ಕೆಂಪೇಗೌಡ ಸಿನಿಮಾದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ..? ಉಪೇಂದ್ರ ಆಗ್ತಾರಾ ನಾಯಕ..?

Most read

ನಾಡಪ್ರಭು ಕೆಂಪೇಗೌಡರ ಜೀವನ ಆಧಾರಿತ ಚಿತ್ರಕ್ಕಾಗಿ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ತಯಾರಿ ನಡೆಯುತ್ತಿದೆ. ಈ ಸಿನಿಮಾಗಾಗಿ ಕಾನೂನು ಹೋರಾಟವೂ ನಡೆಯುತ್ತಿದೆ. ಯಾಕಂದ್ರೆ ಈ ಹಿಂದೆ ನಾಗಾಭರಣ ಅವರು ಕೆಂಪೇಗೌಡ ಬಯೋಪಿಕ್ ಮಾಡ್ತಾ ಇದ್ದೀವಿ ಎಂದು ಹೇಳಿದ್ದರು. ಈಗ ನಿರ್ಮಾಪಕ, ನಿರ್ದೇಶಕ ಕಿರಣ್ ತೋಟಂಬೈಲ್ ಅವರು ಅನೌನ್ಸ್ ಮಾಡಿದ್ದಾರೆ. ‘ಧರ್ಮಬೀರು ನಾಡಪ್ರಭು ಕೆಂಪೇಗೌಡ’ ಎಂಬ ಟೈಟಲ್ ನಲ್ಲಿ ಘೋಷಣೆ ಮಾಡಿದ್ದಾರೆ.

ಈ ಟೈಟಲ್ ಅನೌನ್ಸ್ ಆದ ಕೂಡಲೇ ನಾಗಾಭರಣ ಅವರು ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದರು. ಆದರೆ ಕಿರಣ್ ಇದಕ್ಕೆ ಉತ್ತರಿಸಿದ್ದು, ನಮ್ಮದು ಹಾಲಿವುಡ್ ಸಿನಿಮಾ. ಈಗಾಗಲೇ ಇಂಗ್ಲೆಂಡ್ ನಲ್ಲಿ ರಿಜಿಸ್ಟರ್ ಆಗಿದೆ. ದಿನೇಶ್ ಬಾಬು ಇದಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂದಿದ್ದಾರೆ. ಜೂನ್ 27ಕ್ಕೆ ನಾಡಪ್ರಭು ಕೆಂಪೇಗೌಡ ಅವರ ಹುಟ್ಟುಹಬ್ಬವಿದೆ. ಆ ಪ್ರಯುಕ್ತ ಸಿನಿಮಾ ಪ್ರಾರಂಭಿಸಲು ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ.

ಈ ಚಿತ್ರ ಸಾಕಷ್ಟು ಸದ್ದು ಮಾಡಿದ್ದು, ಸಿನಿಮಾದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈಗಾಗಲೇ ಶ್ರೀನಗರ ಕಿಟ್ಟಿ, ಭಾರತೀ ವಿಷ್ಣುವರ್ಧನ್, ವಸಿಷ್ಠ ಸಿಂಹ ಮುಖ್ಯ ಭೂಮಿಕೆಯಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ. ಆಶಿಕಾ ರಂಗನಾಥ್ ಕೂಡ ಅಭಿನಯಿಸುತ್ತಾರೆ ಎಂಬ ಮಾತಿದೆ. ಜೂನ್ 27ಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಬಹುತೇಕ ಅಂದಿನ ದಿನ ನಾಯಕ ಯಾರು ಎಂಬ ಬಗ್ಗೆ ಗೊತ್ತಾಗಲಿದೆ. ಉಪೇಂದ್ರ ಅವರು ಈ ಸಿನಿಮಾದ ನಾಯಕ ಎಂದೇ ಹೇಳಲಾಗುತ್ತಿದೆ. ಮುಹೂರ್ತದ ದಿನವೇ ಅದಕ್ಕೆಲ್ಲ ತೆರೆ ಬೀಳಲಿದೆ.

More articles

Latest article