ಬೆಂಗಳೂರು ಮಾ.16: ನಾಳೆ ನಿಗದಿಯಾಗಿರುವ ನೈರುತ್ಯ ರೈಲ್ವೆಯ ಗೂಡ್ಸ್ ರೈಲು ಮ್ಯಾನೇಜರ್, ಎಲ್ ಡಿಸಿಇ ಹುದ್ದೆಗಳಿಗೆ ರೈಲ್ವೆ ಪರೀಕ್ಷಾ ಮಂಡಳಿ ಪರೀಕ್ಷೆಗಳು ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ಬೃಹತ್ ಹೋರಾಟಕ್ಕೆ ಕರೆ ನೀಡಿದ ಬೆನ್ನಲ್ಲೇ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.
ಹೋರಾಟಕ್ಕೆ ಕರೆ ನೀಡಿದ ಕೆಲವೇ ಗಂಟೆಗಳಲ್ಲಿ ಕಾಟನ್ ಪೇಟೆ ಪೊಲೀಸರು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರಿಗೆ ನೋಟೀಸ್ ನೀಡಲು ಮುಂದಾಗಿದ್ದು, ಉಚ್ಚ ನ್ಯಾಯಾಲಯದ ಆದೇಶದಂತೆ ಬೆಂಗಳೂರಿನ ಫ್ರೀಂಡಂ ಪಾರ್ಕ್ ಹೊರತುಪಡಿಸಿ ಬೇರೆ ಎಲ್ಲೂ ಪ್ರತಿಭಟನೆಗಳಿಗೆ ಅವಕಾಶ ಇರುವುದಿಲ್ಲ. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲು ಮುಂದಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ನೋಟಿಸ್ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅನೇಕ ಕರವೇ ಮುಖಂಡರು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೆ, ನಿಗದಿಯಾದಂತೆ ಪ್ರತಿಭಟನೆ ನಡೆದೇ ನಡೆಯುತ್ತದೆ ಎಂದು ಎಚ್ಚರಿಸಿದ್ದಾರೆ.
ʻʻಕನ್ನಡಿಗರನ್ನು ಹೊರಗಿಡುವ ಸಲುವಾಗಿ ಕೇವಲ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಪದೋನ್ನತಿ ಪರೀಕ್ಷೆ ನಡೆಸುತ್ತಿರುವ ರೈಲ್ವೆ ಇಲಾಖೆಯ ವಿರುದ್ಧ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಹೋರಾಟಕ್ಕೆ ಕರೆ ನೀಡಿದ ಕೆಲವೇ ನಿಮಿಷಗಳಲ್ಲಿ ಪೊಲೀಸ್ ಇಲಾಖೆ ಈ ಬೆದರಿಕೆಯ ನೋಟೀಸ್ ನೀಡಲು ಮುಂದಾಗಿದೆ. ಕನ್ನಡ ಚಳವಳಿಯ ನಾಲ್ಕು ದಶಕಗಳಲ್ಲಿ ಪೊಲೀಸು, ಲಾಠಿ, ಜೈಲು, ನೋಟೀಸುಗಳಿಗೆ ನಮ್ಮ ನಾಯಕರಾದ ಟಿ.ಎ.ನಾರಾಯಣಗೌಡರು ಎಂದೂ ಅಂಜಿದವರಲ್ಲ. ಯಾರೇ ಎಷ್ಟೇ ಬೆದರಿಕೆ ಒಡ್ಡಿದರೂ ಕನ್ನಡಿಗರ ಭವಿಷ್ಯಕ್ಕೆ ಮುಳ್ಳಾದವರ ವಿರುದ್ಧ ನಮ್ಮ ಹೋರಾಟ ನಡೆದೇ ನಡೆಯುತ್ತದೆ. ನಾಳೆ ಯಾವುದೇ ಕಾರಣಕ್ಕೂ ಕನ್ನಡವಿಲ್ಲದ ಪದೋನ್ನತಿ ಪರೀಕ್ಷೆ ನಡೆಯಕೂಡದುʼʼ ಎಂದು ಕರವೇ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಪೊಲೀಸರ ನೋಟೀಸ್ ಮತ್ತು ಕರವೇ ಮುಖಂಡರ ಹೇಳಿಕೆಗಳನ್ನು ಗಮನಿಸಿದರೆ ಪದೋನ್ನತಿ ಪರೀಕ್ಷೆಗಳು ನಡೆಯಬೇಕಿರುವ ನಾಳೆ ಮಹಾಸಂಘರ್ಷವೇ ನಿರ್ಮಾಣವಾಗಲಿದೆ ಎಂಬ ಅನುಮಾನಗಳು ಮೂಡುತ್ತಿವೆ.
2023ರ ಡಿಸೆಂಬರ್ 27ರಂದು ಕನ್ನಡ ನಾಮಫಲಕಕ್ಕಾಗಿ ಬೀದಿಗಿಳಿದಿದ್ದ ಸಾವಿರಾರು ಕರವೇ ಕಾರ್ಯಕರ್ತರು ಪೊಲೀಸರ ಬಿಗಿ ಭದ್ರತೆಯ ನಡುವೆಯೂ ಬೆಂಗಳೂರಿನ ನಾನಾ ಭಾಗಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆ ನಡೆಸಿ ಸಾವಿರಾರು ಇಂಗ್ಲಿಷ್ ಬೋರ್ಡ್ ಗಳನ್ನು ಕಿತ್ತು ಎಸೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

