೀಯ ನಾಯಕತ್ವ ಇಲ್ಲಿಗೆ ಬೇಕಾಗಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು‌ ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯತ್ತ ಗಮನ ಹರಿಸುವಂತೆ ಕೇಳಿಕೊಂಡಿರುವುದು ಜಿಲ್ಲೆಯಲ್ಲಿ ಶಾಂತಿ ಬಯಸುವ ಬಹುತೇಕ ಮಂದಿಯಲ್ಲಿ ಹೊಸ ಆಶಾವಾದ ಮೂಡಿಸಿದೆ.

ಇದನ್ನೂ ಓದಿ- ಕರಾವಳಿ ಕೋಮು ರಾಜಕಾರಣ-2 ಮಿತಿಮೀರಿದ ಕಾಂಗ್ರೆಸ್ ಒಳಜಗಳ ಮತ್ತು ಗುಂಪುಗಾರಿಕೆ

ದೇಶದ ಪ್ರಜಾತಂತ್ರಕ್ಕೆ, ಸಂವಿಧಾನಕ್ಕೆ, ಮತೀಯ ಸಾಮರಸ್ಯಕ್ಕೆ ಒಂದು ಶಾಪವಾಗಿರುವ ಸಂಘಟನೆಗಳನ್ನು ಕರಾವಳಿಯಲ್ಲಿ ಉಕ್ಕಿನ ಕರಗಳಿಂದ ಮಟ್ಟ ಹಾಕಲು ಆಡಳಿತಕ್ಕೆ ಸರಿಯಾದ ಮಾರ್ಗದರ್ಶನ ನೀಡಬಲ್ಲ ನಾಯಕರು ಯಾರು ಎಂಬ ಪ್ರಶ್ನೆಗೆ ಫಕ್ಕನೆ ನೆನಪಾಗುವವರು ಕಾಂಗ್ರೆಸ್‌ ನಾಯಕ ಬಿಕೆ ಹರಿಪ್ರಸಾದ್‌ ಅವರು. ಅವರನ್ನು ರಾಜ್ಯದ ಗೃಹಮಂತ್ರಿಯಾಗಿ ನೋಡ ಬಯಸಿದ ಬಹುದೊಡ್ಡ ಸಂಖ್ಯೆಯ ಜನ ನಮ್ಮಲ್ಲಿದ್ದಾರೆ.

ಪೊಲೀಸ್‌ ವ್ಯವಸ್ಥೆಯಲ್ಲಿ ಬದಲಾವಣೆ ಪ್ರಕ್ರಿಯೆ ಆರಂಭವಾಗಿದೆ. ಕೋಮು ನಿಗ್ರಹ ಪಡೆ ರಚನೆಯಾಗಿದೆ. ಅದೇ ಹೊತ್ತಿನಲ್ಲಿ ಬಿ ಕೆ ಹರಿಪ್ರಸಾದ್‌ ಅವರೂ ಇಲ್ಲಿನ ಕೋಮು ಶಕ್ತಿಗಳನ್ನು ಎದುರಿಸುವ ಹೊಣೆ ಹೊರುತ್ತಿದ್ದಾರೆ. ಆಘಾತ, ಆತಂಕಗಳ ನಡುವೆಯೂ ಕತ್ತಲ ಸುರಂಗದ ತುದಿಯ ಬೆಳಕಿನ ಕಿರಣದಂತಹ ಈ ಬೆಳವಣಿಗೆ ಸಕಾರಾತ್ಮಕ ಪರಿಣಾಮ ಬೀರಲಿ, ಜಿಲ್ಲೆಯಲ್ಲಿ ಕೋಮು ಶಕ್ತಿಗಳು ನಾಶವಾಗಿ ಶಾಂತಿ ನೆಲೆಸುವಂತಾಗಲಿ ಎಂದು ಆಶಿಸೋಣ.

ಶ್ರೀನಿವಾಸ ಕಾರ್ಕಳ

ಇದನ್ನೂ ಓದಿ- ಕರಾವಳಿ ಕೋಮು ರಾಜಕಾರಣ-2 | ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಅನ್ಯೋನ್ಯ ಸಂಬಂಧ

More articles

Latest article