ಮುಂಬೈ: ಮಸ್ಕತ್ ನಿಂದ ಕೊಚ್ಚಿ ಮೂಲಕ ದೆಹಲಿಗೆ ಹೋಗುತ್ತಿದ್ದ ಇಂಡಿಗೊ ವಿಮಾನಕ್ಕೆ ಇಂದು ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಿಳಿಸಿದ್ದಾರೆ. ವಿಮಾನದಲ್ಲಿ 157 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಸೇರಿ 163 ಮಂದಿ ಪ್ರಯಾಣಿಸುತ್ತಿದ್ದರು.
ಇಂಡಿಗೊ ವಿಮಾನದ ಅಧಿಕೃತ ಇ-ಮೇಲ್ ಖಾತೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಕೂಡಲೇ ಬಾಂಬ್ ಬೆದರಿಕೆ ಪರಿಶೀಲನಾ ಸಮಿತಿಯನ್ನು (ಬಿಟಿಎಸಿ) ಸಂಪರ್ಕಿಸಿ ನಂತರ ವಿಮಾನ ತಪಾಸಣೆಗಾಗಿ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವಷ್ಟೇ ದೆಹಲಿಯತ್ತ ಪ್ರಯಾಣ ಬೆಳೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಂಡನ್ ಗೆ ಹೋಗಬೇಕಿದ್ದ ವಿಮಾನ ರದ್ದು:
ಇಂದು ಮಧ್ಯಾಹ್ನ ಅಹಮದಾಬಾದ್ ನಿಂದ ಲಂಡನ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವನ್ನು ಕಾರ್ಯಾಚರಣೆ ಸಮಸ್ಯೆಗಳ ಕಾರಣಕ್ಕಾಗಿ ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಏರ್ ಇಂಡಿಯಾ ವಿಮಾನ ಹಠಾತ್ ಆಗಿ ರದ್ದುಗೊಂಡಿದ್ದರ ಪರಿಣಾಮ ಪ್ರಯಾಣಿಕರು ತೊಂದರೆಗೆ ಒಳಗಾಗಿದ್ದಾರೆ.
ಅಹಮದಾಬಾದ್ನಿಂದ ಲಂಡನ್ ನ ಗಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಎಐ-159 ವಿಮಾನ ರದ್ದುಗೊಂಡಿದೆ. ಈ ವಿಮಾನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಮಧ್ಯಾಹ್ನ 3 ಗಂಟೆಗೆ ವಿಮಾನ ಹೊರಡಬೇಕಿತ್ತು.
ಅಹಮದಾಬಾದ್ನಲ್ಲಿ ಸಂಭವಿಸಿದ ವಿಮಾನ ದುರಂತದ ಬಳಿಕ ಎಐ-171 ಎಂಬ ಕೋಡ್ ಹೆಸರನ್ನು ಎಐ-159 ಎಂದು ಬದಲಿಸಿ ಸೋಮವಾರದಿಂದ ಕಾರ್ಯಾಚರಣೆ ಪುನರರಾಂಭಿಸಲಾಗಿತ್ತು. ವಿಮಾನ ರದ್ದುಗೊಂಡಿರುವುದಕ್ಕೆ ಸಂಬಂಧಿಸಿದಂತೆ ನಿಖರ ಕಾರಣ ತಿಳಿದು ಬಂದಿಲ್ಲ.
ಮತ್ತೊಂದು ಪ್ರಕರಣದಲ್ಲಿ ಇಂದು ಮಧ್ಯಾಹ್ನ ಅಹಮದಾಬಾದ್ ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವನ್ನು ಕಾರ್ಯಾಚರಣೆ ಸಮಸ್ಯೆಗಳಿಂದಾಗಿ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.