ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬಲ್ಲ ಒಬ್ಬನೇ ಒಬ್ಬ ವಿಶ್ವಾಸಾರ್ಹ, ದಕ್ಷ ನಾಯಕನಿಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ. ಇದನ್ನು ಸರಿ ಮಾಡಬಲ್ಲ ಚಾಣಾಕ್ಷ, ಸೈದ್ಧಾಂತಿಕ ನಿಷ್ಠಾವಂತ, ಬಿಜೆಪಿಯನ್ನು ಮಕಾಡೆ ಮಲಗಿಸಬಲ್ಲ ವ್ಯಕ್ತಿ ಬರಬೇಕು. ಅದನ್ನು ಕೆಪಿಸಿಸಿ ಪ್ರಾಮಾಣಿಕವಾಗಿ ಮಾಡದೆ, ಕೇವಲ ಲಾಬಿ ಮಾಡುವ ಜನಕ್ಕೆ ಮಣೆ ಹಾಕುತ್ತ ಕುಳಿತರೆ ಕಾಂಗ್ರೆಸ್ ನ ಶವ ಪೆಟ್ಟಿಗೆಗೆ ಕೊನೆಯ ಮೊಳೆಯನ್ನು ಸಿದ್ಧರಾಮಯ್ಯ ಮತ್ತು ಡಿಕೆಶಿ ಅವರೇ ಖುದ್ದು ಹೊಡೆದಂತಾಗುವುದರಲ್ಲಿ ಅನುಮಾನವಿಲ್ಲ – ಎಸ್ ಕೆ ಸಿದ್ಧಾರ್ಥ, ಮಂಗಳೂರು.
ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಕೋಮು ಸರಣಿ ಹತ್ಯೆಗಳ ಆನಂತರ, ಇಲ್ಲಿನ ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಿಸಿ ನಾನು ಬರೆದ ಲೇಖನದ ಮೊದಲ ಭಾಗವನ್ನು ನೀವು ನೋಡಿದ್ದೀರಿ ಎಂದು ಭಾವಿಸುವೆ. ಲಿಂಕ್ – ಮಿತಿಮೀರಿದ ಕಾಂಗ್ರೆಸ್ ಒಳಜಗಳ ಮತ್ತು ಗುಂಪುಗಾರಿಕೆ
ಎರಡನೇ ಭಾಗ ಇಲ್ಲಿದೆ.
ಕಾಂಗ್ರೆಸ್ಸಿನ ಒಳ ಜಗಳ ಮತ್ತು ಗುಂಪುಗಾರಿಕೆ ಇತ್ಯಾದಿಗಳು ಈ ಭಾಗದಲ್ಲಿ ಕೋಮುವಾದ ಬೆಳೆಯಲು ಹೇಗೆ ಕಾರಣವಾಗಿದೆಯೋ, ಹಾಗೆಯೇ ಬಿಜೆಪಿ ನಾಯಕರ ವರ್ತನೆ ಕೂಡಾ ಇಲ್ಲಿನ ಭಯಾನಕ ಪರಿಸ್ಥಿತಿಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿದೆ. ಯಾವುದೇ ಪ್ರತಿಭೆ, ಸಾಮರ್ಥ್ಯ ಇಲ್ಲದೇ, ಕೇವಲ ಹಿಂದೂತ್ವದ ಬಲದಿಂದ ಗೆದ್ದು, ಅಭಿವೃದ್ಧಿಯ ಯಾವ ದೂರದೃಷ್ಟಿಯನ್ನೂ ಹೊಂದಿರದ ಇಲ್ಲಿನ ಬಹುತೇಕ ಬಿಜೆಪಿ ನಾಯಕರ ಜೀವ ಹಿಂದುತ್ವ ಮತ್ತು ಹಿಂದುತ್ವ ಮಾತ್ರ.
ಯಾವುದೇ ಸಮಸ್ಯೆ ಬರಲಿ, ಅವರು ಎದುರು ತರುವುದು ಹಿಂದುತ್ವವನ್ನು. ಅದಕ್ಕೆ ಅವರಿಗೆ ವೇದಿಕೆ ಇದೆ, ಜನರೂ ಇದ್ದಾರೆ. ಆ ವಿಷಯದಲ್ಲಿ ಇಲ್ಲಿನ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಅನ್ಯೋನ್ಯ ಸಂಬಂಧ ಇದೆ. ಒಬ್ಬರಿಗೊಬ್ಬರು ಉದಾರವಾಗಿ ನೆರವಾಗುತ್ತಲೇ ಇರುತ್ತಾರೆ.
ಅನ್ಯೋನ್ಯ ಸಂಬಂಧ
ಕಾಂಗ್ರೆಸ್ ಮುಖಂಡ ಮಂಜುನಾಥ್ ಭಂಡಾರಿ ತನ್ನ ಶಿಕ್ಷಣ ಸಂಸ್ಥೆಯನ್ನು ಪರಿವಾರದ ಜನರ ಕಾರ್ಯಕ್ರಮಕ್ಕೆ ಉದಾರವಾಗಿ ಒದಗಿಸಿಕೊಡುತ್ತಾರೆ. ಅವರ ಒಳ ಸ್ನೇಹದ ನಿಯಮಗಳಿಗೆ ಅನುಸಾರವಾಗಿ ಎಲ್ಲಾ ಕೆಲಸ ಮಾಡಿಕೊಡುತ್ತಾರೆ.
ಕಾಂಗ್ರೆಸ್ ನ ಐವಾನ್ ಕಟ್ಟರವಾದಿ ಪುರಾಣಿಕರಿಗೆ, ಮಿಥುನ್ ರೈ ಬಿಜೆಪಿ ಶಾಸಕ ಭರತ ಶೆಟ್ಟಿಗೆ, ಪದ್ಮರಾಜ ಹಿಂದೂತ್ವ ರೂವಾರಿ ಉದಯ ಪೂಜಾರಿಗೆ ವೇದಿಕೆ ಒದಗಿಸಿಕೊಡುತ್ತಾರೆ. ಇದು ಎರಡೂ ಕಡೆಯ ಸೈದ್ಧಾಂತಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ.
ಇವೆಲ್ಲದರ ಒಟ್ಟು ಪರಿಣಾಮವನ್ನು ನಾವೀಗ ಪ್ರತ್ಯಕ್ಷ ನೋಡಬಹುದು. ಬಿಜೆಪಿ ಕಾರ್ಯಕರ್ತರು ಹಿಂದೆ ನಳಿನ್ ಕುಮಾರ್ ಅವರ ಕಾರು ಅಲ್ಲಾಡಿಸಿದ್ದರೆ, ಇದೀಗ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗ ಯುದ್ಧ ಘೋಷಣೆ ಮಾಡಿದ್ದಾರೆ.
ಅಮಾಯಕರ ಹತ್ಯೆಗೆ ಕಾರಣವಾಗುತ್ತಿರುವ ಬಿಜೆಪಿ ಪರಿವಾರವು ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವ ಹೊತ್ತಿನಲ್ಲಿಯೇ ಕಾಂಗ್ರೆಸ್ಸು ಒಳ ಒಪ್ಪಂದದ ತಮ್ಮ ನಾಯಕರಿಂದಾಗಿ ಛಿದ್ರವಾಗುತ್ತಿದೆ.
ಸಿದ್ಧರಾಮಯ್ಯ ನಡೆ ಹೇಳುತ್ತಿರುವ ಕಟು ಸತ್ಯ
ಕರಾವಳಿಯಲ್ಲಿ ಮೊನ್ನೆ ಅಮಾಯಕ ಮುಸ್ಲಿಂ ಯುವಕನೊಬ್ಬನ ದಾರುಣ ಹತ್ಯೆಯ ಬೆನ್ನಿಗೆ ಈ ಸರಣಿ ಹತ್ಯೆಗಳು ಸರಕಾರಕ್ಕೆ ಒಂದು ಸವಾಲಾಗಿ ಪರಿಣಮಿಸುತ್ತಿರುವ ಹೊತ್ತಿನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜಿಲ್ಲೆಯ ಯಾವ ನಾಯಕನನ್ನೂ ನಂಬದೇ ಬಿ ಕೆ ಹರಿಪ್ರಸಾದರಿಗೆ ಸಮಸ್ಯೆ ನಿಭಾಯಿಸಲು ಸೂಚಿಸಿರುವುದು ಇಲ್ಲಿನ ರಾಜಕೀಯ ಪರಿಸ್ಥಿತಿಯ ಅನೇಕ ಕಟು ಸತ್ಯಗಳಿಗೆ ಕನ್ನಡಿ ಹಿಡಿಯುತ್ತಿರುವಂತಿದೆ.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೇಳಿಕೆಯೊಂದನ್ನು ಎತ್ತಿಕೊಂಡು ಬಿಜೆಪಿಯು ಡಿಕೆಶಿಯವರನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡುತ್ತಿದೆ. ಆದರೆ ಅವರ ಶಿಷ್ಯ ಮಿಥುನ್ ಆಗಲಿ, ಮತ್ತೊಬ್ಬ ಆಪ್ತ ಮಿತ್ರ ಅಶೋಕ ರೈ, ಇನಾಯತ್ ಆಲಿ ಯಾರೂ ಕೂಡಾ ಡಿಕೆಶಿ ಪರ ಮಾತನಾಡಿಲ್ಲ ಎಂಬುದನ್ನು ಗಮನಿಸಿ.
ಈ ಎಲ್ಲ ಬೆಳವಣಿಗೆಗಳನ್ನು ನೋಡಿ ರೋಸಿ ಹೋಗಿ ಜಿಲ್ಲೆಯ ಬಹುತೇಕ ಮುಸ್ಲಿಮರು ಮತ್ತು ಇತರ ಸಮಾಜದ ಕಾರ್ಯಕರ್ತರು ಜಿಲ್ಲಾ ನಾಯಕರನ್ನು ತಿರಸ್ಕರಿಸಿ ದೂರ ನಿಂತಿದ್ದಾರೆ.
ಗಟ್ಟಿ ನಾಯಕತ್ವ ಬೇಕಿದೆ
ಇವರನ್ನು ಕುಳ್ಳಿರಿಸಿ ಮಾತನಾಡುವ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬಲ್ಲ ಒಬ್ಬನೇ ಒಬ್ಬ ವಿಶ್ವಾಸಾರ್ಹ, ದಕ್ಷ ನಾಯಕನಿಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ. ಇದನ್ನು ಸರಿ ಮಾಡಬಲ್ಲ ಚಾಣಾಕ್ಷ, ಸೈದ್ಧಾಂತಿಕ ನಿಷ್ಠಾವಂತ, ಬಿಜೆಪಿಯನ್ನು ಮಕಾಡೆ ಮಲಗಿಸಬಲ್ಲ ವ್ಯಕ್ತಿ ಬರಬೇಕು. ಅದನ್ನು ಕೆಪಿಸಿಸಿ ಪ್ರಾಮಾಣಿಕವಾಗಿ ಮಾಡದೆ, ಕೇವಲ ಲಾಬಿ ಮಾಡುವ ಜನಕ್ಕೆ ಮಣೆ ಹಾಕುತ್ತ ಕುಳಿತರೆ, ಕಾಂಗ್ರೆಸ್ ನ ಶವ ಪೆಟ್ಟಿಗೆಗೆ ಕೊನೆಯ ಮೊಳೆಯನ್ನು ಸಿದ್ಧರಾಮಯ್ಯ ಮತ್ತು ಡಿಕೆಶಿ ಅವರೇ ಖುದ್ದು ಹೊಡೆದಂತಾಗುವುದರಲ್ಲಿ ಅನುಮಾನವಿಲ್ಲ.
ಇತ್ತ ಮತ್ತೆ ಮತ್ತೆ ಹಿಂದೂ ಬಡ ಹುಡುಗರು ಕೇಸು ಜಡಿಸಿಕೊಂಡು ಜೈಲಿಗೆ ಹೋಗುವುದನ್ನು, ಬೀದಿಯಲ್ಲಿ ಸಾಯುವುದನ್ನು ನೋಡುತ್ತಿರುವ ಬಿಜೆಪಿ ಬೆಂಬಲಿಗರೂ ಸುಸ್ತಾಗಿದ್ದಾರೆ. ತಮ್ಮ ನಾಯಕರ ಒಳ ಒಪ್ಪಂದ ತಿಳಿದು ಕಂಗಾಲಾಗಿದ್ದಾರೆ.
ಇದು ಬುದ್ಧಿವಂತರ, ವಿದ್ಯಾವಂತರ ಜಿಲ್ಲೆಯ ಇಂದಿನ ಚಿಂತಾಜನಕ ರಾಜಕೀಯ ಪರಿಸ್ಥಿತಿ. ಅದು ಸಂಪೂರ್ಣ ಗೊಂದಲಮಯವಾಗಿದ್ದು, ಹೊಸ ನಾಯಕನೊಬ್ಬ ಮೂಡಿ ಬರಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಆ ಹೊಸ ನಾಯಕನೊಬ್ಬ ಯಾವಾಗ ಮೂಡಿಬರುತ್ತಾನೆ ಎಂಬುದನ್ನು ಕಾಲವೇ ಹೇಳಬೇಕು.
ಎಸ್ ಕೆ ಸಿದ್ದಾರ್ಥ, ಮಂಗಳೂರು
ಇದನ್ನೂ ಓದಿ- ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ: ದಕ್ಷಿಣ ಕನ್ನಡ ಜಿಲ್ಲಾ ಎಸ್. ಪಿ ಅರುಣ್ ಎಚ್ಚರಿಕೆ