ಬೆಂಗಳೂರು : ಮೇ. 13ರಂದು ಬೆಂಗಳೂರು ಜನರಿಗೆ ಗ್ಯಾರಂಟಿಯೊಂದನ್ನು ನೀಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜಿತ್ ಸಿಂಗ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಚುನಾವಣೆ ನಡೆಸುವ ಬಗ್ಗೆ ಚರ್ಚೆ ನಡೆಸಿದರು. ಸುರ್ಜೇವಾಲಾ ಕೂಡ ಚುನಾವಣೆ ನಡೆಸುವಂತೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜಿಎ ಕುರಿತು ಸುರ್ಜೇವಾಲಾ ಜೊತೆ ಸಭೆ ನಡೆಸಲಾಗಿದೆ. ಬಳಿಕ ಜಿಬಿಎ ಅಧಿಕಾರಿಗಳ ಸಭೆ ಕರೆದು ಅವರಿಗೂ ಸೂಚನೆ ನೀಡಿದ್ದೇನೆ. ಮೇ 13ರಂದು ದೊಡ್ಡ ಗ್ಯಾರಂಟಿ ಘೋಷಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.ರಾಜ್ಯ ಚುನಾವಣಾ ಮುಖ್ಯ ಆಯುಕ್ತರು ಸರ್ಕಾರಕ್ಕೆ ಜೂ .14ರಿಂದ 24ರೊಳಗೆ ಚುನಾವಣೆ ನಡೆಸಲು ದಿನಾಂಕ ಘೋಷಣೆ ಮಾಡಬೇಕು ಎಂದು ಹೇಳಿದ್ದರು. ಆಯುಕ್ತರ ಹೇಳಿಕೆ ಬೆನ್ನ ಹಿಂದೆಯೇ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅವರು ಚುನಾವಣೆ ನಡೆಸುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.
ಜನಗಣತಿಯಲ್ಲಿರುವ ಅಧಿಕಾರಿಗಳು : ಸಿಎಂ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಮೊನ್ನಣ್ಣ ಅವರು ಮಾತನಾಡಿ, ರಾಜ್ಯದ ಬಹುತೇಕ ಅಧಿಕಾರಿಗಳು ಕೇಂದ್ರ ಸರ್ಕಾರದ ಜನಗಣತಿಯಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ ಜೂನ್ನಲ್ಲಿ ಎಸ್ಐಆರ್ ನಡೆಯಲಿದೆ. ಜೊತೆಗೆ ಶಾಲೆಗಳು ಆರಂಭವಾಗಲಿವೆ. ಈ ನುಡುವೆ ಜಿಬಿಎ ಚುನಾವಣೆಯನ್ನು ನಡೆಸಲು ಸಾಧ್ಯವಾಗುವುದಿಲ್ಲ. ಬಿಜಿಎ ಪಾಲಿಕೆಗಳಿಗೆ ಚುನಾವಣೆ ನಡೆಸುವ ಕುರಿತು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್ಗೆ ಚುನಾವಣಾ ಆಯೋಗ ನೀಡಿರುವ ಗಡುವಿನಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ ಎನ್ನುವ ಕುರಿತು ಮನವಿ ಮಾಡುತ್ತೇವೆ. ಅಂತಿಮವಾಗಿ ನ್ಯಾಯಾಲಯದ ಸೂಚನೆಯಂತೆ ನಡೆದುಕೊಳ್ಳುತ್ತೇವೆ ಎಂದರು.
2015ರಲ್ಲಿ ನಡೆದಿದ್ದ ಚುನಾವಣೆ : ಬೃಹತ್ ಬೆಂಗಳೂರು ನಗರ ಪಾಲಿಕೆಗೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದ್ದ ವೇಳೆ ಅಂದರೆ 2015ರ ಆಗಸ್ಟ್ನಲ್ಲಿ ನಡೆದಿತ್ತು. ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದಿತ್ತು. ಎರಡನೇ ಸ್ಥಾನ ಪಡೆದಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಪಾಲಿಕೆಯಲ್ಲಿ ಸರ್ಕಾರ ರಚನೆ ಮಾಡಿದ್ದವು. ಪಾಲಿಕೆ ಅವಧಿ 2020ರಲ್ಲಿ ಅಂತ್ಯಗೊಂಡಿತ್ತು. ಬಳಿಕ ಚುನಾವಣೆ ನಡೆದಿಲ್ಲ. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಚುನಾವಣೆ ನಡೆಸಲು ಉತ್ಸುಕವಾಗಲಿಲ್ಲ.
ಬ್ಯಾಲೆಟ್ನಲ್ಲಿ ಚುನಾವಣೆ : ರಾಜ್ಯ ಸರ್ಕಾರ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬ್ಯಾಲೆಟ್ ಪತ್ರಗಳಲ್ಲಿ ನಡೆಸುವಂತೆ ಕಾನೂನು ಜಾರಿಗೆ ತಂದಿರುವುದನ್ನು ಪಾಲಿಸುವುದಾಗಿ ರಾಜ್ಯ ಚುನಾವಣಾ ಆಯೋಗ ಹೇಳಿದೆ. ಬಿಬಿಎ ವ್ಯಾಪ್ತಿಯ ಐದು ಪಾಲಿಕೆ ಚುನಾವಣೆಗಳನ್ನು ಮತಪತ್ರದಲ್ಲಿ ನಡೆಸುವುದಾಗಿ ಚುನಾವಣಾ ಆಯುಕ್ತರು ಈಗಾಗಲೇ ಹೇಳಿದ್ದಾರೆ. ರಾಜ್ಯದಲ್ಲಿ ಹಲವು ವರ್ಷಗಳ ಬಳಿಕ ಮತ ಪತ್ರದಲ್ಲಿ ನಡೆಯುವ ಚುನಾವಣೆಯಾಗಲಿದೆ.
ಆಡಳಿತಾಧಿಕಾರಿ ಈಗ ಜಿಬಿಎ ಆಡಳಿತ ನಡೆಸುತ್ತಿದ್ದಾರೆ : ಇದನ್ನು ಪ್ರಶ್ನಿಸಿ ಹಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಬಿಜೆಪಿ ಸರ್ಕಾರ ಕೂಡ ಕೋರ್ಟ್ಗೆ ಮನವಿ ಮಾಡಿ ಚುನಾವಣೆ ಮುಂದೂಡುತ್ತೇಲೆ ಬಂತು. ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದೆ ನಡೆಯನ್ನು ಅನುಸರಿಸುತ್ತಾ ಬಂದಿದೆ. ರಾಜ್ಯದಲ್ಲಿ ಅಧಿಕಾರಕ್ಕೆಬಂದು ಕಾಂಗ್ರೆಸ್ ಮೂರು ವರ್ಷ ಕಳೆದರೂ ಚುನಾವಣೆ ನಡೆಸಿಲ್ಲ. ಈ ವೇಳೆ ಸರ್ಕಾರ ಪಾಲಿಕೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ರಚನೆ ಮಾಡಿ ನಂತರ ಚುನಾವಣೆ ನಡೆಸುವುದಾಗಿ ಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಸರ್ಕಾರ ಇದುವರೆಗೆ ಚುನಾವಣೆ ನಡೆಸದೆ ಕೋರ್ಟ್ಗೆ ಹಲವು ಬಾರಿ ಮುಂದೂಡುವಂತೆ ಮನವಿ ಮಾಡುತ್ತಲೇ ಬಂದಿದೆ. ಈಗ ಕೋರ್ಟ್ ಅಂತಿಮವಾಗಿ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿ ಚುನಾವಣೆ ನಡೆಸಿ ಮತ್ತೆ ಕೋರ್ಟ್ಗೆ ಬನ್ನಿ ಎಂದು ಸೂಚಿಸಿದೆ. ಹೀಗಾಗಿ ಈ ಬಾರಿ ಸರ್ಕಾರ ಏನು ಮಾಡುತ್ತದೆ ಎಂದು ಕಾದು ನೋಡಬೇಕಾಗಿದೆ.

