ತುಮಕೂರು:ದಲಿತ ಸಮುದಾಯಕ್ಕೆ ಸೇರಿದ ಟಿವಿ ಚಾನೆಲ್ ವರದಿಗಾರ ಮಂಜುನಾಥ್ ಮೇಲೆ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಮತ್ತೊಂದು ಟಿವಿ ಚಾನೆಲ್ ವರದಿಗಾರ ಆರೋಪಿ ಮಂಜುನಾಥ್ ತಾಳಮಕ್ಕಿಯನ್ನು
ಜಿಲ್ಲೆಯಿಂದ ಗಡೀಪಾರು ಮಾಡಬೇಕು. ಮಾನಸಿಕ ಅಸ್ವಸ್ಥನಾಗಿರುವ ಆತನಿಗೆ ಸೂಕ್ತಿ ಚಿಕಿತ್ಸೆ ಕೊಡಿಸಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಗತಿ ಪರ ಚಿಂತಕ ದೊರೈರಾಜು, ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ದಲಿತ ಸಮುದಾಯದ ವರದಿಗಾರ ಮಂಜುನಾಥ್ ಮೇಲೆ ಮಂಜುನಾಥ್ ತಾಳಮಕ್ಕಿ ಹಲ್ಲೆ ಮತ್ತು ಜಾತಿ ನಿಂದನೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಜಾತಿನಿಂದನೆ ಪ್ರಕರಣವನ್ನಷ್ಟೇ ದಾಖಲಿಸಿಕೊಂಡಿದ್ದು, ಹಲ್ಲೆ ಪ್ರಕರಣವನ್ನು ಕೈಬಿಟ್ಟಿದ್ದಾರೆ. ಆದ್ದರಿಂದ ಎಫ್ ಐಆರ್ ನಲ್ಲಿ ಹಲ್ಲೆ ಮಾಡಿರುವುದನ್ನು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.
ಮಂಜುನಾಥ್ ತಾಳಮಕ್ಕಿ ಮಾನಸಿಕ ಅಸ್ವಸ್ಥನಾಗಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾನೆ. ಈತ ಮಾನಸಿಕ ಸ್ಥಿಮಿತ ಕಳೆದುಕೊಂಡು ಗಣ್ಯರು, ಅತಿ ಗಣ್ಯರಿಗೆ ಅಪಾಯ ಉಂಟು ಮಾಡಬಹುದಾದ ಅವಕಾಶ ಹೆಚ್ಚಿರುವುದರಿಂದ ಆತನಿಗೆ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸ ಬೇಕು ಎಂದೂ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೊಲೆ, ದೌರ್ಜನ್ಯ, ಅಸ್ಪೃಶ್ಯತೆ ಆಚರಣೆ ದೂರುಗಳ ವಿರುದ್ಧ ಪ್ರತಿ ದೂರುಗಳನ್ನು ದಾಖಲಿಸಬಾರದು. ಮಧುಗಿರಿ ತಾಲ್ಲೂಕು ಕವಣದಾಲ ಗ್ರಾಮದಲ್ಲಿ ದೇವಾಲಯ ಪ್ರವೇಶವನ್ನು ನಿರ್ಬಂಧಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಎಲ್ಲ ದೇಗುಲ ಗಳಲ್ಲಿಯೂ ದಲಿತರಿಗೆ ದೇವಾಲಯಕ್ಕೆ ಮುಕ್ತ ಪ್ರವೇಶ ಎಂಬ ನಾಮಫಲಕ ಅಳವಡಿಸಬೇಕು. ಹಾಗೂ ಈ ಬಗ್ಗೆ ಅರಿವು ಮೂಡಿಸಲು ಜಿಲ್ಲೆಯ ಎಲ್ಲಾ ತಾಲ್ಲೂಕು ದಂಡಾಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದೂ ಒಕ್ಕೂಟದ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.
ಮುಖಂಡರಾದ ನರಸೀಯಪ್ಪ, ನರಸಿಂಹಯ್ಯ, ನಿಟ್ಟೂರು ರಂಗಸ್ವಾಮಿ ದೊಡ್ಡಯ್ಯ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಎಂ.ಕೆ. ಸುಬ್ರಹ್ಮಣ್ಯ, ಡಿ.ಎಸ್.ಎಸ್. ಸಂಚಾಲಕ ಪಿ.ಎನ್.ರಾಮಯ್ಯ, ಬೇವಿನಹಳ್ಳಿ ಚನ್ನಬಸವಯ್ಯ, ರಾಮಯ್ಯ ಸೇರಿದಂತೆ ಜಿಲ್ಲೆಯ ದಲಿತ ಪರ, ಪ್ರಗತಿ ಪರ ಸಂಘನೆಯ ಮುಖಂಡರು ಇದ್ದರು.