ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ : ಬಸವರಾಜ ಬೊಮ್ಮಾಯಿ

Most read

ಹುಬ್ಬಳ್ಳಿ: ವೈದ್ಯಕೀಯ ಶಿಕ್ಷಣದಲ್ಲಿ ಸಾರ್ವಜನಿಕರ ಆರೋಗ್ಯದ ಸಲುವಾಗಿ ವಿಶೇಷ ಕೋರ್ಸ್‌ಗಳು ಹಾಗೂ ವಿಶೇಷ ಕೇಡರ್‌ಗಳನ್ನು ನಿರ್ಮಾಣ ಮಾಡಿ, ಬಡವರಿಗೆ ಯಾವುದೇ ರೀತಿಯ ಆರ್ಥಿಕ ಹೊರೆಯಾಗದೇ ಚಿಕಿತ್ಸೆ ನೀಡುವ ವ್ಯವಸ್ಥೆ ಬಂದರೆ ಆರೋಗ್ಯಕರವಾಗಿರುವ ಸಮಾಜ ನಿರ್ಮಾಣವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಅವರು ಇಂದು ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆ ವತಿಯಿಂದ ಏರ್ಪಡಿಸಿದ್ದ ಆರೋಗ್ಯ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತ ದೇಶದಲ್ಲಿ ಬಡತನದ ವ್ಯವಸ್ಥೆ ಬೇರೆ ಬೇರೆ ಸ್ಥರದಲ್ಲಿದೆ. ಅತ್ಯಂತ ಬಡವರು, ಬಡವರು, ಕೆಳ ಮಧ್ಯಮ ವರ್ಗ, ಮಧ್ಯಮ ವರ್ಗ ಹೀಗಿದೆ. ಬಡತನ ಮತ್ತು ಆರೋಗ್ಯದ ನಡುವೆ ಸಂಬಂಧ ಇದೆ. ಇದನ್ನು ಕಾನೂನು ರೂಪಿಸುವವರು ಅರ್ಥ ಮಾಡಿಕೊಳ್ಳಬೇಕು. ಬಡತನ ಎಲ್ಲಿದೆ. ಅಲ್ಲಿ ಸ್ವಚ್ಛತೆ ಹಾಗೂ ಪೌಷ್ಟಿಕ ಆಹಾರದ ಸಮಸ್ಯೆ ಇರುತ್ತದೆ. ಹಲವಾರು ರೋಗಗಳ ಉಲ್ಬಣ, ಮಕ್ಕಳು ಚಿಕ್ಕವರಿದ್ದಾಗ ರೋಗಗಳಿಗೆ ತುತ್ತಾಗಿ ಮುಂದೆ ಅವರು ಸದೃಢ ಆರೋಗ್ಯವಂತ ನಾಗರಿಕರಾಗುವುದಿಲ್ಲ. ನಮ್ಮ ಗಮನ ಬಡವರ ಆರೋಗ್ಯದ ಕಡೆಗೆ ಹೆಚ್ಚು ಒತ್ತು ಕೊಡಬೇಕು. ನಮ್ಮ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ನಾವು ಪಾಶ್ಚಿಮಾತ್ಯ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಇಟ್ಟುಕೊಂಡಿದ್ದೇವೆ. ಅಲ್ಲಿ ಶ್ರೀಮಂತರು ಮಧ್ಯಮ ವರ್ಗ ಎರಡೇ ಇರುವುದು. ಇಲ್ಲಿ ಅತ್ಯಂತ ಬಡವರು ಇರುವುದರಿಂದ ಐದು ವರ್ಷ ಎಂಬಿಬಿಎಸ್, ಎರಡು ವರ್ಷ ಪಿಜಿ, ಒಟ್ಟು ಎಂಟತ್ತು ವರ್ಷ ಕಲಿತು ನಾಲೈದು ಕೋಟಿ ರೂಪಾಯಿ ಖರ್ಚಾಗುತ್ತದೆ. ಸರ್ಕಾರದ ಸೀಟಿದ್ದರೆ ಸರ್ಕಾರದ ಎರಡುಮೂರು ಕೋಟಿ ಖರ್ಚಾಗುತ್ತದೆ. ಆದರೆ, ಅವರು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಶ್ರೀಮಂತರಿಗೆ ಸೇವೆ ಕೊಡುತ್ತಾರೆ. ಮತ್ತೂ ಬಡವರ ಆರೋಗ್ಯ ಸಮಸ್ಯೆ ಹಾಗೇ ಉಳಿಯುತ್ತಿದೆ ಎಂದರು.


ಕೊವಿಡ್ ಸಂದರ್ಭದಲ್ಲಿ ನಮ್ಮ ಆಸ್ಪತ್ರೆಗಳ ಮೂಲ ಸೌಕರ್ಯ ಹೇಗಿತ್ತು ಎಂದು ನಮಗೆ ಅರಿವಿಗೆ ಬಂದಿದೆ. ನಾವು ಕೊವಿಡ್ ಸಂಕಷ್ಟವನು, ಅವಕಾಶವನ್ನಾಗಿ ಪರಿವರ್ತಿಸಿ ಎಲ್ಲಾ ಜಿಲ್ಲಾ ಹಾಗೂ ಪ್ರಮುಖ ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಆಕ್ಸಿಜೆನ್ ‌ ವ್ಯವಸ್ಥೆ ಮಾಡಿದ್ದೇವೆ. ಐಸಿಯು ಕೂಡ ಆಯಿತು. ಅದನ್ನು ಮುಂದುವರೆಸಿಕೊಂಡು ಹೋಗುವ ಕೆಲಸ ಮಾಡಬೇಕು. ಕೆಲವು ಕಡೆ ನಿರ್ವಹಣೆ ಸರಿಯಾಗಿಲ್ಲ. ಹೀಗಾಗಿ ಜನರು ಖಾಸಗಿಯವರ ಕಡೆ ಹೋಗುವಂತಾಗಿದೆ. ಇದರ ಬಗ್ಗೆ ಚಿಂತನೆ ಮಾಡಬೇಕು ಎಂದರು.

ನಾವಿದ್ದಾಗ ಡಯಾಲಿಸಿಸ್ ‌ ಸೈಕಲ್ ಹೆಚ್ಚಳ ಮಾಡಿದ್ದೇವೆ. ನಮ್ಮ ಕ್ಲಿನಿಕ್ ಮಾಡಿದ್ದೇವೆ. ಕಿವಿಗಳಿಗೆ ತೊಂದರೆಯಾದರೆ ಕಾಂಕ್ಲಿಯರ್ ಇನ್ಫಾಂಟ್ ವ್ಯವಸ್ಥೆ ಮಾಡಿದ್ದೇವೆ. ಹಲವಾರು ಸುಧಾರಣೆ ಮಾಡುವ ಅವಶ್ಯಕತೆ ಇದೆ. ಉತ್ತರ ಕರ್ನಾಟಕದ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ಕೊಡುವ ಅವಶ್ಯಕತೆ ಇದೆ. ಇಲ್ಲಿನ ರೋಗಿಗಳು, ಬೆಡ್ ಮತ್ತು ವೈದ್ಯರ ನಡುವಿನ ಅನುಪಾತ ಬಹಳ ವ್ಯತ್ಯಾಸ ಇದೆ. ಅದನ್ನು ಸರಿಪಡಿಸುವ ಕೆಲಸ ಮಾಡಬೇಕು. ಇದು ಬಹಳ ಅವಶ್ಯಕೆ ಇದೆ. ಖಾಸಗಿ ವಲಯದ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಬಡವರ ಪರಿಸ್ಥಿತಿ ಬಹಳ ಕಷ್ಟ ಇದೆ. ನಾವೆಲ್ಲರೂ ಚಿಂತನೆ ಮಾಡಬೇಕಿದೆ. ನಾವೆಲ್ಲ ತಲೆ ಕೆಡಿಸಿಕೊಳ್ಳಬೇಕಿದೆ. ಒಂದು ಲಕ್ಷ ಕಟ್ಟಿದರೆ ಚಿಕಿತ್ಸೆ ನೀಡುತ್ತೇವೆ ಎನ್ನುತ್ತಾರೆ. ಇನ್ಸೂರೆನ್ ಇದ್ದರೆ ಮಾತ್ರ ಚಿಕಿತ್ಸೆ ನೀಡುತ್ತೇವೆ ಎನ್ನುತ್ತಾರೆ. ಎಮರ್ಜೆನ್ಸಿ ಇದೆ ಎನ್ನುತ್ತಾರೆ. ಯಾವುದೂ ಎಮರ್ಜೆನ್ನಿ ಇರುವುದಿಲ್ಲ. ಎಲ್ಲವೂ ಭಷ್ಟಾಚಾರ ಇದನ್ನು ಅಮೂಲಾಗ್ರ ಬದಲಾವಣೆ ಮಾಡಬೇಕು. ಇಡೀ ಸಮಾಜ ಬಡವರ ಪರವಾಗಿ ನಿಂತಾಗ ಮಾತ್ರ ಸಾಧ್ಯ ಇದೆ. ಅದೊಂದು ಕ್ರಾಂತಿ ಆಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಮಾಡಬೇಕಿದೆ ಎಂದು ಹೇಳಿದರು.

ಪತ್ರಿಕೆ ಪಾತ್ರ ಮಹತ್ವದ್ದು

ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳ ಮಹತ್ವ ಭಾರತದಲ್ಲಿ ಪೂಜ್ಯ ಮಹಾತ್ಮಾ ಗಾಂಧಿಗೆ ಗೊತ್ತಿತ್ತು. ಹೀಗಾಗಿ ಅವರು ಸ್ವಂತ ಪತ್ರಿಕೆ ಆರಂಭಿಸಿದ್ದರು. ಆ ಪತ್ರಿಕಾ ಶಕ್ತಿ ಕನ್ನಡ ನಾಡಿನಲ್ಲಿ ಏಕಮಾತ್ರ ಪತಿಕೆ ಕಂಡುಕೊಂಡಿದ್ದು ಸಂಯುಕ್ತ ಕರ್ನಾಟಕ ಹಲವಾರು ಸವಾಲು ಎದುರಿಸಿ ಬೆಳೆದು ನಿಂತಿದೆ. ಅದರ ಕರ್ಮವೀರ, ಕಸೂರಿ ಮ್ಯಾಗಜಿನ್‌ಗಳು ಮನೆ ಮಾತಾಗಿವೆ. ಕರ್ನಾಟಕದ ಏಕೀಕರಣದಲ್ಲಿ ಸಂಯುಕ್ತ ಕರ್ನಾಟಕದ ಪಾತ್ರ ಎಷ್ಟಿತ್ತು ಎಂದರೆ, ಏಕೀಕರಣವನ್ನು ಸಂಯುಕ್ತ ಕರ್ನಾಟಕ ಪ್ರತಿಪಾದಿಸದಿದ್ದರೆ ಏಕೀಕರಣ ಆಗುತ್ತಿರಲಿಲ್ಲ. ಅಷ್ಟು ಮಹತ್ವದ ಪಾತ್ರವಹಿಸಿರುವ ಈ ಪತ್ರಿಕೆ ನಂತರ ಬಂದಿರುವ ಜಾಗತೀಕರಣ, ಉದಾರೀಕರಣದ ಏಳುಬೀಳು ಕಂಡು ಈಗ ಮತ್ತೆ ಪುಟಿದೇಳುವಂತಹ ಸುವರ್ಣಯುಗ ಶತಮಾನೋತ್ಸವ ಆಚರಿಸುತ್ತಿರುವ ಸಂಯುಕ್ತ ಕರ್ನಾಟಕಕ್ಕೆ ಬಂದಿದೆ. ಮುಳುಗುತ್ತಿರುವ ಹಡುಗನ್ನು ಮತ್ತೆ ದಡ ಸೇರಿಸುವ ಕೆಲಸವನ್ನು ಯು.ಬಿ. ವೆಂಕಟೇಶ ಅವರು ಮಾಡುತ್ತಿದ್ದಾರೆ ಎಂದರು.

ಮೊದಲು ಸಾಹಿತಿಗಳು ಪತ್ರಿಕೆ ನಡೆಸಬೇಕು ಎಂದಿತ್ತು ಇವತ್ತಿನ ಕಾಲದಲ್ಲಿ ಎಲ್ಲ ರೀತಿಯ ಆಡಳಿತ ಅವಶ್ಯಕತೆ ಇದೆ ಎಂದು ಯು.ಬಿ.ವೆಂಕಟೇಶ್ ತೋರಿಸಿದ್ದಾರೆ. ಬಹಳ ಕಷ್ಟದಲ್ಲಿತ್ತು. ಅದನ್ನು ಮೇಲೆತ್ತಿದ್ದಾರೆ. ಇನ್ನು ದೊಡ್ಡ ಪ್ರಮಾಣದಲ್ಲಿ ಮಾಡುವ ಇಚ್ಚೆ ಹೊಂದಿದ್ದಾರೆ. ನಮ್ಮ ಅವಧಿಯಲ್ಲಿ ಅವರಿಗೆ 5 ಎಕರೆ ಜಮೀನು ನೀಡಿದ್ದೇವೆ. ಬರುವ ದಿನಗಳಲ್ಲಿ ಒಳ್ಳೆಯ ಭವಿಷ್ಯ ಇದೆ. ಸಾಮಾಜಿಕ ಜವಾಬ್ದಾರಿಯನ್ನೂ ಉತ್ತಮವಾಗಿ ನಿರ್ವಹಿಸುತ್ತ ಬಂದಿದ್ದಾರೆ. ಎಂ.ಎಂ. ಜೋಶಿಯವರು ಇಡೀ ಜೀವನವನ್ನು ಬಡವರಿಗೆ ಬೆಳಕು ನೀಡಿದ್ದಾರೆ. ಬಹಳ ಜನರಿಗೆ ಅವರು ಸಾಕ್ಷಾತ್ ದೇವರಂತೆ ಕಂಡಿದ್ದಾರೆ. ಅವರು ಅತ್ಯಂತ ಸರಳ ವೈದ್ಯರು ಎಂದು ಹೇಳಿದರು.

ಎಲ್ಲರೂ ಸೇರಿ ನಮ್ಮ ಆರೋಗ್ಯ ಸುಧಾರಣೆ ಮಾಡೋಣ. ನಮ್ಮ ಸುತ್ತಲಿರುವವರ ಆರೋಗ್ಯ ಸುಧಾರಣೆ ಮಾಡೋಣ, ಆರೋಗ್ಯ ಆಪ್ ಯಶಸ್ವಿಯಾಗಲಿ ಇದು ಅರಿವು ಮೂಡಿಸುವಂಥದ್ದು, ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂಥದ್ದು, ಸಂಯುಕ್ತ ಕರ್ನಾಟಕ ಉತ್ತಮ ಕಾರ್ಯ ಮಾಡಿದೆ. ಇದರಿಂದ ಬಹಳ ಸಂತೋಷ ತಂದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಜಗದೀಶ ಶೆಟ್ಟರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನ ಸಭೆ ವಿರೋಧ ಪಕ್ಷದ ಉಪನಾಯಕ ಆರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ ಹಾಗೂ ಮತ್ತಿತರರು ಹಾಜರಿದ್ದರು.

More articles

Latest article