ಮದುವೆಯಾಗಿ ಮಕ್ಕಳಿದ್ದರೂ ವಿದ್ಯಾರ್ಥಿನಿ ಹಿಂದೆ ಬಿದ್ದಿದ್ದ ಸಾಫ್ಟ್ ವೇರ್ ಇಂಜಿನಿಯರ್‌ ಬಂಧನ

Most read

ಬೆಂಗಳೂರು: ಮದುವೆಯಾಗಿ ಮಕ್ಕಳಿದ್ದರೂ ಪ್ರೀತಿಸುವಂತೆ ಕಾಲೇಜು ವಿದ್ಯಾರ್ಥಿನಿಗೆ ಒತ್ತಾಯಿಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಸಾಫ್ಟ್ ವೇರ್ ಇಂಜಿನಿಯರ್‌ ವೊಬ್ಬನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆ.ಸಿ. ನಗರದ ಕುರುಬರಹಳ್ಳಿ ನಿವಾಸಿ ಶ್ರೀಕಾಂತ್ (43) ಬಂಧಿತ ಆರೋಪಿ. ಈತನಿಗೆ ವಿವಾಹವಾಗಿದ್ದು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಲೇಜು ವಿದ್ಯಾರ್ಥಿನಿ ಪೋಷಕರು ಈ ಹಿಂದೆ ಇವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಈಗ ಬೇರೆ ಕಡೆ ನೆಲೆಸಿದ್ದಾರೆ. ಇದೇ ಪರಿಚಯದ ಆಧಾರದ ಮೇಲೆ ವಿದ್ಯಾರ್ಥಿನಿಯನ್ನು ಪೀಡಿಸುತ್ತಿದ್ದ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿನಿ ಹೋದಕಡೆಯಲ್ಲೆಲ್ಲಾ ಈತ ಹಿಂಬಾಲಿಸುತ್ತಿದ್ದ. ಇತ್ತೀಚೆಗೆ ಈಕೆ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ತನ್ನ ಸ್ನೇಹಿತನ ಜೊತೆ ಮಾತನಾಡುತ್ತಾ ನಿಂತಿದ್ದರು. ಆಗ ಅಲ್ಲಿಗೆ ಬಂದ ಈತ ಜಗಳ ತೆಗೆದು ಕೈಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಈ ಬಗ್ಗೆ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

More articles

Latest article