ದೊಡ್ಮನೆ ಕುಟುಂಬದಲ್ಲಿ ಬಿರುಕು: ವಿಚ್ಛೇದನ ಕೋರಿ ಯುವ- ಶ್ರೀದೇವಿ ಅರ್ಜಿ ಸಲ್ಲಿಕೆ

Most read

ದೊಡ್ಮನೆ ಹುಡುಗ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿಯಿಂದ ದೂರಾಗಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಬಂದಿದೆ. ಈಗಾಗಲೇ ಇಬ್ಬರೂ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.

2019ರಲ್ಲಿ ಯುವ ಹಾಗೂ ಶ್ರೀದೇವಿ ಅದ್ಧೂರಿಯಾಗಿ ಮದುವೆ ನಡೆದಿತ್ತು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ವಿವಾಹ ಮಹೋತ್ಸವ ನೆರವೇರಿತ್ತು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು.

ಜೂನ್ 6ರಂದು ಯುವ ರಾಜ್‌ಕುಮಾರ್ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದು ಜುಲೈ 4ರಂದು ವಿಚಾರಣೆ ನಡೆಯಲಿದೆ. MC ಆಕ್ಟ್ ಸೆಕ್ಷನ್ 13(1)(IA) ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕಳೆದ 6 ತಿಂಗಳಿಂದ ದಂಪತಿ ದೂರಾಗಿ ಜೀವನ ನಡೆಸುತ್ತಿದ್ದಾರೆ.

ಕಳೆದ ಒಂದು ವರ್ಷದಿಂದ ದಾಂಪತ್ಯ ಕಲಹ ಶುರುವಾಗಿದ್ದು ಇದೀಗ ಯುವ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಸಧ್ಯ ಶ್ರೀದೇವಿ ಅವರು ವಿದೇಶದಲ್ಲಿ ಇದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಇತ್ತೀಚೆಗೆ ಯುವ ರಾಜ್‌ಕುಮಾರ್ ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ಯುವ’ ಸಿನಿಮಾ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.

ಅದ್ಯಾಕೋ ಏನೋ ಸ್ಯಾಂಡಲ್ ವುಡ್ ನಲ್ಲಿ ಡಿವೋರ್ಸ್ ಸದ್ದು ಜೋರಾಗಿದೆ. ಮೊನ್ನೆಯಷ್ಟೇ ಚಂದನ್ ಶೆಟ್ಟಿ ಹಾಗೂನಿವೇದಿತಾ ಗೌಡ ದಿಢೀರನೇ ಡಿವೋರ್ಸ್ ಪಡೆದರು. ಈ ವಿಚಾರವೇ ಎಲ್ಲರಿಗೂ ಶಾಕಿಂಗ್ ಎನಿಸಿತ್ತು. ಅಷ್ಟು ಮುದ್ದಾದ ಜೋಡಿ ಡಿವೋರ್ಸ್ ಪಡೆದು ಬಿಟ್ಟರಲ್ಲ ಎಂದು ಬೇಸರ‌ ಮಾಡಿಕೊಳ್ಳುತ್ತಿದ್ದಾರೆ. ಇದರ‌ ಬೆನ್ನಲ್ಲೇ ಈಗ ದೊಡ್ಮನೆಯಲ್ಲೂ ವಿಚ್ಛೇದನದ ಸುದ್ದಿ ಕೇಳಿ ಬಂದಿದೆ.

ರಾಘವೇಂದ್ರ ರಾಜ್‍ಕುಮಾರ್ ಎರಡನೇ ಮಗ ಯುವ ರಾಜ್‍ಕುಮಾರ್ ಹಾಗೂ ಶ್ರೀದೇವಿ ದಾಂಪತ್ಯ ಬದುಕಲ್ಲಿ ಬಿರುಕು ಮೂಡಿದೆ. ವಿಚ್ಚೇದನಕ್ಕಾಗಿ ಇಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ಯುವ ರಾಜ್‌ಕುಮಾರ್ ವಿಚ್ಛೇದನಕ್ಕೆ ಅರ್ಜಿ ಹಾಕಿರೋದು ನಿಜ ಎನ್ನಲಾಗಿದೆ. ಸದ್ಯ ರಾಘಣ್ಣನ ಸೊಸೆ ಭಾರತದಲ್ಲಿ ಇಲ್ಲ. ಶ್ರೀದೇವಿ ಅವರು ಸದ್ಯ ಅಮೆರಿಕಾದಲ್ಲಿದ್ದು, ಅವರಿಗೆ ಇನ್ನೂ ವಿಚ್ಛೇದನ ಅರ್ಜಿಯ ಮಾಹಿತಿ ಸಿಕ್ಕಿಲ್ಲ. ಕಳೆದ 4 ದಿನಗಳ ಹಿಂದೆ ಯುವ ರಾಜ್‌ಕುಮಾರ್ ಅವರು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಆದರೆ ಶ್ರೀದೇವಿ ಅವರಿಗೆ ವಿಚ್ಛೇದನದ ಅರ್ಜಿ ಸಿಕ್ಕಿಲ್ಲಿ. ಅಮೆರಿಕಾದಲ್ಲಿರುವ ಶ್ರೀದೇವಿ ಅವರು ವಿಚ್ಛೇದನದ ಅರ್ಜಿ ಸ್ವೀಕರಿಸಿದ ಬಳಿಕ ಯಾವ ರೀತಿ ಪ್ರತಿಕ್ರಿಯೆ ಕೊಡ್ತಾರೆ ಅನ್ನೋದರ ಮೇಲೆ ಈ ಕೇಸ್ ನಿಂತಿದೆ. ಸದ್ಯಕ್ಕೆ ಶ್ರೀದೇವಿ ಅವರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ ಎಂದು ಅಣ್ಣಾವ್ರ ಕುಟುಂಬದ ಆಪ್ತರಿಂದ ಮಾಹಿತಿ ಲಭ್ಯವಾಗಿದೆ.

ಶ್ರೀದೇವಿ ಅವರು ಮೂಲತಃ ಮೈಸೂರಿನವರು. ಅಲ್ಲಿಯೇ ಉನ್ನತ ವ್ಯಾಸಂಗ ಮಾಡಿದ್ದರು. ಕಳೆದ ಏಳು ವರ್ಷದ ಹಿಂದೆ ಯುವ ಹಾಗೂ ಶ್ರೀದೇವಿ ಪರಿಚಯವಾಗಿತ್ತು. ಪರಿಚಯ ಪ್ರೀತಿಯಾಗಿ,‌ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದರು. ನಾಲ್ಕು ವರ್ಷಕ್ಕೇ ಈಗ ದಾಂಪತ್ಯ ಜೀವನ ಅಂತ್ಯಗೊಳಿಸಿಕೊಳ್ಳಲು ಹೊರಟಿದ್ದಾರೆ.

More articles

Latest article