ಹಸಿರನ್ನು ಸುಟ್ಟು, ವಿಷ ರಾಸಾಯನಿಕಗಳನ್ನು ಗಾಳಿ, ನೀರು, ಮಣ್ಣಿಗೆ ಚೆಲ್ಲುತ್ತ, ಸಿಡಿಯುವ ಬೆಂಕಿ (ಬಾಂಬ್, ಷೆಲ್, ಮಿಸೈಲು…)ಯನ್ನು ಎಸೆಯುತ್ತ, ಆಗಸವನ್ನೆಲ್ಲ ಕವಿಯುವ ಭಯಾನಕ ಸದ್ದುಗಳನ್ನು ಹುಟ್ಟಿಸುತ್ತ, ಬರ್ಬರರಂತೆ ಕಂಡದ್ದನೆಲ್ಲ ಕೊಚ್ಚಿ ಕತ್ತರಿಸುತ್ತ ಸಾಗುವ ಯುದ್ಧಕ್ಕೆ ಗಂಡಸರೆ ಹೆದರಿದ್ದಾರೆ ಎಂದರೆ ಅವರೇ ಕಡೆದ ಹಿಂಸೆಯ ವಿಧಾನಗಳನ್ನು ಎದುರಿಸುವವರಾರು? ಇದು ಕವಿಯ ಪ್ರಶ್ನೆ –ಕೆ ಎಸ್ ರವಿಕುಮಾರ್
ಯುದ್ಧದ ಕೆಚ್ಚು ಕಂಡು ಗೋಳಾಡುವುದು
ಓಹ್, ಯುದ್ಧ ದೇವತೆಯೆ,
ಕಂಡದ್ದನ್ನೆಲ್ಲ ನೀನು ಕೊಚ್ಚಿ ಸವರುವೆ
ಭಯಂಕರ, ದಿಗಿಲುಕೋರ ರೆಕ್ಕೆಗಳಿಂದ ಮೇಲೇರುತ್ತ
ನಮ್ಮ ನೆಲ, ನೆಲೆಗಳನು ಹುಟ್ಟಡಗಿಸಲು ಮುನ್ನುಗ್ಗಿ ಬರುವೆ
ಸಿಡಿಲಿನಂತೆ ಕೆರಳಿ
ತೂಫಾನಿನಂತೆ ಊಳಿಡುತ್ತ
ಬಿರುಗಾಳಿಯಂತೆ ಬೊಬ್ಬಿರಿಯುತ್ತ
ಸಿಡಿತ, ಕಟ್ಟೊರೆತ, ಕಿರಿಚು, ಬಡಿತಗಳೊಂದಿಗೆ
ಗಾಳಿಸುರುಳಿಯ ಚಾಟಿ ಬೀಸುತ್ತ ಬರುವೆ
ಸಮೀಪಿಸುವ ನಿನ್ನ ಹೆಜ್ಜೆಸದ್ದಿಗೆ
ಗಂಡಸರು ತತ್ತರಿಸಿದ್ದಾರೆ
ನಿನ್ನ ಕಿನ್ನರಿಯಲ್ಲಿ
ಯಾತನೆ, ಹತಾಶೆ, ದುಃಖಗಳೆಲ್ಲ ಕಿರುಲುತ್ತಿವೆ
ಉಗ್ರ ನೀರಹಲ್ಲಿಯಂತೆ ನೆಲಕ್ಕೆಲ್ಲ
ವಿಷ ಚೆಲ್ಲುತ್ತ ಬರುವೆ
ಗುಡುಗು ಗುರುಗುಟ್ಟುವಂತೆ
ಆಗಸವನ್ನೆಲ್ಲ ಕವಿಯುವೆ
ಗಿಡಮರಗಳು ನಿನ್ನೆದುರು
ಮಂಡಿಯೂರಿ ಅಗತುಕೊಳ್ಳುತ್ತವೆ
ನೆತ್ತರು ಹೆಬ್ಬೆಟ್ಟಗಳ ಬದಿಯಿಂದ
ಭೋರ್ಗರೆದು ಧುಮ್ಮಿಕ್ಕುತ್ತದೆ
ಹಗೆ, ಅತ್ಯಾಶೆ, ಸೇಡುಗಳ ಜೀವಾಳ ನೀನೆ!
ನಿನ್ನ ಭೀಷಣ, ಹಿಂಸ್ರ ಬೆಂಕಿ
ಭುವಿಯನ್ನು ನೊಣೆದು ನುಂಗುತ್ತದೆ
ನಿನ್ನ ಕುದುರೆಯನ್ನು
ರೊಚ್ಚಿಗೆಬ್ಬಿಸುವ ಅಪ್ಪಣೆಗಳ
ಕೊರಡೆಯಿಂದ ಹೊಡೆಯುತ್ತ
ನಮ್ಮ ಪಾಡಿನ ಮೇಲೋಡಿಸುವೆ
ಮನುಜರೆಲ್ಲರ ಅರಿಕೆ,
ಕ್ರಿಯೆಗಳ ಮೇಲೆ ವಿಜಯೋತ್ಸವ ನಿನ್ನದೆ
ನಿನ್ನ ಉದ್ರೇಕದ ಭಾಷಣವನ್ನು
ಯಾರು ವಿವರಿಸುವವರು?
ಓಹ್, ಯುದ್ಧ ದೇವತೆಯೆ,
ಹೀಗೇಕೆ ಮುಂದುವರೆಯುವೆ?
***
ಯುದ್ಧ ಶುರುವಾಗುವುದು ಯುದ್ಧ ಬೇಕೆನ್ನುವವರ ಉದ್ರೇಕದ, ಉನ್ಮತ್ತ ಕೆರಳಿಸುವ ಭಾಷಣಗಳ ಮೂಲಕ. ಮನುಷ್ಯರೆಲ್ಲರ ಬದುಕಿನ ಬೇಡಿಕೆ, ಕ್ರಿಯೆಗಳನ್ನು ಯುದ್ಧ ಆಕ್ರಮಿಸಿಕೊಳ್ಳುತ್ತದೆ. ಯುದ್ಧದಲ್ಲಿ ತೊಡಗಿರುವವರಿಗೆ ರೊಚ್ಚಿಗೆಬ್ಬಿಸುವ ಅಪ್ಪಣೆಗಳನ್ನು ನೀಡುತ್ತಲೇ ಇರಬೇಕು. ಯುದ್ಧವೆಂದರೆ ಸೇಡಿನ ಬೆಂಕಿಯನ್ನು ತಣಿಸಿಕೊಳ್ಳುವ ತವಕ. ಹಗೆಯ ತೀವ್ರತೆಯನ್ನು ಹೆಚ್ಚಿಸಿಕೊಳ್ಳುವ ಕುಹಕ. ಗೆದ್ದು ಬೀಗುವ ಅತ್ಯಾಶೆ.
ಹಸಿರನ್ನು ಸುಟ್ಟು, ವಿಷ ರಾಸಾಯನಿಕಗಳನ್ನು ಗಾಳಿ, ನೀರು, ಮಣ್ಣಿಗೆ ಚೆಲ್ಲುತ್ತ, ಸಿಡಿಯುವ ಬೆಂಕಿ (ಬಾಂಬ್, ಷೆಲ್, ಮಿಸೈಲು…)ಯನ್ನು ಎಸೆಯುತ್ತ, ಆಗಸವನ್ನೆಲ್ಲ ಕವಿಯುವ ಭಯಾನಕ ಸದ್ದುಗಳನ್ನು ಹುಟ್ಟಿಸುತ್ತ, ಬರ್ಬರರಂತೆ ಕಂಡದ್ದನೆಲ್ಲ ಕೊಚ್ಚಿ ಕತ್ತರಿಸುತ್ತ ಸಾಗುವ ಯುದ್ಧಕ್ಕೆ ಗಂಡಸರೆ ಹೆದರಿದ್ದಾರೆ ಎಂದರೆ ಅವರೇ ಕಡೆದ ಹಿಂಸೆಯ ವಿಧಾನಗಳನ್ನು ಎದುರಿಸುವವರಾರು? ಇದು ಕವಿಯ ಪ್ರಶ್ನೆ.
ಮೇಲಿನ ಕವಿತೆಗೆ ಎಷ್ಟು ವರುಷಗಳು ಸಂದಿರಬಹುದು? ಅದು ಯುದ್ಧದೇವತೆಯನ್ನು ಮೇಲುನೋಟಕ್ಕೆ ಹೊಗಳುತ್ತಿರಬೇಕು ಎಂದೆನಿಸಿದರು ಒಳಗೆ ಹೆಪ್ಪುಗಟ್ಟಿದ ಯುದ್ಧ ಸಂಬಂಧಿ ಕೆಡುಕುಗಳನ್ನು ನೈಸರ್ಗಿಕ ವಿಪತ್ತುಗಳ ಮೂಲಕ ನಮ್ಮ ಮುಂದಿಡಲಾಗಿದೆ. ಅಂದಹಾಗೆ ಮುಖ್ಯ ಪ್ರಶ್ನೆಗೆ ಬರೋಣ, ಈ ಕವಿತೆ ಎಷ್ಟು ಹಳೆಯದು? ಏನಿಲ್ಲವೆಂದರೂ 4,250 ವರುಷಗಳಷ್ಟು! ಬರೆದದ್ದು ಮಾನವ ಚರಿತ್ರೆಯಲ್ಲಿ ‘ದಾಖಲಿಸಲ್ಪಟ್ಟ ಮೊಟ್ಟಮೊದಲ ಕವಿ’ ಎಂಬ ಅಗ್ಗಳಿಕೆಗೆ ಪಾತ್ರಳಾದ ಎನ್ಹೆದುಆನ್ನ (ಕ್ರಿ.ಪೂ.2286-2251). ಈಕೆ ಮೊದಲ ಮಹಿಳಾ ಕವಿಯೂ ಹೌದು. ಎನ್ಹೆದುಆನ್ನ ರಚಿಸಿದ ಹಲವು ಕವಿತೆಗಳು ಸುಮೇರಿಯನ್ ನುಡಿಯಲ್ಲಿವೆ.
ಎನ್ಹೆದುಆನ್ನಳ ತಂದೆ ಸಾರ್ಗೊನ್ ಅಕ್ಕಾಡಿಯನ್ ಸಾಮ್ರಾಜ್ಯದ ಮೊದಲ ಚಕ್ರವರ್ತಿ. ಅವಳನ್ನು ಆತ ದಕ್ಷಿಣ ಇರಾಕಿನಲ್ಲಿರುವ ಉರ್ ಪಟ್ಟಣದ ಚಂದ್ರನ ದೇಗುಲದ ಮುಖ್ಯ ಪೂಜಾರಿಣಿಯಾಗಿ ನೇಮಿಸುತ್ತಾನೆ. ಅಲ್ಲವಳು ದೇವತೆಗಳಿಗೆಂದು ‘ಹೊಗಳುಹಾಡು’(Temple hymn)ಗಳನ್ನು ರಚಿಸುತ್ತಾಳೆ. ಆ ಹಾಡುಗಳಲ್ಲಿ ಮುಕ್ತ ಕವಿತೆಯ ಲಕ್ಷಣಗಳನ್ನು ಗುರುತಿಸಲಾಗಿದೆ. ‘ಯುದ್ಧದ ಕೆಚ್ಚು ಕಂಡು ಗೋಳಾಡುವುದು’ (Lament to the Spirit of War) ಕವಿತೆ ಯುದ್ಧವೆಂಬುದು ಕಲಿತನದ ಸೆಣೆಸಾಟ ಎಂದು ಹೇಳುತ್ತಲೆ ಅದು ಗೋಳುಗಳ ಖಜಾನೆಯನ್ನೆ ನಮ್ಮೆದುರು ಸುರಿಯುವ ಬಗ್ಗೆ ಕಳವಳ ತೋರುತ್ತದೆ. ಯುದ್ಧದ ಭೀಕರತೆಯಲ್ಲಿ ಅಂದಿಗೂ ಇಂದಿಗೂ ಏನೂ ವ್ಯತ್ಯಾಸವಾಗಿಲ್ಲ. ಸಾವು, ನೋವು, ಹಾನಿಗಳ ಪರಂಪರೆಯನ್ನು ಏಕೆ ಮುಂದುವರೆಸುತ್ತಿರುವೆ ಎಂದು ಕವಿ ಯುದ್ಧ ದೇವತೆಯನ್ನು ಕೇಳುತ್ತಾಳೆ. ಈ ಕವಿತೆ ಜಗತ್ತಿನ ಮೊಟ್ಟ ಮೊದಲ ಯುದ್ಧ ವಿರೋಧಿ ಕವಿತೆಯೂ ಹೌದು. ಹೆಂಗರುಳು ಯುದ್ಧವನ್ನು ವಿರೋಧಿಸಲೆಬೇಕು. ಯಾಕೆಂದರೆ ಗಂಡಿನ ಹಮ್ಮು ತರುವ ಯುದ್ಧದ ಅನಾಹುತಗಳಿಗೆ ಅದೇ ಅಲ್ಲವೆ ಮೊದಲ ಬಲಿ. ಹೆಣ್ಣಿನ ಬಸಿರು ತಾನೇ, ಅಪರ ನೋವು ತಿಂದು ಯುದ್ಧಕ್ಕೆ ಬೇಕಾಗುವ ಗಂಡಾಳುಗಳನ್ನು ಹೆತ್ತು ಕೊಡುವುದು. ಯುದ್ಧದ ನಿಷ್ಕರುಣಿ ಹಸಿವಿನ ಆಳ ಅಗಲಗಳನ್ನು ಈ ತನಕ ಅಳೆದವರಿಲ್ಲ. ನಮ್ಮ ಆಧುನಿಕ ಯುಗದಲ್ಲೂ ಬಗೆಬಗೆಯ ಹತಾರಗಳನ್ನು ಕಂಡುಹಿಡಿದು ಬಳಸುತ್ತ ಯುದ್ಧವನ್ನು ‘ಸ್ಯಾಡಿಸಮ್’ ಆಗಿ ಮಾರ್ಪಡಿಸಿಕೊಂಡ ನಾಯಕರನ್ನು ಪ್ರಶ್ನೆ ಮಾಡುವುದು ಗುರುತರ ಅಪರಾಧವೆಂದು ಬಗೆಯಲಾಗುತ್ತೆ.
ಕಳೆದ ಶತಮಾನದಲ್ಲಿ ಎನ್ಹೆದುಆನ್ನಳ ಕವಿತೆಗಳನ್ನು ಸಂಕಲಿಸಲಾಯಿತು. ಇಂಗ್ಲಿಷಿಗೆ ತರ್ಜುಮೆ ಮಾಡಲಾಯಿತು. ಹಲವು ಪ್ರಕಾಶನಗಳು ಅವನ್ನು ಪ್ರಕಟಿಸಿದವು. ನಾನಿಲ್ಲಿ ಮೊದಲ ಬಾರಿಗೆ ಕನ್ನಡಕ್ಕೆ ತಂದ ಕವಿತೆಯನ್ನು ಇಂಗ್ಲಿಷಿಗೆ ತಂದದ್ದು ಮೈಕೆಲ್ ಆರ್. ಬರ್ಚ್ ಅವರು.
ನಾವೀಗ ಯುದ್ಧಗಳನ್ನು ಹಾದುಹೋಗುತ್ತಿದ್ದೇವೆ. ಯಾವಾಗ ಯಾವ ದೇಶ ಯುದ್ಧದ ಹುಚ್ಚು ಸುಳಿಗೆ ಬೀಳುತ್ತದೆ ಎಂದು ಹೇಳುವುದು ತೊಡಕಾಗಿದೆ. ಯುದ್ಧ ತರುವ ಸಾವು ಊಟ, ನಿದ್ದೆ, ನೀರಡಿಕೆಯಷ್ಟೆ ಸಹಜವಾಗುತ್ತಿದೆ. ಯುದ್ಧದ ಹುಂಬತನಕ್ಕೆ ಬದುಕಿನುದ್ದಕ್ಕೂ ದುಡಿದು ಗಳಿಸಿಕೊಂಡ ವಿವೇಕ, ವಿವೇಚನೆಗಳನ್ನು ಅಡವಿಟ್ಟಿದ್ದೇವೆ. ಎಲ್ಲರಲ್ಲೂ ಹೆಡ್ಡ ಶೌರ್ಯ ಹೆಡೆಯಾಡುತ್ತಿದೆ. ಯುದ್ಧಕ್ಕೆ ನೆವಗಳನ್ನು ಹುಡುಕಲು ದೈವಭಕ್ತಿ, ಧರ್ಮ, ಜನಾಂಗೀಯ ಶ್ರೇಷ್ಠತೆಗಳ ಒಡಲಲ್ಲಿ ಗಣಿಗಾರಿಕೆ ಮಾಡುತ್ತಿದ್ದೇವೆ. ಅವುಗಳ ಜೊತೆಗೆ ಆಧುನಿಕ ತಾಂತ್ರಿಕತೆಯನ್ನು ಮುಚ್ಚಟೆಯಿಂದ ಕಲೆಸಿ, ನಾದಿ, ಬಡಿದು ಪೈಶಾಚಿಕ ಉಮೇದಿನಿಂದ ಪ್ರಯೋಗಿಸುತ್ತ ನಾಶದ ಹೆದ್ದಾರಿಯಲ್ಲಿ ಕುಣಿದು ಕುಪ್ಪಳಿಸಿ ಸಾಗಿದ್ದೇವೆ. ಎಲ್ಲೋ ಅಲ್ಲೊಂದು ಇಲ್ಲೊಂದು ಸಣ್ಣಗೆ ಕಿವಿಯ ಮೇಲೆ ಬೀಳುವ ಸಂಯಮದ ಮಾತುಗಳನ್ನು ಹೀಗಳೆದಿದ್ದೇವೆ. ಯುದ್ಧ ವಿರೋಧಿ ಶಾಂತಿಪ್ರಿಯರು ಒಮ್ಮೆಲೆ ದೇಶದ್ರೋಹಿಯೊ, ಧರ್ಮದ್ರೋಹಿಯೊ ಅಥವಾ ಮತ್ತೇನೊ ಹುರುಳಿಲ್ಲದ ಹಣೆಪಟ್ಟಿ ಲಗತ್ತಿಸಿಕೊಳ್ಳಲು ತಯಾರಾಗಿರಬೇಕಿದೆ. ಅಮೆರಿಕನ್ ಸಾಹಿತಿ ಹೆಲೆನ್ ಮ್ಯಾಕ್ಲಾಯ್ ಹೇಳುತ್ತಾಳೆ ‘ಯುದ್ಧದಲ್ಲಿ ಎಸಗುವ ಎಲ್ಲ ಕೆಲಸಗಳು ಶಾಂತಿಯ ಕಾಲದ ಅಪರಾಧಗಳು ಎಂಬುದನ್ನು ನಾವು ಮರೆಯಬಾರದು’ ಎಂದು. ಆದರೆ ಯುದ್ಧ ವಿರೋಧಿಗಳೇ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದ ಹೀನಾಯ ಸ್ಥಿತಿಗೆ ನಾವು ಇಂದು ಜಗತ್ತನ್ನು ತಂದು ನಿಲ್ಲಿಸಿದ್ದೇವೆ.
ಅಂದು ಎನ್ಹೆದುಆನ್ನ ಕೇಳಿದ ಪ್ರಶ್ನೆಯನ್ನು ಈಗ ನಾನೂ ಕೇಳುತ್ತೇನೆ. ಯುದ್ಧದೇವತೆಯೆ ಹೀಗೇಕೆ ಮುಂದುವರೆಯುವೆ?
ಎನ್ಹೆದುಆನ್ನಳ ಕಾಲದಿಂದ ಎರಡು ಸಾವಿರ ವರುಷಗಳ ನಂತರ ಚಕ್ರವರ್ತಿ ಅಶೋಕ ಯುದ್ಧ ತರುವ ಗೆಲುವಿನ ಸಡಗರಕ್ಕೆ ಬೆನ್ನು ತಿರುಗಿಸುತ್ತಾನೆ. ಮತ್ತೆ ಮುಂದಿನ ಎರಡು ಸಾವಿರ ವರುಷಗಳ ನಂತರ ಗಾಂಧೀಜಿ ವಿಮೋಚನಾ ಹೋರಾಟ ಮತ್ತು ಚಳವಳಿಗಳು ಅಹಿಂಸಾತ್ಮಕ ಹಾಗೂ ಪಾರದರ್ಶಕವಾಗಿದ್ದರೆ ಸೇಡಿನ ಪರಂಪರೆಯನ್ನು ಮುಂದುವರೆಸದೆ ಗೆಲುವು ಕಾಣಬಹುದು ಎಂಬುದನ್ನು ತೋರಿಸಿ ಕೊಡುತ್ತಾರೆ. ಮಂಡೆಲಾ ಮನಸ್ಸು ಮಾಡಿದ್ದರೆ ದಕ್ಷಿಣ ಆಫ್ರಿಕಾವನ್ನು ಮಿಲಿಟರಿ ಶಕ್ತಿಯಾಗಿ ಕಟ್ಟಿ ಕರಿಯರನ್ನು ಸದಾ ಬಿಳಿಯರ ವಿರುದ್ಧ ಸನ್ನದ್ಧವಾಗಿರುವಂತೆ ಪ್ರಚೋದಿಸಲು ಎತ್ತಿಕಟ್ಟಬಹುದಾಗಿತ್ತು. ಆದರೆ ಅವರೂ ಶಾಂತಿಯ, ಅಹಿಂಸಾತ್ಮಕ ದಾರಿಗಳನ್ನು ತುಳಿಯುತ್ತಾರೆ. ನಾವಿನ್ನೂ ಯುದ್ಧದಲ್ಲಿ ಮಹೋನ್ನತ ಪರಿಹಾರಗಳನ್ನು ಹುಡುಕುತ್ತಿದ್ದೇವೆ. ಯುದ್ಧಕ್ಕೆ ಕಾರಣ ಅದೆಷ್ಟೆ ಉದಾತ್ತವಿರಲಿ ಕಲ್ಲೆದೆಗೆ ಸಮನಾಗಿ ನಿಂತು ಯುದ್ಧ ಬೇಡವೆನ್ನುವ ತಾಕತ್ತು ಬೆಳೆಸಿಕೊಳ್ಳುವ ಸಮಾಜ ಭೂಮಿಗೆ ಭರವಸೆಯಾದೀತು. ಗಿಬ್ರಾನ್ ತನ್ನ ‘ಸ್ವಾತಂತ್ರ್ಯ’ ಕವಿತೆಯಲ್ಲಿ ಬರೆಯುವ ಸಾಲಿದು ‘ಬದುಕು ಸಾವಿಗಿಂತ ದುರ್ಬಲ, ಸಾವು ಸತ್ಯಕ್ಕಿಂತ ದುರ್ಬಲ’. ನಾವು ಬದುಕಿನಲ್ಲಿ ಇರುವಿಕೆಯ ಸತ್ಯವನ್ನು ಅರಸುವ ಬದಲು ಯುದ್ಧದಲ್ಲಿ ಅರಸುತ್ತಿದ್ದೇವೆ.
ಯಹೂದಿ ಗಾದೆ ಹೇಳುತ್ತದೆ ‘ಒಳ್ಳೆಯ ಯುದ್ಧಕ್ಕಿಂತ ಕೆಟ್ಟ ಶಾಂತಿ ಮೇಲು’. ಹೌದು, ಕೆಟ್ಟ ಶಾಂತಿಯ ಕಾಲದಲ್ಲಿ ಯಾರೂ ಮತ್ತೊಬ್ಬರ ಸಾವಿಗೆ ಹಪಾಹಪಿಸುವುದಿಲ್ಲ.
ಚೀನಿ ಗಾದೆ ಹೇಳುತ್ತೆ ‘ಯುದ್ಧ ಯಾರು ಸರಿಯೆಂದು ನಿರ್ಧರಿಸುವುದಿಲ್ಲ, ಯಾರು ಬದುಕುಳಿದವರು ಎಂದು ನಿರ್ಧರಿಸುತ್ತೆ’.
ಯುದ್ಧ ಬೇಕು ಎನ್ನುವವರು ತಮ್ಮ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಒಂದೊಳ್ಳೆಯ ಭೂಮಿಯನ್ನು ಕಳೆದುಕೊಳ್ಳಲು ತಯಾರಾಗಿರಬೇಕು.
ಕೆ.ಎಸ್.ರವಿಕುಮಾರ್, ಹಾಸನ
ಮೊ : 89510 55154
ಇದನ್ನೂ ಓದಿ- ಕುಳಿತು ತಿನ್ನುವವರು, ದುಡಿದು ಉಣ್ಣುವವರು ಮತ್ತು ಬೆಂಕಿಯ ಮಳೆ