ನವದೆಹಲಿ : ನೀಟ್ (ಯುಜಿ) 2026 ಪರೀಕ್ಷೆ ಮತ್ತು ಇತರ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಜಂತರ್ ಮಂತರ್ನಲ್ಲಿ ಸೋನಮ್ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹ ಬುಧವಾರ 18 ನೇ ದಿನಕ್ಕೆ ಕಾಲಿಟ್ಟಿದೆ.
ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನವದೆಹಲಿಯ ಜಂತರ್ ಮಂತರ್ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಬುಧವಾರ 25 ನೇ ದಿನಕ್ಕೆ ತಲುಪಿದೆ. ಶಿಕ್ಷಣ ತಜ್ಞ ಮತ್ತು ಹವಾಮಾನ ಕಾರ್ಯಕರ್ತ ವಾಂಗ್ಚುಕ್ ಜೂನ್ 28 ರಂದು ಸಿಜೆಪಿ ಪ್ರತಿಭಟನೆಯನ್ನು ಬೆಂಬಲಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಮುಷ್ಕರ ಪ್ರಾರಂಭವಾದಾಗಿನಿಂದ ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದಾರೆ. ಸ್ನಾಯುವಿನ ದ್ರವ್ಯರಾಶಿಯನ್ನು ಕಳೆದುಕೊಳ್ಳುತ್ತಿದ್ದು, ಅಪಾರ ನೋವಿನಿಂದ ಬಳಲುತ್ತಿದ್ದಾರೆ, ಆದರೆ ಅವರು ಉಪವಾಸವನ್ನು ತ್ಯಜಿಸಲು ನಿರಾಕರಿಸುತ್ತಿದ್ದಾರೆ ಎಂದು ಸಿಜೆಪಿ ಸಂಸ್ಥಾಪಕ ಹೇಳಿದ್ದಾರೆ.
ವಾಂಗ್ಚುಕ್ ಅವರ ಬೃಹತ್ ಮುಷ್ಕರ ಪ್ರಾರಂಭವಾದಾಗಿನಿಂದ 8.4 ಕೆಜಿಗಿಂತ ಹೆಚ್ಚು ತೂಕ ಕಡಿಮೆಯಾಗಿದೆ ಎಂದು ದಿಪ್ಕೆ ಹೇಳಿದರು. ಮಂಗಳವಾರದ ವೇಳೆಗೆ ಅವರ ರಕ್ತದೊತ್ತಡ ಕಡಿಮೆಯಾಗುತ್ತಿದ್ದು, 109/70 ಕ್ಕೆ ಇಳಿದಿದೆ ಎಂದು ಅವರು ಹೇಳಿದರು.
ಅಮರಣಾಂತಿಕ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿ, ಅವರಿಗೆ ತತ್ ಕ್ಷಣ ವೈದ್ಯಕೀಯ ಚಿಕಿತ್ಸೆ ಹಾಗೂ ಬಲವಂತವಾಗಿ ದ್ರವ ಆಹಾರ ನೀಡುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ದೆಹಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ರಾಕೇಶ್ ಕುಮಾರ್ ಸೈನಿ ಸಲ್ಲಿಸಿರುವ ಅರ್ಜಿಯಲ್ಲಿ, ಉಪವಾಸ ಮುಂದುವರಿದರೆ ವಾಂಗ್ಟುಕ್ ಅವರ ಜೀವಕ್ಕೆ ಇನ್ನೆರಡು ದಿನಗಳಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ತಿಳಿಸಿದೆ.
ಆಸ್ಪತ್ರೆಗೆ ದಾಖಲಿಸಿ ದ್ರವ ಆಹಾರ ನೀಡುವಂತೆ ಮನವಿ
ವಾಂಗ್ಟುಕ್ ಅವರ ಆರೋಗ್ಯದ ಮಾನದಂಡಗಳು ಹದಗೆಟ್ಟಿದ್ದು, ಅವರಿಗೆ ಏನಾದರೂ ಅನಾಹುತ ಸಂಭವಿಸಿದರೆ ಅದು ದೇಶ ಹಾಗೂ ವಿಶ್ವಕ್ಕೆ ದೊಡ್ಡ ಅವಮಾನವಾಗಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
“ಅವರನ್ನು ತತ್ ಕ್ಷಣ ಆಸ್ಪತ್ರೆಗೆ ದಾಖಲಿಸಿ, ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು, ವಿಟಮಿನ್ಗಳು ಮತ್ತು ಖನಿಜಾಂಶಗಳನ್ನು ಒಳಗೊಂಡ ದ್ರವ ಆಹಾರವನ್ನು ಬಲವಂತವಾಗಿ ನೀಡಬೇಕು. ಮಾನವ ದೇಹ ಬದುಕುಳಿಯಲು ಅಗತ್ಯವಿರುವ ಪೌಷ್ಟಿಕಾಂಶಗಳನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಒದಗಿಸಬೇಕು” ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

