ನ್ಯಾಯಾಲಯಗಳಲ್ಲೂ ಕನ್ನಡದಲ್ಲೇ ವಿಚಾರಣೆ ನಡೆಸಿ ತೀರ್ಪು ಕೊಡುವ ವ್ಯವಸ್ಥೆ ಜಾರಿಯಾಗಬೇಕು:ಬಿಳಿಮಲೆ ಆಗ್ರಹ

Most read

ಬೆಂಗಳೂರು: ಕೆಲವೇ ಗೌರವಾನ್ವಿತ ನ್ಯಾಯಾಧೀಶರುಗಳ ವಿಶೇಷ ಆಸಕ್ತಿಯಿಂದ ಕನ್ನಡ ಭಾಷೆ ನ್ಯಾಯಾಲಯ ವ್ಯವಸ್ಥೆಯಲ್ಲಿ ಉಸಿರಾಡುತ್ತಿದ್ದು, ಕಕ್ಷಿದಾರರು, ನ್ಯಾಯವಾದಿಗಳು ಕನ್ನಡದವರೇ ಆಗಿದ್ದರೂ ಸಹ ವಿಚಾರಣೆಗಳು ಮತ್ತು ತೀರ್ಪುಗಳು =ಆಂಗ್ಲ ಭಾಷೆಯಲ್ಲಿ ಇರುವುದು ವ್ಯವಸ್ಥೆಯ ಅಣಕವಾಗಿದೆ. ಆದ್ದರಿಂದ ರಾಜ್ಯ ಉಚ್ಚ ನ್ಯಾಯಾಲಯವು ಕನ್ನಡದಲ್ಲಿ ವಿಚಾರಣೆ ಮತ್ತು ತೀರ್ಪು ನೀಡುವ ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಈ ಕುರಿತಂತೆ ರಾಜ್ಯ ಉಚ್ಚ ನ್ಯಾಯಾಲಯ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿರುವ ಬಿಳಿಮಲೆ, ಕನ್ನಡದಲ್ಲಿ ನ್ಯಾಯದಾನವನ್ನು ಅಪೇಕ್ಷಿಸುವ ಅಸಂಖ್ಯ ಕನ್ನಡಿಗರ ವೇದನೆಯನ್ನು ಶಮನಗೊಳಿಸಬೇಕಾದಲ್ಲಿ ಮಾನ್ಯ ನ್ಯಾಯಾಲಯವು ಹೆಚ್ಚಿನ ಮುತುವರ್ಜಿಯನ್ನು ಅನುಸರಿಸಬೇಕಾದ ಅವಶ್ಯಕತೆ ಇದೆ. ಕನಿಷ್ಟ ಪಕ್ಷ ಕನ್ನಡದಲ್ಲಿ ಪ್ರಕರಣವನ್ನು ದಾಖಲಿಸಲು ಅನುವು ಮಾಡಿಕೊಟ್ಟಲ್ಲಿ ನ್ಯಾಯಾಲಯ ವ್ಯವಸ್ಥೆಯ ಬಗ್ಗೆ  ಜನ ಸಾಮಾನ್ಯರಲ್ಲಿ ಗೌರವ ಹೆಚ್ಚುತ್ತದೆ. ವಿಚಾರಣೆಗಳು, ತೀರ್ಪುಗಳು ಕನ್ನಡ ಭಾಷೆಯಲ್ಲಿ ಬರುವಂತಾದಲ್ಲಿ ನ್ಯಾಯದಾನ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಭರವಸೆ ಮೂಡುತ್ತದೆ ಎಂದು ತಿಳಿಸಿದ್ದಾರೆ.

ಹೊರನಾಡು ಗಡಿನಾಡಿನ ಕನ್ನಡಿಗರನ್ನು ಕರ್ನಾಟಕ ಸರ್ಕಾರವು ನಡೆಸಿಕೊಳ್ಳುತ್ತಿರುವ ರೀತಿ ಸಮಂಜಸವಾಗಿಲ್ಲವೆನ್ನುವ ಅಭಿಪ್ರಾಯವು ದಿನೇ ದಿನೇ ವೃದ್ಧಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಮುದಾಯದ ಹಿತವನ್ನು ಕಾಯುವಲ್ಲಿ ರಾಜ್ಯ ಸರ್ಕಾರವು ಕಾಲ ಕಾಲಕ್ಕೆ ಹೊರಡಿಸಿರುವ ಆದೇಶಗಳನ್ನು ಬದ್ಧತೆಯಿಂದ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಬೇಕೆಂದು ಬಿಳಿಮಲೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ಈ ಕುರಿತಂತೆ ಪತ್ರ ಬರೆದಿರುವ ಅವರು, ರಾಜ್ಯ ಸರ್ಕಾರವು ಭಾರತದ ಯಾವುದೇ ಪ್ರದೇಶದಲ್ಲಿ 1 ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ನೇಮಕಾತಿಯಲ್ಲಿ, ಶಿಕ್ಷಣದಲ್ಲಿ ಶೇ.5ರ ಸಮತಳ ಮೀಸಲಾತಿಯನ್ನು ಕಲ್ಪಿಸಿದ್ದರೂ ಈ ಆದೇಶಗಳ ಸಮರ್ಪಕ ಅನುಷ್ಠಾನವನ್ನು ರಾಜ್ಯ ಸರ್ಕಾರದ ಇಲಾಖೆಗಳು ಮಾಡುತ್ತಿಲ್ಲ. ಸಂಬಂಧಪಟ್ಟ ರಾಜ್ಯಗಳು ನೀಡುವ ಗಡಿನಾಡು, ಹೊರನಾಡಿನ ವಿದ್ಯಾರ್ಥಿಗಳ ಜಾತಿ, ಆದಾಯ ಪ್ರಮಾಣ ಪತ್ರಗಳಿಗೆ, ವಿಕಲಚೇತನ ಪ್ರಮಾಣ ಪತ್ರಗಳಿಗೆ ಯಾವುದೇ ಮನ್ನಣೆಯನ್ನು ನೀಡುತ್ತಿಲ್ಲ. ಇದು ಹೊರನಾಡು, ಗಡಿನಾಡಿನ ಕನ್ನಡಿಗರು ತಾವು ಹೊಂದಿರುವ ಕರ್ನಾಟಕದ ಬಗೆಗಿನ ಅಭಿಮಾನವನ್ನೇ ಸಂದೇಹಿಸುವ, ಅವರ ಆತ್ಮವಿಶ್ವಾಸವನ್ನು ಕಸಿಯುವ ಪ್ರಯತ್ನವಾಗಲಿದೆ ಎಂದಿದ್ದಾರೆ

More articles

Latest article