ಬೆಂಗಳೂರು : ಜೈಲಿನಲ್ಲಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ (41) ಅಕ್ರಮ ಹಣದಿಂದ ತನ್ನ ಆಪ್ತ ಗೆಳತಿಗೆ ಭರ್ಜರಿ ಗಿಫ್ಟ್ ನೀಡಿರುವ ಸಂಗತಿ ಸಿಐಡಿ ತನಿಖೆಯಿಂದ ಬಯಲಾಗಿದೆ. ಅವರ ಆಪ್ತ ಗೆಳತಿ ಯಾಶೀ ಜೈಸ್ವಾಲ್ಗೂ ಸಂಕಷ್ಟ ಎದುರಾಗಿದೆ.
ಶುಕ್ರವಾರ ಸಿಐಡಿ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. 2016ರ ಬ್ಯಾಚ್ನ ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿ ಜ್ಞಾನೇಂದ್ರ, 2024ರ ಫೆಬ್ರವರಿಯಿಂದ 2026ರ ಮಾರ್ಚ್ತನಕ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿದ್ದರು.
ಕೆಪಿಎಸ್ಸಿ ಮಾಜಿ ಪರೀಕ್ಷಾ ನಿಯಂತ್ರಕ, ಜೈಲಿನಲ್ಲಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅಕ್ರಮ ಹಣದಿಂದ ತನ್ನ ಆಪ್ತ ಗೆಳತಿಗೆ ಭರ್ಜರಿ ಗಿಫ್ಟ್ ನೀಡಿರುವ ಸಂಗತಿ ಸಿಐಡಿ ತನಿಖೆಯಿಂದ ಬಯಲಾಗಿದೆ. ಅಭ್ಯರ್ಥಿಗಳಿಂದ ಕೋಟ್ಯಂತರ ರೂ. ಲಂಚ ಸಂಗ್ರಹಿಸಿ, ಅದರಲ್ಲಿ ತನ್ನ ಅಯೋಧ್ಯೆ ಮೂಲದ ಗೆಳತಿಗೆ 26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿಸಿ ಉಡುಗೊರೆ ನೀಡಿದ್ದಾನೆ. ಹೀಗಾಗಿ, ಅವರ ಆಪ್ತ ಗೆಳತಿ ಯಾಶೀ ಜೈಸ್ವಾಲ್ಗೂ ಸಂಕಷ್ಟ ಎದುರಾಗಿದೆ. ಅವರು ಶುಕ್ರವಾರ ಸಿಐಡಿ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.
ಜ್ಞಾನೇಂದ್ರ ಹಾಗೂ ಬಸವರಾಜ್ ಕನ್ನಾಳೆ ಹಲವು ವರ್ಷಗಳಿಂದ ಆಪ್ತರಾಗಿದ್ದು, ಸಂಚು ರೂಪಿಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಎಸಗಿದ್ದರು. ಜ್ಞಾನೇಂದ್ರ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿ ಕನ್ನಾಳೆಗೆ ನೀಡಿದ್ದ. ಈ ಪ್ರಶ್ನೆಗಳನ್ನು ಮಾರಾಟ ಮಾಡಿದ್ದ ಕನ್ನಾಳೆ, ನಗದು ಹಾಗೂ ಬ್ಯಾಂಕ್ ಖಾತೆ ಮುಖಾಂತರ ಆಭ್ಯರ್ಥಿಗಳಿಂದ ಹಣ ಪಡೆದಿದ್ದ. ಬೀದರ್ನ ಓಂ ಶ್ರೀ ಲಕ್ಷ್ಮೇ ಸೌಹಾರ್ದ ಸೊಸೈಟಿಯ ಬಸವರಾಜು ಬ್ಯಾಂಕ್ ಖಾತೆಗೆ ಹಲವು ಅಭ್ಯರ್ಥಿಗಳಿಂದ ಸುಮಾರು 70 ಲಕ್ಷ ರೂ. ವರ್ಗಾಯಿಸಿಕೊಂಡಿದ್ದ.
ಮತ್ತೊಂದೆಡೆ, ಕಾಸಿಗಾಗಿ ಪ್ರಶ್ನೆಪತ್ರಿಕೆ ಮಾರಾಟ ಮಾಡಿದ ಬಳಿಕ ಜಾಲಿ ಮೂಡ್ನಲ್ಲಿದ್ದ ಗಂಗ್ವಾರ್, ತನ್ನ ಗೆಳತಿ ಯಾಶೀ ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಡಿಕನ್ಸನ್ ರಸ್ತೆಯ ಪ್ರತಿಷ್ಠಿತ ಜ್ಯುವೆಲರಿ ಶಾಪ್ಗೆ ಕರೆದೊಯ್ದು ಚಿನ್ನಾಭರಣ ಖರೀದಿಸಿ ಉಡುಗೊರೆಯಾಗಿ ನೀಡಿದ್ದರು. ಈ ಆಭರಣ ಖರೀದಿಗೆ ಓಂ ಶ್ರೀ ಲಕ್ಷ್ಮೀ ಸೌಹಾರ್ದ ಸೊಸೈಟಿಯ ಬಸವರಾಜು ಬ್ಯಾಂಕ್ ಖಾತೆಯಿಂದ 26 ಲಕ್ಷ ರೂ. ವರ್ಗಾಯಿಸಿ ಬಿಲ್ ಪಾವತಿ ಮಾಡಲಾಗಿತ್ತು.
ಇದು ಅಕ್ರಮದ ಹಣದಲ್ಲಿಯೇ ಆಭರಣ ಖರೀದಿ ಮಾಡಿರುವುದಕ್ಕೆ ಪ್ರಬಲ ಸಾಕ್ಷ್ಯ ಒದಗಿಸಿದೆ. ಜತೆಗೆ, ಗಂಗ್ವಾರ್ ಹಾಗೂ ಅವರ ಗೆಳತಿ ಜ್ಯುವೆಲರಿ ಶಾಪ್ನಲ್ಲಿರುವ ಫೋಟೊ ಕೂಡ ಸಿಕ್ಕಿದೆ. ಜತೆಗೆ, ಆಭರಣ ಖರೀದಿಯ ಬಿಲ್ ಸಹ ಜಪ್ತಿ ಮಾಡಲಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ. ಅಕ್ರಮದ ಹಣದಲ್ಲಿ ಖರೀದಿಸಿದ ಆಭರಣಗಳನ್ನು ಕಾನೂನುರೀತ್ಯ ಜಪ್ತಿ ಮಾಡಬೇಕಿದೆ. ಹೀಗಾಗಿ, ಯಾಶೀ ಜೈಸ್ವಾಲ್ರನ್ನು ಶುಕ್ರವಾರ ಕಾಲ್ರ್ಟನ್ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

