ಥಾಣೆ: ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಕುರಿತು ಚರ್ಚಿಸಲು ಸಂಸತ್ತಿನ ಸರ್ವಪಕ್ಷಗಳ ಸಭೆ ಕರೆಯಬೇಕೆಂದು ಕಾಂಗ್ರೆಸ್ನ ಬೇಡಿಕೆಗೆ ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಬುಧವಾರ (ಏಪ್ರಿಲ್30) ಬೆಂಬಲ ಘೋಷಿಸಿದ್ದಾರೆ.
ಮುಂಬೈ ನಗರದ ‘ತುಳಜಾ ಭವಾನಿ’ ದೇವಾಲಯದಲ್ಲಿ ನಡೆದ ಪವಿತ್ರೀಕರಣ ಸಮಾರಂಭದಲ್ಲಿ ಭಾಗವಹಿಸಿದ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪವಾರ್, ಈ ಸಭೆಯ ಮೂಲಕ ದೇಶವು ಒಗ್ಗಟ್ಟಾಗಿದೆ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಭಯೋತ್ಪಾದಕ ಕೃತ್ಯದ ವಿರುದ್ಧವಾಗಿ ಒಂದೇ ನಿಲುವನ್ನು ತಾಳುತ್ತವೆ ಎಂಬ ಸಂದೇಶವನ್ನು ಸಾರಬಹುದು ಎಂದರು.
ಕಾಶ್ಮೀರದಲ್ಲಿ ನಡೆದ ಪ್ರವಾಸಿಗರ ಹತ್ಯಾಕಾಂಡವನ್ನು ದೇಶದ ಮೇಲಿನ ದಾಳಿ ಎಂದು ಕರೆದರು ಮತ್ತು ಈ ವಿಷಯದಲ್ಲಿ ಕೇಂದ್ರವು ತೆಗೆದುಕೊಳ್ಳುವ ಯಾವುದೇ ಕ್ರಮಗಳಲ್ಲಿ ತಾನು ಬೆಂಬಲ ನೀಡುವುದಾಗಿ ಹೇಳಿದರು.
ನಮ್ಮ ಪಕ್ಷದ ಜೊತೆಗೆ ದೇಶದಲ್ಲಿನ ಹಲವು ರಾಜಕೀಯ ಪಕ್ಷಗಳು “ಸಂಸತ್ತಿನ ವಿಶೇಷ ಅಧಿವೇಶನ” ನಡೆಸಬೇಕೆಂದು ಕೇಂದ್ರ ಸರ್ಕಾರದ ಮುಂದೆ ಬೇಡಿಕೆಯನ್ನು ಇಟ್ಟಿದ್ದಾರೆ. ಈ ವಿಷಯದ ಬಗ್ಗೆ ಇಡೀ ದೇಶವು ಒಗ್ಗಟ್ಟಾಗಿದೆ. ಭಯೋತ್ಪಾದನ ಕೃತ್ಯದ ವಿರುದ್ಧ ಕೇಂದ್ರ ಸರ್ಕಾರ ಧೃಡ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಭರವಸಯಿದೆ ಎಂದರು.
ಈ ಅಧಿವೇಶನದ ಮೂಲಕ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುವುದರ ಜೊತೆಗೆ, ಜಗತ್ತಿಗೆ (ಪಹಲ್ಗಾಮ್ ಕುರಿತು) ಒಂದು ಸಂದೇಶವನ್ನು ಕೊಡಬಹುದು. ಅದಕ್ಕಾಗಿ ಸಂಸತ್ತಿನ ವಿಶೇಷ ಅಧಿವೇಶನ ಉಪಯುಕ್ತವಾಗಿರುತ್ತದೆ ಎಂದು ಪವಾರ್ ಅಭಿಪ್ರಾಯ ಪಟ್ಟರು.