ಬೆಂಗಳೂರು: ಟೆಲಿಪ್ರಾಂಪ್ಟರ್ ಇಟ್ಕೊಂಡು ಪಾಕಿಸ್ತಾನದ ವಿರುದ್ಧ ಉತ್ತರನ ಪೌರುಷ ತೋರ್ಸೋದು, ಮಾಧ್ಯಮಗಳ ಎದುರು ಕೇಂದ್ರದ ಮಂತ್ರಿಗಳು ತೌಡು ಕುಟ್ಟುದು ಬಿಜೆಪಿಯ ನಾಯಕರುಗಳು ಮಾತ್ರ ಸಿದ್ದಿಸಿಕೊಂಡಿರುವ ಕಲೆ ಎಂದು ಕಾಂಗ್ರೆಸ್ ಮುಖಂಡ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿನ್ನಸ್ಡಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಸಾವನ್ನಪ್ಪಿರುವ ದುರಂತಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರನ್ನು ಉದ್ದೇಶಿಸಿ ಎಕ್ಸ್ ಮೂಲಕ ಹರಿಹಾಯ್ದಿದ್ದಾರೆ.
ಪ್ರಲ್ಹಾದ ಜೋಷಿ ಅವರೇ ಸಾವಿನಲ್ಲಿ ರಾಜಕೀಯ ಮಾಡೋದು ಬಿಜೆಪಿಯವರಿಗೆ ಹೊಸದಲ್ಲ, ಅದಕ್ಕೆ ತನ್ನದೇ ಆದ ಪರಂಪರೆ ಇದೆ. ಆರ್ ಸಿ ಬಿ ಪಂದ್ಯದ ಮೆರವಣಿಗೆಯಲ್ಲಿ ಆದ ಲೋಪಗಳಿಗೆ ಭಾರಿ ಬೆಲೆ ತೆತ್ತಿದ್ದೇವೆ, ಸೂತಕದ ಮನೆಯ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳಲು ಬರಬೇಡಿ ಎಂದಿದ್ದಾರೆ.
ಪುಲ್ವಾಮಾದಲ್ಲಿ ಭಾರತದ ಗಡಿಯಿಂದಲೇ ಉಗ್ರರು 350 ಕೆ.ಜಿ ಆರ್ ಡಿ ಎಕ್ಸ್ ಬಾಂಬ್ ದಾಳಿ ನಡೆಸಿ, ಭಾರತೀಯ ನಲವತ್ತು ಸೈನಿಕರನ್ನು ಬಲಿ ಪಡೆದುಕೊಂಡಾಗ ನಿಮ್ಮ ಕೇಂದ್ರದ ಗೃಹ ಇಲಾಖೆ ಕತ್ತೆ ಮೇಯಿಸುತ್ತಿತ್ತಾ? ಸೈನಿಕರಿಗೆ ಭದ್ರತೆ ಇಲ್ಲದ ಕೇಂದ್ರದ ಇಂಟಲಿಜೆನ್ಸ್ ಕತ್ತೆ ಮೇಯಿಸುವುದಕ್ಕೂ ಲಾಯಕ್ ಇದೆಯಾ?
ಪಹಲ್ಗಾಮ್ ನಲ್ಲಿ ಸಶಸ್ತ್ರಧಾರಿ ಉಗ್ರರು ಅಮಾಯಕ 26 ಪ್ರವಾಸಿಗರನ್ನು ಕಗ್ಗೋಲೆ ಮಾಡುವಾಗ ಕೇಂದ್ರದ ಸುಪರ್ಧಿಯಲ್ಲಿರುವ,ಕಾಶ್ಮೀರದಲ್ಲೇ ಬೀಡು ಬಿಟ್ಟಿರುವ ನಿಮ್ಮ ಇಂಟಲಿಜೆನ್ಸ್ ಕತ್ತೆ ಕಾಯ್ತಿತ್ತಾ?
ಭಾರತದಲ್ಲಿನ ಡ್ರಗ್ಸ್ ದಂಧೆಗೆ ಗುಜರಾತ್ ಹೆಬ್ಬಾಗಿಲಾಗಿದೆ, ಜಗತ್ತಿನಲ್ಲೇ ಅತಿ ದೊಡ್ಡ ಡ್ರಗ್ಸ್ ಸೀಜ್ ಆಗಿದ್ದು ಗುಜರಾತಿನ ಅದಾನಿ ಬಂದರಿನಲ್ಲಿ, ಸುಮಾರು 21 ಸಾವಿರ ಕೋಟಿ ರೂ.ಮೌಲ್ಯದ ಡ್ರಗ್ಸ್ ಸೀಜ್ ಆಗಿತ್ತು. ಮತ್ತೊಮ್ಮೆ ಇದೇ ಬಂದರಿನಲ್ಲಿ 9 ಸಾವಿರ ಕೋಟಿ ರೂ ಡ್ರಗ್ಸ್ ಸೀಜ್ ಆಗುತ್ತಿದೆ. ಈ ಡ್ರಗ್ಸ್ ದಂಧೆಯ ಬಗ್ಗೆ ಇಂಟಲಿಜೆನ್ಸ್ ಮಾಹಿತಿ ಇಲ್ಲದೆ ಕತ್ತೆ ಕಾಯ್ತಿದ್ಯಾ?
ಸಾವಿರಾರು ಕೋಟಿ ಲೂಟಿಕೋರರಾದ ನೀರಮ್ ಮೋದಿ,ಲಲಿತ್ ಮೋದಿ, ಮೆಹುಲ್ ಚೋಕ್ಸಿ ದೇಶ ಬಿಟ್ಟು ಓಡಿ ಹೋಗುವಾಗ ಕೇಂದ್ರದ ಇಂಟಲಿಜೆಮ್ಸ್ ಕತ್ತೆ ಕಾಯ್ತಿತ್ತಾ? ಸಾವಿನ ಮನೆಯ ರಾಜಕೀಯ ಬಿಡಿ, ಜನರ ಭಾವನೆಗಳನ್ನು ಕೆರಳಿಸಿ ಬೆಳೆ ಬೇಯಿಸಿಕೊಳ್ಳಬೇಡಿ, ಭಾರಿ ಬೆಲೆ ತೆರಬೇಕಾದೀತು.! ಎಂದು ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.