ವಿಜಯಪುರ ಆ.22: ತೆರೆದ ಬಾವಿಗೆ ಕಾಲು ಜಾರಿ ಬಿದ್ದು ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ಬಳಿ ನಡೆದಿದೆ.
ಮೃತರನ್ನು 9ನೇ ತರಗತಿ ವಿದ್ಯಾರ್ಥಿನಿ ಸಾಕ್ಷಿ, ರಕ್ಷಿತಾ ಹಾಗೂ ಮಕ್ಕಳ ತಂದೆ ಸಾಬಣ್ಣ (40) ಎಂದು ಗುರುತಿಸಲಾಗಿದೆ.
ಬಳಬಟ್ಟಿ ಗ್ರಾಮದ ಬಳಿ ಇದ್ದ ತೆರೆದ ಬಾವಿಯ ಸಮೀಪ ತೆರಳಿದ್ದ ವೇಳೆ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೆ. ಮಕ್ಕಳನ್ನು ರಕ್ಷಿಸಲು ಮುಂದಾದ ತಂದೆ ಸಾಬಣ್ಣ ಕೂಡಲೇ ಬಾವಿಗೆ ಜಿಗಿದಿದ್ದಾರೆ. ಆದರೆ ಸಾಬಣ್ಣ ಅವರಿಗೆ ಈಜಲು ಬರುತ್ತಿರಲಿಲ್ಲ ಎನ್ನಲಾಗಿದೆ.
ಮಕ್ಕಳನ್ನು ರಕ್ಷಿಸಲು ತೆರಳಿದ್ದ ಸಾಬಣ್ಣ ಕೂಡ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ತೆರಳಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಘಟನೆಯಿಂದ ಬಳಬಟ್ಟಿ ಗ್ರಾಮದಲ್ಲಿ ಆಕ್ರಂದನ ಮುಗಿಲುಮುಟ್ಟಿದ್ದು, ಕುಟುಂಬಸ್ಥರ ರೋದನ ಮುಗಿಲುಮುಟ್ಟಿದೆ. ಘಟನೆ ಕುರಿತು ನಿಡಗುಂದಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

