Saturday, July 27, 2024

ನಾನು ರೈತಾಪಿ ಕುಟುಂಬದಿಂದ ಬಂದಿದ್ದೇನೆ, ರೈತರ ಸಮಸ್ಯೆಗಳನ್ನು ಸರಿಪಡಿಸೋಣ : ಎನ್‌.ಚಲುವರಾಯಸ್ವಾಮಿ

Most read

ರೈತರ ಹಿತಕಾಯಲು ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ವಿವಿಧ ಇಲಾಖೆಗಳು ಮತ್ತು ಗ್ಯಾರಂಟಿ ಯೋಜನೆಗಳ ಮೂಲಕ ರೂ.75000ಕೋಟಿಗಳನ್ನು ಕೃಷಿ ಕುಟುಂಬಗಳಿಗೆ ತಲುಪಿಸಲಾಗುತ್ತಿದೆ ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಹೆಬ್ಬಾಳದ ಪಶು ವೈದ್ಯಕೀಯ ಪರಿಷತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದ 311ನೇ ನಿರ್ದೇಶಕ ಮಂಡಳಿ ಸಭೆ ನಡೆಸಿ 50ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಉದ್ದೇಶಿಸಿ ಅವರು ಮಾತನಾಡಿ, ರಾಜ್ಯದ 223 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಪರಿಹಾರಕ್ಕೆ ಮನವಿ ಸಲ್ಲಿಸಿದ್ದಾರೆ. ರೈತರ ಸಂಕಷ್ಟ ನಿವಾರಣೆ ಸರ್ಕಾರದ ಜವಾಬ್ದಾರಿಯಾಗಿದ್ದು ಅದನ್ನು ನಿಭಾಯಿಸಲಿದೆ ಎಂದರು

ತಾವು ಕೃಷಿಕನಾಗಿದ್ದು ರೈತರ ಬದುಕು ಬವಣೆಗಳ ಬಗ್ಗೆ ಸ್ವಂತ ಅನುಭವ ಇದೆ. ಅವರ ಸಮಸ್ಯೆಗಳನ್ನು ಸರಿಪಡಿಸಲು ಶಕ್ತಿ ಮೀರಿ ಪ್ರಯತ್ನಿಸುವುತ್ತೇನೆ ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ ವಿಚಕ್ಷಣ ದಳವನ್ನು ಚುರುಕುಗೊಳಿಸಿದ್ದು, ನಕಲಿ ಹಾಗೂ ಕಳಪೆ ಬಿತ್ತನೆ ಬೀಜ, ರಸಗೊಬ್ಬರ, ಔಷಧಿಗಳ ಮಾರಾಟ ಸಾಗಾಟವನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ ಎಂದರು

2022-23 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮವು ವಿವಿಧ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಮಾರಾಟದಿಂದ ಒಟ್ಟು ರೂ.494.50ಕೋಟಿಗಳ ವಹಿವಾಟು ಮಾಡಿ ರೂ.7.65ಕೋಟಿಗಳ ತೆರಿಗೆ ನಂತರದ ಲಾಭ ಗಳಿಸಿರುತ್ತದೆ. ಇದು ಕಳೆದ 49 ವರ್ಷಗಳಲ್ಲಿ ನಿಗಮವು ವ್ಯಾಪಾರ ವಹಿವಾಟಿನಲ್ಲಿ ಗಳಿಸಿರುವ ಅತಿ ಹೆಚ್ಚಿನ ಲಾಭವಾಗಿರುತ್ತದೆ ಎಂದು ಚಲುವರಾಯಸ್ವಾಮಿ ಮಾಹಿತಿ ನೀಡಿದರು.

ಪ್ರಸಕ್ತ ಸಾಲಿನಲ್ಲಿ 2.73 ಲಕ್ಷ ಕ್ವಿಂಟಾಲ್ಗಳ ವಿವಿಧ ಬೆಳೆ / ತಳಿಗಳ ಬಿತ್ತನೆ ಬೀಜಗಳ ಮಾರಾಟದಿಂದ ರೂ.189.61 ಕೋಟಿಗಳಷ್ಟು ವಹಿವಾಟನ್ನು ಸಾಧಿಸಿರುತ್ತದೆ.

ಇದಲ್ಲದೆ, ಕಂಪನಿಯು ಪ್ರಸಕ್ತ ಸಾಲಿನಲ್ಲಿ 1.43 ಲಕ್ಷ ಮೆಟ್ರಿಕ್ ಟನ್ ಡಿ.ಎ.ಪಿ, ಯೂರಿಯಾ, ಕಾಂಪ್ಲೆಕ್ಸ್, ಎಂ.ಒ.ಪಿ., ಅಮೋನಿಯಂ ಸಲ್ಫೇಟ್ ಮತ್ತು ಎಸ್.ಓ.ಪಿ ರಸಗೊಬ್ಬರಗಳನ್ನು ಕಾಪು ದಾಸ್ತಾನು ಯೋಜನೆಯಡಿ ಹಾಗೂ ತಂಬಾಕು ಮಂಡಳಿಗೆ ವಿತರಿಸಿ ರೂ.301.65 ಕೋಟಿಗಳ ವಹಿವಾಟು ಸಾಧಿಸಿದೆ. 2023-24ನೇ ಸಾಲಿನಲ್ಲಿ ರೂ.200ಕೋಟಿಗಳ ವೆಚ್ಚದಲ್ಲಿ 2 ಲಕ್ಷ ಮೆಟ್ರಿಕ್ ಟನ್ ವಿವಿಧ ಶ್ರೇಣಿ ರಸಗೊಬ್ಬರಗಳ ವಹಿವಾಟನ್ನು ಮಾಡಲು ಯೋಜಿಸಲಾಗಿದೆ ಎಂದು ಸಚಿವರು ಹೇಳಿದರು.

ಸಂಸ್ಥೆಯ ಎಲ್ಲಾ ವಹಿವಾಟು ಪಾರದರ್ಶಕವಾಗಿರಬೇಕು ಹಾಗೂ ಸಕಾಲದಲ್ಲಿ ಸದಸ್ಯರಿಗೆ ಮಾಹಿತಿ ನೀಡಬೇಕು. ಲೋಪದೋಷಗಳಾದರೇ ಅಧಿಕಾರಿಗಳೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ನಿಗಮದ ಚಟುವಟಿಕೆಗಳಲ್ಲಿ ಹಲವು ರಚನಾತ್ಮಕ ಬದಲಾವಣೆಗಳಿಗೆ ಸಲಹೆ ಸೂಚನೆ ನೀಡಿದ ಕೃಷಿ ಸಚಿವರು.

ರೈತರಿಗೆ ಅನುಕೂಲವಾಗುವಂತೆ ಹಾಗೂ ಉತ್ಪಾದನೆ ಹೆಚ್ಚಳಕ್ಕೆ ಪೂರಕವಾಗಿ ಬಿತ್ತನೆ ಬೀಜ ಪೂರೈಸಲು ಸಚಿವರು ನಿರ್ದೇಶನ ನೀಡಿದರು.

ಕರ್ನಾಟಕ ಬೀಜ ನಿಗಮದ ನಿರ್ದೇಶಕ ಮಂಡಳಿ ಸದಸ್ಯರಾದ ಕೃಷಿ‌ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್, ಆಯುಕ್ತರಾದ ವೈ.ಎಸ್ ಪಾಟೀಲ್,ರೈತ ಪ್ರತಿನಿಧಿಗಳಾದ ಡಿ.ಎಲ್ ನಾಗರಾಜ್,ರಾಜೇಂದ್ರ ಪ್ರಸಾದ್, ನಿಂಗಪ್ಪ ಸಂಕಪ್ಪ ಹಾವೇರಿ, ಶಿವಬಸಪ್ಪ ಶರಣ ಬಸಪ್ಪ ಬೆಲ್ಲದ, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಎಸ್ ದೇವರಾಜ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು

More articles

Latest article