ಬೆಂಗಳೂರು: ಧರ್ಮಸ್ಥಳದಲ್ಲಿ ಅತ್ಯಾಚಾರ ಎಸಗಿ ಹತ್ಯೆ ಮಾಡಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಆರೋಪ ಮಾಡಿರುವ ಸಾಕ್ಷಿ, ದೂರುದಾರ ಚಿನ್ನಯ್ಯ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದ ವಿದ್ಯಾರಣ್ಯಪುರದ ತಿಂಡ್ಲು ಸರ್ಕಲ್ ಸಮೀಪ ಇರುವ ಸರ್ವಿಸ್ ಅಪಾರ್ಟ್ ಮೆಂಟ್ ನಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಮಹಜರು ನಡೆಸಿದೆ.
ಹೆಸರಘಟ್ಟ ರಸ್ತೆಯಲ್ಲಿರುವ ಸಾಮಾಜಿಕ ಕಾರ್ಯಕರ್ತ ಟಿ.ಜಯಂತ್ ಅವರ ಮನೆ ಶೋಧ ಮುಕ್ತಾಯಗೊಂಡ ಬೆನ್ನಲ್ಲೇ ಕಳೆದ ಎಸ್ ಪಿ ಸೈಮನ್ ನೇತೃತ್ವದಲ್ಲಿ ಎಸ್ ಐಟಿ ಅಧಿಕಾರಿಗಳು ಭಾನುವಾರ ನಡುರಾತ್ರಿ 2 ಗಂಟೆ ವೇಳೆಗೆ ಚಿನ್ನಯ್ಯ ಅವರನ್ನು ಅಪಾರ್ಟ್ ಮೆಂಟ್ ಗೆ ಕರೆ ತಂದಿದ್ದರು. ಮಧ್ಯಾಹ್ನದವರೆಗೂ ಮಹಜರು ನಡೆಸಿ ಅಧಿಕಾರಿಗಳು 10 ಗಂಟೆ ಕಾಲ ವಿಚಾರಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ 20 ಎಸ್ ಐಟಿ ಅಧಿಕಾರಿಗಳು, ಸಿಬ್ಬಂದಿ, ಸೀನ್ ಆಫ್ ಕ್ರೈಂ (ಸುಕೋ), ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಹಾಜರಿದ್ದರು.
ಈ ಅಪಾರ್ಟ್ ಮೆಂಟ್ ಹೋರಾಟಗಾರ ಗಿರೀಶ್ ಮಟ್ಟೆಣ್ಣನವರ ವಾಸವಿರುವ ನಿಂದ ಕೇವಲ ಒಂದೂವರೆ ಕಿಲೋಮೀಟರ್ ದೂರದಲ್ಲಿದೆ.
ಸರ್ವಿಸ್ ಅಪಾರ್ಟ್ ಮೆಂಟ್ ನ ಮೂಲೆ ಮೂಲೆಯನ್ನೂ ಶೋಧ ಮಾಡಲಾಗಿದೆ. ಅಪಾರ್ಟ್ ಮೆಂಟ್ ಅನ್ನು ಬುಕ್ ಮಾಡಿದ್ದು ಯಾರು, ಯಾರ ಹೆಸರಿನಲ್ಲಿ ಯಾವ ಅವಧಿಯಲ್ಲಿ ಕೊಠಡಿ ಕಾಯ್ದಿರಿಸಲಾಗಿತ್ತು ಎಂಬೆಲ್ಲಾ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಎಷ್ಟು ಬಾರಿ ರೋಂ ಬುಕ್ ಮಾಡಲಾಗಿತ್ತು? ಅಪಾರ್ಟ್ ಮೆಂಟ್ ಗೆ ಯಾರೆಲ್ಲಾ ಬರುತ್ತಿದ್ದರು? ಬಿಲ್ ಪಾವತಿಸಿದ್ದು ಯಾರು ಎಂಬ ಮಾಹಿತಿಯನ್ನು ಕಲೆ ಹಾಕಲಾಗಿದೆ. ಅಪಾರ್ಟ್ ಮೆಂಟ್ ನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತನಿಖೆ ಆರಂಭವಾಗುವುದಕ್ಕೂ 4-5 ತಿಂಗಳ ಹಿಂದೆ ಸಾಕ್ಷಿ ದೂರುದಾರ ಉಳಿದುಕೊಂಡಿದ್ದ ಸರ್ವಿಸ್ ಅಪಾರ್ಟ್ ಮೆಂಟ್ ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ, ಸುಜಾತಾ ಭಟ್, ಜಯಂತ್ ಅವರು ಚರ್ಚೆ ನಡೆಸಿದ್ದರು ಎಂಬ ಸ್ಪೋಟಕ ಮಾಹಿತಿ ಲಭ್ಯವಾಗಿದೆ ಎಂದು ಎಸ್ ಐಟಿ ಮೂಲಗಳು ತಿಳಿಸಿವೆ.