ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಪೂರ್ವದ ಮೊದಲ ಸಾಲಿನ ಲೇಖಕಿಯರಲ್ಲಿ ಒಬ್ಬರೆಂದು ಗುರುತಿಸಲ್ಪಡುವ ಹಾಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಹಿರಿಯ ಲೇಖಕಿ ಲಲಿತಾ ರೈ ಅವರು (98) ಅಕ್ಟೋಬರ್ 11 ರಂದು ಮಂಗಳೂರಿನ ತನ್ನ ಸ್ವಗೃಹದಲ್ಲಿ ನಿಧನರಾದರು.
ಮಂಗಳೂರಿನ ಬೆಸೆಂಟ್ ಪ್ರೌಢಶಾಲೆಯ ಮೆಟ್ರಿಕ್ ತರಗತಿಯ ಮೊದಲ ತಂಡದ ವಿದ್ಯಾರ್ಥಿನಿಯಾಗಿದ್ದ ಲಲಿತಾ ರೈ ಅವರು ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಸೈಂಟ್ ಆನ್ಸ್ ಬಿ. ಎಡ್ ಕಾಲೇಜಿನಲ್ಲಿ ಶಿಕ್ಷಕ ತರಬೇತಿ ಅಧ್ಯಯನ ಮಾಡಿ ಕೆನರಾ ಪ್ರೌಢಶಾಲೆಯಲ್ಲಿ ಅಧ್ಯಾಪಕಿ ವೃತ್ತಿಯನ್ನು ಆರಂಭಿಸಿದ್ದರು. ಮಂಗಳೂರಿನ ಮಹಿಳಾ ಸಭಾ, ಭಗಿನಿ ಸಮಾಜ ಥಿಯೋಸೋಫಿಕಲ್ ಸೊಸೈಟಿ ಮೊದಲಾದುವುಗಳಲ್ಲಿ ಪ್ರಾರಂಭದಿಂದಲೇ ಸದಸ್ಯೆಯಾಗಿದ್ದ ಲಲಿತಾ ರೈ ಅವರು ಅನೇಕ ಸೇವಾ ಕಾರ್ಯಗಳಲ್ಲಿ ಮಂಚೂಣಿಯಲ್ಲಿದ್ದರು. ತನ್ನ ಇಳಿ ವಯಸಿನಲ್ಲಿಯೂ ಮಂಗಳೂರಲ್ಲಿ ಓದುವ ಹೆಣ್ಣುಮಕ್ಕಳಿಗೆ ತನ್ನ ಮನೆಯಲ್ಲೇ ಹಾಸ್ಟೆಲನ್ನು ನಡೆಸಿ ಅವರ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವನ್ನೂ ನೀಡಿದ್ದರು. ಮಹಿಳಾಪರ ಹೋರಾಟಗಳಲ್ಲೂ ಭಾಗಿಯಾಗಿದ್ದರು. ಕರಾವಳಿ ಲೇಖಕಿಯರ ಹಾಗೂ ವಾಚಕಿಯರ ಸಂಘದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.
ಲಲಿತಾ ರೈ ಅವರು ಸ್ವಾತಂತ್ರ್ಯ ಪೂರ್ವದಲ್ಲೇ ಪತ್ರಿಕೆಗಳಲ್ಲಿ ಕತೆ, ಲೇಖನಗಳನ್ನು ಬರೆದಿದ್ದರು. ‘ಚಿತ್ತಗಾಂಗ್ನ ಕ್ರಾಂತಿವೀರರು’, ಲಲಿತಾ ರೈ ಅವರ ಅನುವಾದಿತ ಕೃತಿ. ‘ಮತ್ತೆ ಬೆಳಗಿತು ಸೊಡರು’ (ಕಥಾ ಸಂಕಲನ), ‘ಇಂಟರ್ನೆಟ್ನೊಳಗೆ ಮತ್ತು ಇತರ ಕತೆಗಳು (ಕಥಾ ಸಂಕಲನ), ಗ್ರಹಣ ಕಳೆಯಿತು (ಕನ್ನಡ ಕಾದಂಬರಿ), ‘ದೇಸಾಂತರ’, ‘ಬೋಂಟೆ ದೇರ್ಂಡ್’, (ತುಳು ಕಾದಂಬರಿ) ಲಲಿತಾ ರೈ ಅವರ ಪ್ರಮುಖ ಕೃತಿಗಳು. ಈ ಮೂಲಕ ತುಳು ಕನ್ನಡ ಸಾಹಿತ್ಯಲೋಕದಲ್ಲಿ ತನ್ನನ್ನು ತಾನು ಗುರುತಿಸಿಕೊಂಡರು.
ಎಸ್. ಯು ಪಣಿಯಾಡಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘ ಪ್ರಶಸ್ತಿ, ರಾಣಿ ಅಬ್ಬಕ್ಕ ಪ್ರಶಸ್ತಿ, ಸಂದೇಶ ಪ್ರತಿಷ್ಠಾನ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ, ಕರ್ನಾಟಕ ಸರಕಾರದ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಮತ್ತು ಅನೇಕ ಸ್ಥಳೀಯ ಸಂಘ ಸಂಸ್ಥೆಗಳ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಅವರ ಅಂತಿಮ ಯಾತ್ರೆಯ ವಿಧಿವಿಧಾನಗಳು ಕೊಡಿಯಾಲ ಬೈಲ್ ಗುತ್ತು ಪಶ್ಚಿಮ ರಸ್ತೆಯಲ್ಲಿರುವ ಅವರ ಸ್ವ ಗೃಹ ‘ಲಲಿತಾ ರೆಸಿಡೆನ್ಸಿ ವಿಶ್ವಾಸ್’ ಇಲ್ಲಿ ಬುಧವಾರ ಬೆಲಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಲಲಿತಾ ರೈ ಅವರ ನಿಧನಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ ಗಟ್ಟಿ ಕಾಪಿಕಾಡ್, ಕರಾವಳಿ ಲೇಖಕಿ ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಶೆಟ್ಟಿ, ಹಿರಿಯ ಸಾಹಿತಿ ಚಂದ್ರಕಲಾ ನಂದಾವರ, ಜ್ಯೋತಿ ಚೇಳ್ಯಾರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.