ಹಾಡು :
ಟಿಕೇಟ್ ಬೇಕು ಟಿಕೇಟು
ಅದಕಾಗಿ ಹಿಡೀಬೇಕು ಬಕೆಟ್ಟು
ಲಾಬಿ ಮಾಡು, ಡಿಮಾಂಡ್ ಮಾಡು
ಕಾಡಿ ಬೇಡಿ ಹೈಕಮಾಂಡ್ ಕಾಲು ಹಿಡಿ
ಹೇಗಾದ್ರೂ ಮಾಡಿ ಗಿಟ್ಟಿಸ್ಬೇಕು ಟಿಕೇಟು
ಶಾಸಕ : ಟಿಕೇಟ್ ಬೇಕು ಟಿಕೇಟ್ಟು
ಪಿಎ : ಅಲ್ಲಾ ಸರ್, ನೀವು ಶಾಸಕರು, ಬಸ್ ಕಂಡಕ್ಟರನಂತೆ ಟಿಕೇಟ್ ಟಿಕೇಟ್ ಅಂತೀರಲ್ಲಾ..
ಶಾಸಕ : ತೊ ಥೊ ಆ ಟಿಕೇಟ್ ಅಲ್ಲಯ್ಯಾ.
ಪಿಎ : ಈಗಾಗಲೇ ಪಕ್ಷ ನಿಮಗೆ ಟಿಕೇಟ್ ಕೊಟ್ಟಾಗಿದೆ, ಚುನಾವಣೆ ಗೆದ್ದಾಗಿದೆ ಮತ್ಯಾಕೆ ಸರ್ ಟಿಕೇಟು?. ನಿಮ್ಮ ಮಗನಿಗೇನಾದ್ರೂ.. ಟಿಕೆಟ್ಟು?
ಶಾಸಕ : (ಸಿಡಿಮಿಡಿಗೊಂಡು) ಹೌದಯ್ಯಾ ನನಗೂ ಬೇಕು, ನನ್ನ ಮಗನಿಗೂ ಬೇಕು, ನನ್ನೆಂಡ್ರಿಗೂ ಬೇಕು, ಬೇಕೆ ಬೇಕು ಟಿಕೇಟ್ ಬೇಕು.
ಪಿಎ : ಅಂದ್ರೆ ಬೈ ಎಲೆಕ್ಷನ್ನಲ್ಲಿ ನಿಮ್ಮ ಮಗನಿಗೆ ಟಿಕೇಟ್ ಕೇಳ್ತಾ ಇದ್ದೀರಿ ಅಂದಂಗಾತು. ಇದು ಕುಟುಂಬ ರಾಜಕಾರಣ ಅಂತ ವಿರೋಧ ಪಕ್ಷಗಳು ಗಲಾಟೆ ಮಾಡ್ತಾರಲ್ವಾ ಸರ್.
ಶಾಸಕ : ಏನೂ.. ಕುಟುಂಬ ರಾಜಕಾರಣವಾ. ಅದ್ಯಾವ ಪಕ್ಷದೊಳಗೆ ಕುಟುಂಬ ರಾಜಕಾರಣ ಇಲ್ಲ ಹೇಳಯ್ಯಾ. ಈಗ ದೊಡ್ಡಗೌಡರ ಪಕ್ಷ ಐತಲ್ವಾ, ಅಲ್ಲಿ ರಾಜಕಾರಣದೊಳಗೆ ಅವರ ಇಡೀ ಕುಟುಂಬಾನೇ ಇದೆಯಲ್ವಾ? ಇನ್ನು ಕಮಲ ಪಕ್ಷದ ಕಥೆ ಇನ್ನೇನು? ಅಪ್ಪಾವರು, ಅವರಿಬ್ಬರು ಮಕ್ಕಳು, ಅವರ ಆ ಅವಳು.. ಎಲ್ಲಾ ಸೇರಿ ಇಡೀ ಕುಟುಂಬವೇ ರಾಜಕಾರಣದಲ್ಲಿ ಮುಳುಗಿ ತೇಲ್ತಾ ಇದೆಯಲ್ವಾ.
ಪಿಎ : ಅದು ಗೊತ್ತಿರೋದೇ ಬಿಡಿ ಸರ್. ಈಗ ನಿಮಗೆ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಕೆ ನಿಮ್ಮಗನಿಗೆ ಪಕ್ಷ ಟಿಕೇಟ್ ಕೊಡಬೇಕು ಅಷ್ಟೇ ತಾನೇ ನಿಮ್ಮ ಬೇಡಿಕೆ.
ಶಾಸಕ : ಕೊಡ್ತಾರಯ್ಯಾ, ಕೊಟ್ಟೆ ಕೊಡ್ತಾರೆ. ನಾಳೆ ನಾನೇನಾದ್ರೂ ಸತ್ರೆ…
ಪಿಎ : (ನಡುವೆ ಬಾಯಿ ಹಾಕಿ) ರಾಜ್ಯಕ್ಕೆ ಉಪಕಾರ ಆಗುತ್ತೆ ಬಿಡಿ ಸರ್..
ಶಾಸಕ : ಹಾಂ ಏನಂದೆ.. ನಾನೇನಾದರೂ ಸತ್ರೆ ರೀ ಎಲೆಕ್ಷನ್ ಆಗುತ್ತೆ. ಆಗ ನನ್ನ ಹೆಂಡ್ತೀಗೆ ಪಕ್ಷ ಟಿಕೇಟ್ ಕೊಡುತ್ತೆ, ಕೊಡಲೇ ಬೇಕು. ಆದರೆ ನನಗೆ ಅದರ ಚಿಂತೆ ಏನಿಲ್ಲಾ ಬಿಡು.
ಪಿಎ : ಮತ್ಯಾವ ಟಿಕೇಟ್ ಬೇಕು ಸಾರ್. ರೈಲ್ವೇದ್ದಾ ಇಲ್ಲಾ ವಿಮಾನದ್ದಾ?
ಶಾಸಕ : ಆ ಟಿಕೇಟ್ ಖರ್ಚನ್ನೆಲ್ಲಾ ಸರಕಾರ ಕೊಡುತ್ತೆ ಬಿಡಯ್ಯಾ. ನಾನ್ಯಾರು? ಮೂರು ಸಲ ಗೆದ್ದು ಬಂದ ಜನಪ್ರಿಯ ಶಾಸಕ. ನಾವು ಕೇಳಿದಷ್ಟು ಫ್ರೀ ಟಿಕೇಟ್ ಕೊಡ್ರಿ ಅಂದ್ರೆ ಇಲ್ಲಾ ಕೊಡೋದಿಕ್ಕಾಗಾಕಿಲ್ಲ ಅಂತಾರೆ. ನಾನು ಸುಮ್ಕೆ ಇರ್ತೀನಾ? ಸದನದೊಳಗೆ ಗಲಾಟೆ ಮಾಡ್ದೆ. ಟಿಕೇಟ್ ಬೇಕೆ ಬೇಕು ಅಂತಾ ಕೇಳ್ದೆ. ನನಗೆ ನನ್ನ ಹೆಂಡ್ತಿಗೆ, ನನ್ನ ಮಕ್ಕಳಿಗೆ, ನನ್ನ ಇಡೀ ಕುಟುಂಬಕ್ಕೆ ಟಿಕೇಟ್ ಕೊಡಲೇ ಬೇಕು ಅಂತಾ ಕೂಗಿ ಕೂಗಿ ಕೇಳ್ದೆ.
ಪಿಎ : ಯಾವ ಟಿಕೇಟ್ಟು ಏನ್ಕತೆ ಸ್ವಲ್ಪ ಬಿಡಿಸಿ ಹೇಳಿ ಸರ್. ಎಲ್ಲಾ ಫುಲ್ ಕನ್ಫ್ಯೂಸ್ ಆಗ್ತಾ ಇದೆ.. ನಾಟಕದ ಟಿಕೇಟಾ ಇಲ್ಲಾ ಸಿನೆಮಾ ಟಿಕೇಟಾ?
ಶಾಸಕ : ಹೇ ಅದನ್ನೆಲ್ಲಾ ನೋಡೋಕೆ ಟೈಂ ನನಗೆಲ್ಲಿದೆನಯ್ಯಾ. ಅದೇನಯ್ಯಾ ಆಟ ಆಡ್ತಾರಲ್ಲಾ, ಆ ಟಿಕೇಟು.
ಪಿಎ : ಆಟಾ ಅಡೋ ಟಿಕೇಟಾ.. ಅದೆಂತಾದ್ದು ಸರ್.. ಕಬಡ್ಡಿ, ಕಂಬಳ, ಪುಟ್ಬಾಲ್…
ಶಾಸಕ : ತೊ ಥೊ. ಅದೆಂತಾ ದಡ್ಡನಯ್ಯಾ ನೀನು. ಅದೇ ಈ ಕಡೆ ಚಂಡು ಎಸೀತಾರೆ, ಆ ಕಡೆ ಬ್ಯಾಟ್ ಹಿಡಿದೋರು ಹೊಡೀತಾರೆ. ಜನರು ಹೋ ಅಂತಾ ಕಿರಚ್ತಾರಲ್ಲಯ್ಯಾ.. ಆ ಆಟ..
ಪಿಎ : ಹೋ ಈಗ ಗೊತ್ತಾಯ್ತು. ಅದು ಕ್ರಿಕೇಟ್ ಆಟ ಅಲ್ವಾ ಸಾರ್. ಅಂದ್ರೆ ನಿಮಗೆ ಐಪಿಎಲ್ ಕ್ರಿಕೇಟ್ ಟಿಕೇಟ್ ಬೇಕು ಅಂತಾಯ್ತು. ಆದ್ರೆ ಸರ್, ನನಗೊತ್ತಿರೋ ಹಾಗೆ ನಿಮಗೆ ಕ್ರಿಕೇಟ್ ಬಗ್ಗೆ ಏನೂ ಗೊತ್ತೇ ಇಲ್ವಲ್ಲಾ ಸರ್.
ಶಾಸಕ : ದಡ್ಡಾ ದಡ್ಡಾ.. ಎಲ್ಲಾರಿಗೂ ಎಲ್ಲಾನೂ ಗೊತ್ತಿರಬೇಕು ಅಂತಾ ರೂಲ್ಸ್ ಏನಾದ್ರೂ ಐತಾ. ಅದು ಪ್ರಿಸ್ಟೇಜು ಕಣಯ್ಯಾ. ಆ ಆಟ ನಡೀತಾ ಇರ್ತದಾ, ಹಂಗೆ ಆಗಾಗ ಕ್ಯಾಮರಾ ಶಾಸಕರ ವಿಐಪಿ ಲಾಂಜ್ ಕಡೆ ತಿರುಗುತ್ತಾ. ಅದನ್ನ ನಮ್ಮ ಜನ ಮನೇಲಿ ಕೂತ್ಕೊಂಡು ಟಿವಿ ಮೊಬೈಲ್ಗಳಲ್ಲಿ ನೋಡ್ತಾರಾ. ಚುನಾವಣೆ ಗೆದ್ದ ಮ್ಯಾಗೆ ನಾನಂತೂ ಜನರಿದ್ದಲ್ಲಿ ಹೋಗೋಕೆ ಆಗ್ತಾ ಇಲ್ಲಾ. ಕ್ರಿಕೆಟ್ ಆಟದ ನೆಪದಲ್ಲಾದ್ರೂ ಜನ ತಮ್ಮ ಟಿವಿ ಮೊಬೈಲ್ಗಳಲ್ಲಿ ನನ್ನ ನೋಡಿ ಖುಷಿ ಪಡ್ತಾರೆ, ನಮ್ಮ ಕುಟುಂಬದವರು ಜೊತೇಲಿ ಇದ್ರೆ ಜನರಿಗೆ ಅವರ ಮುಖ ಪರಿಚಯಾನೂ ಆಗುತ್ತೆ. ಮುಂದೆ ನನ್ನ ಕುಟುಂಬ ರಾಜಕಾರಣಕ್ಕೆ ಉಪಯೋಗ ಆಗುತ್ತಯ್ಯಾ..
ಪಿಎ : ಓಹೋ ದೂರದೃಷ್ಟಿ. ಪುಗಸಟ್ಟೆ ಪ್ರಚಾರ ಗಿಟ್ಟಿಸಿಕೊಳ್ಳೋ ಐಡಿಯಾ.. ಚೆನ್ನಾಗಿದೆ, ಚೆನ್ನಾಗಿದೆ.
ಶಾಸಕ : ಮತ್ತೆ ರಾಜಕಾರಣ ಅಂದ್ರೆ ಏನಂತಾ ತಿಳ್ಕೊಂಡಿದ್ದಿ. ಪಬ್ಲಿಸಿಟಿ ಕಣಯ್ಯಾ ಪಬ್ಲಿಸಿಟಿ. ಕೋಟ್ಯಾಂತರ ಜನ ಊಟ ತಿಂಡಿ ಬೇಕಾದ್ರೂ ಬಿಡ್ತಾರೆ ಹೊರತು ಆ ಆಟಾ ನೋಡೋದು ಬಿಡಾಕಿಲ್ಲಾ. ಈ ಸಲ ನಮ್ಗೂ ಟಿಕೇಟ್ ಬೇಕು ಅಂತಾ ಅಸೆಂಬ್ಲಿಯೊಳಗ ಗಲಾಟೆ ಮಾಡಿದ್ದೀವಿ, ಮುಂದಿನ ಸಲ ಆಟ ನಡೆದಾಗ ನಮ್ಮ ಮುಖವನ್ನೂ ಸಹ ಇಷ್ಟು ಸಲ, ಇಷ್ಟು ನಿಮಿಷ ಕ್ರಿಕೆಟ್ ನಡೆದಾಗ ಕ್ಯಾಮರಾದಲ್ಲಿ ತೋರಿಸ್ಲೇ ಬೇಕು ಅಂತಾ ಗಲಾಟೆ ಮಾಡ್ತೀವಿ. ನಾವೂ ಊಟಾ ತಿಂಡಿ ಅಷ್ಟೇ ಯಾಕss ಬೇಕಾದ್ರ ಉಸಿರೂ ಬಿಡ್ತೀವಿ, ಆದರೆ ಪಬ್ಲಿಸಿಟಿ ಮಾತ್ರ ಬಿಡಾಕಿಲ್ಲಾ ಅಂದ್ರ ಬಿಡಾಕಿಲ್ಲ.
ಪಿಎ : ಬಿಟ್ಟಿ ಪ್ರಚಾರ ಪಡಿಯೋದಿಕ್ಕೆ ಎಂಥಾ ಐಡಿಯಾ ಮಾಡಿದ್ರೀ ಸರss. ಆದ್ರ ಹಿಂಗss ಪುಗ್ಸಟ್ಟೆ ಟಿಕೇಟ್ ಬೇಕೇ ಬೇಕು ಅಂತಾ ಕೇಳಿದ್ರೆ ವಿರೋಧ ಪಕ್ಷದವರು ಟೀಕೆ ಮಾಡೋದಿಲ್ವಾ ಸರ್..
ಶಾಸಕ : ಅಯ್ಯೋ ಹುಚ್ಚಪ್ಪಾ. ಅವರಿಗೂ ಪಬ್ಲಿಸಿಟಿ ಬೇಕಲ್ವಾ. ಅವರಿಗೂ ಬಿಟ್ಟಿ ಟಿಕೇಟ್ ಬೇಕೆ ಬೇಕು, ಅವರಿಗೂ ಕುಟುಂಬ ಪರಿವಾರ ಸಮೇತ ಹೋಗಿ ಆಟ ನೋಡಬೇಕು ಅಂತಾ ಆಸೆ ಇರೋದಿಲ್ವಾ. ಪಕ್ಷಾತೀತವಾಗಿ ಟಿಕೇಟಿಗಾಗಿ ಅಸೆಂಬ್ಲಿಯೊಳಗ ಡಿಮಾಂಡ್ ಇಟ್ಟಿದ್ದೀವಿ. ಸಿಎಂ ಸಾಹೇಬರೂ ಅದಕ್ಕೆ ತಥಾಸ್ತು ಅಂದವ್ರೆ. ಆದರೆ ಆ ಕ್ರಿಕೇಟ್ ಮಂಡಳಿಯವರು ತಕರಾರು ಮಾಡ್ತಾ ಇದ್ದಾರಂತೆ.
ಪಿಎ : ಅವರದೇನಂತೆ ಸರ್ ತಕರಾರು. ನೀವು ಕೊಡು ಅಂದ್ರೆ ಕೊಡಬೇಕು ಅಷ್ಟೇ. ನೀವ್ಯಾರು.. ರಾಜ್ಯ ಆಳುವವರು. ನಿಮಗೇ ಕೊಡಾಕಿಲ್ಲಾ ಅಂತಂದ್ರೆ ಅವರು ನೆಮ್ಮದಿಯಾಗಿ ಆಟ ಆಡ್ಸೋಕೆ ಆಗುತ್ತಾ.
ಶಾಸಕ : ಈ ಸಲ ಎರಡೇ ಎರಡು ಟಿಕೇಟ್ ಕೊಡ್ತೀವಿ, ಮುಂದಿನ ಸಲ ನಾಲ್ಕು ಫ್ರೀ ಟಿಕೇಟ್ ಕೊಡ್ತೀವಿ ಅಂತಾ ಹೇಳ್ತವ್ರಂತೆ.
ಪಿಎ : ನಿಮಗೆಲ್ಲಾ ಫ್ರೀ ಟಿಕೇಟ್ ಯಾಕೆ ಸರ್. ಎಲ್ಲಾ ಶಾಸಕರೂ ಕೋಟಿ ಕೋಟಿ ಆಸ್ತಿ ಮಾಡಿದ್ದಾರೆ, ಜುಜುಬಿ ಐದಾರು ಸಾವಿರ ಖರ್ಚು ಮಾಡಿ ಟಿಕೇಟ್ ಕೊಳ್ಳೋಕೆ ಆಗೋದಿಲ್ವಾ?
ಶಾಸಕ : ಯಾಕಯ್ಯಾ ಕೊಂಡುಕೋಬೇಕು?. ನಾವು ಜನರ ಸೇವಕರು. ಜನರ ಸೇವೆಗೆ ಜನರ ದುಡ್ಡು ಬಳಸಬೇಕೇ ಹೊರತು ನಾವು ನಮ್ಮ ಟ್ಯಾಲೆಂಟ್ ನಿಂದ ಸಂಪಾದಿಸಿ ಕೂಡಿಟ್ಟ ಹಣವನ್ನಲ್ಲ. “ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆಯಿರೋ” ಎಂದು ಕೇಳಿಲ್ವಾ.
ಪಿಎ : ವೆರಿ ಗುಡ್ ಸರ್.. ನಿಮ್ಮಂತಾ ಜನಸೇವಕರು ಇರಬೇಕು ಸರ್. ನಿಮ್ಮಂತವರ ಕೃಪಾಕಟಾಕ್ಷ ನಮ್ಮಂತವರ ಮೇಲೆ ಇರಬೇಕು ಸರ್. ಆದರೂ ಒಂದು ಪ್ರಶ್ನೆ ಸರ್..
ಶಾಸಕ : ಪ್ರಶ್ನೆ ಕೇಳೋದೆ ನಿನ್ನ ಕೆಲಸ ಅಲ್ವೇನಯ್ಯಾ.. ಕೇಳು ಕೇಳು. ನೀನು ಕೇಳ್ತಾ ಇರಬೇಕು, ನಾನು ಹೇಳ್ತಾ ಇರಬೇಕು. ಆಗ್ಲೇ ನಮ್ಮ ಜನರಲ್ ನಾಲೇಜು ಜಾಸ್ತಿ ಆಗೋದು.
ಪಿಎ : ಸರ್ ಮತ್ತೆ ರಾಜ್ಯದ ಅಭಿವೃದ್ಧಿ ಯಾವಾಗ ಮಾಡೋದು ಸರ್?.
ಶಾಸಕ: ಅದಕ್ಕೆ ಸಿಎಂ, ಡಿಸಿಎಂ ಇದ್ದಾರಲ್ವಾ, ಅವರು ಯೋಚನೆ ಮಾಡ್ತಾರೆ. ನಮ್ಮ ಪಾಲಿನ ಅನುದಾನ ನಮಗೆ ಕೊಟ್ರೆ ಸಾಕು, ನಾವೇನೋ ಮಾಡ್ಕೋತೀವಿ. ಹಿಂದಿನ ಇಲೆಕ್ಷನ್ನಿಗೆ ಮಾಡಿದ ಸಾಲ ತೀರಿಸ್ಬೇಕು, ಮುಂದಿನ ಚುನಾವಣಾ ಖರ್ಚಿಗೆ ರೊಕ್ಕಾ ಕೂಡಿಡ್ಬೇಕು. ನಮ್ಮ ಹೆಂಡ್ತಿ ಮಕ್ಕಳಿಗೂ ಏನಾದ್ರೂ ಆಸ್ತಿ ಗೀಸ್ತಿ ಮಾಡಿಡಬೇಕಲ್ವಾ?.
ಪಿಎ : ಅದೆಲ್ಲಾ ಎಲ್ಲರಿಗೂ ಗೊತ್ತಿದೆ ಬಿಡಿ ಸರ್. ಆದರೂ ಜನರಿಗಾಗಿ ನೀವೇನಾದ್ರೂ ಮಾಡಬೇಕಲ್ಲಾ ಸರ್.. ಪಾಪ ಅವ್ರು ನಿಮಗೆ ಓಟ್ ಹಾಕವ್ರೆ..
ಶಾಸಕ : ಮಾಡ್ತಿನಲ್ಲಯ್ಯಾ.. ಸಾಂತ್ವನ ಹೇಳ್ತಾ ಇರ್ತೀನಿ. ನಿಮ್ಮ ಜೊತೆ ನಾನಿದ್ದೀನಿ ಅಂತಾ ಆಶ್ವಾಸನೆ ಕೊಡ್ತಾ ಇರ್ತೀನಿ. ದೇವರ ಮ್ಯಾಗ ಭಕ್ತಿ ಇಟ್ರೆ ಎಲ್ಲಾ ಕಷ್ಟ ಪರಿಹಾರ ಆಗ್ತದೆ ಅಂತಾನೂ ಹೇಳ್ತೀನಿ. ಇನ್ನೂ ಏನು ಮಾಡ್ಬೇಕು?
ಪಿಎ : ಸಾಕು ಬಿಡಿ ಸರss. ಬಾಳಾ ಉಪಕಾರ ಮಾಡ್ತಾ ಇದ್ದೀರಾ? ನಿಮಗೆ ಆ ದೇವರು ಒಳ್ಳೇದು ಮಾಡ್ಲಿ. ನೀವು ಕೇಳಿದ ಟಿಕೇಟ್ ಕೇಳಿದಾಗೆಲ್ಲಾ ಕೊಡಸ್ಲಿ. ( ಮೆಲ್ಲಗೆ) ಆದಷ್ಟು ಬೇಗ ನೀವೂ ಟಿಕೇಟ್ ತಗೊಂಡು ಮೇಲಕ್ಕೆ ಹೋದ್ರೆ ಅದೇ ನೀವು ಜನರಿಗೆ ಮಾಡೋ ಉಪಕಾರ.
ಹಾಡು :
ನಾಯಕರು ನಮ್ಮ ಜನ ನಾಯಕರು
ಇರೋದು ಹೀಗೆ, ಹಾರಿಸುವರು ಕಾಗೆ
ಹೇಳುವುದೊಂದು ಮಾಡುವುದಿನ್ನೊಂದು
ಕೇಳುವವರಾರು ಜನರ ಸಂಕಟದ ಬೇಗೆ
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಒದಿ- http://ರಂಗಭೂಮಿ | “ವಚನ ಕಲ್ಯಾಣ” ಮತ್ತೆ ಮುಂದಕ್ಕೆ; ಅಡೆತಡೆ ಯಾತಕ್ಕೆ? https://kannadaplanet.com/vachana-kalyana-to-go-ahead-again-whats-the-obstacle/


