ಬೆಂಗಳೂರು: ಸಾರ್ವಜನಿಕ ಸ್ಥಳಗಳ ಬಳಕೆಗೆ ಕಾನೂನು ಹಾಗೂ ನಿಯಮಗಳನ್ನು ಪಾಲಿಸಬೇಕು ಎಂಬ ಹೇಳಿಕೆಗೆ ಬಿಜೆಪಿಯವರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, “ಕುಂಬಳಕಾಯಿ ಕದ್ದವರಿಗೆ ಮಾತ್ರ ಹೆಗಲು ಮುಟ್ಟಿ ನೋಡಿಕೊಳ್ಳುವಂತಹ ಆತಂಕವಿರುತ್ತದೆ” ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, “RSS ಎದುರು ಹಾಕಿಕೊಂಡರೆ ನೀವು ಮನೆಯಿಂದ ಆಚೆ ಬರಲು ಆಗುವುದಿಲ್ಲ” ಎಂದು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿರುವ ಖರ್ಗೆ, ಈ ಬೆದರಿಕೆ ಮಾತುಗಳ ಹಿಂದಿನ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ.
“RSS ಭಯೋತ್ಪಾದಕ ಸಂಘಟನೆಯೇ? ಪ್ರಶ್ನಿಸಿದವರನ್ನು ಮುಗಿಸುವ ಅಂಡರ್ವರ್ಲ್ಡ್ ಮಾಫಿಯಾದವರೇ? ಇಂತಹ ಬೆದರಿಕೆ ಹಾಕುತ್ತಿದ್ದಾರೆಂದರೆ RSS ಕ್ರಿಮಿನಲ್ಗಳ ಸಮೂಹ ಇರಬಹುದೇ ಅಶೋಕ್ ಅವರೇ?” ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ತಾವು ಸಂವಿಧಾನದ ರಕ್ಷಣೆಯೊಂದಿಗೆ ಮುಕ್ತವಾಗಿ ಮಾತನಾಡುತ್ತಿದ್ದೇನೆ ಎಂದು ಹೇಳಿರುವ ಅವರು, “ನಾನು ಮನೆಯಿಂದ ಆಚೆ ಬರುವುದಕ್ಕೆ ಸಂವಿಧಾನದ ರಕ್ಷಣೆ ಇದೆ. ನಾನು ಮುಕ್ತವಾಗಿ ಮಾತನಾಡುವುದಕ್ಕೆ ಬಾಬಾ ಸಾಹೇಬರು ನೀಡಿದ ನೈತಿಕ ಧೈರ್ಯವಿದೆ” ಎಂದು ಹೇಳಿದ್ದಾರೆ.
ಆರ್ಎಸ್ಎಸ್ನಿಂದ ಬರುವ ಯಾವುದೇ ಬೆದರಿಕೆಗಳಿಗೆ ತಾವು ಹೆದರುವುದಿಲ್ಲ ಎಂಬ ಸಂದೇಶವನ್ನೂ ಖರ್ಗೆ ನೀಡಿದ್ದಾರೆ.
“ನಿಮ್ಮ RSSನ ಗೊಡ್ಡು ದೊಣ್ಣೆಗಳಿಗೆ ಹೆದರುವುದಕ್ಕೆ ನನ್ನಲ್ಲಿ ಹರಿಯುತ್ತಿರುವುದು ಸಾವರ್ಕರ್ ರಕ್ತವಲ್ಲ, ನಮ್ಮದು ಅಂಬೇಡ್ಕರ್ ರಕ್ತ” ಎಂದು ತೀಕ್ಷ್ಣವಾಗಿ ಹೇಳಿರುವ ಅವರು, “ಅಂಬೇಡ್ಕರ್ ಧೈರ್ಯವನ್ನು ನೀಡಿದ್ದಾರೆಯೇ ಹೊರತು ಭಯವನ್ನಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ಆರ್ಎಸ್ಎಸ್ ಚಟುವಟಿಕೆಗಳು ಹಾಗೂ ಸಾರ್ವಜನಿಕ ಸ್ಥಳಗಳ ಬಳಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್-ಬಿಜೆಪಿ ನಡುವೆ ನಡೆಯುತ್ತಿರುವ ವಾಕ್ಸಮರದ ನಡುವೆಯೇ ಪ್ರಿಯಾಂಕ್ ಖರ್ಗೆ ಅವರ ಈ ಹೇಳಿಕೆ ರಾಜಕೀಯ ಚರ್ಚೆಗೆ ಮತ್ತಷ್ಟು ಕಾವು ನೀಡಿದೆ. ಈ ಹಿಂದೆ ಕೂಡ ಆರ್ಎಸ್ಎಸ್ ಚಟುವಟಿಕೆಗಳ ಕುರಿತು ಖರ್ಗೆ ಅವರ ನಿಲುವಿಗೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

