Sunday, September 8, 2024

ಮೊಮ್ಮಕ್ಕಳ ಪೋಷಣೆಗೆಂದು ಬೆಂಗಳೂರಿಗೆ ಗುಳೇ ಬಂದವರ ಕತೆಗಳು

Most read

ಕರ್ನಾಟಕದ ಮಲ್ಟಿ ನ್ಯಾಶನಲ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್ ಮತ್ತಿತರೆ ನೌಕರರ ಅಪ್ಪ ಅವ್ವಂದಿರ ಸಂಕಟದ ಕಥೆಗಳಿವು. ಅವರ ಬದುಕೊಂದು ಸುಸಜ್ಜಿತ ಸೆರೆಮನೆ ವಾಸ. ಕೆಲವರಿಗೆ ಹಣಕಾಸಿನ ತೊಂದರೆ ಇಲ್ಲದಿರಬಹುದು. ಆದರೆ ವೃದ್ಧಾಪ್ಯದ ವಯೋಸಹಜ ವ್ಯಸನಗಳಿಗೆ ದೊರಕಬೇಕಾದ ಪ್ರೀತಿಯ ಉಪಚಾರದಿಂದ ಅವರು ವಂಚಿತರು. ಹುಡುಕುತ್ತಾ ಹೋದರೆ ಇಂತಹ ನೂರಾರು ಹಸಿ ಹಸಿ ಅನಾಥ ಪ್ರಜ್ಞೆಯ ಕಾರಣಗಳು ಕಂಡು ಬರುತ್ತವೆ – ಮಲ್ಲಿಕಾರ್ಜುನ ಕಡಕೋಳ, ಹಿರಿಯ ಸಾಹಿತಿ

ಬೆಂಗಳೂರು ಎಂದರೆ ನನಗೆ ಮಾತ್ರವಲ್ಲ ನನ್ನಂಥ ಅನೇಕರ ಪಾಲಿಗೆ ಕಲರ್‌ಫುಲ್ ನರಕವೇ ಆಗಿದೆ. ಅದಕ್ಕೆ ದೃಷ್ಟಾಂತವೆಂದರೆ ನಮ್ಮ ಹೈದರಾಬಾದ್ ಕರ್ನಾಟಕ ಅರ್ಥಾತ್ ವರ್ತಮಾನ ಕಲ್ಯಾಣ ಕರ್ನಾಟಕದ ಕಡೆಯಿಂದ ಹೊಟ್ಟೆ ತಿಪ್ಪಲಿಗಾಗಿ ಬೆಂಗಳೂರಿಗೆ ಬಂದಿರುವ ಅನೇಕರ ಜೀವನ ಕಥನ. ತುಂಬಿ ತುಳುಕುವ ಕಡುಸಂಕಟದ ಬದುಕು – ಬಾಳಿನ ಅನುಭವಕ್ಕೆ ದಕ್ಕಿದ ಸೋಳಾಣೆ ನರಕ ಸದೃಶದ ಚರಿತೆಯೇ ಅದಾಗಿದೆ. ಹೊಟ್ಟೆತಿಪ್ಪಲು ಅಂದರೆ ಕೇವಲ ಎರಡು ಹೊತ್ತಿನ ಜಠರಾಗ್ನಿಯ ಅಗತ್ಯದ ಗಂಜಿ ಪೂರೈಕೆ ಮಾತ್ರ ಅದಲ್ಲ. ಅಷ್ಟಕ್ಕೂ ಅಂತಹ ಹೊಟ್ಟೆಯ ಹಸಿವಿನ ನಿವಾರಣೆಗಾಗಿ ಬಂದಿರುವ ದಿನನಿತ್ಯದ ಬಿಲ್ಕುಲ್ ಹಸಿವು ಪ್ರಣೀತ ಬಡಬಗ್ಗರ ಕತೆಯಷ್ಟೇ ಅದಲ್ಲ. ಹಾಗೆಯೇ ನಮ್ಮವರ ಅದರಲ್ಲೂ ಕೂಲಿ ಕೆಲಸಗಾರ ಕಾರ್ಮಿಕರ ತತ್ತರದ ಬದುಕಿನ ಕತೆಗಳು ಮಾತ್ರ ಅವುಗಳಲ್ಲ. ಹಾಗಾದರೆ “ಮತ್ತೇನವು” ಎಂಬ ಸೂಕ್ಷ್ಮ ತರ್ಕ ಸಂವೇದನೆಗಳು ಅವಾಗಿರಬಲ್ಲವು. ಅದೆಲ್ಲವನ್ನು ಮೀರಿ, ಹೇಳಲಾಗದ ಮತ್ತು ಹೇಳದಿರಲಾಗದ ಸಹಸ್ರ ಸಹಸ್ರ ಸಂಖ್ಯಾ ಸಂಕಟದ ಕತೆಗಳವು.

ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದ ಉತ್ತರ ಕರ್ನಾಟಕದ ನಿಮಗೆಲ್ಲ “ಬೆಂಗಳೂರು ಹೊಟ್ಟೆಯ ಹಸಿವು ನೀಗಿಸುತ್ತದಲ್ಲ” ? ಮತ್ತೇನಾಗಬೇಕೆಂಬ ಬೆಂಗಳೂರು ಮೂಲದ ಕೆಲವು ಸಂಜ್ಞಾ ತರ್ಕಿಗಳಿಗೆ ನನ್ನ ಬಳಿಯೂ ಕಠೋರ ಉತ್ತರಗಳಿವೆ. ಹೇಳಲೇ ಬೇಕಾದ ಕಾಲಬಂದಾಗ ಮುಲಾಜಿಲ್ಲದೇ ಮುಖಕ್ಕೆ ಹೊಡೆದಂತೆ ಹೇಳಿಬಿಡುವೆ. ಹೋಗಲಿ ಬಿಡಿ, ಸದ್ಯಕ್ಕೆ ಅದೆಲ್ಲ ಬೇಡವೆನಿಸುತ್ತದೆ. ದೂರದೂರಿನ ನಮ್ಮದು ಬಿಟ್ಟು ಬಿಡ್ರಿ. ಬಾಜೂಕಿನ ಕೋಲಾರದಂತಹ ಬಯಲು ಸೀಮಿಗರ ಅನುಭವ ಇದಕ್ಕೆ ಹೊರತಾಗಿ ಉಳಿದಿಲ್ಲವೆಂದರೆ ನೀವೇ ಯೋಚಿಸಿರಿ. ಅಂತೆಯೇ ಹೊಟ್ಟೆ ಹಸಿವು ನೀಗಿಸಿಕೊಳ್ಳಲು ಇಲ್ಲವೇ ಕೈತುಂಬ ಹಣ ಸಂಪಾದಿಸಲು ನಾವೇಕೆ ಬೆಂಗಳೂರಿಗೆ ಬಂದು ಏಗಬೇಕೆಂಬ‌ ಸಂಕೋಲೆಯ ಸಂಕಟ ಬೆಂಗಳೂರು ಶಹರ ಅರಿಯದೇ ಹೋಗಿದೆ. ಮತ್ತು ಅದೆಲ್ಲವನ್ನು ನಮ್ಮ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಕೂಡಾ ಅರಿಯದೇ ಹೋದುದು ಸಹಿತ ಬೃಹತ್ ದುರಂತವೇ ಸೈ. ನೆನಪಿರಲಿ ಇನ್ಫೋಸಿಸ್ ನಂತಹ ಸಂಸ್ಥೆ ಸ್ಥಾಪಿಸಿದವರು ನಮ್ಮವರೆಂಬ ನೆನಪು ಸಹಿತ ನಮಗಿರದಂತಾಗಿದೆ. ಏಕೆಂದರೆ ವಿಶ್ವವೇ ಒಂದು ಹಳ್ಳಿಯೆಂಬ ವ್ಯಾಪಾರಿ ಪರಿಕಲ್ಪನೆ ನಮ್ಮ ಗ್ರಾಮ್ಯಜನ್ಯ ಮನುಷ್ಯ ಸಂಬಂಧಗಳಿಗೆ ಧಕ್ಕೆ ತಂದು ಬಹಳೇ ವರುಷಗಳಾಗಿವೆ. ತನ್ಮೂಲಕ ಮಾನಸಿಕ ಗುಲಾಮಗಿರಿ ಬೆಳೆಸುತ್ತಲಿವೆ. ಬುದ್ಧಿವಂತ ಮನುಷ್ಯರ ಜೀವಸಂವೇದನೆಯ ಜ್ಞಾನದ ಬೇರುಗಳು ಸತ್ತು ಹೋಗುತ್ತಲಿವೆ.

ಸಾಂದರ್ಭಿಕ ಚಿತ್ರ

ಅಂದರೆ ಇನ್ಫೋಸಿಸ್ ನಂತಹ  ಮಲ್ಟಿ ನ್ಯಾಷನಲ್ ಲೆವೆಲ್ಲಿನ ದೊಡ್ಡ ಪ್ರಮಾಣದ ಐಟಿ ಬಿಟಿ ಕಂಪನಿಗಳ ಎಂಜಿನಿಯರ್ಸ್ ಮತ್ತಿತರೆ ಉದ್ಯೋಗಿಗಳು ಜೀವ ಬದುಕಿಗೆ ವಿಮುಖರಾಗುತ್ತಿರುವ ಭಯದ ಅಂಚಿನಲ್ಲಿದ್ದಾರೆ. ತಮ್ಮ ಮಕ್ಕಳು ಮನುಷ್ಯ ಸಂಬಂಧಗಳಿಂದ ದೂರ ಸರಿಯುವ ‘ಘೋರಭಯ’ ಅವರನ್ನು ಕಾಡದಿರದು. ಅದಕ್ಕೆಂತಲೇ ತಮ್ಮ ಪುಟ್ಟ ಪುಟ್ಟ ಮಕ್ಕಳ ಪಾಲನೆ, ಪೋಷಣೆಗಾಗಿ ದೂರದೂರಿನ ತಮ್ಮ ವಯಸ್ಸಾದ ಅಪ್ಪ ಅಮ್ಮಂದಿರನ್ನು ಬೆಂಗಳೂರಿಗೆ ಕರೆ ತರುತ್ತಾರೆ. ಅವರು ತಮ್ಮ ಮಕ್ಕಳಿಗೆ ಕುಟುಂಬ ಬದುಕಿನ ಜೀವಪ್ರೀತಿ ಬಿತ್ತಿ ಬೆಳೆವ ಜೈವಿಕ ಸಂಬಂಧ ಹುಟ್ಟುಹಾಕುವ ಮತ್ತು ನೈಸರ್ಗಿಕ ವಾತ್ಸಲ್ಯ ಉಳಿಸುವವರು ಎಂಬ ಉತ್ಕಟ ಹಂಬಲ. ಬಹು ದೂರದ ಊರುಗಳಿಂದ ಬೆಂಗಳೂರಿಗೆ ಬಂದಿರುವ ಅಂತಹ ತಂದೆ ತಾಯಿಗಳ ನೋವು ಅಕ್ಷರಶಃ ಅಕ್ಷರಗಳಲ್ಲಿ ಬರೆದು ಹೇಳಲಾಗದು.

ಅವೆಲ್ಲ ಕಾರ್ಪೊರೇಟ್ ಲೋಕದ ಉಪ ಉತ್ಪನ್ನದ ಕತೆಗಳು. ಖರೇ ಖರೇ ಮನುಷ್ಯ ಸಂಬಂಧಗಳು ನಿರ್ಮೂಲನೆ ಆಗುತ್ತಿರುವ ಮತ್ತೊಂದೆಡೆ ಕೃತಕ ಕಳ್ಳುಬಳ್ಳಿ ಸಂಬಂಧಗಳನ್ನೇ ಸೃಷ್ಟಿಸುತ್ತಿರುವ ಕುಬೇರ ಲೋಕದ ಕತೆಗಳು. ಅವೆಲ್ಲವೂ ಬೆಂಗಳೂರೇತರ ಕುಟುಂಬಗಳ ಬಹುತೇಕ ಕತೆಗಳು. ಅದರಲ್ಲೂ ಉತ್ತರ ಕರ್ನಾಟಕ, ಹಿಂದುಳಿದ ಕಲ್ಯಾಣ ಕರ್ನಾಟಕವೆಂಬ ಹಳೆಯ ಹೈದರಾಬಾದ್ ಕರ್ನಾಟಕದ ಹಿಂದುಳಿದ ಹಿರೀಕ ಪೋಷಕರು ಬೆಂಗಳೂರಲ್ಲಿ ಅನುಭವಿಸುತ್ತಿರುವ ನೋವಿನ ಸಂಗತಿಗಳು. ಅವುಗಳೆಲ್ಲ ಅಕ್ಷರಶಃ ಹೇಳಲಾಗದ ಕತೆಗಳು. ಅದೇನು ಅಂತಹ ಘನಂದಾರಿ ಸಂಕಟದ ಸಮಾಚಾರ ಎಂದು ಹುಬ್ಬೇರಿಸ ಬೇಡಿರಿ ಪ್ಲೀಸ್‌.

ಇವು ಕೇವಲ ಕಲ್ಯಾಣ ಕರ್ನಾಟಕದ ಕತೆಗಳು ಮಾತ್ರವೇ ಆಗುಳಿದಿಲ್ಲ. ಒಟ್ಟಾರೆ ಕರ್ನಾಟಕದ ಮಲ್ಟಿ ನ್ಯಾಶನಲ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್ ಮತ್ತಿತರೆ ನೌಕರರ ಅಪ್ಪ ಅವ್ವಂದಿರ ಸಂಕಟದ ಕಥೆಗಳಿವು. ಅವರ ಬದುಕೊಂದು ಸುಸಜ್ಜಿತ ಸೆರೆಮನೆ ವಾಸ. ಕೆಲವರಿಗೆ ಹಣಕಾಸಿನ ತೊಂದರೆ ಇಲ್ಲದಿರಬಹುದು. ಆದರೆ ವೃದ್ಧಾಪ್ಯದ ವಯೋಸಹಜ ವ್ಯಸನಗಳಿಗೆ ದೊರಕಬೇಕಾದ ಪ್ರೀತಿಯ ಉಪಚಾರದಿಂದ ವಂಚಿತರು. ಮತ್ತೆ ಕೆಲವರಿಗೆ ತಾವು ಹುಟ್ಟಿ ಬೆಳೆದು ಬಾಳಿದ “ನನ್ನವರು ತನ್ನವರೆಂಬ” ಕೌಟುಂಬಿಕ ಮತ್ತು ವಠಾರದ ವಾಂಛಲ್ಯಗಳಿಂದ ದೂರಾದ ತಬ್ಬಲಿತನ. ಹುಡುಕುತ್ತಾ ಹೋದರೆ ಇಂತಹ ನೂರಾರು ಹಸಿ ಹಸಿ ಅನಾಥ ಪ್ರಜ್ಞೆಯ ಕಾರಣಗಳು.

ಸಾಂದರ್ಭಿಕ ಚಿತ್ರ

ಮಸಬಿನ ಕಡೆಯ ಆ ಹೆಣ್ಣುಮಗಳ ಬಳಿ ಬಂದು ಯಾವೂರಮ್ಮ  ನಿಮ್ದು ಕೇಳುತ್ತಿದ್ದಂತೆ “ಯಾತಗಿರಿ ಕಡೆ, ಮಲಕವ್ವ” ಅಂದಳು. ವಿಶ್ವಾಸದ ಆಕೆಯ ದನಿಯಲ್ಲಿ ಅದೇನೋ ಆಪ್ತತೆ. “ನಮ್ದು ಆಕಡೆ” ಅಂತ ಆಕೆ ಕೇಳದಿದ್ದರೂ ನಾನೇ ಹೇಳಿಕೊಂಡೆ. ಇಲ್ಲಿಗ್ಯಾಕ ಬಂದೆಮ್ಮ? ನಿಮ್ಮ ಯಜಮಾನ ಎಲ್ಲಿ? ನಿನ್ ಮಕ್ಳು ಮರಿ ಅಂತ ನಾನು ಕೇಳೋದೆ ತಡ, ಮಡುಗಟ್ಟಿ ನಿಂತ ದುಃಖದ ಕಟ್ಟೆಯೊಡೆದು ಕಣ್ಣೀರನ್ನು ಸುರಿಸ ತೊಡಗಿದಳು. ಸೆರಗಿನಿಂದ ಕಣ್ಣೀರು ಮತ್ತು ಮೂಗಿನ ನೀರುಸಿಂಬಳ ಒರೆಸಿಕೊಳ್ಳುತ್ತಾ ಎಳೆ ಎಳೆಯಾಗಿ ತನ್ನ ಕತೆ ಹೇಳಿಕೊಂಡಳು

 *     ‌  *   ‌‌‌‌    *

ನನ್ನ ಒಬ್ಬನೇ ಒಬ್ಬ ಮಗ ಆರು ವರ್ಷದವನಿದ್ದಾಗ ನನ್ನ ಗಂಡ ತೀರಿಕೊಂಡ. ನನ್ ಮಗನ್ನ ಕಾಲಾಗ ಮುಳ್ಳು ನೆಟ್ಟರೆ ನನ್ನ ಕಣ್ಣಾಗ ನೆಟ್ಟಷ್ಟೇ ಸಂಕಟ ಪಡ್ತಿದ್ದೆ. ಕೂಲಿ ನಾಲಿ ಮಾಡಿ ಅವನನ್ನು ಸಾಕಿ ಬೆಳೆಸಿದೆ. ಕಲಬುರ್ಗಿ ಕಾಲೇಜಿಗೆ ಸೇರಿಸಿ ಇಂಜಿನಿಯರ್ ಸಾಲಿ ಕಲಿಸಿದೆ. ಮಗನೂ ಚೊಲೋ ಓದಿದ. ಬೆಂಗಳೂರು ಕಂಪನಿಯಲ್ಲಿ ದೊಡ್ಡ ನೌಕರಿ ಸಿಕ್ತು. ನಾಕೈದು ವರ್ಷ ನನಗ ತಿಂಗ್ಳಾ ತಿಂಗಳಾ ಪಗಾರ ಕೊಟ್ಟಂಗ ರೊಕ್ಕಾ ಕಳಸ್ತಿದ್ದ. ಅದಾದ ಮ್ಯಾಲ ಯಾಕೋ ರೊಕ್ಕಾ ಕಳಿಸೋದ ನಿಲ್ಲಿಸಿದ. ನನ್ನ ಗಂಡನ ಪಾಲಿಗೆ ಎರಡೆಕರೆ ಆಸ್ತಿ ಬಂದಿತ್ತು ಅದರಲ್ಲೇ ನಮ್ಮೂರಾಗ ನಾನೊಬ್ಬಾಕಿ ಜೀವನ ಸಾಗಿಸ್ತಿದ್ದೆ.

ಇದ್ದಕ್ಕಿದ್ದಂತೆ ಒಂದಿನ ನಮ್ಮೂರ ಕುಲಕರ್ಣೇರ ಮನೆಗೆ ಫೋನ್ ಮಾಡಿ ಮಗ ನನ್ನ ಸಂಗಾಟ ಮಾತಾಡಿದ. “ನಾನು ಮೇಲ್ಜಾತಿ ಹುಡುಗೀನ ಮದುವೆ ಆಗಿರುವೆ. ಅವಳೂ ನನ್ನ ಹಾಂಗ ಇಂಜಿನಿಯರ್. ನನ್ನ ಹೆಂಡ್ತಿ ಈಗ ದಿನತುಂಬಿದ ಬಸುರಿ. ಅವಳ ಅಪ್ಪ ಅಮ್ಮ ‘ನಮ್ಮದು ಕೆಳಜಾತಿ’ ಎಂಬ ಕಾರಣಕ್ಕೆ ನನ್ನ ಹೆಂಡತಿಯನ್ನು ನೋಡಿಕೊಳ್ಳಲು ಬರುತ್ತಿಲ್ಲ. ನೀನು ಬಂದು ಬಿಡವ್ವ. ಒಬ್ಳೆ ಅಲ್ಲಿದ್ದು ಏನ್ ಮಾಡ್ತಿಯ” ಅಂತ ಅಲವತ್ತುಗೊಂಡ. ನನಗೆ ಕನಿಕರದ ಕಟ್ಟೆ ಒಡೆದು ಹೋಯಿತು. ಅವತ್ತು ರಾತ್ರೋರಾತ್ರಿಯೇ ಬೆಂಗಳೂರು ಬಸ್ಸು ಹತ್ತಿ ಬಂದುಬಿಟ್ಟೆ. ಕಡ್ಲೀಬ್ಯಾಳಿ ಬಣ್ಣದ ಸೊಸೆಯನ್ನು ಕಂಡು ನಾನು ಬಾಳಂದ್ರ ಬಾಳ ಖುಷಿ ಪಟ್ಟೆ. ಅದೇಕೋ ಆಕೆಗೆ ನನ್ನ ಮ್ಯಾಲ ಪ್ರೀತಿ ಹುಟ್ಟಲಿಲ್ಲ. ನಾನು ಸ್ವಚ್ಛ ಇರಲ್ಲ ಹಾಂಗ ಹೀಂಗ ಅಂತ ತನ್ನ ಗಂಡನ ಮುಂದ ಫಿರಾದಿ ಹೇಳ್ತಿದ್ಳು. ನನ್ನ ಮೈ ಸ್ವಚ್ಛ ಇರ್ಲಿಕ್ಕಿಲ್ಲ. ಆದರ ನನ್ನ ಮನಸು ಮಾತ್ರ ಕಂಡಾಪಟೆ ಸ್ವಚ್ಛ ಇತ್ತು.

ಆಕಿ ಗಂಡಸ ಮಗನ್ನ ಹಡೆದಳು. “ನಿಮ್ಮಪ್ಪ ಹುಟ್ಟಿಬಂದ” ಅಂತ ನನ್ನ ಮಗನ ಮುಂದ ಹೇಳಿ ಖುಷಿ ಪಟ್ಟೆ. ಹುಟ್ಟಿದ ಕೂಸು ಮೊಮ್ಮಗ ಥೇಟ್ ನನ್ನ ತೀರಿಹೋದ ಗಂಡನಂತೆ ಇತ್ತು. ನಮ್ಕಡಿ ತರನೇ ಬಾಣಂತನ ಮಾಡಿದೆ. ಮೊಮ್ಮಗ ನಾಕೈದು ವರ್ಷ ಆಗೋಮಟ ಹಾಂಗೂ ಹೀಂಗೂ ಮಗನ ಮನೆಯಲ್ಲೇ ಇದ್ದೆ. ನನಗ ಮೊಮ್ಮಗ ಅಂದ್ರ ಪಂಚಪ್ರಾಣ. ಗಂಡ ಹೆಂಡ್ತಿ ಇಬ್ರೂ ಅಮೆರಿಕಾಗೆ ಹೋಗಬೇಕು ಅಲ್ಲಿ ದೊಡ್ಡ ಪಗಾರ, ಒಂದೀಸು ರೊಕ್ಕ ಕಮ್ಮಿ ಬಿದ್ದಾವ ಅಂದ್ರು. ನನ್ನ ಸೊಸೆಯಾದವಳಿಗೆ ಊರಲ್ಲಿಯ ಎರಡೆಕರೆ ನನ್ನ ಆಸ್ತಿ ಮೇಲೆ ಕಣ್ಣು ಬಿತ್ತು. ಹೊಲ, ಮನಿ ಆಸ್ತಿ ಮಾರಿ ಬಂದ ಇಪ್ಪತ್ತು ಲಕ್ಷ ರೊಕ್ಕ ರುಪಾಯಿ ಎಲ್ಲ ಮಗನಿಗೆ ತಂದುಕೊಟ್ಟೆ. ಪರ್ಪಂಚದಾಗ ಮಗನಿಕಿಂತ ದೊಡ್ಡದು ನನಗ ಯಾವ್ದೂ ಇರಲಿಲ್ಲ.

ಹೆಚ್ಚಿನ ಪಗಾರ.  ಇನ್ಮುಂದ ನಮ್ಮಿಬ್ಬರ ನೌಕರಿ ಅಮೆರಿಕದಲ್ಲಿ. ಅಲ್ಲಿಗೆ ಹೋಗ್ತಿವಿ ಅಂತ ಐದಾರು ವರ್ಷದ ತಮ್ಮ ಮಗನ್ನ ಕರ್ಕೊಂಡು ಅಮೆರಿಕ ಹೋಗಿಬಿಟ್ಟರು. ಮೊಮ್ಮಗ ನನ್ನ ಬಿಟ್ಟು ಹೋಗುವಾಗ ದುಕ್ ದುಕ್ಕಿಸಿ ಅಳ್ತಿತ್ತು. ನನಗೂ ದುಃಖ ತಡ್ಕೊಳ್ಳಕ್ಕಾಗಲಿಲ್ಲ. ಆದರೂ ತಡಕೊಂಡೆ. ಯಾಕಂದ್ರ ಅವರ ಮನ್ಯಾಗ ಹಾಡ್ಯಾಡಿಕೊಂಡು ಅಳುವ್ಹಾಂಗಿರಲಿಲ್ಲ. ಹೋಗುವಾಗ ನನ್ನ ಕೈಯಾಗ ಮೂವತ್ತು ಸಾವಿರ ರುಪಾಯಿ ಕೊಟ್ಟು ನೀನು ಊರಿಗೆ ಹೋಗು ಅಂತ ಹೇಳಿದರು.

ಊರಲ್ಲಿ ಹೊಲಮನಿ ಇಲ್ಲ, ಇದ್ದ ಹೊಲಮನಿ ಮಾರಿದ್ದೆ. ನನ್ನವರು ಅನ್ನುವವರು ಊರಲ್ಲಿ ಯಾರೂ ಇರಲಿಲ್ಲ. ಹಂಗಾಗಿ ನಾನು ಇಲ್ಲೇ ಉಳಕೊಂಡೆ. ಸಂಪಂಗಿ ರಾಮನಗರದಲ್ಲಿ ನಾಕ ಸಾವಿರ ರುಪಾಯಿ ಬಾಡಿಗೆ ಮನಿ ಹಿಡದೀನಿ. ದಿನಾಲೂ ನಾಕೈದು ಮಹರ್ವಾಡಿ ಮನಿಯ ಕಸ ಮುಸುರಿ ತೊಳದು ಬದಕ್ತೀನಿ. ಅವಳ ಮಾತುಗಳು ಇನ್ನೂ ಮುಗಿದಿರಲಿಲ್ಲ. ಮತ್ತೆ ಆಕೆಯ ಕಣ್ಣುಗಳು ದಡಸೋಸಿ ಹರಿವ ಕೃಷ್ಣೆ ಭೀಮೆಯಾದವು. ಅರಿವಿಗೆ ಬಾರದಂತೆ ನನ್ನ ಕಣ್ಣು ಸಹಿತ ಒದ್ದೆಯಾದವು. ಕಂಠೀರವ ಕ್ರೀಡಾಂಗಣದಲ್ಲಿ ಕಾರ್ಗತ್ತಲೆ ಆವರಿಸ ತೊಡಗಿತು.

ಮಲ್ಲಿಕಾರ್ಜುನ ಕಡಕೋಳ

ಹಿರಿಯ ಸಾಹಿತಿ

ಇದನ್ನೂ ಓದಿ- ಸಂವೇದನಾರಹಿತ ಸಮಾಜದಲಿ ಗಂಡಾಳ್ವಿಕೆಯ ಗಂಡಾಂತರ

   ‌‌ 

More articles

Latest article