ಜಗತ್ತಿನ ಅತಿದೊಡ್ಡ ಲೈಂಗಿಕ ಹಗರಣ‌ ಇದು, ಹಿಂದೂ ಹೆಣ್ಣುಮಕ್ಕಳ‌ ಮಾಂಗಲ್ಯಹರಣವಾಗಿದೆ: ಕೃಷ್ಣಬೈರೇಗೌಡ ಆಕ್ರೋಶ

Most read

ಬೆಂಗಳೂರು: ಸಂಸದ ಮತ್ತು NDA ಅಭ್ಯರ್ಥಿ‌ ಪ್ರಜ್ವಲ್ ರೇವಣ್ಣನ‌‌ ಕಾಮಕಾಂಡ ಜಗತ್ತಿನ ಅತಿದೊಡ್ಡ ಲೈಂಗಿಕ ಹಗರಣ ಎಂದು ಬಣ್ಣಿಸಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ, ಇಷ್ಟೊಂದು ಹೆಣ್ಣುಮಕ್ಕಳ ಮಾಂಗಲ್ಯ ದೋಚಿರುವ ಇಂಥ ಇನ್ನೊಂದು‌ ಪ್ರಕರಣ ತೋರಿಸಿ ಎಂದು ಸವಾಲು ಹಾಕಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪೆನ್ ಡ್ರೈವ್ ಪ್ರಕರಣದ ಹಿನ್ನೆಲೆ ಮರೆತಿದ್ದೇವೆ ಅನಿಸುತ್ತದೆ. ಪ್ರಪಂಚದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣವಿದು. ಇಷ್ಟೊಂದು ಹಿಂದೂ ಮಹಿಳೆಯರು ಮಾಂಗಲ್ಯ ದೋಚಿರುವ ಇದಕ್ಕಿಂತ ಇನ್ನೊಂದು ದೊಡ್ಡ ಪ್ರಕರಣ ತೋರಿಸಿ ನೋಡೋಣ. ಮಾನಹರಣ, ಶೀಲಹರಣ ಮಾಡಿರುವ ಹಗರಣ ಇದು. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದರು.

ಒಕ್ಕಲಿಗ ಸಚಿವರಿಂದ ನಡೆದ ಮಹತ್ವದ ಸುದ್ದಿಗೋಷ್ಠಿಯಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಗೂಬೆ ಕೂರಿಸುತ್ತಿರುವ ಹೆಚ್. ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಯಿತು.

ಇದು ನಾಗರಿಕ ಸಮಾಜದ ವರ್ತನೆ ಅಲ್ಲ, ಅನಾಗರಿಕತೆ. ವಿಡಿಯೋ ಬಿಡುಗಡೆ ತಪ್ಪು ಅಂತಾದ್ರೆ, ದೌರ್ಜನ್ಯ ಸರಿನಾ? ಯಾರು ತಪ್ಪು ಮಾಡಿದ್ದು ? ಯಾರ ಹತ್ರ ಇತ್ತು ಪೆನ್ ಡ್ರೈವ್ ? ವರ್ಷದ ಹಿಂದೆ ಅವರೇ ಹೋಗಿ ದೂರು ಕೊಡಬಹುದಿತ್ತಲ್ವಾ? ಎಂದು ಕೃಷ್ಣಬೈರೇಗೌಡ ಪ್ರಶ್ನಿಸಿದರು.

ನಮ್ಮ ಅಧ್ಯಕ್ಷರೇ (ಡಿ.ಕೆ.ಶಿವಕುಮಾರ್) ತಪ್ಪು ಮಾಡಿದ್ದರೆ, ಅವರಿಗೂ ಶಿಕ್ಷೆ ಆಗಲಿ. ಪ್ರಕರಣವನ್ನು ಡೈವರ್ಟ್ ಮಾಡುತ್ತಿರೋದು ಯಾರು? ಯಾರೇ ಡೈವರ್ಟ್ ಮಾಡಲು ಯತ್ನಿಸಿದ್ರು ಅದು ತಪ್ಪೇ ಅಲ್ಲವೇ? ಮಹಿಳೆಯರ ಮಾನಭಂಗ ಮಾಡೋದು ಅಯ್ಯೋ ಪಾಪ ಎನ್ನುವ ವಿಷಯನಾ ಎಂದು ಅವರು ಕಿಡಿಕಾರಿದರು.

More articles

Latest article