ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮತಗಳನ್ನೇ ಕಳವು ಮಾಡಲಾಗಿದೆ ಎಂದು ಕಾಂಗ್ರೆಸ್ ವರಿಷ್ಠ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ ಎಂದು ಆರೋಪಿಸಿರುವ ಅವರು, ಈ ವಿಷಯವನ್ನು ಮುಚ್ಚಿ ಹಾಕಲು ಚುನಾವಣಾ ಆಯೋಗ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತ ದಾಖಲಾಗಿರುವ ಮತದಾರರ ವಿವರಗಳು ಹಾಗೂ ಸಿ.ಸಿ ಟಿ.ವಿ ದೃಶ್ಯಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಪ್ರತಿನಿಧಿಸುವ ಕ್ಷೇತ್ರದಲ್ಲಿ, ಚುನಾವಣೆಗೂ ಆರು ತಿಂಗಳು ಮೊದಲು 29 ಸಾವಿರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗಿತ್ತು. ಈ ರೀತಿ ಮಾಡುವಾಗ ಕಡ್ಡಾಯವಾಗಿ ಕೈಗೊಳ್ಳಬೇಕಿದ್ದ ಪರಿಶೀಲನೆಯನ್ನು ನಡೆಸಿರಲಿಲ್ಲ ಎಂಬ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ವರದಿಗಳನ್ನು ಉಲ್ಲೇಖಿಸಿ, ರಾಹುಲ್ ಗಾಂಧಿ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ.
ಅಪರಿಚಿತ ವ್ಯಕ್ತಿಗಳು ಮತ ಚಲಾಯಿಸುತ್ತಿದ್ದರು ಎಂದು ಬೂತ್ ಮಟ್ಟದ ಅಧಿಕಾರಿಗಳೇ ದೂರು ಸಲ್ಲಿಸಿದ್ದಾರೆ. ಪರಿಶೀಲನೆಗೆ ಒಳಗಾಗದೇ ಇರುವ ಸಾವಿರಾರು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು ಎಂಬುದನ್ನು ಸಹ ಮಾಧ್ಯಮಗಳು ಬಹಿರಂಗಪಡಿಸಿವೆ. ಮತದಾನದ ಸಂದರ್ಭದಲ್ಲಿ ಇಂತಹ ಅಕ್ರಮಗಳನ್ನು ಕುರಿತು ಚುನಾವಣಾ ಆರೋಗ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರೆ ಇಂತಹ ಅಕ್ರಮಕ್ಕೆ ಕೈಜೋಡಿಸಿತ್ತುಎಂದೇ ಅರ್ಥ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡುವಿನ ಆರು ತಿಂಗಳ ಅವಧಿಯಲ್ಲಿ, ಫಡಣವೀಸ್ ಪ್ರತಿನಿಧಿಸುವ ನಾಗ್ಪುರ (ನೈರುತ್ಯ) ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ, ಮತದಾರರ ಸಂಖ್ಯೆಯಲ್ಲಿ ಶೇ.8.25ರಷ್ಟು ಹೆಚ್ಚಳ ಕಂಡುಬಂದಿತ್ತು. ಕೆಲ ಬೂತ್ ಗಳಲ್ಲಿ ಮತದಾರರ ಸಂಖ್ಯೆಯಲ್ಲಿಶೇ. 20 ರಿಂದ ಶೇ. 50ರಷ್ಟು ಹೆಚ್ಚಳವಾಗಿತ್ತು ಎಂದು ‘ನ್ಯೂಸ್ಲಾಂಡ್ರಿ’ ವರದಿ ಮಾಡಿತ್ತು.
ಹೊಸದಾಗಿ ಸೇರ್ಪಡೆಯಾಗುವ ಮತದಾರರ ಪ್ರಮಾಣ ಶೇ. 4ಕ್ಕಿಂತ ಹೆಚ್ಚಾಗಿದ್ದರೆ ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು ಎಂದು ಚುನಾವಣಾ ಆಯೋಗದ ನಿಯಮವೇ ಹೇಳುತ್ತದೆ. ಆದರೆ, ಈ ಕ್ಷೇತ್ರದಲ್ಲಿನ ಹೆಚ್ಚಳ ಶೇ. 8.25ರಷ್ಟಿದ್ದರೂ, ಹಲವು ಮತಗಟ್ಟೆಗಳಲ್ಲಿ ಪರಿಶೀಲನೆ ನಡೆಸಿಲ್ಲ ಎಂದು ವರದಿ ಆರೋಪಿಸಿದೆ.
ಈ ಕ್ಷೇತ್ರದ ಕನಿಷ್ಠ 4 ಸಾವಿರ ಮತದಾರರಿಗೆ ವಿಳಾಸವೇ ಇಲ್ಲ. ಶೇ. 70ರಷ್ಟು ಬೂತ್ಗಳಲ್ಲಿ ಹೊಸದಾಗಿ ಸೇರ್ಪಡೆ ಮಾಡಲಾದ ಮತದಾರರ ಪ್ರಮಾಣ ಶೇ.4ಕ್ಕಿಂತಲೂ ಹೆಚ್ಚು. ಶೇ. 26ರಷ್ಟು ಬೂತ್ ಗಳಲ್ಲಿ ಈ ಪ್ರಮಾಣ ಶೇ. 20ರಷ್ಟು ಮತ್ತು ನಾಲ್ಕು ಬೂತ್ಗಳಲ್ಲಿ ಶೇ 40ಕ್ಕಿಂತಲೂ ಹೆಚ್ಚಿತ್ತು ‘ನ್ಯೂಸ್ಲಾಂಡ್ರಿ’ ವರದಿ ಮಾಡಿದೆ.
ಖಾಸಗಿತನ ಸಂರಕ್ಷಣೆ ಕಾರಣಕ್ಕಾಗಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತಗಟ್ಟೆಗಳಿಗೆ ಸಂಬಂಧಿಸಿದ ಸಿ.ಸಿ ಟಿ.ವಿ ದೃಶ್ಯಗಳನ್ನು ಹಂಚಿಕೊಳ್ಳಲು ಚುನಾವಣಾ ಆಯೋಗ ಇತ್ತೀಚೆಗೆ ನಿರಾಕರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.