ಬೆಂಗಳೂರು : ಬಸವರಾಜ ಹೊರಟ್ಟಿ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ಅವರನ್ನು ಸರ್ಕಾರ ನಿಯೋಜನೆ ಮಾಡಿದೆ.
ಆಗಸ್ಟ್ 13 ರಿಂದ ಮಳೆಗಾಲದ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆ ಹಂಗಾಮಿ ಸಭಾಪತಿ ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಬಸವರಾಜ್ ಹೊರಟ್ಟಿ ಸಭಾಪತಿ ಸ್ಥಾನಕ್ಕೆ ಆ.7ರಂದು ರಾಜೀನಾಮೆ ನೀಡಿದ್ದರು. ಆಗಸ್ಟ್ 14 ರಂದು ಸಭಾಪತಿ ಆಯ್ಕೆ ಆಗಲಿದೆ. ಕಾಂಗ್ರೆಸ್ ಸಲೀಂ ಅಹಮದ್ ಸಭಾಪತಿ ಅಭ್ಯರ್ಥಿಯಾಗಿದ್ದು, ಉಮಾಶ್ರೀ ಉಪಸಭಾಪತಿ ಸ್ಥಾನದ ಅಭ್ಯರ್ಥಿಯಾಗಿದ್ದಾರೆ.
ಈ ಮುಂಚೆ ಸಿಎಂ ಡಿ.ಕೆ.ಶಿವಕುಮಾರ್ ಬಸವರಾಜ ಹೊರಟ್ಟಿ ಅವರನ್ನೇ ಹಂಗಾಮಿ ಸಭಾಪತಿಯಾಗಿ ಮುಂದುವರಿಸುವುದಾಗಿ ತಿಳಿಸಿದ್ದರು. ಆದರೆ, ಬಸವರಾಜ್ ಹೊರಟ್ಟಿ ಹಂಗಾಮಿ ಸಭಾಪತಿಯಾಗುವುದಕ್ಕೆ ನಿರಾಕರಿಸಿದ್ದರು. ಈ ಹಿನ್ನೆಲೆ ಇದೀಗ ಸರ್ಕಾರ ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ಹಂಗಾಮಿ ಸಭಾಪತಿಯಾಗಿ ನಿಯೋಜನೆ ಮಾಡಿದೆ.
ಬಸವರಾಜ ಹೊರಟ್ಟಿ ಆ.14ರಂದು ರಾಜೀನಾಮೆ ಕೊಡಲು ತೀರ್ಮಾನಿಸಿದ್ದರು. ಆದರೆ ಸಿಎಂ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿ ಕಾಂಗ್ರೆಸ್ ಮುಖಂಡರು ಒತ್ತಡ ಹಾಕಿದ್ದರಿಂದ ಆ.7ರಂದು ಬಸವರಾಜ ಹೊರಟ್ಟಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಪತ್ರ ಸಲ್ಲಿಸಿದ ಕೆಲವೇ ಕ್ಷಣದಲ್ಲಿ ಸಭಾಪತಿ ಸ್ಥಾನ ತೆರವಾಗಿರುವ ಅಧಿಸೂಚನೆ ಹೊರಬಿದ್ದಿತ್ತು.
ಅಸಮಾಧಾನ: ರಾಜೀನಾಮೆ ಬಳಿಕ ಮಾತನಾಡಿದ ಬಸವರಾಜ ಹೊರಟ್ಟಿ, ಕೂಡಲೇ ರಾಜೀನಾಮೆ ಕೊಡಿ ಅಂದರು. ಅದಕ್ಕಾಗಿ ಕೊಟ್ಟೆ. ಆ.14ರಂದು ಕೊಡಬೇಕಿತ್ತು. ಅವಧಿ ಮುಗಿಯುವ ಮುನ್ನವೇ ರಾಜೀನಾಮೆ ಪಡೆದಿರುವುದು ಸ್ವಲ್ಪ ಬೇಸರ ಆಗಿದೆ ಎಂದು ಅಸಮಾಧಾನ ಹೊರಹಾಕಿದ್ದರು.
ಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ ಹೊರಟ್ಟಿಯವರ ಜತೆ ಚರ್ಚೆ ಮಾಡಿದ್ದೇವೆ. ನನಗೆ ರಾಜಕೀಯದ ವಾಸ್ತವಾಂಶದ ಅರಿವು ಇದೆ. ಅವರು ರಾಜೀನಾಮೆ ಸಲ್ಲಿಸಿದ್ದಾರೆ. ನಾನೇ ಅವರಿಗೆ ಮನವಿ ಮಾಡಿಕೊಂಡೆ. ಹಂಗಾಮಿ ಸಭಾಪತಿಯಾಗಿ ಅವರೇ ಮುಂದುವರೆಯುತ್ತಾರೆ ಎಂದಿದ್ದರು.
ಇತ್ತ ಹೊರಟ್ಟಿಯವರು ರಾಜ್ಯಪಾಲರಿಗೆ ದೂರು ನೀಡಿ, ಕರ್ನಾಟಕ ವಿಧಾನ ಪರಿಷತ್ತಿನ ಆವರಣದಲ್ಲಿರುವ ನನ್ನ ಅಧಿಕೃತ ಕೊಠಡಿಗೆ ಆಗಸ್ಟ್ 7 ರಂದು ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಕೆಲವು ಸದಸ್ಯರೊಂದಿಗೆ ನನ್ನ ಕೊಠಡಿಗೆ ಆಗಮಿಸಿ, ನಾನು ಅದೇ ದಿನವೇ ಸಭಾಪತಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ನಾನು ಮುಂಬರುವ ಮುಂಗಾರು ಅಧಿವೇಶನದಲ್ಲಿ ಆಗಸ್ಟ್ 14 ರಂದು ಸದನದಲ್ಲಿ ವಿಧಾನ ಪರಿಷತ್ತಿನ ಸದಸ್ಯರಿಗೆ ನನ್ನ ಧನ್ಯವಾದ ಮತ್ತು ಕೃತಜ್ಞತೆಗಳನ್ನು ಸಲ್ಲಿಸಿದ ನಂತರವೇ ರಾಜೀನಾಮೆ ನೀಡುವ ನನ್ನ ಇಚ್ಛೆಯನ್ನು ವ್ಯಕ್ತಪಡಿಸಿದ್ದೆ. ಆದರೂ, ಮುಖ್ಯಮಂತ್ರಿಗಳು ಇಂದೇ ರಾಜೀನಾಮೆ ನೀಡುವಂತೆ ನನಗೆ ಸೂಚಿಸಿದರು. ನನ್ನ ಅಧಿಕೃತ ಕೊಠಡಿಯಲ್ಲಾದ ಇಂತಹ ದಿಢೀರ್ ಬೆಳವಣಿಗೆ ನನಗೆ ಅಚ್ಚರಿ ಮೂಡಿಸಿತು. ಆದ್ದರಿಂದ, ಆ ಕ್ಷಣದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಖ್ಯಮಂತ್ರಿಗಳ ಕೋರಿಕೆಯ ಮೇರೆಗೆ ಇಂತಹ ಹೆಜ್ಜೆಯನ್ನು ಇಡುವುದು ನನ್ನ ಕರ್ತವ್ಯವೆಂದು ಭಾವಿಸುತ್ತೇನೆ. ಆದ್ದರಿಂದ, ರಾಜ್ಯಪಾಲರ ಮಾಹಿತಿಗಾಗಿ ಇದನ್ನು ಗೌರವಪೂರ್ವಕವಾಗಿ ಸಲ್ಲಿಸುವುದು ನನ್ನ ಕರ್ತವ್ಯವೆಂದು ಭಾವಿಸುತ್ತೇನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

