ಅಹಮದಾಬಾದ್: ಚಲಿಸುತ್ತಿದ್ದ ಆಂಬುಲೆನ್ಸ್ ಬೆಂಕಿ ಹೊತ್ತಿಕೊಂಡಿ, ನವಜಾತ ಶಿಶು, ವೈದ್ಯರು ಸೇರಿ ನಾಲ್ವರು ಸಜೀವ ದಹನಗೊಂಡ ಬೀಕರ ದುರಂತ ಗುಜರಾತ್ ರಾಜ್ಯದ ಅರವಲ್ಲಿ ಜಿಲ್ಲೆಯ ಮೊಡಾಸಾ ನಗರದಲ್ಲಿ ನಡೆದಿದೆ.
ಮೊಡಾಸಾದ ಆಸ್ಪತ್ರೆಯೊಂದರಲ್ಲಿ ಜನಿಸಿದ್ದ ಶಿಶುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅಹಮದಾಬಾದ್ ನ ಖಾಸಗಿ ಆಸ್ಪತ್ರೆಗೆ ಶಿಶುವನ್ನು ಕರೆದೊಯ್ಯಲಾಗುತ್ತಿತ್ತು. ಸೋಮವಾರ ತಡರಾತ್ರಿ ಮೊಡಾಸಾ– ಧನ್ಸುರಾ ಮಾರ್ಗದಲ್ಲಿ ಚಲಿಸುತ್ತಿದ್ದ ಆಂಬುಲೆನ್ಸ್ ಗೆ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ.
ಆಂಬುಲೆನ್ಸ್ ನಲ್ಲಿ ಶಿಶು, ತಂದೆ ಜಿಗ್ನೇಶ್ ಮೋಚಿ, ವೈದ್ಯ ಡಾ. ಶಾಂತಿಲಾಲ್ ರೆಂತಿಯಾ, ನರ್ಸ್ ಭುರಿಬೆನ್ ಮನತ್ ಹಾಗೂ ಚಾಲಕ ಸೇರಿ ಒಟ್ಟು ಏಳು ಮಂದಿ ಇದ್ದರು. ಚಾಲಕ ಮತ್ತು ಇತರ ಇಬ್ಬರು ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ. ಸದ್ಯಕ್ಕೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಂಬುಲೆನ್ಸ್ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಚಾಲಕನಿಗೆ ತಿಳಿದುಬಂದಿದೆ. ಆ ನಂತರ ಆತ ವಾಹನವನ್ನು ನಿಧಾನವಾಗಿ ಚಲಾಯಿಸಿದ್ದಾನೆ. ಇದು ಪೆಟ್ರೋಲ್ ಪಂಪ್ ನ ಸಿಸಿಟಿವಿಯಲ್ಲಿ ಬಳಿ ಆಂಬುಲೆನ್ಸ್ ಸೆರೆಯಾಗಿದೆ.
ದುರಂತಕ್ಕೆ ಕಾರಣ ಕುರಿತು ತನಿಖೆ ನಡೆಸಲು ವಿಧಿವಿಜ್ಞಾನ ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದೆ ಜತೆಗೆ ತನಿಖೆಗೂ ಆದೇಶಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಹರ ಸಿನ್ಹಾ ಜಡೇಜಾ ಹೇಳಿದ್ದಾರೆ.

