ಬೆಂಗಳೂರು: ಗ್ಯಾರಂಟಿ ಯೋಜನೆಗಳ ಮಾದರಿಯಲ್ಲೇ ಪುರುಷರಿಗೆ ಉಚಿತವಾಗಿ ವಾರಕ್ಕೆ ಎರಡು ಬಾಟಲಿ ಮದ್ಯ ವಿತರಿಸುವ ಹೊಸ ಯೋಜನೆ ಜಾರಿಗೊಳಿಸಿ. ಸಹಕಾರ ಸಂಘಗಳ ಮೂಲಕ ಉಚಿತ ಮದ್ಯ ವಿತರಣೆಗೆ ವ್ಯವಸ್ಥೆ ಮಾಡಬೇಕು ಎಂದು ಜೆಡಿಎಸ್ ಸದಸ್ಯ ಎಂ.ಟಿ. ಕೃಷ್ಣಪ್ಪ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದುಡಿಯುವ ಜನರು ಮದ್ಯ ಸೇವಿಸುತ್ತಾರೆ. ಅದನ್ನು ತಪ್ಪಿಸಲು ಆಗುವುದಿಲ್ಲ. ಆದ್ದರಿಂದ ಪುರುಷರಿಗೆ ಉಚಿತವಾಗಿ ಮದ್ಯ ವಿತರಿಸುವ ಯೋಜನೆ ಜಾರಿಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.
ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಮಾತನಾಡಿ, ರಾಜ್ಯ ಸರ್ಕಾರದ ಆರ್ಥಿಕತೆ ಮದ್ಯ ಮಾರಾಟವನ್ನೇ ಅವಲಂಬಿಸಿದೆ. ರೂ. 40,000 ಕೋಟಿ ಅಬಕಾರಿ ತೆರಿಗೆ ಸಂಗ್ರಹಿಸಲು ಜನರಿಗೆ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಮದ್ಯ ಕುಡಿಸುವುದು ಸರಿಯಲ್ಲ ಎಂದರು. ಅಬಕಾರಿ ತೆರಿಗೆಯಲ್ಲಿ 18 ಹಂತಗಳಿವೆ. ಈ ಪೈಕಿ ಬಡವರು ಕುಡಿಯುವ ಕಡಿಮೆ ದರದ ಮದ್ಯವೇ ಹೆಚ್ಚು ಮಾರಾಟ ಆಗುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಲ್ಲಿರುವ ಬಡವರಿಗೆ ಹೆಚ್ಚು ಮದ್ಯ ಕುಡಿಸಿ ತೆರಿಗೆ ವರಮಾನ ಹೆಚ್ಚಿಸಿಕೊಳ್ಳಬೇಕೆ ಎಂದು ಪ್ರಶ್ನಿಸಿದರು.