ಸಿಖ್ ವ್ಯಕ್ತಿ ಮೇಲೆ ಚಪ್ಪಲಿ ಎಸೆತ: ಕೇಂದ್ರ ಶಿಕ್ಷಣ ಸಚಿವ ಮಜುಂದಾರ್‌ ವಿರುದ್ಧ ಎಫ್‌ ಐ ಆರ್

Most read

ಕೋಲ್ಕತ್ತ: ಸಿಖ್ ವ್ಯಕ್ತಿಯೊಬ್ಬರ  ಮೇಲೆ ಚಪ್ಪಲಿ ಎಸೆದ ಆರೋಪದ ಮೇಲೆ ಕೇಂದ್ರ ಶಿಕ್ಷಣ ಸಚಿವಾಲಯದ ರಾಜ್ಯ ಖಾತೆ ಸಚಿವ, ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆದ ಸುಕಾಂತ ಮಜುಂದಾ‌ರ್ ವಿರುದ್ಧ ಕೋಲ್ಕತ್ತದ ಪೊಲೀಸ್ ಠಾಣೆಯಲ್ಲಿ ಎಫ್‌ ಐ ಆರ್ ದಾಖಲಾಗಿದೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ತಿಳಿಸಿದೆ.

ಈ ತಿಂಗಳ 13ರಂದು ದಕ್ಷಿಣ ಕೋಲ್ಕತ್ತದ ಕಾಲಿಫಾಟ್ ಪೊಲೀಸ್ ಠಾಣೆಯಲ್ಲಿ ಸುಕಾಂತ ಮಜುಂದಾರ್ ವಿರುದ್ಧ ಎಫ್‌ ಐ ಆ‌ರ್ ದಾಖಲಿಸಲಾಗಿದೆ. ಜೂನ್ 12ರಂದು ಮಜುಂದಾರ್ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದ ಹತ್ತಿರದ ಹೆಜ್ರಾ ರಸ್ತೆ ಮತ್ತು ಹರೀಶ್ ಚಟರ್ಜಿ ಬೀದಿಯಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಸಿಖ್ ವ್ಯಕ್ತಿಯೊಬ್ಬರ ಮೇಲೆ ಚಪ್ಪಲಿ ಎಸೆದಿದ್ದಾರೆ ಎಂದು ಎಫ್‌ ಐ ಆರ್‌ ನಲ್ಲಿ ಉಲ್ಲೇಖಿಸಲಾಗಿದೆ.

ಸಚಿವ ಮಜುಂದಾ‌ರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿ ಎನ್‌ ಎಸ್) ಸೆಕ್ಷನ್ 302 (ಧಾರ್ಮಿಕ ಭಾವನೆಗಳಿಗೆ ಹಾನಿ ಮಾಡುವ ಉದ್ದೇಶ) ಮತ್ತು 115(2) (ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಸಚಿವ ಮಜುಂದಾರ್ ವಿರುದ್ಧ ಪಶ್ಚಿಮ ಬಂಗಾಳದ ಅಡಳಿತಾರೂಢ ಟಿಎಂಸಿ, ಸಿಖ್ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಜುಂದಾರ್ ಅವರು ಕೂಡಲೇ ಬೇಷರತ್ ಕ್ಷಮೆಯಾಚಿಸಬೇಕು, ಇಲ್ಲವಾದಲ್ಲಿರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದರೆ ಈ ಆರೋಪಗಳನ್ನು ಬಿಜೆಪಿ ನಿರಾಕರಿಸಿದ್ದು, ಸಚಿವ ಮಜುಂದಾರ್‌ ಅವರು ಇಂತಹ ಕೃತ್ಯ ಎಸಗಿಲ್ಲ ಎಂದು ಸ್ಪಷ್ಟನೆ ನೀಡಿದೆ.

More articles

Latest article