ನಾಳೆ ಬಸವ ಜಯಂತಿ ( 30-4-2025). ಜಗತ್ತು ಕಂಡ ಮಹಾನ್ ಮಾನವತಾವಾದಿ, ವಚನಗಳ ಮೂಲಕ ಬದುಕಿಗೆ ದಾರಿ ತೋರಿ ಮಾನವಕುಲದ ಸಂವಿಧಾನ ಬರೆದ ಬಸವಣ್ಣನವರನ್ನು ವಿಶೇಷವಾಗಿ ಸ್ಮರಿಸಿ ಬರೆದಿದ್ದಾರೆ ಡಾ. ಗಂಗಾಧರಯ್ಯ ಹಿರೇಮಠ.
ಬಸವಣ್ಣನವರು ನಮ್ಮ ಆಚಾರ್ಯರು, ಅವರ ಮಾತು ನಮಗೆ ಧರ್ಮ, ಅವರ ಜೀವನ ನಮಗೆ ಆದರ್ಶ, ನಾವು ಆಡಿದ ಮಾತಿನಿಂದ, ನಡೆಸಿದ ಜೀವನದಿಂದ, ಬದುಕಿದ ರೀತಿಯಿಂದ ಅವರು ನಮಗೆ ಹತ್ತಿರವೆನಿಸಿದರೆ ಅದು ನಮ್ಮ ಕಲ್ಯಾಣ, ಉದ್ಧಾರದ ಸೂಚನೆ. ದೂರವೆನಿಸಿದರೆ ಅದೇ ನಮ್ಮ ಅಧಃಪತನ ಕೂಡ. ಬಸವಣ್ಣನವರು ಕಟ್ಟಿದ ಜಾತ್ಯತೀತವಾದ ಸರ್ವಸಮಾನತೆಯ ಸರ್ವರ ಸುಖದ ಶರಣ ಧರ್ಮವು ಬಡವಾಯಿತು. ಇದು ನಾವು ಬಸವಣ್ಣನವರಿಗೆ ಮಾಡಿದ ದೊಡ್ಡ ಅಪಚಾರ. ನಾವು ವಿಶಾಲ ಮನಸ್ಕರಾಗಿ ಬೆಳೆಯಬೇಕಾಗಿದೆ. ಬಸವಣ್ಣನವರ ಆದರ್ಶಗಳನ್ನು, ಅವರ ವಚನಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಆ ತತ್ವಗಳಿಗೆ ಬದ್ಧರಾಗಿ ನಡೆಯಬೇಕಾಗಿದೆ.
ಬಸವಣ್ಣ ಹುಟ್ಟಿದ್ದು, ಬಾಳಿದ್ದು ಕನ್ನಡನಾಡಿನಲ್ಲಿ. ಬರೆದದ್ದು ಅಚ್ಚ ಕನ್ನಡ ಭಾಷೆಯಲ್ಲಿ. ಈ ಪರಿಮಿತಿಯ ಕಾರಣವಾಗಿ ಬಸವಣ್ಣನಿಗೆ ನ್ಯಾಯಯುತವಾಗಿ ಸಿಗಬೇಕಾದ ಜಾಗತಿಕ ಪ್ರಸಿದ್ಧಿ ಇನ್ನೂ ಸಿಕ್ಕಿಲ್ಲವಾದರೂ ಇವರನ್ನು ಕುರಿತಷ್ಟು ಸಾಹಿತ್ಯ ಕನ್ನಡದಲ್ಲಿ ಯಾರನ್ನು ಕುರಿತು ಹುಟ್ಟಿಲ್ಲ; ಈತನಷ್ಟು ಅಖಂಡ ಪ್ರಭಾವ ಕರ್ನಾಟಕದ ಜನತೆಯ ಮೇಲೆ ಯಾವ ಧಾರ್ಮಿಕ ಮಹಾಪುರುಷನೂ ಬೀರಿಲ್ಲ ಎನ್ನಬಹುದು. ಇವರ ಜನನ ಸಾ.ಶ. 1134 ಮೇ 3 ರಂದು ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿಯ ಇಂಗಳೇಶ್ವರದಲ್ಲಿ. ಪ್ರತಿಷ್ಠಿತ ಕೌಟುಂಬಿಕ ಹಿನ್ನಲೆ ಬಸವಣ್ಣನವರದು. ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಸಾ.ಶ. 1196 ಕೂಡಲಸಂಗಮದಲ್ಲಿ ಲಿಂಗೈಕ್ಯರಾದರು.
ಚೈತನ್ಯ ಶ್ರಮ ಸಂಸ್ಕೃತಿಯ ಹರಿಕಾರ ಬಸವಣ್ಣನವರು
ಬಸವಣ್ಣನವರು ಜನ್ಮ ತಾಳುವ ಮೊದಲೇ ಈ ದೇಶದಲ್ಲಿ ಲೋಕಾಯತರು, ಮಹಾವೀರ, ಬುದ್ಧನಂತಹ ಮಹಾತ್ಮರು, ಅರವತ್ಮೂರು ಪುರಾತನರು (5-9ನೇ ಶತಮಾನ) ಬಸವಪೂರ್ವಯುಗದ 39 ಜನ ಶಿವಶರಣರು (9-11ನೇ ಶತಮಾನ) ಜನತೆಗೆ ಶೋಷಣೆ ಆಗುವುದನ್ನು ನಿರಾಕರಿಸಿದರು. ಅಲ್ಪ ಸಂಖ್ಯೆಯಲ್ಲಿರುವ ಅನುತ್ಪಾದಕ ವರ್ಣಗಳ ಜನ ಸದಾ ಉತ್ಪಾದನೆಯಲ್ಲಿ ತೊಡಗಿರುವ ಬಹುಸಂಖ್ಯಾತ ಶೂದ್ರರನ್ನು, ಪಂಚಮರನ್ನು ಮತ್ತು ಮಹಿಳೆಯರನ್ನು ಏಕೆ ದೂರವಿಟ್ಟಿದ್ದಾರೆ ಎಂಬುದನ್ನು ಬಸವಣ್ಣನವರು ಗಮನಿಸಿದರು. ವರ್ಣ, ಜಾತಿ, ಜ್ಞಾನ ಹಾಗೂ ಅಧಿಕಾರದ ಮೂಲಕ ಸುಲಿಗೆ ಅಥವಾ ಶೋಷಣೆಯೇ ಬಹುಸಂಖ್ಯಾತ ಸಮಾಜದಲ್ಲಿನ ಜನರ ದುಃಖದ ಮೂಲವೆಂಬುದನ್ನು ಜನಸಮುದಾಯಕ್ಕೆ ಅವರು ತೋರಿಸಿಕೊಟ್ಟರು. ಶೋಷಣೆ ಅಥವಾ ಸುಲಿಗೆಗೊಳಗಾದ ಜನಸಮುದಾಯಕ್ಕೆ ಹೊಸದಾರಿ ತೋರಿಸುವುದೇ ತಮ್ಮ ಬದುಕಿನ ಗುರಿ ಎಂಬ ಭಾವದೊಂದಿಗೆ ಬಸವಣ್ಣನವರು ಮಾಡಿದ ಚಿಂತನೆ ಶ್ಲಾಘನೀಯ. ಜಡ ಸಂಸ್ಕೃತಿಯ ಬದಲು ‘ಕಾಯಕ’ ಪ್ರಧಾನವಾದ ಚೈತನ್ಯ ಸಂಸ್ಕೃತಿಯ ಹರಿಕಾರರಾದರು ಬಸವಣ್ಣನವರು. ಹೊಸದೇವರು, ಹೊಸವಿಚಾರ, ಹೊಸಜೀವನಕ್ರಮ, ಹೊಸ ತಿಳುವಳಿಕೆ, ಹೊಸಮೌಲ್ಯ, ಮಾನವ ಪ್ರೀತಿ, ಸಂಬಂಧಗಳನ್ನು ಕಲ್ಪಿಸುವ ಚಿಂತನೆ ಮಾಡಿದರು. ಈ ಹೊಸತನಕ್ಕೆ ಅಡ್ಡಿಯನ್ನುಂಟು ಮಾಡುವವರನ್ನು ಅವರು ಪ್ರಶ್ನಿಸಿದರು.
ಬಸವಣ್ಣನವರು ಮಠ-ಗುಡಿಗಳನ್ನು ಕಟ್ಟಿಸಲಿಲ್ಲ
ಬಸವಣ್ಣನವರು ನೂತನ ಜೀವನ ವಿಧಾನ, ಸಮಾಜ ಕಲ್ಯಾಣದ ಆಶಯದಿಂದ ಅವರು ಮಠ ಕಟ್ಟಿಸಲಿಲ್ಲ, ಗುಡಿ-ಗುಂಡಾರಗಳನ್ನು ಕಟ್ಟಿಸಲಿಲ್ಲ. ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ ಎಂಬ ತತ್ವದಡಿ ಸಮಾಜಕ್ಕೆ ಭವಿಷ್ಯವಿದೆ. ನಾವು ಕಟ್ಟಿದ ಕಟ್ಟಡಗಳಿಗೆ ಜೀವವೂ ಇಲ್ಲ. ಭವಿಷ್ಯವೂ ಇಲ್ಲವೆಂದರು. ಸಿರಿಗರ ಬಡಿದವರನ್ನು ಎಚ್ಚರಿಸಿ ಜನರ ಮನಸ್ಸುಗಳನ್ನು ತಟ್ಟಿದರು. ಮನುಷ್ಯರನ್ನು ಪ್ರೀತಿಸಿದರು. ‘ಹಿಂದೂ’ ಎಂಬುದು ಧರ್ಮವಲ್ಲ, ಅದೊಂದು ಜೀವನ ವಿಧಾನ, ಅದರಲ್ಲಿ ಜಾತಿ, ವರ್ಣ, ಅಸ್ಪೃಶ್ಯತೆ, ಅಸಮಾನತೆಯ ಅಂಶಗಳು ಅಡಗಿವೆ. ಈ ಜೀವನ ವಿಧಾನದಲ್ಲಿದ್ದ ದೋಷಗಳನ್ನು ತಿದ್ದಿ ಹೊಸ ಜೀವನ, ವೈಚಾರಿಕತೆ ಕಂಡುಕೊಳ್ಳಲು ಬಸವಣ್ಣನವರು ಜನಸಾಮಾನ್ಯರಿಗೆ ಕರೆನೀಡಿದರು. ದುಡಿಯದೇ ಬದುಕಬಾರದು, “ಕಾಯಕವೇ ಕೈಲಾಸ”, ಅನ್ಯರುಗಳಿಸಿದ ಸಂಪತ್ತಿಗೆ ಆಶೆಪಡಬಾರದು. ಪರ ಸ್ತ್ರೀಯರನ್ನು ತಾಯಿಯೆಂದು ಗೌರವಿಸಬೇಕು. ಜಾತ್ಯತೀತ ನಿಲುವಿನಿಂದ ಬದುಕುವುದು ಇತ್ಯಾದಿ ಸಂಗತಿಗಳಿಗೆ ಆದ್ಯತೆ ನೀಡಿದ ಬಸವಣ್ಣನವರು ಜನತೆಗೆ ತಿಳಿಸಿದ ನೂತನ ಜೀವನ ವಿಧಾನವಿದು.
ಬಸವಣ್ಣನವರು ಬರೆದದ್ದು ಮಾನವಕುಲದ ಸಂವಿಧಾನ
ಡಾ. ಬಿ.ಆರ್. ಅಂಬೇಡ್ಕರ್ ಬರೆದದ್ದು ದೇಶದ ಸಂವಿಧಾನ. ಭಾರತದ ಸಂವಿಧಾನ. ಬಸವಣ್ಣನವರು ಬರೆದದ್ದು ‘ಮಾನವಕುಲದ ಸಂವಿಧಾನ’. ಮಾನವ ಕುಲದ ಸಂವಿಧಾನವೇ ಈ ದೇಶದ ಸಂವಿಧಾನದ ತಳಹದಿಯಾಗಿದೆ. ಜಗತ್ತಿನ ಎಲ್ಲಾ ಸಂವಿಧಾನಗಳು ವಚನ ಸಂವಿಧಾನದ ನಂತರವೇ ಹುಟ್ಟಿಕೊಂಡಿವೆ. ಬಸವಣ್ಣನವರು ವಿಶ್ವಮಾನವ ಪರಿಕಲ್ಪನೆಯಲ್ಲಿ ವಚನಗಳನ್ನು ಬರೆದರು. ಅವರು ಯಾವುದೇ ಒಂದು ಜಾತಿ, ಸಮುದಾಯದ ಏಳ್ಗೆಯನ್ನು ಬಯಸದೇ ಸಕಲ ಜೀವರಿಗೆ ಲೇಸನ್ನು ಬಯಸಿದರು. ಆ ಮೂಲಕ ಸಂಸ್ಕೃತಿ, ಸಂಸ್ಕಾರ, ನಾಗರೀಕತೆ, ಮೌಲ್ಯಗಳನ್ನು, ನೈತಿಕತೆಯನ್ನು ಶುದ್ಧತೆ-ಬದ್ಧತೆ ಮತ್ತು ಸಮಾನತೆಗಳನ್ನು ಎತ್ತಿ ಹಿಡಿದರು. ಸಮಾಜ ವಿಮರ್ಶೆ ಬಸವಣ್ಣನವರ ವಚನಗಳ ಇನ್ನೊಂದು ಮುಖವಾಗಿದೆ. ಹೀಗೆ ಅವರ ಆತ್ಮ ವಿಮರ್ಶೆ, ಸಮಾಜವಿಮರ್ಶೆಯ 1409 ವಚನಗಳು ಲೋಕಸಂದೇಶದ ಭಾವಗೀತೆಗಳಂತೆ ಕಾಣುತ್ತವೆ. ಹೀಗಾಗಿ ಬಸವಣ್ಣ ವಿಶ್ವಮಾನವನಾಗಿ ಸಮಾಜಮುಖಿ ಚಿಂತನೆಯ ಮಹಾನ್ ವ್ಯಕ್ತಿಯಾಗಿ ಕಂಡುಬರುತ್ತಾರೆ.
ಬಸವಣ್ಣನವರ ಆಶಯ ವ್ಯಕ್ತಿತ್ವ – ಸಮಾಜ ಶುದ್ಧೀಕರಣ
ಭಾರತವು ವರ್ಗಭೇದ, ವರ್ಣಭೇದ ಹಾಗೂ ಲಿಂಗಭೇದ – ಹೀಗೆ ಭೇದ ಸಂಸ್ಕೃತಿಯ ರಾಷ್ಟ್ರವಾಗಿದೆ. ಭೇದ ಸಂಸ್ಕೃತಿಯ ಸಮಾಜದಲ್ಲಿ ಪರಸ್ಪರ ಘರ್ಷಣೆಗಳು ಜರುಗಬಹುದೇ ಹೊರತು ಸಾಮುದಾಯಿಕ ಕಲ್ಯಾಣ ಅಂದೋಲನ ಜರುಗಲಾರದು. ಹೀಗಾಗಿ ನಮ್ಮ ದೇಶದಲ್ಲಿ ಒಂದು ಜಾತಿ, ಸಮುದಾಯದ ಆತ್ಮ ಕಲ್ಯಾಣದ ಪ್ರಯೋಗಗಳು ಜರುಗಿದವೇ ಹೊರತು ಸರ್ವಜನರ ಒಳಿತಿಗಾಗಿ ಸಮಾಜ ಕಲ್ಯಾಣದ ಅಂದೋಲನಗಳು ಸಂಭವಿಸಲಿಲ್ಲ. ಬಸವಣ್ಣನವರು 12ನೆಯ ಶತಮಾನದಲ್ಲಿ ಈ ಎರಡೂ ಬಗೆಯ ಕಲ್ಯಾಣದ ಕುರಿತು ಚಳುವಳಿಯನ್ನು ನಡೆಸಿದರು. ಇದೇ ಶರಣ ಚಳುವಳಿ, ವಚನ ಚಳುವಳಿಯಾಗಿದೆ. ಬಸವಣ್ಣನವರ ಆಶಯ ವ್ಯಕ್ತಿತ್ವ ಶುದ್ಧೀಕರಣದಷ್ಟೇ ಸಮಾಜ ಶುದ್ಧೀಕರಣ ಮುಖ್ಯವೆಂದು ಇದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಬಸವಣ್ಣನವರ ‘ತತ್ವಗಳು’ ವ್ಯಕ್ತಿಶುದ್ಧಿಯಲ್ಲಿ ಬಿಚ್ಚಿಕೊಂಡು ಸಮಾಜಶುದ್ಧಿಯಲ್ಲಿ ವಿಸ್ತಾರಗೊಳ್ಳುತ್ತವೆ. ಸಮಾಜಶುದ್ಧಿಯಾಗುವುದೆಂದರೆ ಸಮಾಜದಲ್ಲಿ ಸಮಾನತೆಯನ್ನು ತರುವುದು. ಈ ಸಾಮಾಜಿಕ ಸಮಾನತೆಯ ಮೂಲವೇ ‘ಆರ್ಥಿಕ ಸಮಾನತೆ’. ಬಸವಣ್ಣನ ಅರ್ಥತತ್ವಕ್ಕೆ ಎರಡು ಮಗ್ಗುಲುಗಳುಂಟು. ಒಂದು ಕಾಯಕ (ಶ್ರಮ) ಇನ್ನೊಂದು ದಾಸೋಹ (ವಿತರಣೆ). ಈ ಸೂತ್ರದ ಆದರ್ಶದಲ್ಲಿ ‘ಕಲ್ಯಾಣರಾಜ್ಯ’ ಕಟ್ಟುವುದು ಬಸವಣ್ಣನವರ ಆದರ್ಶ ಧ್ಯೇಯವಾಗಿತ್ತು.
ಸಮಾನತೆಗಾಗಿ ಎಲ್ಲರಿಗೂ ಇಷ್ಟಲಿಂಗ ಧಾರಣೆ
ದೇವರು ಪ್ರತಿಯೊಬ್ಬರ ಜೊತೆಯಲ್ಲಿದ್ದಾನೆ. ಪುರೋಹಿತರು, ಪೂಜಾರಿಗಳೆಂಬ ಮಧ್ಯವರ್ತಿಗಳಿಲ್ಲದೆ ನೇರವಾಗಿ ಪ್ರತಿಯೊಬ್ಬರು ದೇವರ ಪೂಜೆಯಲ್ಲಿ ತೊಡಗಲು ಸಾಧ್ಯವಾಗುವಂಥ “ಇಷ್ಟಲಿಂಗ”ವನ್ನು ಬಸವಣ್ಣನವರು ಕಂಡುಕೊಂಡರು. ಲಿಂಗವಂತರಿಗೆ ತಮ್ಮ ಇಷ್ಟಲಿಂಗ ಪೂಜೆ ಬಿಟ್ಟರೆ ಬೇರಾವ ಪೂಜೆಯ ಅವಶ್ಯಕತೆ ಇಲ್ಲ. ಈ ತಿಳುವಳಿಕೆಯನ್ನು ಮರೆತು ನಾವು ಗುಡಿ-ಗುಂಡಾರಗಳನ್ನು ಸುತ್ತುವುದು, ಕಂದಾಚಾರ – ಮೂಢ ನಂಬಿಕೆಗಳಿಗೆ ಬಲಿಯಾಗುವುದು, ಪಂಚಾಂಗವನ್ನು, ವಾಸ್ತುಶಾಸ್ತ್ರವನ್ನು ನಂಬಿ ಬದುಕುವುದು, ಜಾತೀಯತೆ ಮಾಡುವುದು ಇನ್ನೂ ನಿಂತಿಲ್ಲ. ಇವು ಬಸವಣ್ಣನವರ ವಿಚಾರಗಳಿಗೆ ವಿರುದ್ಧವಾದವು. ಈ ಅಂತಃಕರಣದ ಅರಿವೇ ಇಷ್ಟಲಿಂಗವಾಯಿತು. ಅವರು ಈ ಅಂತಃಕರಣವನ್ನೇ ಇಷ್ಟಲಿಂಗ ರೂಪದಲ್ಲಿ ಧರಿಸಿದರು ಮತ್ತು ಅವರಲ್ಲಿಗೆ ಬಂದ ಜನರಿಗೆಲ್ಲ ಧರಿಸಲು ಕೊಟ್ಟರು. ಎಲ್ಲ ಜಾತಿ, ಜನಾಂಗಗಳ ಬಡವರನ್ನು, ದಲಿತರನ್ನು, ಒಂದು ಗೂಡಿಸಿದರು, ಸಂಘಟಿಸಿದರು. ಅವರಿಗೆ ಹೊಸ ವೈಚಾರಿಕ ಬದುಕಿನ ಪಾಠ ಹೇಳಿದರು. ಹೊಸ ಸಮಾಜಕ್ಕೆ ಹೋರಾಡುವ ಶಕ್ತಿಯನ್ನು ಅವರಲ್ಲಿ ತುಂಬಿದರು. ಪಟ್ಟಭದ್ರ ಹಿತಾಸಕ್ತಿಗಳು ಬಸವಣ್ಣನವರ ವಿಚಾರಗಳಿಗೆ ಅವಕಾಶಕೊಡಲಿಲ್ಲ. ದುಡಿಯುವ ವರ್ಗದ, ಕೆಳವರ್ಗದಿಂದ ಬಂದ ಶರಣರ ಕಗ್ಗೊಲೆ ಮಾಡಿದರು. ಹೀಗಾಗಿ ಬಸವಣ್ಣನವರು ಮಾಡಬೇಕಾಗಿದ್ದ ಸಮಗ್ರ ಕ್ರಾಂತಿಗೆ ಹಿನ್ನಡೆಯಾಯಿತು. ಲಿಂಗ ಕಟ್ಟಿಸಿಕೊಂಡವರೆಲ್ಲ ಸಮಾಜದಲ್ಲಿ ಒಂದು ಜಾತಿಯಾಗಿ ರೂಪುಗೊಂಡದ್ದು ಅತ್ಯಂತ ವಿಷಾದದ ಸಂಗತಿ. ‘ಲಿಂಗಾಯತ’ ಎಂಬುದು ಒಂದು ಜಾತಿಯಲ್ಲ. ಅದೊಂದು ತತ್ವವಾಗಿದೆ. ಸಮಾಜದಲ್ಲಿ ಸಮಾನತೆ ಸಾರುವ ವ್ಯಕ್ತಿಯ ನಡೆ-ನುಡಿಯಾಗಿದೆ.
ಬಸವಣ್ಣನವರ ವ್ಯಕ್ತಿತ್ವ ಬಹುಮುಖವಾದದ್ದು
ಜಗತ್ತಿನ ಇತಿಹಾಸದಲ್ಲಿ ಚಿರಂತನವಾಗಿ ಬೆಳಗುತ್ತಿರುವ ಮಹೋನ್ನತ ವ್ಯಕ್ತಿತ್ವ ಬಸವಣ್ಣನವರದು. ಅವರು ಪುರಾಣ ಪುರುಷರಲ್ಲ; ಚಾರಿತ್ರಿಕ ವ್ಯಕ್ತಿ. ಅವರು ಧರ್ಮ ಕೆಲವರ ಸ್ವತ್ತಲ್ಲ ಸರ್ವರ ಸಂಪತ್ತೆಂದರು. ಧಾರ್ಮಿಕ, ಸಾಮಾಜಿಕ ಸಾಂಸ್ಕೃತಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅವರು ಮಾಡಿದ ಸುಧಾರಣೆ ವಿಶಿಷ್ಟವಾದದ್ದು. ಬಸವಣ್ಣನವರ ಜೀವನದ ಮೂಲ ಶ್ರುತಿಗಳು ಎರಡು. ಒಂದು ‘ವಿನಯ’; ಇನ್ನೊಂದು ‘ಆದರ್ಶ’, ತನಗಿಂತ ಕಿರಿಯರಿಲ್ಲ ಎಂಬ ವಿನಯ, ಸಕಲ ಜೀವರಿಗೆ ಲೇಸನ್ನೇ ಬಯಸುವ, ಅನ್ಯರಿಗೆ ಅಸಹ್ಯಪಡದ ಉನ್ನತವಾದ ಆದರ್ಶ, ಕಾಯಕ ನಿಷ್ಠೆ, ದಾಸೋಹ ಭಾವ; ದೀನರನ್ನು ದಲಿತರನ್ನು ಕಂಡು ಅವರನ್ನು ಎದೆಗಪ್ಪಿಕೊಂಡ ಹಿಮಾಲಯದೆತ್ತರದ ಧೈರ್ಯ, “ಇವನಾರವ ಇವನಾರವ” ಎಂದಿನಿಸದೇ ಇವ ನಮ್ಮವ ಎಂಬ ಮಹಾ ಮಾನವತಾ ಪ್ರೇಮ ಇವೆಲ್ಲವುಗಳನ್ನೊಳಗೊಂಡ ಅವರ ವ್ಯಕ್ತಿತ್ವ ಬಹುಮುಖವಾದದ್ದು. ಭಕ್ತಿ ಭಂಡಾರಿ, ಸಮಾಜ ಸುಧಾರಕ, ಆರ್ಥಿಕ ಚಿಂತಕ, ಧರ್ಮದಲ್ಲಿ ಕ್ರಾಂತಿಕಾರಿ, ಅನುಭಾವಿ, ಕವಿ, ಕಾರಣಿಕ, ವಚನಕಾರ ಹೀಗೆ ಹಲವು ಹತ್ತು ಮುಖಗಳಲ್ಲಿ ಆತ ಸೀಮಾಪುರುಷ. ಒಂದು ಯುಗದ ಮನೋಧರ್ಮವನ್ನು ರೂಪಿಸಿದ ಯುಗ ಪ್ರವರ್ತಕ.
ಬಸವಣ್ಣನವರ ಕಾಯಕದ ಪರಿಕಲ್ಪನೆ
ಬಸವಣ್ಣನವರ ಕಾಯಕ ತತ್ವಕ್ಕೆ ಜಾತಿ-ವರ್ಗಗಳ ಭೇದವಿಲ್ಲ. ಅದು ಒಳಗೊಂಡಿರುವ ತತ್ವವೆಂದರೆ ‘ಶ್ರಮ’ ಗೌರವಿಸುವುದು, ಕಾಯಕ ನಿಷ್ಠೆಗೆ ಬದ್ಧನಾಗಿರುವುದು, ಸಂತೃಪ್ತ ಬದುಕು, ಸಮಾನತೆ, ನಿಸ್ವಾರ್ಥ ಭಾವನೆ, ಅರ್ಪಣಾ ಮನೋಭಾವಗಳು.. ಕಾಯಕವೆಂದರೆ ಶರೀರ ದಣಿಸುವುದಷ್ಟೇ ಅಲ್ಲ. ಪರಿಶುದ್ಧ ಮನಸ್ಸಿನಿಂದ ಕೂಡಿದ ತನುವಿಗೆ ಸಂತೃಪ್ತಿ ತರುವ, ಪರಹಿತಕಾಯುವ ಕರ್ತವ್ಯನಿಷ್ಠೆಯೇ ಕಾಯಕವಾಗಿದೆ. ಇದು ಸಮಾನತೆಯ ತತ್ವದ ಆಧಾರದ ಮೇಲೆ ರೂಪುಗೊಂಡಿರುವ ವಿಶಿಷ್ಠ ಕಲ್ಪನೆಯಾಗಿದೆ. ಕಾಯಕಗಳು ದಾಸೋಹಕ್ಕೆ ಮನ್ನಣೆ ನೀಡಬೇಕು. ಹೀಗಾಗಿ ‘ಕಾಯಕವೇ ಕೈಲಾಸ’ವೆಂಬುದು ಬಸವಣ್ಣನವರ ಕಲ್ಪನೆಯಾಗಿತ್ತು.
ಮಹಿಳೆಯರಿಗೆ ವೈಚಾರಿಕ, ಅಭಿವ್ಯಕ್ತಿ, ಧಾರ್ಮಿಕ ಸ್ವಾತಂತ್ರ್ಯ
ಬಸವಣ್ಣನವರು ಮಹಿಳೆಯರಿಗೆ ಮುಕ್ತ ವಾತಾವರಣವನ್ನು ಕಲ್ಪಿಸಿದರು. ಪುರುಷರು ಮತ್ತು ಮಹಿಳೆಯರು ಸಮಾನನಡೆಯಲ್ಲಿ ವೈಚಾರಿಕತೆಯುಳ್ಳವರಾದರೆ ನಮ್ಮ ಸಮಾಜದ ಸಮಸ್ಯೆಗಳೆಲ್ಲ ಕರಗಿ ಹೋಗುತ್ತವೆ ಎಂದು ಭಾವಿಸಿ ಮಹಿಳೆಯರಲ್ಲಿ ವೈಚಾರಿಕ ಪ್ರಜ್ಞೆ, ಅಭಿವ್ಯಕ್ತಿ ಸ್ವಾತಂತ್ರ್ಯ ಬೆಳೆಯಲು ಪೂರಕ ಪರಿಸರವನ್ನು ನಿರ್ಮಿಸಿದರು. ‘ಸ್ತ್ರೀಯರೂ ಕೂಡ ಸಾಹಿತ್ಯ ರಚನೆಯಲ್ಲಿ ತೊಡಗಲು ಪ್ರೊತ್ಸಾಹಿಸಿದರು. ‘ಅನುಭವ ಮಂಟಪ’ದ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಚರ್ಚೆಗಳಲ್ಲಿ ಮಹಿಳೆಯರು ಭಾಗವಹಿಸಿದರು. ಇವರಲ್ಲಿ 35 ಜನ ವಚನಕಾರ್ತಿಯರು ಸಾವಿರಾರು ವಚನಗಳನ್ನು ರಚಿಸಿದರು. ಗಂಡಾದರೇನು, ಹೆಣ್ಣಾದರೇನು ಎಲ್ಲರಿಗೂ ಕಾಯಕಬೇಕು ಎಂದರು. ಅಕ್ಕಮಹಾದೇವಿ, ಲಕ್ಕಮ್ಮ, ನೀಲಾಂಬಿಕೆ, ಮಹಾದೇವಮ್ಮ, ಕಾಳೆವ್ವೆ ಮುಂತಾದವರು ಬರೆದ ವಚನಗಳು ಕನ್ನಡಸಾರಸ್ವತ ಲೋಕಕ್ಕೆ ವಿನೂತನ ಕಾಣಿಕೆ ಎನ್ನಬಹುದು.
ಜಂಗಮಸೇವೆಗಾಗಿ ನಿರತ ಬಸವಣ್ಣನವರು
ಜಂಗಮಸೇವೆ ಅಂದರೆ ಸಮಾಜಸೇವೆಯ ಭಾಗವೆಂಬಂತೆ ವರ್ಣಭೇದ, ವರ್ಗಭೇದ, ಲಿಂಗಭೇದ, ನಿರಾಕರಣೆಯ ತೀವ್ರ ಕ್ರಮಗಳನ್ನು ಅವರು ಕೈಗೆತ್ತಿಕೊಂಡರು. ಈ ಪ್ರಗತಿಪರ ಧೋರಣೆಗಳನ್ನು ಪ್ರತಿಭಟಿಸುವ ರೀತಿಯಲ್ಲಿ ಅಗ್ರಹಾರ ಸಂಸ್ಕೃತಿ, ದೇವಾಲಯ ಸಂಸ್ಕೃತಿ ಮತ್ತು ರಾಜಸತ್ತಾ ಸಂಸ್ಕೃತಿಗಳು ಒಟ್ಟಾಗಿ ನಿಂತು ಬಸವಣ್ಣನ ಈ ಅಂದೋಲನವನ್ನು ಹತ್ತಿಕ್ಕಿದವು. ಸತ್ಯವನ್ನು ಎತ್ತಿ ಹಿಡಿದ ಬಸವಣ್ಣ ಹಾಗೂ ಸಮಕಾಲೀನ ಶರಣರು ದಮನಕ್ಕೆ ಗುರಿಯಾದರು. ಹುತಾತ್ಮರಾದರು ಬಸವಣ್ಣ ಕಲ್ಯಾಣವನ್ನು ತೊರೆದು ಕೂಡಲ ಸಂಗಮಕ್ಕೆ ಬಂದು ಐಕ್ಯರಾದರು.
ಶರಣ ಸಮುದಾಯದ ಸಂಘಟನೆ, ಅನುಭವ ಮಂಟಪ ಸ್ಥಾಪನೆ, ಸಿದ್ಧಾಂತಗಳ ರಚನೆ, ಪ್ರಸಾರ, ವಚನ ಸಾಹಿತ್ಯದ ಸೃಷ್ಟಿ ಇತ್ಯಾದಿ ಕಾರ್ಯಗಳನ್ನು ನಡೆಸಿದ ಬಸವಣ್ಣ ಸಮಾಜಸೇವೆ, ಸಮಾಜ ಕಲ್ಯಾಣದ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡನು. ಸಾಮಾನ್ಯವಾಗಿ ಯುಗ ಪುರುಷರು ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಆರ್ಥಿಕ ಹೀಗೆ ಜೀವನದ ಯಾವುದೋ ಒಂದು ಕ್ಷೇತ್ರಕ್ಕೆ ಹೊಸ ತಿರುವು, ಸುಧಾರಣೆ ತಂದುಕೊಡುತ್ತಾರೆ. ಬಸವಣ್ಣನವರು ಇಂತಹ ಎಲ್ಲ ಕ್ಷೇತ್ರಗಳಿಗೂ ಹೊಸ ತಿರುವು ಕೊಟ್ಟ ಕಾರಣ ಯುಗ ಪುರಷನೆನಿಸಿದ್ದಾರೆ. ಅವರನ್ನು ಜಗತ್ತು ಕಂಡ ಅಪರೂಪದ ಮಹಾನ್ ವ್ಯಕ್ತಿ, ಜಗಜ್ಯೋತಿ ಬಸವಣ್ಣ ಎಂದು ಗುರುತಿಸಬಹುದು. ಕರ್ನಾಟಕ ಸರ್ಕಾರ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಸಂತಸದ ಸಂಗತಿ. ಅವರ ಕಾಯಕದ ಆದರ್ಶಗಳನ್ನು, ಮೌಲ್ಯಗಳನ್ನು ಸರ್ಕಾರ ಪಾಲಿಸ ಬೇಕಾಗಿದೆ.
ಡಾ. ಗಂಗಾಧರಯ್ಯ ಹಿರೇಮಠ
ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.
ಮೊ: 9880093613
ಇದನ್ನೂ ಓದಿ- ಜೆ ಎನ್ ಯು ಚುನಾವಣೆ: ಗೆದ್ದು ಸೋತ ಎಡಕೂಟ