Saturday, July 27, 2024

ಯಾವುದೇ ಕೋರ್ಟುಗಳಲ್ಲಿ ದಾವೆ ಹೂಡುವಾಗ ಜಾತಿ, ಧರ್ಮ ನಮೂದಿಸುವಂತಿಲ್ಲ: ಸುಪ್ರೀಂ ಕೋರ್ಟ್ ಆದೇಶ

Most read

ಎಲ್ಲಾ ಹೈಕೋರ್ಟ್ ಮತ್ತು ಅಧೀನ ನ್ಯಾಯಾಲಯಗಳಲ್ಲಿ, ದಾವೆ ಪತ್ರಗಳಲ್ಲಿ ಅರ್ಜಿದಾರರ ಜಾತಿಯನ್ನಾಗಲೀ ಧರ್ಮವನ್ನಾಗಲೀ ನಮೂದಿಸುವುದನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಸುಪ್ರೀಂ ಕೋರ್ಟು ಆದೇಶ ಹೊರಡಿಸಿದೆ.

ನ್ಯಾ. ಹಿಮಾ ಕೋಹ್ಲಿ ಮತ್ತು ಅಸಾದುದ್ದೀನ್ ಅಮಾನುಲ್ಲಾ ಒಳಗೊಂಡ ಪೀಠವು ಜಾತಿ-ಧರ್ಮ ನಮೂದಿಸುವ ಪದ್ದತಿಯನ್ನು ಅಳಿಸಿಹಾಕಬೇಕು ಎಂದಿದೆಯಲ್ಲದೇ ಈಗಿನಿಂದಲೇ ನಿಲ್ಲಿಸಬೇಕು ಎಂದು ಆದೇಶಿಸಿದೆ.

“ಈ ಕೋರ್ಟಿನಲ್ಲಾಗಲೀ, ಅಧೀನ ಕೋರ್ಟುಗಳಲ್ಲಾಗಲೀ ಅರ್ಜಿದಾರರು ಹೂಡುವ ದಾವೆಗಳಲ್ಲಿ ಜಾತಿ/ಧರ್ಮವನ್ನು ನಮೂದಿಸಲು ಯಾವುದೇ ಕಾರಣಗಳಿಲ್ಲ. ಇಂತಹ ಪದ್ದತಿ ಅಳಿದು ಹೋಗಬೇಕಲ್ಲದೇ ಈಗಿನಿಂದಲೇ ನಿಲ್ಲಬೇಕು…. ಹೈಕೋರ್ಟುಗಳಿಗೂ ನಿರ್ದೇಶನ ಹೊರಡಿಸಲಾಗಿದ್ದು ಹೈಕೋರ್ಟ್ ಇಲ್ಲವೇ ಅಧೀನ ನ್ಯಾಯಾಲಯಗಳಲ್ಲಿ ಸಲ್ಲಿಸುವ ಯಾವುದೇ ದಾವೆ/ಸೂಟ್ ಗಳಲ್ಲಿ ಅರ್ಜಿದಾರರ ಜಾತಿ ಅಥವಾ ಧರ್ಮಗಳು ಕಾಣಿಸದಂತೆ ಖಾತ್ರಿಗೊಳಿಸತಕ್ಕದ್ದು” ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ರಾಜಾಸ್ಥಾನದಲ್ಲಿ ಕೌಟುಂಬಿಕ ನ್ಯಾಯಾಲಯವೊಂದರಲ್ಲಿ ಬಾಕಿ ಇದ್ದ ವಿವಾಹ ಸಂಬಂಧಿ ವ್ಯಾಜ್ಯವೊಂದರಲ್ಲಿ ಪ್ರಕರಣವನ್ನು ವರ್ಗಾವಣೆ ಮಾಡುವ ಅರ್ಜಿಯೊಂದಕ್ಕೆ ಅವಕಾಶ ನೀಡುವ ಸಂದರ್ಭದಲ್ಲಿ ಪೀಠವು ಈ ಮೇಲಿನ ಆದೇಶ ಹೊರಡಿಸಿದೆ. ಪಂಜಾಬ್ ರಾಜ್ಯದ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರೆಸಲು ವರ್ಗಾವಣೆಗೆ ಅವಕಾಶ ನೀಡಿದ ಪೀಠ ಈ ವಾಜ್ಯದ ಅರ್ಜಿಗಳಲ್ಲಿ ಎರಡೂ ಕಡೆಯವರ (ಗಂಡ ಮತ್ತು ಹೆಂಡತಿ) ಜಾತಿಗಳನ್ನು ನಮೂದಿಸಿದ್ದು ಕಂಡು ಚಕಿತಗೊಂಡು ಮೇಲಿನ ಆದೇಶ ನೀಡಿದೆ.

ಯಾವುದೇ ಪ್ರಕರಣದಲ್ಲಿ ಈ ಹಿಂದೆ ಜಾತಿಗಳನ್ನು ನಮೂದಿಸಿರಲಿ ಬಿಡಲಿ ಇನ್ನು ಮುಂದೆ ಜಾತಿ ಧರ್ಮಗಳನ್ನು ನಮೂದಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟು ಆದೇಶಿಸಿದೆ.

ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದ ಟಿಪ್ಪಣಿಯಲ್ಲಿ ನ್ಯಾ ಅಭಯ್ ಎಸ್ ಓಕಾ ಮತ್ತು ನ್ಯಾ.ಪಂಕಜ್ ಮಿತ್ತಲ್ ಅವರನ್ನೊಳಗೊಂಡ ಪೀಠವೂ ಇದೇ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆರೋಪಿ ವ್ಯಕ್ತಿಯೊಬ್ಬನ ಪ್ರಕರಣವೊಂದನ್ನು ಇತ್ಯರ್ಥ ಮಾಡುವ ಸಂದರ್ಭದಲ್ಲಿ ಆ ವ್ಯಕ್ತಿಯ ಜಾತಿ ಅಥವಾ ಧರ್ಮಗಳು ಪ್ರಸ್ತುತವಾಗುವುದಿಲ್ಲ, ಹೀಗಾಗಿ ತೀರ್ಪಿನಲ್ಲಿಯೂ ಅವನ್ನು ನಮೂದಿಸಕೂಡದು ಎಂದು ಪೀಠ ತಿಳಿಸಿತ್ತು.

More articles

Latest article