ಮಸೀದಿ ಅಭಿವೃದ್ಧಿ ಹಣ ದುರ್ಬಳಕೆ ಮಾಡುವವರ ವಿರುದ್ಧ ಕ್ರಮ: ಜಮೀರ್ ಅಹಮದ್ ಖಾನ್ ಎಚ್ಚರಿಕೆ

Most read

ಹಾವೇರಿ : ಮಸೀದಿ ಅಭಿವೃದ್ಧಿ ಅನುದಾನ ಸೇರಿ ಸಮುದಾಯದ ಕಲ್ಯಾಣಕ್ಕೆ ನೀಡುವ ಹಣ ದುರ್ಬಳಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಖ್ಫ್ ಸಚಿವ ಜಮೀರ್ ಅಹಮದ್ ಖಾನ್ ಎಚ್ಚರಿಕೆ ನೀಡಿದ್ದಾರೆ.

ಹಾವೇರಿ ಯಲ್ಲಿ ಹಾವೇರಿ -ಗದಗ ಜಿಲ್ಲೆಗಳ ವಖ್ಫ್ ಅದಾಲತ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ವಖ್ಫ್ ಬೋರ್ಡ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಯಿಂದ ಮಸೀದಿ ಅಭಿವೃದ್ಧಿ, ಕಬಾರಸ್ಥಾನ ನಿರ್ವಹಣೆ ಸೇರಿ ಸಮುದಾಯದ ಕಲ್ಯಾಣಕ್ಕೆ ನೀಡುವ ಅನುದಾನದ ಹಣ ದುರ್ಬಳಕೆ ಆಗುತ್ತಿರುವ ದೂರುಗಳು ಬಂದಿವೆ. ಅದೇ ರೀತಿ ಅನುದಾನ ಕೊಡಿಸಿದ್ದೇವೆ ಎಂದು ಲಂಚ ಪಡೆಯುತ್ತಿರುವ ಬಗ್ಗೆಯೂ ಮಾಹಿತಿ ಬಂದಿದ್ದು ಯಾವುದೇ ಕಾರಣಕ್ಕೂ ಇದನ್ನು ಸಹಿಸುವುದಿಲ್ಲ ಎಂದು ಹೇಳಿದರು.

ಯಾರಾದರೂ ಲಂಚ ಕೇಳಿದರೆ ಮೊದಲು ಪೊಲೀಸ್ ಠಾಣೆಗೆ ದೂರು ನೀಡಿ ನನ್ನ ಗಮನಕ್ಕೆ ತನ್ನಿ. ಅವರನ್ನು ಜೈಲಿಗೆ ಹಾಕಿಸುವ ಕೆಲಸ ನಾನೇ ಮಾಡುತ್ತೇನೆ. ಯಾರೇ ಆಗಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ವಖ್ಫ್ ಆಸ್ತಿ ಉಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಅದು ದೇವರ ಕೆಲಸ ಎಂದು ಹೇಳಿದರು.

ವಖ್ಫ್ ಬೋರ್ಡ್ ನಿಂದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು ನಿರ್ಮಾಣ ಕ್ಕೆ ಯೋಜನೆ ರೂಪಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಹಾಗೂ ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಕೇಂದ್ರ ಸರ್ಕಾರ ವಖ್ಫ್ ಕಾಯ್ದೆ ಗೆ ತಿದ್ದುಪಡಿ ತರಲು ಮುಂದಾಗಿದ್ದು ಇದು ದುರುದ್ದೇಶ ದಿಂದ ಕೂಡಿದೆ. ವಖ್ಫ್ ಆಸ್ತಿ ಸರ್ಕಾರದ್ದಲ್ಲ. ಅದು ಸಮುದಾಯದ್ಫು. ಕಾಯ್ದೆ ತಿದ್ದುಪಡಿಗೆ ನಮ್ಮ ವಿರೋಧ ಇದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಾವೇರಿ-ಗದಗ ಜಿಲ್ಲೆಯ 32 ಮಸೀದಿ ಗಳ ಅಭಿವೃದ್ಧಿ ಗೆ 8.50 ಕೋಟಿ ರೂ. ಅನುದಾನದ ಚೆಕ್ ವಿತರಿಸಲಾಯಿತು.
ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮಾಜಿ ಸಂಸದ ಐ ಜಿ ಸನದಿ, ಮಾಜಿ ಶಾಸಕ ಅಜ್ಜಮ್ ಪೀರ್ ಖಾದ್ರಿ, ಯಾಸೀರ್ ಪಟಾನ್, ಫೈಸ್ ಇಬ್ರಾಹಿಂ, ಸಿರಾಜ್ ಉಪಸ್ಥಿತರಿದ್ದರು.

More articles

Latest article