ರಾಜ್ಯದ ಮುಖ್ಯಮಂತ್ರಿಯೊಬ್ಬರು ಬಿ ಕೆ ಹರಿಪ್ರಸಾದ್ ಮನೆಯಲ್ಲಿ ನಡೆಸಿದ ರಾಜಕೀಯ ಬಿಲ್ಲವರ ಪ್ರತಿಷ್ಠೆಯ ವಿಷಯವಾಗಿದೆ. ಕರಾವಳಿಗೆ ಈಗ ಸೈದ್ದಾಂತಿಕ ಸ್ಪಷ್ಟತೆಯುಳ್ಳ ನಾರಾಯಣಗುರು ಪಂಥೀಯ ನಾಯಕನ ಅಗತ್ಯವಿದೆ. ಇಲ್ಲದೇ ಇದ್ದರೆ ಮುಸ್ಲೀಮರ ಹೆಣಗಳೂ, ಹಿಂದುಳಿದ ವರ್ಗದ ಯುವಕರ ಹೆಣಗಳು ಉರುಳುತ್ತಲೇ ಇರುತ್ತದೆ -ನವೀನ್ ಸೂರಿಂಜೆ, ಪತ್ರಕರ್ತರು.
ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮುಹಿಂಸಾಚಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿಗಳನ್ನು ಶಾಸಕರು, ಸಚಿವರು ಭೇಟಿ ಮಾಡಿ ಘಟನೆಯ ಬಗ್ಗೆ ಚರ್ಚಿಸುವುದನ್ನು ನೋಡಿದ್ದೇವೆ. ಆದರೆ ಮುಖ್ಯಮಂತ್ರಿಗಳೇ ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ರನ್ನು ಭೇಟಿಯಾಗಿ ಕೋಮುಗಲಭೆಗಳ ಬಗ್ಗೆ ಚರ್ಚಿಸಿರುವುದು ರಾಜಕೀಯ ಕುತೂಹಲ ಮೂಡಿಸುತ್ತದೆ.
ಬಿ ಕೆ ಹರಿಪ್ರಸಾದ್ ಅವರು ಕರಾವಳಿಯ ಪ್ರಭಾವಿ ಬಿಲ್ಲವ ಸಮುದಾಯಕ್ಕೆ ಸೇರಿದವರು. ಸೈದ್ದಾಂತಿಕವಾಗಿ ಕೋಮುರಾಜಕಾರಣದ ವಿರುದ್ದದ ನಿಲುವನ್ನು ಹೊಂದಿರುವವರು. ಈ ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ಮತ್ತು ಮನುವಾದ/ಕೋಮುವಾದ ಅದರ ಮೇಲೆ ಬೀರಿರುವ ಪರಿಣಾಮಗಳ ಬಗೆಗೆ ಅಗಾಧ ಜ್ಞಾನ ಇರುವವರು. ಆ ಕಾರಣಕ್ಕಾಗಿಯೇ ಸಿದ್ದರಾಮಯ್ಯರೇ ಖುದ್ದು ಬಿ ಕೆ ಹರಿಪ್ರಸಾದ್ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದ್ದಾರೆ.
ಕರಾವಳಿಯ ಕೋಮುಗಲಭೆಗಳಿಗೆ ಬಿ ಕೆ ಹರಿಪ್ರಸಾದ್ ಹೇಗೆ ‘ಮದ್ದು’ ಆಗುತ್ತಾರೆ ಎನ್ನುವುದಕ್ಕೆ ರಾಜಕೀಯ ಇತಿಹಾಸ ನಮ್ಮ ಮುಂದಿದೆ. ಬಿಕೆ ಹರಿಪ್ರಸಾದ್ ಕರಾವಳಿಯ ಪ್ರಭಾವಿ ಬಿಲ್ಲವ ಸಮುದಾಯಕ್ಕೆ ಸೇರಿದವರು. ಎಲ್ಲಕ್ಕಿಂತ ಮುಖ್ಯವಾಗಿ ನಾರಾಯಣ ಗುರುಗಳ ಪಂಥಾನುಯಾಯಿ. ಕೇರಳದಲ್ಲಿ ಬಿಜೆಪಿ ಒಂದೇ ಒಂದು ಸೀಟು ಪಡೆದುಕೊಳ್ಳಲು ಹೆಣಗಾಡುವಂತಹ ಪರಿಸ್ಥಿತಿ ಮತ್ತು ಕೇರಳದ ಜನರಲ್ಲಿರುವ ಸೌಹಾರ್ದ ಚಿಂತನೆಯ ಹಿಂದೆ ನಾರಾಯಣ ಗುರುಗಳ ಚಳವಳಿಯ ಪ್ರಭಾವವಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಾರಾಯಣ ಗುರುಗಳ ಪಂಥಾನುಯಾಯಿ ಆಗಿದ್ದುಕೊಂಡೇ ಸಂಘಪರಿವಾರ ಮತ್ತು ಹಿಂದುತ್ವ ರಾಜಕಾರಣಕ್ಕೆ ಎದಿರೇಟು ನೀಡುತ್ತಿದ್ದಾರೆ. ಹಾಗಾಗಿ ಸಂಘಪರಿವಾರ ಏನೇ ಮಾಡಿದರೂ ಕೇರಳದ ಜನರ ಮೆದುಳನ್ನು ಭ್ರಷ್ಠಗೊಳಿಸಲು ಸಾಧ್ಯವಾಗುತ್ತಿಲ್ಲ.
ಪೊಲೀಸರು, ಗೃಹ ಇಲಾಖೆ, ಎನ್ಕೌಂಟರ್ ಇವೆಲ್ಲವೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬಹುದು. ಕರಾವಳಿಯಲ್ಲಿ ಮತೀಯವಾಗಿ ಭ್ರಷ್ಠಗೊಂಡಿರುವ ಜನರ ಮೆದುಳನ್ನು ಸರಿ ಪಡಿಸಲು ಇದರಿಂದ ಸಾಧ್ಯವಿಲ್ಲ. ಮಾಬ್ ಲಿಂಚಿಂಗ್ನಲ್ಲಿ ಭಾಗವಹಿಸಿದ್ದ ಅಷ್ಟೂ ಆರೋಪಿಗಳು ಯಾವುದೇ ಸಂಘಟನೆಯ ಸದಸ್ಯರಲ್ಲ. ಜನಸಾಮಾನ್ಯರೂ ಸಂಘಟನೆಯ ಭಾಗವಾಗದೇ ಧರ್ಮಾಧರಿತ ಕ್ರೂರಿಗಳಾಗಿದ್ದಾರೆ ಎಂದರೆ ಅದಕ್ಕೆ ಕಾರಣ ಜನರ ಮೆದಳುಗಳು ಕೊಳೆತಿರುವುದು. ಹಾಗಾಗಿ ಕರಾವಳಿಯ ಜನರನ್ನು ಸರಿದಾರಿಗೆ ತರಲು ಕಾನೂನಿನನ ಜೊತೆ ಜೊತೆಗೆ ಸಾಂಸ್ಕೃತಿಕ ಮಧ್ಯಸ್ಥಿಕೆ ಅಗತ್ಯ.
ಕರಾವಳಿಯ ಕಾಂಗ್ರೆಸ್ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಧರ್ಮಾಧಿಕಾರಿ, ಉಡುಪಿಯ ಸ್ವಾಮೀಜಿ, ಶಿಕ್ಷಣದ ವ್ಯಾಪಾರಿಗಳನ್ನು ಭೇಟಿ ಮಾಡುತ್ತಾರೆ. ಆ ಧರ್ಮಾಧಿಕಾರಿಗಳು, ಸ್ವಾಮೀಜಿಗಳು, ಶಿಕ್ಷಣದ ವ್ಯಾಪಾರಿಗಳು ಒಟ್ಟಾಗಿ ಹಿಂದೂ ಸಮಾಜೋತ್ಸವವನ್ನು ಆಯೋಜಿಸುತ್ತಾರೆ. ಕೋಮುಗಲಭೆಗಳಿಗೆ ಪ್ರಚೋದನೆ ನೀಡುವ, ಜನರ ಮನಸ್ಸನ್ನು ಹಾಳುಗೆಡಹುವ ಸಮಾಜೋತ್ಸವಗಳ ವೇದಿಕೆಯ ಉಸ್ತವಾರಿಯೇ ಈ ಸ್ವಾಮೀಜಿ, ಧರ್ಮಾಧಿಕಾರಿ ಮತ್ತು ಶಿಕ್ಷಣ ವ್ಯಾಪಾರಿಗಳದ್ದಾಗಿರುತ್ತದೆ. ಆ ಬಳಿಕ ಅದೇ ಕಾಂಗ್ರೆಸ್ ಸಚಿವರು ಅಂಡರ್ವಲ್ಡ್ ಡಾನ್ಗಳು ಆಯೋಜಿಸುವ ಕಂಬಳ, ಪಿಲಿ ನಲಿಕೆಯ ಉದ್ಘಾಟನೆ ಮಾಡುತ್ತಾರೆ. ಅದೇ ಅಂಡರ್ವಲ್ಡ್ ಹುಡುಗರನ್ನು ಭಜರಂಗದಳ ಬಳಕೆ ಮಾಡುತ್ತದೆ. ಈ ಸರ್ಕಲ್ ನಿಂದ ಕಾಂಗ್ರೆಸ್ ಜನಪ್ರತಿನಿಧಿಗಳು ಹೊರಬರದೇ ಕರಾವಳಿಯಲ್ಲಿ ಕೋಮುಗಲಭೆ ನಿಲ್ಲಲು ಸಾಧ್ಯವಿಲ್ಲ. ಪೊಲೀಸರನ್ನು ದೂರಿಯೂ ಪ್ರಯೋಜನವಿಲ್ಲ.
ನಾವು ಯಾರನ್ನು ಪೋಷಿಸುತ್ತಿದ್ದೇವೆ ? ಅದು ದೂರಗಾಮಿಯಾಗಿ ಸಮಾಜದ ಮೇಲೆ ಬೀರುವ ಪರಿಣಾಮಗಳೇನು ಎಂದು ಯೋಚಿಸುವ ವ್ಯವಧಾನ ಕರಾವಳಿಯ ಕಾಂಗ್ರೆಸ್ ನಾಯಕರುಗಳಿಗಿಲ್ಲ. ರಾವ್, ಪುರಾಣಿಕ್, ಆಳ್ವ, ಹೆಗ್ಗಡೆ ಮುಂತಾದವರ ಶಿಕ್ಷಣ ಸಂಸ್ಥೆಗಳು ಕರಾವಳಿಯಲ್ಲಿ ಸೂಸುವ ವಿಷಾನಿಲ ಎಷ್ಟು ಎಂಬ ಅರಿವಿದ್ದರೂ ಅವರ ಶಿಕ್ಷಣ ಸಂಸ್ಥೆಗಳಿಗೆ ಕಾಂಗ್ರೆಸ್ ನಾಯಕರುಗಳ ರಕ್ಷಣೆ ಇದೆ. ಅವರ ವೇದಿಕೆಗಳಿಗೆ ಇವರುಗಳು ಖಾಯಂ ಗಿರಾಕಿಗಳು. ಅದೇ ಶಿಕ್ಷಣ ಸಂಸ್ಥೆಗಳು ಹಿಂದೂ ಸಮಾಜೋತ್ಸವಕ್ಕೆ ವಿದ್ಯಾರ್ಥಿಗಳನ್ನೂ, ಬಸ್ಸು, ಜಾಗವನ್ನೂ ಒದಗಿಸುವ ವ್ಯವಸ್ಥೆಯನ್ನು ಮಾಡುವುದರ ಜೊತೆಗೆ ಸಮಿತಿಯ ಗೌರವಾಧ್ಯಕ್ಷರಾಗಿ ಸಮಾಜೋತ್ಸವಗಳನ್ನು ಯಶಸ್ವಿಗೊಳಿಸುತ್ತಾರೆ. ಹಾಗಾಗಿ ಪ್ರತೀ ಹಿಂದೂ ಸಮಾಜೋತ್ಸವ, ಜಾಥಾಗಳ ಬಳಿಕ ಕೋಮುಗಲಭೆ ಅಥವಾ ಹಿಂಸೆ ನಡೆಯುತ್ತದೆ.
ಕರಾವಳಿಯಲ್ಲಿ ನಡೆಯುವ ಎಲ್ಲಾ ಕೋಮುಗಲಭೆ, ಆ ಬಳಿಕ ನಡೆಯುವ ಪ್ರತೀಕಾರಗಳಲ್ಲಿ ಬಿಲ್ಲವರು ಸೇರಿದಂತೆ ಹಿಂದುಳಿದ ವರ್ಗಗಳೇ ಕೊಲೆಗಾರರ ಪಟ್ಟಿಯಲ್ಲೂ, ಸಾವಿಗೀಡಾದವರ ಪಟ್ಟಿಯಲ್ಲೂ ಏಕಕಾಲದಲ್ಲಿ ಕಾಣ ಸಿಗುತ್ತಾರೆ. ಇದಕ್ಕೆ ಪರಿಹಾರ ಪೊಲೀಸ್ ಇಲಾಖೆಯಲ್ಲಿ ಇಲ್ಲ. ಬದಲಾಗಿ ಪಿಣರಾಯಿ ವಿಜಯನ್ ಮಾದರಿಯಲ್ಲಿ ‘ಸಾಂಸ್ಕೃತಿಕ ಪರಿಹಾರ’ವನ್ನು ಕಂಡುಕೊಳ್ಳಬೇಕಿದೆ. ಹಿಂದುಳಿದ ವರ್ಗಗಳ ಮನೆಗಳಿಗೆ ನಾವು ನಾರಾಯಣ ಗುರುಗಳ ತತ್ವವನ್ನು ಹರಡಬೇಕಿದೆ. ಕೋಟಿ ಚೆನ್ನಯರು ಪಡುಮಲೆಯಿಂದ ಪಂಜ ಸೀಮೆಗೆ ಯಾಕೆ ದೇಶಾಂತರ ಹೋಗಬೇಕಾಯಿತು ಎಂಬುದನ್ನು ನಾವು ಅರಿಯಬೇಕಿದೆ.
ಭೂ ಮಾಲಕ ಪೆರುಮಾಳ ಬಲ್ಲಾಳನ ಜೊತೆ ನಡೆದ ಭೂ ಹೋರಾಟದ ಹಿನ್ನಲೆಯಲ್ಲಿ ಕೋಟಿ ಚೆನ್ನಯರು ಊರು ಬಿಟ್ಟು ಮತ್ತೊಂದೂರಿಗೆ ಹೋಗಬೇಕಾಯಿತು. ಬಿ ಕೆ ಹರಿಪ್ರಸಾದ್ ಅವರ ಕುಟುಂಬ ಕೂಡಾ ದಕ್ಷಿಣಕನ್ನಡ ಜಿಲ್ಲೆಯ ಭೂಮಾಲಕರ ಜೊತೆಗಿನ ಸಂಘರ್ಷದಿಂದ ಕರಾವಳಿ ಬಿಟ್ಟು ಬೆಂಗಳೂರು, ದೆಹಲಿ ಸೇರಿ ರಾಷ್ಟ್ರಮಟ್ಟದ ರಾಜಕಾರಣಿ ಆದರು. ಬಿ ಕೆ ಹರಿಪ್ರಸಾದ್ ಅವರ ತಂದೆಯವರು ಬಂಟ್ವಾಳ ತಾಲೂಕಿನ ಅರಳ ಗ್ರಾಮದವರು. ಅರಳ ಗ್ರಾಮದ ಬಂಗಾರಬೆಟ್ಟುವಿನಲ್ಲಿ ನಡೆದ ಭೂ ಮಾಲಕರ ಜೊತೆಗಿನ ಸಂಘರ್ಷ ಸ್ವಾಭಿಮಾನಿಯಾಗಿದ್ದ ಅವರನ್ನು ಊರು ಬಿಡುವಂತೆ ಮಾಡಿತ್ತು. ಇದು ಬಿ ಕೆ ಹರಿಪ್ರಸಾದ್ ಕುಟುಂಬವೊಂದರ ಕತೆಯಲ್ಲ. ಕರಾವಳಿಯ ಪ್ರತೀ ಬಿಲ್ಲವ ಕುಟುಂಬದ ತಂದೆ ತಾಯಂದಿರು, ಅಜ್ಜ ಅಜ್ಜಿಯಂದಿರು ಅನುಭವಿಸಿದ ಬದುಕು. ಅದರ ಪ್ರತಿನಿಧಿಯೇ ಬಿ ಕೆ ಹರಿಪ್ರಸಾದ್. ಹಾಗಾಗಿಯೇ ಸಿದ್ದರಾಮಯ್ಯನವರು ಬಿ ಕೆ ಹರಿಪ್ರಸಾದ್ ಅವರ ನಿವಾಸಕ್ಕೆ ಭೇಟಿ ಕೊಟ್ಟು ‘ಒಂಚೂರು ಕರಾವಳಿಯನ್ನು ನೋಡಿಕೊಳ್ಳಿ’ ಎಂದಿರುವುದು !
ರಾಜ್ಯದ ಮುಖ್ಯಮಂತ್ರಿಯೊಬ್ಬರು ಬಿ ಕೆ ಹರಿಪ್ರಸಾದ್ ಮನೆಯಲ್ಲಿ ನಡೆಸಿದ ರಾಜಕೀಯ ಬಿಲ್ಲವರ ಪ್ರತಿಷ್ಠೆಯ ವಿಷಯವಾಗಿದೆ. ಕರಾವಳಿಗೆ ಈಗ ಸೈದ್ದಾಂತಿಕ ಸ್ಪಷ್ಟತೆಯುಳ್ಳ ನಾರಾಯಣಗುರು ಪಂಥೀಯ ನಾಯಕನ ಅಗತ್ಯವಿದೆ. ಇಲ್ಲದೇ ಇದ್ದರೆ ಮುಸ್ಲೀಮರ ಹೆಣಗಳೂ, ಹಿಂದುಳಿದ ವರ್ಗದ ಯುವಕರ ಹೆಣಗಳು ಉರುಳುತ್ತಲೇ ಇರುತ್ತದೆ. ಹಿಂದುಳಿದ ವರ್ಗಗಳಿಗೆ ಜೈಲಿನಲ್ಲಿಯೂ ಸ್ಮಶಾನದಲ್ಲಿಯೂ ಮಾತ್ರ ಜಾಗವಾದರೆ, ಮೇಲ್ವರ್ಗಗಳು ಅಧಿಕಾರದ ಸ್ಥಾನದಲ್ಲಿ ಮೆರೆಯುತ್ತವೆ. ಹಾಗಾಗಿ ಮಂಗಳೂರು ಕೋಮುಗಲಭೆಯ ಚರ್ಚೆ ಬಿ ಕೆ ಹರಿಪ್ರಸಾದ್ ಮನೆಗೆ ಶಿಫ್ಟ್ ಆಗಿದ್ದು ಒಳ್ಳೆಯ ರಾಜಕೀಯ ಬೆಳವಣಿಗೆಯಾಗಿದೆ.
ನವೀನ್ ಸೂರಿಂಜೆ
ಪತ್ರಕರ್ತರು.
ಇದನ್ನೂ ಓದಿ– ಮಿತಿಮೀರಿದ ಕಾಂಗ್ರೆಸ್ ಒಳಜಗಳ ಮತ್ತು ಗುಂಪುಗಾರಿಕೆ