ಸಂವಿಧಾನದಿಂದಾಗಿ ಸರ್ವರಿಗೂ ಸಮಾನ ಅವಕಾಶ ಲಭಿಸುತ್ತಿದೆ: ಸಚಿವ ಪ್ರಿಯಾಂಕ್ ಖರ್ಗೆ

Most read

ಸಂವಿಧಾನದಿಂದಾಗಿ ಇಂದು ಭಾರತ ಜಗತ್ತಿನ ಅತಿದೊಡ್ಡ ಸಂವಿಧಾನ ಬದ್ಧ ರಾಷ್ಟ್ರವಾಗಿದೆ. ವಿಭಿನ್ನ ಧರ್ಮ, ಜಾತಿಗಳ‌ ಜನರಿಗೆ ಅವಕಾಶ ಹಾಗೂ ಸೌಲಭ್ಯಗಳು ಸಮಾನವಾಗಿ ಸಿಗಲು ಸಂವಿಧಾನ ಕಾರಣವಾಗಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ವಾಡಿ ಪಟ್ಟಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ಜಾಗೃತಿ ಜಾಥಾ ಸಮಾರೋಪ ಸಮಾರಂಭ, ಸಾಂಸ್ಕೃತಿಕ‌ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ,‌ ಅಂದಾಜು ರೂ 423.09 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಹಾಗೂ ಐದು ಗ್ಯಾರಂಟಿ ಯೋಜನೆಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸ್ವಾಭಿಮಾನದ ಬದುಕು ಹಾಗೂ ಆರ್ಥಿಕ‌ ಸಮಾನತೆ ಸಿಗುತ್ತಿದೆ. ಸಂವಿಧಾನದ 75 ವರ್ಷದ ಆಚರಣೆ ಮಾಡುವುದರ ಜೊತೆಗೆ ಬಸವಣ್ಣನವರ ತತ್ವಗಳ ಆಧಾರದ ಮೇಲೆ ಯೋಜನೆಗಳು ಹಾಗೂ ನೀತಿಗಳನ್ನು ರೂಪಿಸಲಾಗುತ್ತಿದೆ. ಹಾಗಾಗಿ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಲಾಗಿದೆ. ಬಸವ ತತ್ವಕ್ಕೂ ಸಂವಿಧಾನದ ಆಶಯಕ್ಕೆ ನಂಟಿದೆ. ಸರ್ವರಿಗೂ ಸಮಪಾಲು ಹಾಗೂ ಸಮಬಾಳು ಈ ಎರಡರಲ್ಲಿದೆ ಎಂದರು.

ಯಾರೂ ಕೂಡಾ ಗ್ಯಾರಂಟು ಯೋಜನೆಗಳನ್ನು ಜಾರಿಗೆ ತರುವಂತೆ ಅರ್ಜಿ ಸಲ್ಲಿಸಿರಲಿಲ್ಲ. ಆದರೆ ಜನರ ಆರ್ಥಿಕ ಸ್ಥಿತಿಗತಿ ಹಾಗೂ ಸಂಕಟ ಅರಿತುಕೊಂಡು ಕಾಂಗ್ರೆಸ್ ಪಕ್ಷ ಭರವಸೆ ನೀಡಿತ್ತು ಅದರಂತೆ ಜಾರಿಗೆ ತಂದಿದ್ದೇವೆ. ಆದರೆ, ಬಿಜೆಪಿಯವರು ಇದನ್ನು ವಿರೋಧಿಸುತ್ತಿದ್ದಾರೆ. ಯಾಕೆಂದರೆ, ಅವರಿಗೆ ಸಾಮಾನ್ಯ‌ಜನರು ಮನೆ ನಡೆಸಲು ಪಡುವ ಕಷ್ಟದ ಅರಿವಿಲ್ಲ. ಅವರಿಗೆ ಮನೆ ನಡೆಸುವುದು ಗೊತ್ತಿಲ್ಲ, ಮನೆ ಮುರಿಯುವುದು ಮಾತ್ರ ಗೊತ್ತಿದೆ ಎಂದು ಟೀಕಿಸಿದರು.

ಗೃಹ ಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಿಂದಾಗಿ ಜನರು ನೆಮ್ಮದಿಯಿಂದ ಇದ್ದಾರೆ. ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ತೆರಿಗೆ ಹಣವನ್ನು ಜನರ ಕಲ್ಯಾಣಕ್ಕಾಗಿ ಬಳಸಿಕೊಳ್ಳುತ್ತಿದೆ. ಆದರೆ, ಬಿಜೆಪಿ ಸಾರ್ವಜನಿಕರ ದುಡ್ಡನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದರು. ಯಾವುದೇ ಕಾರಣಕ್ಕೂ ಅರ್ಥಿಕ‌ ಸ್ಥಿರತೆ ತಂದುಕೊಡುವ ಈ ಎಲ್ಲ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ, ಈ‌ ವಿಚಾರದಲ್ಲಿ ಬಿಜೆಪಿಯವರ ಸುಳ್ಳು ಹೇಳಿಕೆಗಳನ್ನು ನಂಬಬೇಡಿ.

ನಮ್ಮ ಸರ್ಕಾರದ ಗ್ಯಾರಂಟಿಗಳನ್ನೇ ಕಾಪಿ ಮಾಡಿರುವ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ‌. ಆದರೆ,
ಆರ್ಥಿಕ ಅಸಮಾನತೆ,‌ ನಿರುದ್ಯೋಗ, ಸುಳ್ಳು, ಕೋಮುಗಲಭೆಗಳು ಮೋದಿ ಗ್ಯಾರಂಟಿಗಳು ಎಂದು ಅವರು ಕುಟುಕಿದರು.

ಚಿತ್ತಾಪುರ ಕ್ಷೇತ್ರಕ್ಕೆ ಅನುದಾನ ಮಾಡುವ ವಿಚಾರದಲ್ಲಿ ಬಿಜೆಪಿ ಸರ್ಕಾರದಿಂದ ಅನ್ಯಾಯವಾಗಿದೆ.‌ ನಾನು ಇತ್ತೀಚಿಗೆ ಸಚಿವನಾಗಿದ್ದೇನೆ, ಕ್ಷೇತ್ರಕ್ಕೆ ಅನುದಾನ ತಂದು ಸಮಗ್ರ ಅಭಿವೃದ್ದಿಪಡಿಸುತ್ತೇನೆ. ಇಂದು ಸುಮಾರು ಕೂಡಾ ರೂ‌ 423 ಕೋಟಿ ವೆಚ್ಚದಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ್ದೇನೆ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಮಾತನಾಡಿ ಬಿಜೆಪಿ ಸರ್ಕಾರ ಅಧಿಕಾರಿದಲ್ಲಿ ಇದ್ದಾಗ ಲೂಟಿ ಹೊಡೆದಿದ್ದರು. ಈಗ ನಮ್ಮ ಸರ್ಕಾರದ ಗ್ಯಾರಂಟಿ ಯೋಜನಗಳ ಬಗ್ಗೆ ಅನಗತ್ಯ ಟೀಕೆ ಮಾಡುತ್ತಿದ್ದಾರೆ. ಯುವಕ ಯವತಿಯರ ನೇಮಕಾತಿ ಮಾಡಿಕೊಳ್ಳುವ ಮೂಲಕ ಅವರ ಅರ್ಥಕ ಸದೃಢತೆಗೆ ಕ್ರಮವಹಿಸಲು ಬದ್ಧವಾಗಿದೆ.

ಸಂಸದ ಅನಂತಕುಮಾರ ಅವರ ಸಂವಿಧಾನ ಬದಲಾವಣೆ ಹೇಳಿಕೆ ಬಿಜೆಪಿ ಪಕ್ಷದ ಅಧಿಕೃತ ಹೇಳಿಕೆಯಾಗಿದೆ. ಅವರ ಹೇಳಿಕೆ ಖಂಡನೆ ಮಾಡದೇ ಪ್ರಧಾನಿ ಸುಮ್ಮನಿದ್ದಾರೆ. ಸಂವಿಧಾನ ಬದಲಾವಣೆ ಉದ್ದೇಶದ ಹಿಂದೆ ಮೀಸಲಾತಿ ತೆಗೆಯುವ ಹುನ್ನಾರವಿದೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳಿಗೆ ಮೀಸಲಾತಿ ಸಹಿಸಲು ಆಗುತ್ತಿಲ್ಲ. ಇದನ್ನು ಜನರು ಒಂದಾಗಬೇಕಿದ್ದು ಅವರ ಹುನ್ನಾರ ಅರ್ಥ ಮಾಡಿಕೊಂಡು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು ಜೊತೆಗೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಗೌರವಿಸಲಾಯಿತು.

ಇದಕ್ಕೂ ಮುನ್ನ ಸಚಿವರು ಸೇರಿದಂತೆ ಇತರೆ ಗಣ್ಯರು ಪಟ್ಟಣದ ಬಸವೇಶ್ವರ ಹಾಗೂ ಡಾ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ವೇದಿಕೆಯ ಮೇಲೆ ಸಿಎಂ ಸಲಹೆಗಾರ ಬಿ.ಆರ್.ಪಾಟೀಲ್, ಶಾಸಕರಾದ ಎಂ.ವೈ.ಪಾಟೀಲ, ಅಲ್ಲಮಪ್ತಭು ಪಾಟೀಲ,ತಿಪ್ಪಣ್ಣಪ್ಪ ಕಮಕನೂರು, ಮಜರ್ ಖಾನ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಪಂ‌ಸಿಇಒ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ‌ ಕಮೀಷನರ್ ಭುವನೇಶ್ ಪಾಟೀಲ್, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಟೋಪಣ್ಣ, ಡಿ.ಜಿ.ಸಾಗರ ಸೇರಿದಂತೆ ಹಲವರಿದ್ದರು.

More articles

Latest article