ಬೆಂಗಳೂರು : ನೇಪಾಳದಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದಾಗಿ ಕೈಲಾಸ ಯಾತ್ರೆಗೆ ತೆರಳಿ ಸಿಲುಕಿರುವ ಕನ್ನಡಿಗರೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೂರವಾಣಿ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ದಾರ್ಚೆನ್ನಲ್ಲಿರುವ ಯಾತ್ರಾರ್ಥಿಗಳೊಂದಿಗೆ ಮಾತನಾಡಿದ ಅವರು, ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರ್ನಾಟಕ ಭವನದ ಅಧಿಕಾರಿಗಳೊಂದಿಗೆ ಮಾತನಾಡಿ, ಅಗತ್ಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ. ಪರಿಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಯಾತ್ರಾರ್ಥಿಗಳಿಗೆ ಧೈರ್ಯ ತುಂಬಿದರು.
ಯಾತ್ರಾರ್ಥಿಗಳಲ್ಲಿ ಒಬ್ಬರು ತಮ್ಮ ಪರಿಸ್ಥಿತಿಯನ್ನು ವಿವರಿಸಿ, ಕೈಲಾಸ ಬೇಸ್ ಮುಗಿಸಿಕೊಂಡು ದಾರ್ಚೆನ್ನಿಂದ ಜ್ಞಾನಿಲಂ ಕಡೆಗೆ ತೆರಳಬೇಕಾಗಿದ್ದು, ಅಲ್ಲಿ ಇಮಿಗ್ರೇಷನ್ ಆಗಬೇಕಿದೆ. ನೇಪಾಳ ಗಡಿಗೆ ತಲುಪಿದ ನಂತರ ರಸ್ತೆ ಮಾರ್ಗದಲ್ಲಿ ಬರಬೇಕಾಗಿದ್ದು, ರಸ್ತೆಗಳು ಭೂಕುಸಿತದ ಅಪಾಯವನ್ನು ಎದುರಿಸುತ್ತಿವೆ ಎಂದು ಹೇಳಿದರು. ಮುಂದಿನ 12-15 ಗಂಟೆಗಳ ಪ್ರಯಾಣ ಅಪಾಯಕಾರಿಯಾಗಿದ್ದು, ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಮನವಿ ಮಾಡಿಕೊಂಡರು.

