ಪಂಜಾಬ್ ರಾಜ್ಯದ ಮೊಗ ಎಂಬಲ್ಲಿ ಶಿವಸೇನೆ ಶಿಂದೆ ಬಂಕಕೆ ಸೇರಿದ ನಾಯಕರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಘಟನೆಯಲ್ಲಿ ಓರ್ವ ಬಾಲಕ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಕನಾಥ ಶಿಂದೆ ಬಣದ ಶಿವನಸೇನಾದ ಮೊಗ ಜಿಲ್ಲಾಧ್ಯಕ್ಷ ಮಂಗತ್ ರೈ ಅಲಿಯಾಸ್ ಮಂಗ (52) ಸಾವಿಗೀಡಾದ ನಾಯಕ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಹಾಲು ಖರೀದಿಸಲು ಮಂಗ ಅವರು ಮನೆಯಿಂದ ಅಂಗಡಿಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಮೂವರು ಅಪರಿಚಿತರು ದಾಳಿ ನಡೆಸಿದ್ದಾರೆ. ಮೊದಲು ಹಾರಿಸಿದ ಗುಂಡು ಮಂಗ ಅವರಿಗೆ ಬದಲಾಗಿ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ 12 ವರ್ಷದ ಬಾಲಕನಿಗೆ ತಗುಲಿದೆ. ಕೂಡಲೇ ಮಂಗ ದ್ವಿಚಕ್ರ ವಾಹನ ಏರಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬೆನ್ನತ್ತಿ ಹೋದ ಹಂತಕರು ಮತ್ತೊಮ್ಮೆ ಹಾರಿಸಿದ ಗುಂಡು ಮಂಗ ಅವರಿಗೆ ತಗುಲಿದೆ. ಆರೋಪಿಗಳು ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾರೆ.
ಮಂಗ ಅವರನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾಗಿ ವೈದ್ಯರು ಹೇಳಿದ್ದಾರೆ. ಗಾಯಗೊಂಡಿರುವ ಬಾಲಕನನ್ನು ಮೊಗ ನಾಗರಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗ ಅವರ ಪತ್ನಿ ನೀಡಿದ ದೂರಿನ ಅನ್ವಯ 6 ಮಂದಿ ಹಾಗೂ ಕೆಲ ಅಪರಿಚಿತರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.