ಬಸವಣ್ಣನ ಕಾಯಕ ಸಂಸ್ಕೃತಿ ಮೈಗೂಡಿಸಿಕೊಂಡರೆ ಶ್ರೀಸಾಮಾನ್ಯರ ಸಮಸ್ಯೆಗಳ ನಿವಾರಣೆ ಸಾಧ್ಯ: ಡಾ. ರಾಮ್ ಪ್ರಸಾತ್ ಮನೋಹರ್

Most read

 ಬೆಂಗಳೂರು: ಕ್ರಾಂತಿಯೋಗಿ, ಜಗಜ್ಯೋತಿ ಬಸವೇಶ್ವರರ ಕಾಯಕ ಸಂಸ್ಕೃತಿಯನ್ನು ಜಲಮಂಡಳಿಯಲ್ಲಿ ಮೈಗೂಡಿಸಿಕೊಂಡು ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಬಿ.ಡ.ಬ್ಲ್ಯು.ಎಸ್.ಎಸ್.ಬಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.

ಬೆಂಗಳೂರು ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಯಿಂದ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಲಮಂಡಳಿ ಸಿಬ್ಬಂದಿ ಆತ್ಮ ಶುದ್ಧವಾಗಿಟ್ಟುಕೊಂಡು ಕಾಯಕ ಸಂಸ್ಕೃತಿ ಅನುಸರಿಸಿದರೆ ಅದೇ ಸಂಸ್ಥೆಗೆ ನೀಡುವ ದೊಡ್ಡ ಗೌರವ. ಸಾಮಾನ್ಯ ಜನರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕು. ನಮ್ಮ ಮಕ್ಕಳಿಗೆ ಬಸವಣ್ಣರ ತತ್ವ, ಚಿಂತನೆಗಳನ್ನು ತಿಳಿಸಿಕೊಡಬೇಕಾಗಿದೆ ಎಂದರು.

ವಿಶ್ವಕ್ಕೆ ಮಾನಹಕ್ಕುಗಳ ಬಗ್ಗೆ ಮೊದಲು ತಿಳಿಸಿಕೊಟ್ಟಿದ್ದು ಜ್ಞಾನಯೋಗಿ ಬಸವಣ್ಣ. 12 ನೇ ಶತಮಾನದಲ್ಲೇ ಮಾನವ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದ್ದ ಮಹಾನ್ ಚೇತನ. 500 ವರ್ಷಗಳ ಬಳಿಕ ಅಮೆರಿಕ 1776 ರಲ್ಲಿ ಮಾನವ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದೆ. ನಮ್ಮ ಇತಿಹಾಸದಲ್ಲಿ ಕ್ರಾಂತಿ ಬಸವಣ್ಣವರಿಂದ ಪ್ರಾರಂಭವಾಗಿದೆ. ಅವರು ವಿಶ್ವದ ಗುರುವಾಗಿದ್ದಾರೆ. ರಾಜಕೀಯ, ಸಾಮಾಜಿಕ, ಜಾತಿ ಸಮಾನತೆ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅನುಭವ ಮಂಟಪದಲ್ಲಿ ಗಣ್ಯರು ನಡೆಸುತ್ತಿದ್ದ ಚರ್ಚೆಗಳೇ ಇದಕ್ಕೆ ಬಹುದೊಡ್ಡ ಉದಾಹರಣೆ ಎಂದರು.

 ಬೇಲಿಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಸಾಮಾಜಿಕ, ಆರ್ಥಿಕ ಸುಧಾರಕರು. ಅನುಭವ ಮಂಟಪಕ್ಕೆ ಕಾಶ್ಮೀರ, ಕಂದಹಾರ್ ಮತ್ತಿತರೆ ದೇಶ – ವಿದೇಶಗಳಿಂದ ಲಕ್ಷಾಂತರ ಜನ ಬಂದು ಪಾಲ್ಗೊಂಡು ಚಿಂತನ, ಮಂಥನ ನಡೆಸುತ್ತಿದ್ದ ಕಾಲ ಅದಾಗಿತ್ತು. ವಿಚಾರವಂತರ ಸುವರ್ಣ ಯುಗವಾಗಿತ್ತು. ನಮ್ಮಲ್ಲಿ ಇಷ್ಟೊಂದು ವಿವಿಗಳು, ಶಿಕ್ಷಣ ಸಂಸ್ಥೆಗಳಿದ್ದರೂ ಒಬ್ಬನೇ ಒಬ್ಬ ಶ್ರೇಷ್ಠ ವಚನಕಾರರನ್ನು ಸೃಷ್ಟಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. 

 ಅಕ್ಕ ಅಕಾಡೆಮಿ ಐಎಎಸ್ ತರಬೇತಿ ಸಂಸ್ಥೆಯ ಸಂಸ್ಥಾಪಕರಾದ ಶಿವಕುಮಾರ್ ಮಾತನಾಡಿ, ಬಸವಣ್ಣನವರು ಬಾಲ್ಯದಿಂದಲೇ ವಿಚಾರ ಕ್ರಾಂತಿ ಹೊಂದಿದ್ದವರು.  ಶಿವಭಕ್ತರಿಗೆ ಜಾತಿ ಇಲ್ಲ ಎಂದು ಜಗತ್ತಿಗೆ ಅತ್ಯಂತ ಪ್ರಬಲವಾಗಿ ಸಾರಿದ ಮಹಾನ್ ಚಿಂತಕ. ಸಾಮಾಜಿಕ ಘರ್ಷಣೆ ಮೂಲಕ ಮೇಲು – ಕೀಳು ತಾರತಮ್ಯವನ್ನು ಹೋಗಲಾಡಿಸಿದ ಚೇತನ ಎಂದರು.

ಬೆಂಗಳೂರು ಜಲಮಂಡಳಿ ನೌಕರರ ಸಂಘದ ಅಧ್ಯಕ್ಷ ಬಿ.ಕೆ. ಮರಿಯಪ್ಪ, ಉಪಾಧ್ಯಕ್ಷ ಗುರುಲಿಂಗಪ್ಪ ಕಿತ್ತೂರುಮುಖ್ಯ ಆಡಳಿತಾಧಿಕಾರಿ ಸಿ. ಮದನ್ ಮೋಹನ್, ಮುಖ್ಯ ಲೆಕ್ಕಾಧಿಕಾರಿ ಸುಬ್ಬರಾಮಯ್ಯ, ಪ್ರಧಾನ ಅಭಿಯಂತರರಾದ ಬಿ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

More articles

Latest article