ಬೆಂಗಳೂರು: ಮಹಾರಾಷ್ಟ್ರದಲ್ಲಿ ಡಾ. ಅಂಬೇಡ್ಕರ್ ಅವರುಮನುಸ್ಮೃತಿಯನ್ನು ಸುಟ್ಟು 1927ಕ್ಕೆ ನೂರು ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಈ ಮಹಾ ಸತ್ಯಾಗ್ರಹದ ಶತಮಾನೋತ್ಸವ ಆಚರಿಸಿ ಎಂದು ಬಿಜೆಪಿ ನಾಯಕರಿಗೆ ವಿಧಾನ ಪರಿಷತ್ ಸದಸ್ಯ ಮತ್ತು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗ ಅಧ್ಯಕ್ಷ ರಮೇಶ್ ಬಾಬು ಸವಾಲು ಹಾಕಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ರಾಜ್ಯದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಕಾರಣಕ್ಕಾಗಿ ಸಂಘ ಪರಿವಾರದ ಮೇಲೆ ನಿಷೇಧವನ್ನು ಹೇರಲು ಮನವಿ ಮಾಡಿರುವ ಪತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಅವರ ಮೇಲೆ ಹರಿಹಾಯುತ್ತಿದ್ದಾರೆ. ಬಿಜೆಪಿಯ ದಲಿತ ನಾಯಕರಿಗೆ ಕಾಳಜಿ ಇದ್ದರೆ ಅಂಬೇಡ್ಕರ್ ಅವರು ಮನುಸ್ಮೃತಿ ಸುಟ್ಟ ಸತ್ಯಾಗ್ರಹದ ಶತಮಾನೋತ್ಸವ ಆಚರಿಸಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ರವರು ಸಾಂವಿಧಾನಿಕ ಅವಕಾಶದಲ್ಲಿ ಮತ್ತು ಕಾನೂನಾತ್ಮಕವಾಗಿ ಯಾರು ದೇಶ ವಿರೋಧಿ ಅಥವಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಅಥವಾ ರಾಜ್ಯ ಸರ್ಕಾರದ / ಅರೆ ಸರ್ಕಾರದ ಸಂಸ್ಥೆಗಳನ್ನು ತಮ್ಮ ಕಾರ್ಯ ಸಾಧನೆಗೆ, ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುತ್ತಾರೆ. ಈ ಪತ್ರದಿಂದ ಕಂಗೆಟ್ಟಿರುವ ಬಿಜೆಪಿಯ ಕೆಲವು ನಾಯಕರು, ವಿಶೇಷವಾಗಿ ಅಬ್ಬೆಪಾರಿ ನಾಯಕರುಗಳು ಪ್ರಿಯಾಂಕ್ ಖರ್ಗೆ ಅವರ ಮೇಲೆ ಮುಗಿಬೀಳುತ್ತಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವು ರಾಷ್ಟ್ರೀಯ ಚಳುವಳಿಯಲ್ಲಿ ಎಂದೂ ಬಾಗಿ ಆಗಿರಲಿಲ್ಲ. ಈ ಸಂಘವು ರಾಷ್ಟ್ರಧ್ವಜ ಮತ್ತು ಸಂವಿಧಾನವನ್ನು ವಿರೋಧ ಮಾಡಿರುವ ಸತ್ಯ ಎಲ್ಲರಿಗೂ ತಿಳಿದಿರುತ್ತದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಬ್ರಿಟಿಷರ ಜತೆ ಶಾಮೀಲಾಗಿ ಭಾರತಕ್ಕೆ ಸಾಂವಿಧಾನಾತ್ಮಕ ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರ ನಿರ್ಮಾಣಕ್ಕೆ ತನ್ನ ಅಸಮ್ಮತಿಯನ್ನು ಸೂಚಿಸಿತ್ತು. ಇಂತಹ ಸಂಘ ಪರಿವಾರ, ಇಂದು ಅನೇಕ ಕಾರಣಗಳಿಗೆ ನಿಷೇಧಕ್ಕೆ ಒಳಗಾಗಿರುವುದು ತಿಳಿದ ವಿಷಯವೇ ಆಗಿದೆ.
ದೇಶದಲ್ಲಿ ಮೂರು ಅವಧಿಗೆ ನಿಷೇಧಕ್ಕೆ ಒಳಗಾಗಿದ್ದ ಆರ್ ಎಸ್ ಎಸ್ ಕೇಂದ್ರ ಸರ್ಕಾರಕ್ಕೆ ಮುಚ್ಚಳಕೆಯನ್ನು ಬರೆದು ಕೊಟ್ಟು ನಂತರ ಸಾಂಸ್ಕೃತಿಕ ಸಂಘಟನೆಯಲ್ಲಿ ತನ್ನ ಶಾಖೆಯನ್ನು ವಿಸ್ತಾರಗೊಳಿಸುತ್ತದೆ. ಆದರೆ ಅದೇ ಸಮಯದಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಗೋಪ್ಯ ಚಟುವಟಿಕೆಗಳಿಂದ ಕೋಮುವಾದಿ ಘರ್ಷಣೆ ಆರೋಪಗಳಿಗೆ ಈಡಾಗಿರುತ್ತದೆ ಇಂತಹ ಅಕ್ರಮ ಚಟುವಟಿಕೆಗಳ ಆರೋಪದ ಮೇಲೆ ತನಿಖೆಗೆ ಮತ್ತು ಕ್ರಮಕ್ಕೆ ಮತ್ತು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಸರಿಯಾದ ಕ್ರಮವನ್ನು ಕೈಗೊಳ್ಳಲು ಪ್ರಿಯಾಂಕ್ ರವರು ಮನವಿ ಮಾಡಿರುತ್ತಾರೆ. ಅವರ ಪತ್ರದಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು ಅವರ ಮೇಲೆ ಇಲ್ಲಸಲ್ಲದ ಹತಾಶವಾದದ ಹೇಳಿಕೆಗಳನ್ನು ನೀಡುತ್ತಿದ್ದಾರೆ
ಸ್ವದೇಶಿ ಮಂತ್ರವನ್ನು ಜಪಿಸುವ ಸಂಘ ಪರಿವಾರದ ನಾಯಕರು, ಇಟಲಿಯ ಮುಸಲೋನಿಯಿಂದ ಕರಿ ಟೋಪಿ ಮತ್ತು ಸರ್ವಾಧಿಕಾರಿ ಹಿಟ್ಲರ್ ಮುಖಾಂತರ ಚಡ್ಡಿಯನ್ನು ತಮ್ಮ ಸಂಘದ ಶಾಖೆಗೆ ಸಮವಸ್ತ್ರವಾಗಿ ಬಳಸಿದ್ದರು. ಅದೇ ರೀತಿಯಾಗಿ ಅನೇಕ ಪಶ್ಚಿಮಾತ್ಯ ನಾಯಕರ ಧ್ಯೇಯೋದ್ದೇಶಗಳನ್ನು ತಮ್ಮ ಸಂಘದ ಮೂಲ ಉದ್ದೇಶಗಳಾಗಿ ಬಳಸಿರುತ್ತಾರೆ. ಇದನ್ನು ಬಲ್ಲವರು ಎಲ್ಲರೂ ಸಹ ಸಂಘ ಪರಿವಾರವನ್ನು ಅನುಮಾನದಿಂದ ನೋಡುವಂತ ಪರಿಸ್ಥಿತಿ ಇಂದಿಗೂ ಇರುತ್ತದೆ.
ಪ್ರಿಯಾಂಕ್ ಖರ್ಗೆರವರನ್ನು ದಲಿತ ನಾಯಕರೇ ಅಲ್ಲವೆಂದು ಟೀಕಿಸುವ ಬಿಜೆಪಿ ಹೊಗಳು ಭಟ್ಟ ದಲಿತ ನಾಯಕರು, ತಾವು ನಿಜವಾಗಲೂ ದಲಿತ ಸಮುದಾಯದ ನಾಯಕರೆಂಬುದನ್ನು ಸಾಬೀತುಪಡಿಸಲಿ. ಇನ್ನು ಕೆಲವೇ ದಿನಗಳಲ್ಲಿ ಡಾ. ಅಂಬೇಡ್ಕರ್ ರವರು 1927ರಲ್ಲಿ ಮಹಾರಾಷ್ಟ್ರದಲ್ಲಿ ಸಂಘಟಿಸಿದ ಮಹಾಸತ್ಯಾಗ್ರಹದ ಮನುಸ್ಮೃತಿಯನ್ನು ಸುಟ್ಟ ಶತಮಾನೋತ್ಸವದ ಆಚರಣೆಗೆ ತಯಾರಾಗಲು ನಾನು ಇಂತಹ ದಲಿತ ನಾಯಕರಿಗೆ ಒತ್ತಾಯಿಸುತ್ತೇನೆ. ಕೇವಲ ಯಾರನ್ನೋ
ಪ್ರೀತಿಗೊಳಿಸಲು ಅಥವಾ ಅವರಿಂದ ಬಂಗಾರ ಲೇಪಿತ ಪ್ರಶಂಸೆ ಪತ್ರ ಪಡೆಯಲು ಹೊಗಳಿಕೆ ಮಾಡುವುದನ್ನು ಬಿಟ್ಟು ಅಂಬೇಡ್ಕರ್ ತತ್ವದ ಅನುಯಾಯಿಗಳಾಗಲು ಬಿಜೆಪಿ ದಲಿತ ನಾಯಕರಿಗೆ ಒತ್ತಾಯ ಮಾಡುತ್ತೇನೆ. ತಮ್ಮ ರಾಜಕೀಯ ಅನುಕೂಲಕ್ಕಾಗಿ ಮತಾಂತರಗೊಂಡು ಬಿಜೆಪಿಯಲ್ಲಿ ಕುರ್ಚಿ ಉಳಿಸಿಕೊಳ್ಳಲು ಪ್ರಿಯಾಂಕ್ ಖರ್ಗೆ ಅವರನ್ನು ಟೀಕಿಸುವ ಹತಾಶ ಪರಿಸ್ಥಿತಿಗೆ ಬಿಜೆಪಿಯ ಕೆಲವು ದಲಿತ ನಾಯಕರು ತಲುಪಿರುತ್ತಾರೆ.
ಮಹಾರಾಷ್ಟ್ರದಲ್ಲಿ ಡಾ. ಅಂಬೇಡ್ಕರ್ ಅವರು 1927ರಲ್ಲಿ ಮನುಸ್ಮೃತಿಯನ್ನು ಸುಟ್ಟು ನೂರು ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಅಂಬೇಡ್ಕರ್ ರವರ ಮಹಾ ಸತ್ಯಾಗ್ರಹದ ಶತಮಾನೋತ್ಸವಕ್ಕೆ ಅಣಿಯಾಗಲು ಬಿಜೆಪಿಯ ನಾಯಕರಿಗೆ ಒತ್ತಾಯಿಸುತ್ತೇನೆ.
ಪ್ರಿಯಾಂಕ್ ಖರ್ಗೆ ರವರು ತಮ್ಮ ಸಾಂವಿಧಾನಿಕ ಜವಾಬ್ದಾರಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಮೇಲೆ ತನಿಖೆ ನಡೆಸಲು ಮುಖ್ಯಮಂತ್ರಿಗಳಿಗೆ ಕೋರಿರುತ್ತಾರೆ.ಇದಕ್ಕೆ ಸರಿಯಾದ ಅಥವಾ ಸಮಂಜಸವಾದ ಉತ್ತರವನ್ನು ಕೊಡಲು ಸಾಧ್ಯವಾಗದ ಸಂಘಪರಿವಾರದ ನಾಯಕರು ಬಿಜೆಪಿಯ ಕೆಲವು ಕಂಗೆಟ್ಟ ಅಬ್ಬೆಪಾರಿ ನಾಯಕರುಗಳ ಮೂಲಕ ಇಂತಹ ಓಲೈಸುವ ಹತಾಶವಾದ ಮನಸ್ಥಿತಿಯ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ.
ದೇಶದಲ್ಲಿ ತ್ರಿವರ್ಣ ಧ್ವಜದ ಬದಲು ಭಗವಾಧ್ವಜವನ್ನು ಪ್ರತಿಪಾದಿಸಿದ ಸಂಘ ಪರಿವಾರದ ನಾಯಕರು ಮತ್ತು ಸಂವಿಧಾನದ ಬದಲು ಮನಸ್ಮೃತಿಯನ್ನು ಪ್ರತಿಪಾದಿಸಿದ ಸಂಘ ಪರಿವಾರದ ನಾಯಕರು ಯಾವ ನೈತಿಕತೆಯ ಮೇಲೆ ಕಾಂಗ್ರೆಸ್ ನಾಯಕರನ್ನು ಟೀಕೆ ಮಾಡುತ್ತಾರೆ? ಇವರು ಬ್ರಿಟಿಷ್ ಸರ್ಕಾರದೊಂದಿಗೆ ಶಾಮೀಲಾಗಿ ದೇಶದಲ್ಲಿ ಜಾತ್ಯತೀತ ರಾಷ್ಟ್ರದ ಅವಶ್ಯಕತೆ ಬೇಡವೆಂದು ಪ್ರತಿಪಾದಿಸಿದಂತಹ ನೀತಿಯನ್ನು ಯಾರು ಮರೆಯಲು ಸಾಧ್ಯವಿಲ್ಲ. ಮೊದಲು ಅವರ ನಾಯಕರು ದೇಶದ ಸಮಗ್ರತೆಯ ಬಗ್ಗೆ ಮತ್ತು ದೇಶದ ಸಾರ್ವಭೌಮತೆ ಬಗ್ಗೆ ಕಲಿಯಲಿ ನಂತರ ಕಾಂಗ್ರೆಸ್ ಪಕ್ಷಕ್ಕೆ ಪಾಠ ಹೇಳುವುದನ್ನು ಮಾಡಲಿ.
ಕಾನೂನುಬಾಹಿರವಾಗಿ ನಮ್ಮ ರಾಜ್ಯದಲ್ಲಿ ಯಾರೂ ಅಕ್ರಮ ಚಟುವಟಿಕೆಗಳನ್ನು ಮಾಡಲು ಸಾಧ್ಯವಿರುವುದಿಲ್ಲ. ಅದೇ ಕಾರಣಕ್ಕಾಗಿ ಹಿಂದೆ ದೇಶದಲ್ಲಿ ಹಲವಾರು ಸಂಘಟನೆಗಳು ಸಂಘ ಪರಿವಾರವು ಒಳಗೊಂಡಂತೆ ಅನೇಕ ಸಂದರ್ಭಗಳಲ್ಲಿ ನಿಷೇಧಕ್ಕೆ ಒಳಗಾಗಿರುತ್ತವೆ. ಒಂದು ವೇಳೆ ಸಂಘ ಪರಿವಾರದವರು ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗದೇ ಇದ್ದಲ್ಲಿ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ಮೊದಲು ಅವರ ಮೇಲಿನ ಆರೋಪಗಳಿಗೆ ತನಿಖೆ ಮಾಡಲು ಸರ್ಕಾರಕ್ಕೆ ಸಹಕಾರ ನೀಡಿ ತಮ್ಮ ಬದ್ಧತೆಯನ್ನು ಮೆರೆಯಲಿ. ಅದೇ ಅವರು ರಾಜ್ಯಕ್ಕೆ ಮತ್ತು ದೇಶಕ್ಕೆ ತೋರುವ ದೇಶಭಕ್ತಿ ಆಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.