ಸಂತೆಯಲ್ಲಿ ಕನ್ನಡ ಸಾಹಿತ್ಯ: ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿನೂತನ ಯೋಜನೆ

Most read

ಬೆಂಗಳೂರು: ಶ್ರೀಸಾಮಾನ್ಯರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲು ಕರ್ನಾಟಕ ಸಾಹಿತ್ಯ ಅಕಾಡೆಮಿ ‘ಸಂತೆಯಲ್ಲಿ ಕನ್ನಡ ಸಾಹಿತ್ಯಎಂಬ ವಿನೂತನ ಕಾರ್ಯಕ್ರಮವನ್ನು ರೂಪಿಸಿದೆ.

ಕಾರ್ಯಕ್ರಮದ ವಿವರ ಹಂಚಿಕೊಂಡ ಅಕಾಡೆಮಿ ಅಧ್ಯಕ್ಷ ಎಲ್.ಎನ್‌. ಮುಕುಂದರಾಜ್, ಸಾಹಿತ್ಯ ನಗರ ಪ್ರದೇಶಗಳಲ್ಲಿ ಇರುವವರಿಗೆ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿರುವ ಜನಸಾಮಾನ್ಯರಿಗೂ ತಲುಪಬೇಕು. ನಮ್ಮ ಜನಪದರು ಕಲಿತದ್ದೇ ಸಂತೆ ಮತ್ತು ಜಾತ್ರೆಗಳಲ್ಲಿ. ಕನ್ನಡ ಸಾಹಿತ್ಯ ಕಟ್ಟಿಕೊಟ್ಟ ಸೌಹಾರ್ದ ಸಂಬಂಧಗಳನ್ನು, ಮಾನವೀಯ ಮೌಲ್ಯಗಳನ್ನು ಜನರಿಗೆ ತಲುಪಿಸಬೇಕಿದೆ. ಜನ ಸಾಮಾನ್ಯರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಬೇಕಾದರೆ ಆತ ಇರುವ ಸ್ಥಳಕ್ಕೆ ಹೋಗಿ, ಅವರಿಗೆ ಪಂಪ, ಕುಮಾರವ್ಯಾಸ, ಕುವೆಂಪು, ಬೇಂದ್ರೆ ಮೊದಲಾದ ಮಹಾನ್‌ ವ್ಯಕ್ತಿಗಳನ್ನು ಕುರಿತು ಹೇಳಬೇಕಾಗುತ್ತದೆ. ಆದ್ದರಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ವ್ಯಾಪಾರಿಗಳು ಹಾಗೂ ಗ್ರಾಹಕರೇ ಇದರ ಪ್ರೇಕ್ಷಕರಾಗಿರುತ್ತಾರೆ ಎಂದು ಹೇಳಿದರು. 

ಸಂತೆಯಲ್ಲಿ ಕನ್ನಡ ಸಾಹಿತ್ಯ ಕಾರ್ಯಕ್ರಮ ಸರಣಿಯ ಪ್ರಥಮ ಕಾರ್ಯಕ್ರಮ ಇದೇ 13ರಂದು ತುಮಕೂರಿನ ಕುಣಿಗಲ್ ತಾಲ್ಲೂಕಿನ ಎಡೆಯೂರು ಗ್ರಾಮದ ಸಂತೆ ಮೈದಾನದಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ವಿವಿಧ ಸಂತೆಗಳಲ್ಲಿ ಈ ಕಾರ್ಯಕ್ರಮ ನಡೆಸಿ, ಸಾಹಿತ್ಯಾಭಿರುಚಿ ಬೆಳೆಸಲಾಗುವುದು ಎಂದು ವಿವರಿಸಿದರು. 

ನಾಡಿನ ಶ್ರೇಷ್ಠ ಸಾಧಕರನ್ನು ಪರಿಚಯಿಸುವ ಉದ್ದೇಶದಿಂದ ‘ಕನ್ನಡ ಭಾರತಿ ಶೀರ್ಷಿಕೆಯಡಿ 150 ಪುಸ್ತಕಗಳನ್ನು ಹೊರತರಲಾಗುತ್ತಿದೆ. ಸಾಹಿತ್ಯ, ಸಂಸ್ಕೃತಿ, ರಾಜಕೀಯ, ಆಡಳಿತ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳ 150 ಸಾಧಕರ ಬಗ್ಗೆ 150 ಲೇಖಕರು ಬರೆದುಕೊಡಲಿದ್ದಾರೆ. ಈ ವರ್ಷ 100 ಪುಸ್ತಕಗಳನ್ನು ಪ್ರಕಟಿಸಲಾಗುವುದು. ಉಳಿದ ಪುಸ್ತಕಗಳನ್ನು ಮುಂದಿನ ದಿನಗಳಲ್ಲಿ ಹೊರತರಲಾಗುವುದು ಎಂದು ಮುಕುಂದರಾಜ್ ಹೇಳಿದರು. 

ರಾಮ ಮನೋಹರ ಲೋಹಿಯಾ ಮೊದಲಾದ ಮಹನೀಯರ ಪುಸ್ತಕಗಳಲ್ಲಿನ ಸೌಹಾರ್ದ ಅಂಶಗಳನ್ನು ಕ್ರೊಡೀಕರಿಸಿ, ಪುಸ್ತಕಗಳನ್ನು ಹೊರತರಲು ಉದ್ದೇಶಿಸಲಾಗಿದೆ. ಮತೀಯ ದ್ವೇಷ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಇಂತಹ ಪುಸ್ತಕಗಳು ಅಗತ್ಯವಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಪನ್ಯಾಸ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಮಹಿಳಾ ಮುನ್ನಡೆ ಶೀರ್ಷಿಕೆಯಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 50 ಮಹಿಳಾ ಸಾಧಕರ ಬಗ್ಗೆ 50 ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ರೂಪಿಸಿದ್ದು, ಪುಸ್ತಕಗಳು ಮುದ್ರಣದ ಹಂತದಲ್ಲಿವೆ ಎಂದು ತಿಳಿಸಿದರು. 

ಕಾರಾಗೃಹ ಸಾಹಿತ್ಯ ಕಮ್ಮಟ ವಿಸ್ತರಣೆ:

ಮೈಸೂರಿನ ಕಾರಾಗೃಹದಲ್ಲಿ ಕೈದಿಗಳಿಗೆ ಸಾಹಿತ್ಯ ಕಮ್ಮಟ ನಡೆಸಲಾಗಿದ್ದು ಅಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಹಿತ್ಯ ಸೃಷ್ಟಿಗೆ ಕೈದಿಗಳು ಆಸಕ್ತಿ ತೋರಿದ್ದಾರೆ. ಆದ್ದರಿಂದ ರಾಜ್ಯದಲ್ಲಿರುವ ಎಲ್ಲ ಕಾರಾಗೃಹಗಳಲ್ಲಿ ಅಕಾಡೆಮಿ ವತಿಯಿಂದ ಸಾಹಿತ್ಯ ಕಮ್ಮಟ ನಡೆಸಲು ನಿರ್ಧರಿಸಲಾಗಿದೆ. ಕೈದಿಗಳಿಗೆ ಬಸವಾದಿ ಶರಣರು ಹಾಗೂ ಸಾಹಿತ್ಯವನ್ನು ಪರಿಚಯಿಸುವುದರಿಂದ ಅವರಲ್ಲಿ ಅಲ್ಪಸ್ವಲ್ಪವಾದರೂ ಬದಲಾವಣೆ ಸಾಧ್ಯವಾಗಲಿದೆ ಎಂದು ಎಲ್.ಎನ್. ಮುಕುಂದರಾಜ್ ಹೇಳಿದರು

ಯುವಜನರನ್ನು ಕೃಷಿಯ ಕಡೆಗೆ ಬೇಸಾಯಗಾರರನ್ನು ಸಾಹಿತ್ಯದ ಕಡೆಗೆ ಆಕರ್ಷಿಸುವ ಉದ್ದೇಶದಿಂದ ‘ಬೇಸಾಯದ ಬದುಕು ಯೋಜನೆ ರೂಪಿಸಲಾಗಿದೆ. ಕೃಷಿ ಕ್ಷೇತ್ರದ 50 ಸಾಧಕರ ಬಗ್ಗೆ 50 ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ ಎಂದೂ ಅವರು ಹೇಳಿದರು.

More articles

Latest article