ನವದೆಹಲಿ: ಇರಾನ್ ಪರಮಾಣು ಘಟಕಗಳ ಮೇಲೆ ಅಮೆರಿಕ ಭೀಕರ ದಾಳಿ ನಡೆಸಿದ್ದರೂ ಮೌನ ವಹಿಸಿರುವ ಪ್ರಧಾನಿ ನೃೇಂದ್ರ ಮೋದಿ ಮತ್ತು ಅವರ ಸರ್ಕಾರದ ದಿವ್ಯ ಮೌನವನ್ನು ಕಾಂಗ್ರೆಸ್ ಕಟುವ ಶಬ್ಧಗಳಲ್ಲಿ ಖಂಡಿಸಿದೆ. ಪ್ರಧಾನಿ ಮೋದಿ ಸರ್ಕಾರದ ಮೌನವನ್ನು ಪ್ರತಿಭಟಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪಕ್ಷದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಒಂದು ಕಡೆ ಇರಾನ್ ಮೇಲೆ ಅಮೆರಿಕ ಇರಾನ್ ಮೇಲೆ ದಾಳಿ ನಡೆಸುತ್ತಿದೆ. ಮತ್ತೊಂದು ಕಡೆ ಹಲವು ದಿನಗಳಿಂದ ಇಸ್ರೇಲ್ ಇರಾನ್ ಮೇಲೆ ಆಕ್ರಮಣ ನಡೆಸುತ್ತಲೇ ಇದ್ದರೂ ಪ್ರಧಾನಿ ಮೋದಿ ತುಟಿ ಬಿಚ್ಚುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಷಯದಲ್ಲಿ ಭಾರತ ಮತ್ತಷ್ಟು ನೈತಿಕ ಸ್ಥೈರ್ಯ ತೋರಬೇಕು ಎಂದೂ ಆಗ್ರಹಪಡಿಸಿದೆ. ಇದುವರೆಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇರಾನ್ ಮೇಲೆ ಅಮೆರಿಕದ ದಾಳಿ ಹಾಗೂ ಇಸ್ರೇಲ್ ನ ಆಕ್ರಮಣವನ್ನು ಖಂಡಿಸಿಲ್ಲ. ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ನರ ಮೇಲೆ ನಡೆಯುತ್ತಿರುವ ನರಮೇಧದ ಕುರಿತೂ ಮೌನ ತಾಳಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ ಬಳಿಕ ಮಾತುಕತೆ ನಡೆಸಬೇಕೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯು ಹಾಸ್ಯಾಸ್ಪದವಾಗಿದೆ. ಇರಾನ್ ಹಾಗೂ ಇಸ್ರೇಲ್ ನಲ್ಲಿ ಸಂಘರ್ಷ ಉಲ್ಬಣಗೊಳ್ಳುತ್ತಲೇ ಇದೆ. ಈ ನಿಟ್ಟಿನಲ್ಲಿ ರಾಜತಾಂತ್ರಿಕತೆ ಮೂಲಕ ಬಿಕ್ಕಟ್ಟು ಶಮನಗೊಳಿಸುವ ಅಗತ್ಯತೆ ಕುರಿತಾಗಿಯೂ ಕಾಂಗ್ರೆಸ್ ಪ್ರತಿಪಾದಿಸಿದೆ.