ಯುವಕರ ನಿರ್ಲಕ್ಷ್ಯ, ಕೃಷಿ ಕಡೆಗಣನೆ: ಸಚಿವ ಆರ್ ಬಿ ತಿಮ್ಮಾಪೂರ

Most read

ಬಾಗಲಕೋಟೆ:  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ನಿರಾಶಾದಾಯಕವಾಗಿದ್ದು, ಯುವ ಜನತೆ, ಕೃಷಿ ಕ್ಷೇತ್ರವನ್ನು ಕಡೆಗಣಿಸಿ ಚುನಾವಣೆಯನ್ನು ಕೇಂದ್ರೀಕರಿಸಿದ ಬಜೆಟ್ ಆಗಿದೆ.  ದೇಶದಲ್ಲಿ ಯುವಜನತೆಗೆ ಉದ್ಯೋಗ ಸಮಸ್ಯೆ, ಕೃಷಿ ಕ್ಷೇತ್ರದಲ್ಲಿ ರೈತರು ಸಂಕಷ್ಟದಲ್ಲಿದ್ದರೂ ಅವರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಇಂದಿನ ಬಜೆಟ್ ವಿಫಲವಾಗಿದೆ. ಕೃಷಿ, ಆರೋಗ್ಯ, ಶಿಕ್ಷಣ ಸೇರಿದಂತೆ ಪ್ರತಿಯೊಂದು ಕ್ಷೇತ್ರವನ್ನೂ ನಿರ್ಲಕ್ಷಿಸಲಾಗಿದೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪೂರ ಅವರು ಹೇಳಿದ್ದಾರೆ.  ‌.

ಕೃಷಿ ಕ್ಷೇತ್ರದಲ್ಲಿ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸೂಕ್ತ ಬೆಂಬಲ ಬೆಲೆ ದೊರಕಿಸಿಕೊಡಲು ಯೋಜನೆ ರೂಪಿಸಿಲ್ಲ. ಕಡಿಮೆ‌ಬೆಲೆ, ಕೃಷಿ ಸಾಲ ಸಮಸ್ಯೆಗಳ ನಿವಾರಣೆಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ. ಕಟ್ಟಕಡೆಯ ರೈತನಿಗೂ ಕೃಷಿ ಯಂತ್ರೋಪಕರಣಗಳ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಾಂತಿಕಾರಕ ಯೋಜನೆಗಳನ್ನು ರೂಪಿಸಿಲ್ಲ. ಸಣ್ಣ ಕೃಷಿಕರಿಗೆ ಯಾವುದೇ ಸ್ಪಷ್ಟವಾಗಿ ನೆರವು ನೀಡುವ ಯೋಜನೆಗಳನ್ನು ಘೋಷಿಸಿಲ್ಲ. ದೇಶಾದ್ಯಂತ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲು, ಮೂಲ ಸೌಕರ್ಯಗಳನ್ನು ಕಲ್ಪಿಸಲು ಯಾವುದೇ ಸ್ಪಷ್ಟ ಯೋಜನೆಗಳನ್ನು ನಿರೂಪಿಸಿಲ್ಲ ಎಂದಿದ್ದಾರೆ.

ಡಿಜಿಟಲ್ ಶಿಕ್ಷಣಕ್ಕೆ ಆದ್ಯತೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ವಿಪರ್ಯಾಸವೆಂದರೆ ಗ್ರಾಮೀಣ ಮಟ್ಟದಲ್ಲಿ ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆ, ಮೂಲ ಸೌಕರ್ಯಗಳ ಕೊರತೆ, ಡಿಜಿಟಲ್ ಶಿಕ್ಷಣ ನೀಡಲು ಶಾಲೆಗಳಲ್ಲಿ ಸಮಸ್ಯೆ ನಿವಾರಿಸುವ ಬಗ್ಗೆ ಬಜೆಟ್‌ನಲ್ಲಿ ಸ್ಪಷ್ಟತೆ ಇಲ್ಲ‌. ನಿರುದ್ಯೋಗ ಸಮಸ್ಯೆ ಹೆಚ್ಚಿದ್ದು ಉದ್ಯೋಗ ಸೃಷ್ಟಿ ಬಗ್ಗೆ ಯಾವುದೇ ನಿಖರ ಯೋಜನೆ ರೂಪಿಸಿಲ್ಲ. ಎಂಎಸ್‌ಎಂ, ಕೌಶಲ್ಯಾಭಿವೃದ್ದಿ ಹೆಚ್ಚಳಕ್ಕೆ ಯಾವುದೇ ಯೋಜನೆ ರೂಪಿಸಿಲ್ಲ ಎಂದು ಸಚಿವರು ಟೀಕಿಸಿದ್ದಾರೆ‌.  ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಜನರನ್ನು ಓಲೈಸಲು ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದರೇ, ಕರ್ನಾಟಕವನ್ನು, ಕನ್ನಡಿಗರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಸಿಲಿಕಾನ್ ವ್ಯಾಲಿ ಬೆಂಗಳೂರು ಸೇರಿದಂತೆ ಕರ್ನಾಟಕವನ್ನೇ ಕಡೆಗಣಿಸಿದ್ದಾರೆ ಎಂದು ಸಚಿವ ತಿಮ್ಮಾಪೂರರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More articles

Latest article