ಲಲಿತ್ ಪುರ: ಉತ್ತರ ಪ್ರದೇಶದ ಲಲಿತಪುರ್ ಸಮೀಪ ಗೋಧಿ ಹೊಲವೊಂದರಲ್ಲಿ ಪತ್ತೆಯಾಗಿದ್ದ 12 ಅಡಿ ಉದ್ದದ ಬೃಹತ್ ಮೊಸಳೆಯನ್ನು ಜೆಸಿಬಿ ಬಳಸಿ ರಕ್ಷಿಸಲಾಗಿದೆ.
ಗೋಧಿ ಹೊಲಕ್ಕೆ ಮೊಸಳೆ ಬಂದಿರುವುದನ್ನು ಸ್ಥಳೀಯರು ಅರಣ್ಯ ಇಲಾಖೆಗೆ ತಿಳಿಸಿದ್ದರು. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ತೆಗೆದುಕೊಂಡು ಹೊಲಕ್ಕೆ ಆಗಮಿಸಿದ್ದರು. ಮೊದಲು ಹಗ್ಗದಿಂದ ಬೃಹತ್ ಮೊಸಳೆಯನ್ನು ರಕ್ಷಿಸಲು ಪ್ರಯತ್ನಿಸಲಾಗಿದೆ. ಆದರೆ, ಅದು ಸಾದ್ಯವಾಗಿಲ್ಲ. ಕೊನೆಗೆ ಜೆಸಿಬಿ ಯಂತ್ರ ಬಳಸಿ ಬೃಹತ್ ಮೊಸಳೆಯನ್ನು ಒಂದೇ ಯತ್ನದಲ್ಲಿ ಟ್ರ್ಯಾಕ್ಟರ್ ಒಳಗೆ ಎಸೆಯಲಾಗಿದೆ. ಈ ಕಾರ್ಯಾಚರಣೆ ಮಾಡುವಾಗ ಜೆಸಿಬಿಯ ಸಲಕರಣೆಯ ಕಬ್ಬಿಣದ ಹಲ್ಲುಗಳು ಮೊಸಳೆಗೆ ತಾಗಿ ಗಾಯವಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕಾರ್ಯವೈಖರಿಗೆ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ. ವನ್ಯಪ್ರಾಣಿಗಳನ್ನು ಹೇಗೆ ರಕ್ಷಣೆ ಮಾಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿದಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ. ಇದರಿಂದ ಉತ್ತರ ಪ್ರದೇಶದ ಅರಣ್ಯ ಇಲಾಖೆ ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ.