ಮೈನ್ ಪುರಿ: ಉತ್ತರಪ್ರದೇಶದ ಮೈನ್ ಪುರಿ ಜಿಲ್ಲೆಯ ದಿಹುಲಿ ಎಂಬ ಗ್ರಾಮದಲ್ಲಿ 44 ವರ್ಷಗಳ ಹಿಂದೆ ನಡೆದಿದ್ದ 24 ದಲಿತರ ಹತ್ಯೆ ಪ್ರಕರಣದಲ್ಲಿ ಡಕಾಯಿತರ ಗುಂಪಿನ ಮೂವರನ್ನು ಅಪರಾಧಿಗಳು ಎಂದು ಘೋಷಿಸಿರುವ ನ್ಯಾಯಾಲಯ ಇವರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ಕಪ್ತಾನ್ ಸಿಂಗ್, ರಾಮ್ ಪಾಲ್ ಮತ್ತು ರಾಮ್ ಸೇವಕ್ ಎಂಬುವವರು ದಿಹುಲಿ ದಲಿತ್ ಹತ್ಯಾಕಾಂಡದ ಅಪರಾಧಿಗಳಾಗಿದ್ದು, ಇವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ವಿಶೇಷ ನ್ಯಾಯಾಧೀಶ ಇಂದಿರಾ ಸಿಂಗ್ ಘೋಷಿಸಿದ್ದಾರೆ. 1981ರ ನ. 18ರಂದು ನಡೆದ ಈ ಹತ್ಯಾಕಾಂಡದಲ್ಲಿ ಸಂತೋಷ್ ಸಿಂಗ್ ಎಂಬ ಡಕಾಯಿತರ ಗುಂಪಿನ ನಾಯಕನ ಅಜ್ಞೆಯಂತೆ ರಾಧೇ ಶ್ಯಾಮ್ ಎಂಬಾತ ದಿಹುಲಿ ಗ್ರಾಮದ ದಲಿತ ಸಮುದಾಯದ ಮೇಲೆ ದಾಳಿ ನಡೆಸಿದ್ದ. ಗುಂಡಿನ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿ 24 ಜನ ಮೃತಪಟ್ಟಿದ್ದರು. ನಂತರ ಅವರ ಬಳಿ ಇದ್ದ ನಗದು ಮತ್ತಿತರ ವಸ್ತುಗಳನ್ನು ದೋಚಿದ್ದರು. ಈ ಕುರಿತು ಜಸರಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಡಕಾಯಿತರ ತಂಡದ ಮುಖಂಡ ಸಂತೋಷ್ ಮತ್ತು ರಾಧೇ ಒಳಗೊಂಡು 17 ಜನರ ವಿರುದ್ಧ ದೋಷಾರೋಪ ಸಲ್ಲಿಸಿದ್ದರು. ವಿಚಾರಣೆ ಹಂತದಲ್ಲಿ 17 ಆರೋಪಿಗಳಲ್ಲಿ ಸಂತೋಷ್ ಮತ್ತು ರಾಧೇ ಸೇರಿ 13 ಜನ ಮೃತಪಟ್ಟಿದ್ದಾರೆ. ಬದುಕುಳಿದಿರುವ ನಾಲ್ವರಲ್ಲಿ 40 ವರ್ಷಗಳ ಬಳಿಕವೂ ಒಬ್ಬ ನಾಪತ್ತೆಯಾಗಿದ್ದಾನೆ. ಉಳಿದ ಮೂವರು ವಿಚಾರಣೆ ಎದುರಿಸಿದ್ದರು.
ಬದುಕುಳಿದ ಮೂವರನ್ನು ಅಪರಾಧಿಗಳು ಎಂದು ಮಾರ್ಚ್ 12 ರಂದು ನ್ಯಾಯಾಲಯ ಘೋಷಿಸಿತ್ತು. ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಿದೆ. ಈ ಘಟನೆ ನಡೆದ ನಂತರ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಹತ್ಯಾಕಾಂಡ ಖಂಡಿಸಿ ದಿಹುಲಿಯಿಂದ ಫಿರೋಝಾಬಾದ್ನ ಸಾದುಪುರ್ವರೆಗೆ ಪಾದಯಾತ್ರೆ ಕೈಗೊಂಡಿದ್ದರು.