ಬೆಂಗಳೂರಿನ ಕೋರ್ಟ್‌ಗೆ ರಾಹುಲ್ ಗಾಂಧಿ; ನ್ಯಾಯಾಲಯದ ಸುತ್ತಮುತ್ತ ಬಿಗಿ ಬಂದೋಬಸ್ತ್

Most read

ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ವೇಳೆ ಪೇಸಿಎಂ ಪೋಸ್ಟರ್ ಹಾಗೂ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ಆರೋಪ ಪ್ರಕರಣದಲ್ಲಿ ಇಂದು ರಾಹುಲ್‌ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದು, ಶೀಘ್ರದಲ್ಲೇ ಕೋರ್ಟ್‌ಗೆ ಹಾಜರಾಗಲಿದ್ದಾರೆ.

ಖುದ್ದು ಜೂನ್‌ 1 ರಂದು ಕೋರ್ಟ್‌ಗೆ ಹಾಜರಾಗುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌, ಸಿಎಂ, ಡಿಸಿಎಂ ಹಾಗೂ ರಾಹುಲ್ ಗಾಂಧಿಗೆ ನೋಟಿಸ್ ನೀಡಿತ್ತು. ಅದರಂತೆ ಸಿಎಂ ಡಿಸಿಎಂ ಹಾಜರಾಗಿದ್ದರು. ಆದರೆ ರಾಹುಲ್ ಗಾಂಧಿ ಹಾಜರಾಗಿರಲಿಲ್ಲ.

ಪ್ರಕರಣ ವಿಚಾರಣೆಯ ವೇಳೆ ಕಳೆದ ಬಾರಿ ರಾಹುಲ್ ಗಾಂಧಿ ಕೋರ್ಟ್​ಗೆ ಆಗಮಿಸದಕ್ಕೆ ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಎಂ.ವಿನೋದ್‌ ಕುಮಾರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಕೋರ್ಟ್‌ ಮುಂದೆ ಎಲ್ಲರೂ ಸಮಾನರು. ನ್ಯಾಯಾಲಯ ಸೂಚಿಸಿದಾಗ ಆರೋಪಿಗಳು ಬರಬೇಕು. ಈಗಾಗಲೇ ಎರಡು ಬಾರಿ ವಿನಾಯಿತಿ ನೀಡಲಾಗಿದೆ. ಮತ್ತೆ ನೀಡಲು ಅವಕಾಶವಿಲ್ಲ ಎಂದು ಕೋರ್ಟ್​ಗೆ ಮನವರಿಕೆ ಮಾಡುವ ಕೆಲಸ ಮಾಡಿದ್ದರು. ಆ ಬಳಿಕ ರಾಹುಲ್‌ ಗಾಂಧಿ ಪರ ವಕೀಲರು ಸಲ್ಲಿಸಿದ್ದ ಸಿಆರ್‌ಪಿಸಿ 205ರ ಅಡಿಯಲ್ಲಿನ ಅರ್ಜಿಯನ್ನು ಮಾನ್ಯ ಮಾಡಿ ಕೋರ್ಟ್​ ಹಾಜರಿಗೆ ವಿನಾಯಿತಿ ನೀಡಿತ್ತು.ಹೀಗಾಗಿ ಇಂದು ರಾಹುಲ್‌ ಗಾಂಧಿ ಕೋರ್ಟ್‌ ಎದುರು ಹಾಜರಾಗಲಿದ್ದಾರೆ.

ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕೋರ್ಟ್​ಗೆ ಹಾಜರಾಗಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಶನಿವಾರ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

ಬಿಜೆಪಿ ಎಂಎಲ್‌ಸಿ ಮತ್ತು ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ್ ಅವರು ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಿರುವುದರಿಂದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಹಾಜರಾಗಿದ್ದಾರೆ. ಕೋರ್ಟ್ ಬಳಿಯೂ ಸೇರುವ ನಿರೀಕ್ಷೆ ಇದ್ದು ನೂಕುನುಗ್ಗನು ತಡೆಯಲು ಹಾಗು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಕೋರ್ಟ್ ಸುತ್ತಾಮುತ್ತಾ ಪೊಲೀಸ್ ಬಿಗಿಬಂದೋಬಸ್ತು ಏರ್ಪಡಿಸಲಾಗಿದೆ.

More articles

Latest article