ಏರ್ ಇಂಡಿಯಾ ದುರಂತ: ತನಿಖಾ ಸಮಿತಿ ರಚನೆ;‌ ಮೂರು ತಿಂಗಳ ಕಾಲಾವಕಾಶ

Most read

ನವದೆಹಲಿ: ಗುಜರಾತ್‌ ನ ಅಹಮದಾಬಾದ್ ವಿಮಾನ ದುರಂತದ ತನಿಖೆಗೆ ಕೇಂದ್ರ ಸರ್ಕಾರ, ಗೃಹ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ದುರಂತದ ಮೂಲ ಕಾರಣವನ್ನು ಪತ್ತೆ ಹಚ್ಚುವ ಜೊತೆಗೆ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳುಹಿಸದಂತೆ  ಎದುರಿಸಲು ಸಮಗ್ರ ಮಾರ್ಗಸೂಚಿಗಳನ್ನು ಸೂಚಿಸಲು ನಿರ್ದೇಶನ ನೀಡಿದೆ.

ಈ ಸಮಿತಿಗೆ ವರದಿ ಸಲ್ಲಿಸಲು ಮೂರು ತಿಂಗಳ ಕಾಲಾವಾಕಾಶ ನೀಡಲಾಗಿದೆ. ವಿಮಾನದ ದತ್ತಾಂಶ, ಕಾಕ್‍ ಪಿಟ್‌ ನ ಧ್ವನಿ ದಾಖಲೆ, ವಿಮಾನ ನಿರ್ವಹಣೆ ದಾಖಲೆಗಳು, ಎಟಿಸಿ ಲಾಗ್‌ ಹಾಗೂ ಪ್ರತ್ಯಕ್ಷ ಸಾಕ್ಷ್ಯಗಳು ಸೇರಿ ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸುವ ಅಧಿಕಾರವನ್ನೂ ನೀಡಲಾಗಿದೆ. ಸ್ಥಳ ಪರಿಶೀಲನೆ, ಸಿಬ್ಬಂದಿ ಹಾಗೂ ವಾಯು ಸಂಚಾರ ನಿಯಂತ್ರಣ ಸಿಬ್ಬಂದಿ ಸಂದರ್ಶನ ಮತ್ತು ಅಂತರರಾಷ್ಟ್ರೀಯ ಏಜೆನ್ಸಿಗಳ ಸಹಕಾರ ಪಡೆದು ತನಿಖೆ ನಡೆಸುವ ಅಧಿಕಾರವನ್ನೂ ನೀಡಲಾಗಿದೆ.

ದುರಂತಕ್ಕೆ ಕಾರಣಗಳನ್ನು ಪತ್ತೆಹಚ್ಚುವುದರ ಜತೆಗೆ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಮತ್ತು ನಿರ್ವಹಿಸಲು ಪ್ರಮಾಣೀಕೃತ ಕಾರ್ಯವಿಧಾನಗಳನ್ನು ರೂಪಿಸುವತ್ತ ಈ ತನಿಖಾ ತಂಡ ಗಮನಹರಿಸುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಈ ಸಮಿತಿಯಲ್ಲಿ ನಾಗರಿಕ ವಿಮಾನಯಾನ ಕಾರ್ಯದರ್ಶಿ, ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಥವಾ ಜಂಟಿ ಕಾರ್ಯದರ್ಶಿ, ಗುಜರಾತ್ ಗೃಹ ಇಲಾಖೆ ಮತ್ತು ಗುಜರಾತ್ ವಿಪತ್ತು ಪ್ರತಿಕ್ರಿಯೆ ಪ್ರಾಧಿಕಾರದ ಪ್ರತಿನಿಧಿಗಳು, ಅಹಮದಾಬಾದ್ ಪೊಲೀಸ್ ಆಯುಕ್ತರು ಮತ್ತು ವಾಯುಪಡೆ (ತಪಾಸಣೆ ಮತ್ತು ಸುರಕ್ಷತೆ), ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮಹಾನಿರ್ದೇಶಕರು ಇರಲಿದ್ದಾರೆ.

ಗುಪ್ತಚರ ಬ್ಯೂರೋ ವಿಶೇಷ ನಿರ್ದೇಶಕ, ವಿಧಿವಿಜ್ಞಾನ ಸೇವೆಗಳ ನಿರ್ದೇಶನಾಲಯದ ನಿರ್ದೇಶಕ, ವಾಯುಯಾನ ತಜ್ಞರು, ಅಪಘಾತ ತನಿಖಾಧಿಕಾರಿಗಳು ಮತ್ತು ಕಾನೂನು ಸಲಹೆಗಾರರು ಸೇರಿದಂತೆ ಸಮಿತಿಯು ಸೂಕ್ತವೆಂದು ಪರಿಗಣಿಸುವವರನ್ನು ಸದಸ್ಯರನ್ನಾಗಿ ನೇಮಿಸಿಕೊಳ್ಳುವ ಅದಿಕಾರವೂ ಇರಲಿದೆ.

ಅಪಘಾತ ಮತ್ತು ನಂತರದ ಪರಿಸ್ಥಿತಿಯನ್ನು ನಿರ್ವಹಿಸಲು ಅಗತ್ಯವಿರುವ ನೀತಿಗಳಲ್ಲಿ ಬೇಕಾದ ಬದಲಾವಣೆಗಳು, ಕಾರ್ಯಾಚರಣೆಯ ಸುಧಾರಣೆಗಳು ಮತ್ತು ತರಬೇತಿ ವರ್ಧನೆಗಳನ್ನು ಕುರಿತು ಸಮಿತಿ ಸಲಹೆಗಳನ್ನು ನೀಡಲಿದೆ.

More articles

Latest article