ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ; ಇಂಧನ ಸಂರಕ್ಷಣೆ ಕುರಿತು ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು

Most read

ಬೆಂಗಳೂರು: ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹದ ಭಾಗವಾಗಿ  ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಕೇಂದ್ರ ಕಚೇರಿಯಲ್ಲಿ ಇಂಧನ ಸಂರಕ್ಷಣಾ ದಿನಾಚರಣೆ ಆಯೋಜಿಸಲಾಗಿತ್ತು.

ಕೇಂದ್ರದ ಇಂಧನ ಸಚಿವಾಲಯದ ‘ಇಂಧನ ದಕ್ಷತೆಯ ಬ್ಯೂರೋ’ (ಬಿಇಇ), ಇಂಧನ ಸಂರಕ್ಷಣೆ ಮತ್ತು ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಸಾರುವ ಉದ್ದೇಶದಿಂದ ಎಲ್ಲ ರಾಜ್ಯಗಳಲ್ಲಿ ಇಂಧನ ಇಲಾಖೆ ವತಿಯಿಂದ ಸಪ್ತಾಹದ ಆಚರಣೆಯನ್ನು ಕಡ್ಡಾಯಗೊಳಿಸಿದೆ. ಅದರ ಭಾಗವಾಗಿ, ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ  ಕ್ರೆಡಲ್‌  ಆಯೋಜಿಸಿದ್ದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆಯಲ್ಲಿ ಹಮ್ಮಿಕೊಂಡಿದ್ದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ನಗರದ ವಿವಿಧ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಇಂಧನ ಸಂರಕ್ಷಣಾ ಸಪ್ತಾಹದ ಸಂದರ್ಭದಲ್ಲಿ ಇಂಧನ ಬಳಕೆಯ ಪ್ರಮಾಣ ತಗ್ಗಿಸುವುದು, ಇಂಧನದ ದಕ್ಷ ಬಳಕೆಯನ್ನು ಉತ್ತೇಜಿಸುವುದು ಮತ್ತು ರಾಜ್ಯದಲ್ಲಿ ಸುಸ್ಥಿರ ಅಭ್ಯಾಸಗಳನ್ನು ಬೆಳೆಸುವ ಬಗ್ಗೆ ರಾಜ್ಯದ ನೋಡಲ್‌ ಏಜೆನ್ಸಿಯಾದ ಕ್ರೆಡಲ್‌ ಜಾಗೃತಿ ಮೂಡಿಸುವುದು.

ಚಿತ್ರ ಸ್ಪರ್ಧೆಯಲ್ಲಿ ತೀರ್ಪುಗಾರರು ಆಯ್ಕೆ ಮಾಡಿದ ಅತ್ಯುತ್ತಮ ಚಿತ್ರಕ್ಕೆ ಮೊದಲ ಬಹುಮಾನವಾಗಿ 3,000 ಎರಡನೇ ಬಹುಮಾನ 2,000, ಮೂರನೇ ಬಹುಮಾನವಾಗಿ 1,500 ಸಾವಿರ ಹಾಗೂ 11 ಸಮಾಧಾನಕರ ಚಿತ್ರಗಳಿಗೆ ತಲಾ 500 ರೂ. ನೀಡಲಾಯಿತು. ಇಂಧನ ದಕ್ಷತೆಗಾಗಿ ಎಲ್‌ಇಡಿ ಬಲ್ಬ್‌ ಗಳನ್ನು ಬಳಸಬೇಕು ಎಂಬ ಸಂದೇಶ ಸಾರಲು ವಿದ್ಯಾರ್ಥಿಗಳಿಗೆ ಬಲ್ಬ್‌ ವಿತರಿಸಲಾಯಿತು.

 ಚಿತ್ರ ಬಿಡಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಕ್ರೆಡಲ್‌ನ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಅಮರನಾಥ್‌, “ಇಂಧನ ಸಂರಕ್ಷಣೆ ಹಾಗೂ ಇಂಧನ ದಕ್ಷತೆಯ ಪಾಠ ಸಣ್ಣವಯಸ್ಸಿನಿಂದಲೇ ಆರಂಭವಾಗಬೇಕು. ಬಲ್ಬ್‌, ಫ್ಯಾನ್‌ ಮುಂತಾದ ವಿದ್ಯುತ್‌ ಉಪಕರಣನ್ನು ಅಗತ್ಯ ಇರುವಡೆ ಮಾತ್ರ ಬಳಸಬೇಕು.  ಬಿಎಸ್‌ಇ 5 ಸ್ಟಾರ್‌ ರೇಟೆಡ್‌ನ ಎಸಿ, ಫ್ರಿಡ್ಜ್‌, ಫ್ಯಾನ್‌ ಹಾಗೂ ಇತರ ವಿದ್ಯುತ್‌ ಉಪಕರಣಗಳನ್ನು ಬಳಸಿದಾಗ ವಿದ್ಯುತ್‌ ಉಳಿತಾಯ ಸಾಧ್ಯ. ಮನೆಯಲ್ಲಿ ಮಕ್ಕಳು ಜಾಗೃತರಾದರೆ, ಮನೆಯ ಎಲ್ಲರಿಗೂ ಅರಿವು ಮೂಡಿಸಿದಂತೆ ಆಗುವುದು,”ಎಂದರು.

ಕ್ರೆಡಲ್‌ನ ಹಿರಿಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು, ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇಂಧನ ಸಚಿವ ಕೆ.ಜೆ. ಜಾರ್ಜ್‌ ಪ್ರತಿಕ್ರಿಯಿಸಿ “ಡಿಸೆಂಬರ್ 14 ರಿಂದ 20 ರವರೆಗೆ ಇಂಧನ ಸಂರಕ್ಷಣೆ ಸಪ್ತಾಹ ಆಚರಿಸಲಾಗುತ್ತದೆ. ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆಯ ಕುರಿತು ಅರಿವು ಮೂಡಿಸುವ ಅಭಿಯಾನ ಇದಾಗಿದ್ದು, ಶಾಲಾ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬೆಂಗಳೂರು ಅಲ್ಲದೇ, ಕ್ರೆಡಲ್‌ನ  ಕಲಬುರಗಿ, ಹುಬ್ಬಳ್ಳಿಯ ಕಚೇರಿಗಳಲ್ಲೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಸ್ಪರ್ಧೆಗಳು ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಲಾಗಿದೆ. ಈ ಮೂಲಕ  ಭವಿಷ್ಯದ ಪೀಳಿಗೆಗೆ  ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಪ್ರೇರೇಪಿಸಲಾಗುತ್ತದೆ”

ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಮಾತನಾಡಿ, “ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರ ನೇತೃತ್ವ ಹಾಗೂ ಕ್ರೆಡಲ್‌ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಇಂಧನ ಸಂರಕ್ಷಣಾ ದಿನ ಆಚರಿಸಲಾಗುತ್ತಿದೆ. ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ ಅವರ ಪ್ರೋತ್ಸಾಹದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಚಿತ್ರ ಬಿಡಿಸುವ ಸ್ಪರ್ಧೆಯ ಅತ್ಯುತ್ತಮ ಚಿತ್ರವನ್ನು ಇಂಧನ ಸಚಿವರಿಗೆ ಕೊಡುಗೆಯಾಗಿ ನೀಡಲಾಗುತ್ತದೆ ಎಂದರು.”

More articles

Latest article