ನವದೆಹಲಿ : ಕಾಂಗ್ರೆಸ್ ಹೈಕಮಾಂಡ್ನಿಂದ ನವದೆಹಲಿಯಲ್ಲಿ ಗುರುವಾರ ಮ್ಯಾರಾಥಾನ್ ಸಭೆಗಳನ್ನು ನಡೆಸಿದ ಬಳಿಕವೂ ಡಿ.ಕೆ. ಶಿವಕುಮಾರ್ ಸರ್ಕಾರದಲ್ಲಿ ಸಂಪುಟ ಸೇರಲಿರುವ ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ 40 ದಿನ ಕಳೆದರೂ ಸಚಿವ ಸಂಪುಟ ಭರ್ತಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರನ್ನು ಗುರುವಾರ ನವದೆಹಲಿಗೆ ಬರುವಂತೆ ಸೂಚಿಸಿತ್ತು.
ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ನವದೆಹಲಿಯ 10ನೇ ಜನಪಥ್ ರಸ್ತೆಯ ನಿವಾಸದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಸರಣಿ ಸಭೆಗಳನ್ನು ನಡೆಸಿ ಡಿ.ಕೆ. ಶಿವಕುಮಾರ್ ಸರ್ಕಾರದಲ್ಲಿ ಸಚಿವರಾಗಲಿರುವ 20 ಮಂದಿಯ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಲು ಹಲವು ಸುತ್ತಿನ ಸಭೆಗಳನ್ನು ನಡೆಸಿದ ಬಳಿಕವೂ ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಇದೇ 19 ಅಥವಾ 20ರಂದು ಮತ್ತೊಂದು ಸುತ್ತಿನ ಸಭೆ ನಡೆಯಬಹುದು. ಅದಾದ ಬಳಿಕ ಜು.22ರಂದು ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ನವದೆಹಲಿಯ ಜನಪತ್ 10 ರಸ್ತೆಯ ರಾಹುಲ್ಗಾಂಧಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಹುಲ್ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿ ರಾಜ್ಯದಿಂದ ತೆರಳಿದ್ದ ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಹಲವು ಸುತ್ತಿನ ಸಭೆಗಳನ್ನು ನಡೆಸಿದರು. ಇದಲ್ಲದೆ, ರಾತ್ರಿ ವೇಳೆಗೆ ರಾಹುಲ್ಗಾಂಧಿ ಅವರು ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮತ್ತು ಹರಿಪ್ರಸಾದ್ ಮೂವರ ಜೊತೆಗೂ ಅಂತಿಮ ಸುತ್ತಿನಲ್ಲಿ ಒಬ್ಬೊಬ್ಬರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದರು. ಈ ವೇಳೆ ಒಂದು ಹಂತಕ್ಕೆ ಪಟ್ಟಿ ಸಿದ್ದಗೊಂಡಿದ್ದರೂ ಸಹ ಅದು ಅಂತಿಮ ಅಲ್ಲ ಎಂದು ಹೇಳಲಾಗುತ್ತಿದೆ.
ಸಚಿವ ಸ್ಥಾನಕ್ಕೆ ಹರಿಪ್ರಸಾದ್ ಪಟ್ಟು?
ಹಾಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ತಮಗೆ ಈಗ ಸಚಿವ ಸ್ಥಾನ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಬೆಂಬಲ ಸೂಚಿಸಿ ಹರಿಪ್ರಸಾದ್ ಅವರಿಗೆ ಮಾಂತ್ರಿ ಸ್ಥಾನ ನೀಡಬೇಕು. ಮತ್ತವರಿಗೆ ಹಿಂದುಳಿದ ವರ್ಗದ ಖಾತೆಯನ್ನೇ ನೀಡಬೇಕೆಂದು ಹೈಕಮಾಂಡ್ ಮುಂದೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.
ಈ ಬಾರಿ ಇನ್ನೆರಡು ವರ್ಷಗಳ ಅವಧಿಗಾದರೂ ನನ್ನನ್ನೂ ಸಚಿವರಾಗಿ ಮಾಡಬೇಕು. ನಾಲ್ಕು ದಶಕಗಳಿಂದ ನಾನು ಕೇಂದ್ರ ಸಚಿವನೂ ಆಗಿಲ್ಲ. ಈಗ ನನಗೆ ವಯಸ್ಸು ಕಡಿಮೆ ಆಗಿಲ್ಲ. ಮುಂದೆ ಪಕ್ಷ ಬರುತ್ತದೆಯೋ ಇಲ್ಲವೋ ಆ ಮಾತು ಈಗ ಬೇಡ. ನನಗೀಗ ಸಚಿವ ಸ್ಥಾನ ನೀಡಲೇಬೇಕು ಎಂದು ಬಿ.ಕೆ. ಹರಿಪ್ರಸಾದ್ ಹಿಡಿದ ಪಟ್ಟನ್ನು ಸಡಿಲಸದ ಕಾರಣ ಬೆಳಗಿನ ಸಭೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.
2023ರಲ್ಲಿ ಪಕ್ಷ 136 ಸ್ಥಾನಗಳನ್ನು ಗೆದ್ದು ಸಿದ್ದರಾಮಯ್ಯ ಅವರು ಸಿಎಂ ಆದಾಗಲೇ ನನ್ನ ಹಿರಿತನ, ಪಕ್ಷ ನಿಷ್ಠೆ ಅಳತೆಗೋಲಾಗಿ ಸಚಿವ ಸ್ಥಾನ ನೀಡಬೇಕಿತ್ತು. ಆದರೆ, ತಮ್ಮದೇ ಈಡಿಗ ಸಮುದಾಯದ ಜೆಡಿಎಸ್ನಿಂದ ಬಂದ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡಿ ಈಡಿಗ ಸಮುದಾಯದ ಖೋಟಾ ಮುಗಿದಿದೆ ಎಂದು ಹೇಳಲಾಯಿತು. ಈಗಾಲಾದರೂ ನೀಡಬೇಕು ಎಂದು ಹರಿಪ್ರಸಾದ್ ಪ್ರತಿಪಾದಿಸಿದ್ದಾರೆ.
ಒಬ್ಬ ವ್ಯಕ್ತಿ, ಒಂದು ಹುದ್ದೆ ನಿಯಮ
ʻಒಬ್ಬ ವ್ಯಕ್ತಿ, ಒಂದು ಹುದ್ದೆʼ ಎಂಬ ಅಲಿಖಿತ ನಿಯಮ ಪಕ್ಷದಲ್ಲಿ ಇದೆ. ಅದನ್ನು ಪಾಲಿಸಬೇಕು ಎಂಬ ವರಿಷ್ಠರ ಮಾತನ್ನು ನಯಾವಾಗಿ ತಿರಸ್ಕರಿಸಿರುವ ಹರಿಪ್ರಸಾದ್ ಅವರು, ಹಿಂದೆ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರ ಜೊತೆಗೆ ಉಪಮುಖ್ಯಮಂತ್ರಿ ಮತ್ತು ಸಚಿವ ಹುದ್ದೆಯನ್ನು ಅಲಂಕರಿಸಿದ್ದರು. ಇದರ ಆಧಾರದ ಮೇಲೆ ನನಗೆ ಸಚಿವ ಸ್ಥಾನ ನೀಡಬೇಕು ಎಂದು ನೈತಿಕ ನೆಲೆಯಲ್ಲಿಯೇ ವಾದಿಸಿ, ವರಿಷ್ಠರನ್ನು ಸುಮ್ಮನಾಗಿಸಿದರು. ಹೀಗಾಗಿ ಬೆಳಗಿನ ಸಭೆಯಲ್ಲಿ ಯಾವುದೇ ಅಂತಿಮ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ.
ಸಂಪುಟ ವಿಸ್ತರಣೆಗೆ ಸಿಎಂ ಪಟ್ಟು
ರಾಜ್ಯದಲ್ಲಿ ತಮ್ಮ ನೇತೃತ್ವದ ಸರ್ಕಾರ ರಚನೆಯಾಗಿ 40 ದಿನಗಳು ಕಳೆದಿವೆ. ಕೇವಲ ತಾವು ಸೇರಿ 14 ಮಂದಿ ಸಂಪುಟದಲ್ಲಿದ್ದು, ರಾಜ್ಯದಲ್ಲಿ ಬರ ಸಮಸ್ಯೆಯಾಗಿದೆ. ಸಚಿವರುಗಳು ಎಲ್ಲಾ ಜಿಲ್ಲೆಗಳಿಗೆ ತೆರಳಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಹೀಗಾಗಿ ಸಂಪುಟ ವಿಸ್ತರಣೆ ಮಾಡದಿದ್ದರೆ ಜನಾಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಪಟ್ಟು ಹಿಡಿದರು ಎನ್ನಲಾಗಿದೆ.
ಇದರ ಬೆನ್ನಲ್ಲಿಯೇ ರಾಹುಲ್ಗಾಂಧಿ ಅವರು ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಹರಿಪ್ರಸಾದ್ ಅವರೊಂದಿಗೆ ಪ್ರತ್ಯೇಕವಾಗಿ ಸಭೆಗಳನ್ನು ಕರೆದು ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿದರು. ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮತ್ತೊಮ್ಮೆ ಸಭೆ ನಡೆಸಿ ಬಳಿಕ ನೂತನ ಸಚಿವರ ಪ್ರಮಾಣವಚನಕ್ಕೆ ಅವಕಾಶ ಕಲ್ಪಿಸಿ ಎಂದು ರಾಜ್ಯ ನಾಯಕರಿಗೆ ಸೂಚನೆ ನೀಡಿದರು ಎಂದು ಗೊತ್ತಾಗಿದೆ.
- ಆಕಾಂಕ್ಷಿಗಳಿಗೆ ನಿರಾಸೆ
ಸಚಿವ ಸ್ಥಾನಕ್ಕೆ ಪಟ್ಟು ಹಿಡಿದು ಕಳೆದ ಮೂರ್ನಾಲ್ಕು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಹಿರಿಯ ಸಚಿವಾಕಾಂಕ್ಷಿ ಶಾಸಕರುಗಳಿಗೆ ಮತ್ತೆ ನಿರಾಸೆಯಾಗಿದೆ.
ಅಳೆದು ತೂಗಿ ಇಂದು ಕರೆಯಲಾಗಿದ್ದ ಸಭೆಯಲ್ಲಿ ಸಚಿವರ ಪಟ್ಟಿ ಅಂತಿಮಗೊಳ್ಳುತ್ತದೆ ಎಂದು ನಿರೀಕ್ಷಿಸಿದ್ದರು. ಸಚಿವ ಸ್ಥಾನ ದಕ್ಕಿಸಿಕೊಳ್ಳಲೇಬೇಕೆಂದು ತಮ್ಮ ತಮ್ಮ ಶಕ್ತಿ ಪ್ರದರ್ಶನವನ್ನೂ ಮಾಡಿದ್ದರು. ಆದರೆ, ಇಂದಿನ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರ ಹೊರಹೊಮ್ಮದ ಕಾರಣ ಅವರಿಗೆ ನಿರಾಸೆಯಾಗಿದೆ.

