ನವದೆಹಲಿ, ಮಾರ್ಚ್ 25: 4 ವರ್ಷದ ಮಗುವಿನ ಅತ್ಯಾಚಾರ ಪ್ರಕರಣದಲ್ಲಿ ಹರಿಯಾಣದ ಗುರುಗ್ರಾಮ್ ಪೊಲೀಸರ ತನಿಖೆಯಲ್ಲಿ ತೀವ್ರ ಲೋಪಗಳು ಕಂಡುಬಂದಿರುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪೊಲೀಸರು ಆರೋಪಿಗಳನ್ನು ರಕ್ಷಿಸಲು ಎಲ್ಲಾ ಪ್ರಯತ್ನ ಮಾಡಿದ್ದಾರೆ ಎಂದು ಕೋರ್ಟ್ ಗುಡುಗಿದೆ.
ಗುರುಗ್ರಾಮ್ನ ಸೆಕ್ಟರ್ 54ರ ಒಂದು ಸೊಸೈಟಿಯಲ್ಲಿ ಸುಮಾರು ಎರಡು ತಿಂಗಳ ಕಾಲ ಎರಡು ಮಹಿಳಾ ಗೃಹಕಾರ್ಯಕರ್ತೆಯರು ತಮ್ಮ ಪುರುಷ ಸಹಚರನೊಂದಿಗೆ 4 ವರ್ಷದ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪವಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಸುಪ್ರೀಂ ಕೋರ್ಟ್ ತ್ರಿಸದಸ್ಯಪೀಠ ಪೊಲೀಸ್ ತನಿಖೆಯನ್ನು “ಸಂಪೂರ್ಣ ಜವಾಬ್ದಾರಿಯಿಲ್ಲದ, ಅಸಂವೇದನಾಶೀಲ ಮತ್ತು ಕಾನೂನು ಬಾಹಿರ” ಎಂದು ವಿವರಿಸಿದೆ. “ಮಗುವನ್ನು ಟೇಬಲ್ ಅಥವಾ ಕುರ್ಚಿಯಂತೆ ನಡೆಸಿಕೊಳ್ಳಲಾಗಿದೆ” ಎಂದು ಕೋರ್ಟ್ ತೀವ್ರ ಟೀಕಿಸಿದೆ.
ಬಾಲಕಿಯನ್ನು ಪೊಲೀಸ್ ಸ್ಟೇಷನ್ಗೆ ಕರೆದೊಯ್ದು, ಆರೋಪಿಗಳು ಕೇವಲ 4 ಅಡಿ ದೂರದಲ್ಲೇ ನಿಂತಿರುವಾಗ ಪ್ರಶ್ನಿಸಲಾಗಿದೆ. ಮ್ಯಾಜಿಸ್ಟ್ರೇಟ್ ಆರೋಪಿಗಳ ಸಮಕ್ಷಮದಲ್ಲೇ ಬಾಲಕಿಯ ಹೇಳಿಕೆ ದಾಖಲಿಸಿದ್ದಾರೆ. ಬಾಲಕಿಯ ಗುರುತನ್ನು ಎಲ್ಲಾ ದಾಖಲೆಗಳಲ್ಲಿ ಬಹಿರಂಗಪಡಿಸಲಾಗಿದೆ. ತನಿಖೆಯಲ್ಲಿ ತೋರಿದ ಅಸಂವೇದನೆಯಿಂದ ಮಗುವಿನ ಆಘಾತ ಇನ್ನಷ್ಟು ಹೆಚ್ಚಾಗಿದೆ. “ಮಗುವು ಅತ್ಯಾಚಾರದ ನಂತರ ಇನ್ನೂ ಭಯಾನಕ ಅನುಭವಕ್ಕೆ ಒಳಗಾಗಿದೆ” ಎಂಬುದನ್ನು ಕೋರ್ಟ್ ಗಮನಿಸಿದೆ.
ಪೊಲೀಸ್ ಅಧಿಕಾರಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, “ಇಂತಹ ಪ್ರಕರಣಗಳಲ್ಲಿ ಅವರ ಅಕಾಡೆಮಿಕ್ ಅಥವಾ ವೃತ್ತಿಪರ ಅರ್ಹತೆಯ ಬಗ್ಗೆಯೇ ನಮಗೆ ಸಂದೇಹವಿದೆ” ಎಂದು ಹೇಳಿದೆ.
ಈ ಸಂಬಂಧ ಹರ್ಯಾಣ ಸರ್ಕಾರಕ್ಕೆ ನಿರ್ದೇಶನ ನೀಡಿರುವ ಕೋರ್ಟ್, ಮೂವರು ಮಹಿಳಾ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (SIT) ರಚಿಸುವಂತೆ ಆದೇಶಿಸಿದೆ. ಗುರುಗ್ರಾಮ್ ಪೊಲೀಸರು ಕೇಸ್ನ ಎಲ್ಲಾ ದಾಖಲೆಗಳನ್ನು ಗುರುವಾರದೊಳಗೆ (ಮಾರ್ಚ್ 27) SITಗೆ ಹಸ್ತಾಂತರಿಸಬೇಕು ಎಂದು ಸ್ಪಷ್ಟಪಡಿಸಿದೆ.
ಪ್ರಕರಣದಲ್ಲಿ POCSO ಕಾಯ್ದೆಯ ಸೆಕ್ಷನ್ 6 ಅಡಿಯಲ್ಲಿ ಅಪರಾಧ ಎಸಗಲಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಕೋರ್ಟ್ ಗಮನಿಸಿದೆ. ತನಿಖೆಯಲ್ಲಿ ತೊಡಗಿದ ಅಧಿಕಾರಿಗಳ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಕೋರ್ಟ್ ಪ್ರಶ್ನಿಸಿದೆ.
ಈ ಪ್ರಕರಣವು ಭಾರತೀಯ ಪೊಲೀಸ್ ವ್ಯವಸ್ಥೆಯು ಪೋಕ್ಸೋದಂಥ ಸೂಕ್ಷ್ಮ ಪ್ರಕರಣಗಳನ್ನು ನಿರ್ವಹಿಸುವಷ್ಟು ಸಂವೇದನಾಶೀಲವಾಗಿದೆಯೇ ಎಂಬ ಗಂಭೀರ ಪ್ರಶ್ನೆಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ.

